Advertisement

ಒಂದೂವರೆ ಎಕರೆಯ ಬದ್ಯಾರು ಕೆರೆಗೆ ಪುನಶ್ಚೇತನ ಅಗತ್ಯ

03:01 PM Apr 10, 2017 | Team Udayavani |

ಪುಂಜಾಲಕಟ್ಟೆ:  ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾ.ಪಂ. ವ್ಯಾಪ್ತಿಯ ಎಲಿಯನಡುಗೋಡು ಗ್ರಾಮದ ಬದ್ಯಾರುವಿನಲ್ಲಿ ಸುಮಾರು ಒಂದೂವರೆ ಎಕರೆ ವಿಸ್ತೀರ್ಣದಲ್ಲಿರುವ ಬದ್ಯಾರು ಕೆರೆ ಒಂದು ಕಾಲದಲ್ಲಿ ಬೇಸಗೆಯಲ್ಲಿಯೂ ಸಮೃದ್ಧ  ನೀರು ಸಂಗ್ರಹವಿರುವ ಕೆರೆಯಾಗಿತ್ತು. ಸುತ್ತಮುತ್ತಲಿನ ಪ್ರದೇಶಗಳಿಗೆ ಕೆರೆ ನೀರಿನಿಂದ ಪ್ರಯೋಜನವಾಗುತ್ತಿತ್ತು. ಆದರೆ ಇಂದು ಬದ್ಯಾರು ಕೆರೆಯಲ್ಲಿ ಹೂಳು ತುಂಬಿದೆ. ಕಸ ಕಡ್ಡಿಗಳು ಕೆರೆಗೆ ಸೇರಿ ನೀರು ಕಲುಷಿತಗೊಂಡಿದೆ. ಬದ್ಯಾರು ಕೆರೆಯನ್ನು ಪುನಶ್ಚೇತನಗೊಳಿಸಿ ಅಭಿವೃದ್ಧಿಗೊಳಿಸಿದರೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಲಿದೆ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.

Advertisement

ಈ ಪ್ರದೇಶದ ಸುತ್ತಮುತ್ತ ಬಾವಿಗಳ ನೀರು ಆಳದಲ್ಲಿದೆ. ತೊರೆ ಸಂಪೂರ್ಣ ಬತ್ತಿ ಹೋಗಿದೆ. ಎಲ್ಲಿಯೂ ಬೇಸಗೆ ಕಾಲದಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಮೂಲಗಳಿಲ್ಲ. ಹೀಗಾಗಿ ಪ್ರಾಣಿ-ಪಕ್ಷಿಗಳಿಗೆ ಬದ್ಯಾರು ಕೆರೆಯೇ ನೀರಿನ ಮೂಲವಾಗಿದೆ.

ಸಂಪೂರ್ಣ ಕೆರೆಯ ನೀರು ಮಲಿನಮುಕ್ತಗೊಳಿಸಲು ಹೂಳು ತೆಗೆದು ಕೆರೆಯ ಸುತ್ತಲೂ ತಡೆಗೋಡೆ ನಿರ್ಮಿಸಿ, ಸುರಕ್ಷತೆ ದೃಷ್ಟಿಯಿಂದ ಸುತ್ತಲೂ ಬೇಲಿ ಹಾಕಿ ಸಂಪೂರ್ಣವಾಗಿ ಅಭಿವೃದ್ಧಿ ಕಾರ್ಯ ನಡೆದರೆ ಮುಂದೆಯೂ ಇದರ ಪ್ರಯೋಜನ ಸಿಗಲಿದೆ. 

ಒಂದೂವರೆ ಎಕರೆ ವಿಸ್ತೀರ್ಣದಲ್ಲಿರುವ ಬದ್ಯಾರು ಕೆರೆಯಲ್ಲಿ ಮಳೆಗಾಲದಲ್ಲಿ ಸಮೃದ್ಧವಾಗಿ ನೀರು ಸಂಗ್ರಹವಾದರೆ  ಬೇಸಗೆ ಕಾಲದಲ್ಲಿ ಸುಮಾರು 60ಕ್ಕೂ ಅಧಿಕ ಕೃಷಿಕ ಕುಟುಂಬಗಳ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.

