Advertisement

ಕರ್ನಾಟಕದಲ್ಲಿ ಕನ್ನಡವನ್ನು ಹುಡುಕುವಂತಾಗಿದೆ..!

03:48 PM Dec 19, 2021 | Team Udayavani |

ಇತ್ತೀಚಿನ ದಿನಗಳಲ್ಲಿ ಇಲ್ಲಿನ ಜನಕ್ಕೆ ಅದೇನಾಗಿಯೋ ಕಾಣೆ. ಆಗಬೇಕಾದ್ದು ಆಗದೆ, ನಡಿಯಬಾರದ್ದೆಲ್ಲಾ ಕೆಲಸಗಳು ಯಾವುದೇ ತಗಾದೆ ಇಲ್ಲದೆ ಸರಾಗವಾಗಿ ನಡೆಯುತ್ತಿರುವುದು ನಿಜಕ್ಕೂ ವಿಪರ್ಯಾಸ. ಅದನ್ನು ಕೇಳುವವರೂ ಇಲ್ಲ, ತಡೆಯುವವರೂ ಇಲ್ಲ. ಎಲ್ಲರೂ ಇದ್ದು ಕೂಡ ಇಲ್ಲದಂತಾಗಿದ್ದಾರೆ. ಬಾವಿಯೊಳಗಿನ ಕಪ್ಪೆಯ ಹಾಗೆ ನಾವಾಯ್ತು, ನಮ್ಮ ಕೆಲಸವಾಯ್ತು, ನಮ್ಮ ಜೀವನಕ್ಕೆ ಇಷ್ಟೇ ಸಾಕು ಅಂದುಕೊಂಡು ಸುಮ್ಮನಾಗಿಬಿಟ್ಟಿದ್ದಾರೆ.

Advertisement

ಕೆಲವು ನಿರ್ದೇಶಕರು, ಕಲಾವಿದರು, ನಟ-ನಟಿಯರು, ರಾಜಕೀಯ ವ್ಯಕ್ತಿಗಳು, ಆಡಳಿತಾಧಿಕಾರಿಗಳು ಎಲ್ಲರೂ ತಮಗೆ ಬರುವ ಸಂಬಳಕ್ಕೆ ಕೆಲಸ ಮಾಡಿ, ನಿವೃತ್ತಿಯಾಗುತ್ತಿದ್ದಾರೆ. ಮತಾಂತರ ವ್ಯಾಪಾರ, ರಾಜಕೀಯ ಹುನ್ನಾರಗಳು, ಕನ್ನಡದ ಮೇಲಿನ ದಬ್ಬಾಳಿಕೆ, ನಿರೀಕ್ಷಿಸದ ಬೆಲೆ ಏರಿಳಿತಗಳು, ಸುಲಿಗೆ-ವಂಚನೆ-ವೇಶ್ಯವಾಟಿಕೆಗಳು ಎಲ್ಲವೂ ತಲೆ ಎತ್ತಿ ಮೆರೆಯುತ್ತಿವೆ. ನಾವೂ ಕೂಡ ಅದರಲ್ಲಿ ಒಬ್ಬರಾಗಿ ಮುಳುಗಿ ಹೋಗಿದ್ದೇವೆ. ಉಸಿರುಕಟ್ಟಿ ಸಾಯಲಾಗದೆ, ಬದುಕಲು ಯಾವ ಕಾರಣಗಳಿಲ್ಲದೆ ಆತ್ಮಗಳಂತೆ ಅಲೆದಾಡುತ್ತಿದ್ದೇವೆ.

