Advertisement

ಐಟಿ ಅಧಿಕಾರಿಗಳ ವಿಳಂಬ ತನಿಖೆ: ಸುರೇಶ್‌ ಆರೋಪ 

07:10 AM Aug 05, 2017 | Team Udayavani |

ಬೆಂಗಳೂರು: ಆದಾಯ ತೆರಿಗೆ ಪಾವತಿ ಸೇರಿ ಎಲ್ಲಾ ವಿಷಯದಲ್ಲೂ ನಮ್ಮ ಕುಟುಂಬ ಪಾರದರ್ಶಕವಾಗಿದೆ. ಐಟಿ ಅಧಿಕಾರಿಗಳು ಪರಿಶೀಲನೆಯನ್ನೇ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆಂದು ಸಂಸದ ಡಿ.ಕೆ.ಸುರೇಶ್‌ ಆರೋಪಿಸಿದರು.

Advertisement

ಸದಾಶಿವನಗರದಲ್ಲಿರುವ ಡಿಕೆಶಿ ಅವರ ಮನೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಎಲ್ಲ ವ್ಯವಹಾರ ಪಾರದರ್ಶಕವಾಗಿದೆ. ಐಟಿ ಅಧಿಕಾರಿಗಳು ಶೋಧನೆ ವೇಳೆ ಕೇಳಿರುವ ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇವೆ ಹಾಗೂ ಮುಂದೆಯೂ ತನಿಖೆಗೆ ಸಂಪೂರ್ಣವಾದ ಸಹಕಾರ ನೀಡಲಿದ್ದೇವೆ. ಆದರೆ, ಐಟಿ ಅಧಿಕಾರಿಗಳು ಅನಗತ್ಯವಾಗಿ ಪರಿಶೀಲನೆ ವಿಳಂಬ ಮಾಡುತ್ತಿದ್ದಾರೆ ಎಂದರು.

ಗುಜರಾತ್‌ ಕಾಂಗ್ರೆಸ್‌ ಶಾಸಕರು ರಾಜ್ಯದಲ್ಲಿ ವಾಸ್ತವ್ಯ ಹೂಡಿರುವ ಹಿನ್ನೆಲೆಯಲ್ಲಿ ಅಣ್ಣನ ಜತೆ ಮಾತುಕತೆ ನಡೆಸಿ, ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಇರುವುದರಿಂದ ಮಾತುತೆಗೆ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡಾಗ ಮನೆಯೊಳಗೆ ಪ್ರವೇಶಕ್ಕೆ ನಿರಾಕರಿಸಿದ್ದಾರೆ. ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದ ನಂತರ ಮಾತುಕತೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಗುಜರಾತ್‌ ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ನಲ್ಲಿ ಒಗ್ಗಟ್ಟಾಗಿ, ಸಂತೋಷದಿಂದ ಇದ್ದಾರೆ. ಗುಜರಾತ್‌ ರಾಜ್ಯಸಭೆ ಚುನಾವಣೆ ಹಿಂದಿನ ದಿನದವರೆಗೆ ರೆಸಾರ್ಟ್‌ನಲ್ಲೇ ಇರುತ್ತಾರೆ. ಚುನಾವಣಾ ಗಿಮಿಕ್‌ಗಾಗಿ ಕೇಂದ್ರ ಸರ್ಕಾರ ನಡೆಸುತ್ತಿರುವ ಎಲ್ಲಾ ಷಡ್ಯಂತ್ರಗಳನ್ನು ನಾವು ಎದುರಿಸಲಿದ್ದೇವೆ ಎಂದರು.

ಸಹೋದರರ ಚರ್ಚೆ
ಶಿವಕುಮಾರ್‌ ಮನೆಗೆ ಆಗಮಿಸಿದ ಸಹೋದರ ಡಿ.ಕೆ. ಸುರೇಶ್‌ ಅವರನ್ನು ಬೆಳಗ್ಗೆ ಒಳ ಬಿಡದ ಸಿಆರ್‌ಪಿಎಫ್ ಯೋಧರು, ಮಧ್ಯಾಹ್ನ ಶಿವಕುಮಾರ್‌ ಆರೋಗ್ಯದಲ್ಲಿ ಏರುಪೇರು ಆದ ಹಿನ್ನೆಲೆಯಲ್ಲಿ ಸ್ಥಳೀಯ ಹಿರಿಯ ಪೊಲೀಸರು ಸಿಆರ್‌ಪಿಎಫ್ ಯೋಧರಿಗೆ ಮನವೊಲಿಸಿ ಐಟಿ ಅಧಿಕಾರಿಗಳ ಅನುಮತಿ ಪಡೆದು ಕೆಲ ಹೊತ್ತ ಮಾತ್ರ ಮನೆ ಒಳ ಹೋಗಲು ಅನುಮತಿ ನೀಡಿದರು. ಈ ವೇಳೆ ಸಹೋದರರಿಬ್ಬರೂ ಸುಮಾರು 15 ನಿಮಿಷಕ್ಕೂ ಹೆಚ್ಚು ಹೊತ್ತು ಚರ್ಚಿಸಿದರು. ನಂತರ ಹೊರಬಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಸುರೇಶ್‌, ಎರಡು ದಿನಗಳಿಂದ ಸತತವಾಗಿ ವಿಚಾರಣೆ ನಡೆಸಿದ್ದರಿಂದ ರಕ್ತದೊತ್ತಡ ಹೆಚ್ಚಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇಡೀ ಕಾಂಗ್ರೆಸ್‌ ನಮ್ಮ ಬೆಂಬಲಕ್ಕೆ ಇದೆ. 10-15 ನಿಮಿಷಗಳ ಕಾಲ ಅಣ್ಣನ ಜತೆ ಚರ್ಚಿಸಿದ್ದೇನೆ. ನಮ್ಮ ಊರಿನ ಮನೆಯ ಎಲ್ಲ ಭಾಗಗಳಿಗೂ ಸಿಆರ್‌ಪಿಫ್ ಯೋಧರು ಗಸ್ತು ತಿರುಗುತ್ತಿದ್ದಾರೆ. ಶನಿವಾರದೊಳಗೆ ವಿಚಾರಣೆ ಅಂತ್ಯವಾಗುವ ಸಾಧ್ಯತೆಯಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next