ಕೆರೆ ಪುನಶ್ಚೇತನದಿಂದ ಆಗುವ ಪ್ರಯೋಜನಗಳು
-ಕೆರೆಯಿಂದ ತಗ್ಗು ಪ್ರದೇಶದಲ್ಲಿ ಅಡಿಕೆ, ತೆಂಗು,
ಭತ್ತ ಮುಂತಾದ ಕೃಷಿ ಚಟುವಟಿಗಳಿಗೆ ಪ್ರಯೋಜನ ವಾಗಲಿದೆ.
-ಗ್ರಾ.ಪಂ. ವ್ಯಾಪ್ತಿಯಲ್ಲಿನ ಮನೆಗಳಿಗೆ ನೀರಿನ ಪೂರೈಕೆ
-ಮಳೆಯ ನೀರು ಕೆರೆಯಲ್ಲಿ ಸಂಗ್ರಹವಾಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲು ಸಾಧ್ಯವಾಗುತ್ತದೆ.
-ಪ್ರಾಣಿ-ಪಕ್ಷಿಗಳಿಗೆ ಕೆರೆ ನೀರು ಮೂಲವಾಗುತ್ತದೆ.
ಬದ್ಯಾರು ಕೆರೆಯ ನೀರು ಗ್ರಾಮದ ಜನತೆಗೆ ಹೆಚ್ಚು ಪ್ರಯೋಜನವಾಗಲಿದೆ. ಪ್ರಾಣಿ-ಪಕ್ಷಿಗಳಿಗೂ  ಕುಡಿಯಲು ನೀರು ದೊರಕುತ್ತದೆ.

Advertisement

ಅನುದಾನದ ಕೊರತೆ 
ಕುಕ್ಕಿಪಾಡಿ ಗ್ರಾ.ಪಂ. ವ್ಯಾಪ್ತಿಯ  ಎಲಿಯನಡುಗೋಡು ಗ್ರಾಮದ ಬದ್ಯಾರು ಕೆರೆ ಸುಮಾರು ಒಂದೂವರೆ ಎಕರೆ ವಿಸ್ತೀರ್ಣವಿದ್ದು, ಈಗ ಹೂಳು ತುಂಬಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಸಂಪೂರ್ಣ ಕೆರೆಯ ಹೂಳು ತೆಗೆದು  ಕೆರೆಯನ್ನು ಅಭಿವೃದ್ಧಿಪಡಿಸಿದರೆ ಈ ಪ್ರದೇಶದ ಕೆರೆ ಅಭಿವೃದ್ಧಿಯಾದರೆ ಕೃಷಿಕರಿಗೆ ಅನುಕೂಲವಾಗಲಿದೆ. ಕೆರೆಯ ಕಾಯಕಲ್ಪ ನೀಡಲು ಕುಕ್ಕಿಪಾಡಿ ಗ್ರಾ.ಪಂ. ತಯಾರಿ ನಡೆಸಿದೆ ಹಾಗೂ ಅಭಿವೃದ್ಧಿಗೆ ಸೂಕ್ತ ಅನುದಾನದ ಕೊರತೆಯಿರುವುದರಿಂದ ಅನುದಾನ ಕುರಿತು ಸರಕಾರದ ಗಮನಕ್ಕೆ ತರಲಾಗಿದೆ.
    -ದಿನೇಶ ಸುಂದರ ಶಾಂತಿ, ಅಧ್ಯಕ್ಷರು, ಕುಕ್ಕಿಪಾಡಿ ಗ್ರಾ.ಪಂ.

ಕೆರೆಯ ಅಭಿವೃದ್ಧಿಗೆ ಯತ್ನ 
ಸಂತೋಷ್‌ ಕುಮಾರ್‌ ಭಂಡಾರಿ ಅವರು ಜಿ.ಪಂ. ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೆರೆಯನ್ನು ಹೂಳು ತೆಗೆದು ಪುನಶ್ಚೇತನ ಗೊಳಿಸಲಾಗಿತ್ತು. ತದನಂತರ ಯಾವುದೇ ಕಾಮಗಾರಿ ನಡೆಸಿಲ್ಲ. ಕೆರೆಯಲ್ಲಿನ ಸಂಪೂರ್ಣ ಹೂಳು ತೆಗೆದು ಸುತ್ತಲೂ ತಡೆಗೋಡೆ ಕಟ್ಟಿ , ನೀರು ಸಂಗ್ರಹಿಸುವುದರಿಂದ ಕೃಷಿಗೆ, ಪ್ರಾಣಿ-ಪಕ್ಷಿಗಳಿಗೆ ವರದಾನವಾಗಲಿದೆ. ಕೆರೆಯ ಹೆಚ್ಚಿನ ಅಭಿವೃದ್ಧಿಗಾಗಿ ಸರಕಾರದ ಗಮನಕ್ಕೆ ತರಲಾಗುವುದು.
    -ಪ್ರಭಾಕರ ಪ್ರಭು, ಸದಸ್ಯರು, ಸಂಗಬೆಟ್ಟು ತಾ.ಪಂ.

– ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next