ವರ್ತಮಾನದ ಸಂಗತಿಗಳಿಗೆ ಪ್ರತಿಕ್ರಿಯಿಸದವ ಖಂಡಿತ ಸಾಮಾಜಿಕ ಜವಾಬ್ದಾರಿ ಇರುವ ನಾಗರಿಕನಾಗಲು ಸಾಧ್ಯವೇ ಇಲ್ಲ. ಒಂದು ಉದಾಹರಣೆಯ ಮುಖೇನ ನಾ ಹೇಳಹೊರಟಿರುವ ಪ್ರಸಕ್ತ ವಿಪರ್ಯಾಸವನ್ನು ನಿಮ್ಮುಂದೆ ಬಿಚ್ಚಿಡಬಲ್ಲೆ. ನಮ್ಮ ಕನ್ನಡಾಂಬೆಯ ಸೆರಗನ್ನು ಸುಟ್ಟ ಹಿನ್ನೆಲೆಯಲ್ಲಿ, ನಮ್ಮ ಕರ್ನಾಟಕದ್ದೇ ವಿಷಯ, ನಮ್ಮ ಕನ್ನಡಿಗರ ಅಸ್ತಿತ್ವದ ಪ್ರಶ್ನೆ, ಕನ್ನಡ ಸಿನಿಮಾರಂಗದ ಏಳುಬೀಳಿನ ವ್ಯಥೆ ಇದಾಗಿದೆ.

ಇದೇ ಡಿ.17 ರಂದು ತೆರೆ ಕಂಡ ತೆಲುಗು ನಟ ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾದ ಬಗ್ಗೆ ನಮ್ಮೆಲ್ಲರಿಗೂ ಗೊತ್ತೇ ಇದೆ. ಅದು ಸುಕುಮಾರ್ ಅವರ ಚಿತ್ರ. ಕನ್ನಡಿಗರೂ ಕೂಡ ಅದರಲ್ಲಿ ನಟಿಸಿದ್ದಾರೆ. ಕನ್ನಡದಲ್ಲೇ ಟ್ರೇಲರ್ ರಿಲೀಸ್ ಮಾಡಿ ಕನ್ನಡಿಗರ ಮನಸ್ಸನ್ನೂ ಗೆದ್ದಿದ್ದರು. ಆದರೆ ಈಗ ಅನಿಸುತ್ತಿದೆ ಅವರು ಮನಸ್ಸನ್ನು ಮಾತ್ರ ಗೆದ್ದಿಲ್ಲ. ಜೊತೆಗೆ ಕರ್ನಾಟವನ್ನೂ ಗೆದ್ದಿದ್ದಾರೆ. ಹೌದು, ಪುಷ್ಪ ಚಿತ್ರ ಕನ್ನಡದಲ್ಲಿ ಡಬ್ ಆಗಿದ್ದು, ಆ ಚಿತ್ರದ ನಾಯಕಿ ಕನ್ನಡ ಮೂಲದವರೇ ಆಗಿದ್ದು, ಕನ್ನಡದಲ್ಲಿ ಡಬ್ ಮಾಡಲು ಆ ನಟಿಗೆ ಸಮಯ ಸಿಗಲಿಲ್ಲವಂತೆ. ಎಂಥಾ ಹುಚ್ಚುಗೇಡಿತನ ನೋಡಿ. ತಿನ್ನಲು, ಉಣ್ಣಲು, ಬೆಳೆಯಲು ಇಲ್ಲಿನ ಜನರ ಸಹಕಾರ ಬೇಕು. ಬೆಳೆದ ನಂತರ ಇಲ್ಲಿನವರು ಕೇವಲ ಫ್ಯಾನ್ಸ್ ಅಷ್ಟೇ.. ಎಂಥೆಂಥಾ ದೊಡ್ಡ ದೊಡ್ಡ ಕಲಾವಿದರಿಗೆ ಇರದ ಸೊಕ್ಕು ಈ ನಟಿಗೆ ಒದಗಿ ಬಂದಿದ್ದೂ ಕೂಡ ನಮ್ಮಿಂದಲೇ ಎನ್ನುವುದು ಒಪ್ಪಿಕೊಳ್ಳಬೇಕಾದ ಸತ್ಯವೇ. ಇದೇ ಮೊದಲೇನಲ್ಲಾ, ಇಂಥಾ ಎಷ್ಟೋ ವಿಷಯಗಳಲ್ಲಿ ಕನ್ನಡಿಗರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಆದರೂ ಆ ನಟಿಗೆ ಇಲ್ಲಿನವರು ನಿರ್ಬಂಧ ಹೇರದಿರುವುದು ಇಲ್ಲಿನವರ ಹೃದಯ ವೈಶಾಲ್ಯತೆ.

ಆ ವಿಚಾರ ಬಿಡಿ, ಇನ್ನೊಂದು ಶಾಕಿಂಗ್ ವಿಚಾರ ಇದೇ ತಂಡದಿಂದ ಹೊರಬಿದ್ದಿದೆ. ಅದೇನೆಂದರೆ ತೆಲುಗಿನ ಪುಷ್ಪ ಸಿನೆಮಾ ಕನ್ನಡಕ್ಕೆ ಡಬ್ ಆಗಿದ್ದರೂ ಕೂಡ, ಕರ್ನಾಟಕದಲ್ಲಿ ಪುಷ್ಪದ ಕನ್ನಡ ಅವತರಣಿಕೆ ಬಿಡುಗಡೆಯಾಗಿರುವುದು ಕೇವಲ ಒಂದು ಅಂಕಿಯ ಚಿತ್ರಮಂದರಿಗಳಲ್ಲಿ. ಆದರೆ ಅದೇ ತೆಲುಗಿನ ಅವತರಣಿಕೆಯಲ್ಲಿ ದಿನಕ್ಕೆ ಸುಮಾರು 500 ಕ್ಕೂ ಹೆಚ್ಚು ಪ್ರದರ್ಶನಗಳು ಕಾಣುತ್ತಿವೆ. ಇದು ಕನ್ನಡಿಗರ ಸೋಲು. ಕರ್ನಾಟಕ ಕನ್ನಡಿಗರದ್ದು ಎಂಬುದರಲ್ಲಿ ಕಿಂಚಿತ್ತೂ ಸಂದೇಹವೇ ಇಲ್ಲ. ಆದರೂ ಇತ್ತೀಚೆಗೆ ನಾವು ಕರ್ನಾಟಕದಲ್ಲೇ ಇದ್ದೇವಾ? ಎಂಬ ಪ್ರಶ್ನೆ ಭಯ ಹುಟ್ಟಿಸುತ್ತದೆ. ಛೇ.. ನಾವೆಲ್ಲ ಕನ್ನಡಿಗರಾಗಿ ಇಂಥಾ ವಿಷಯಗಳು ನಮ್ಮ ಮನ ಕೊರೆಯುವುದಿಲ್ಲವಲ್ಲ ಅದು ಇನ್ನೊಂದು ವಿಪರ್ಯಾಸ. ಅವರವರ ವ್ಯಾಪರಕ್ಕನುಗುಣವಾಗಿ ಎಲ್ಲರನ್ನೂ ಕೊಂಡುಕೊಂಡಿದ್ದಾರೆ. ಕನ್ನಡದ ನೆಲದಲ್ಲಿ ಬೇರೊಬ್ಬರ ವಿಜಯ ಪತಾಕೆಗಳು ಹಾರಾಡುತ್ತಿವೆ. ಇದು ನಮ್ಮ ಹೆತ್ತ ತಾಯಿಯರಿಗೆ ಆಗುತ್ತಿರುವ ಅವಮಾನ. ಅದಕ್ಕೆ ಕಾರಣ ನಾವೆಲ್ಲರೂ ಕೂಡ.

Advertisement

ಒಂದು ವೇಳೆ ಇದೇ ಪುಷ್ಪ ಕನ್ನಡದಲ್ಲಿ ತಯಾರಾಗಿದ್ದು, ತೆಲುಗಿನಲ್ಲಿ ಡಬ್ ಆಗಿದ್ದರೆ ತೆಲುಗು ನೆಲದಲ್ಲಿ ಕನ್ನಡಕ್ಕೆ ಸಿಗುತ್ತಿದ್ದ ಪದರ್ಶನಗಳೆಷ್ಟು?

ನಿಜಕ್ಕೂ ವಾಣಿಜ್ಯ ಮಂಡಳಿಯಾಗಲಿ, ಹಂಚಿಕೆದಾರರಾಗಲಿ, ಅವರನ್ನು ಪ್ರೋತ್ಸಾಹಿಸುವ ಸಿನಿ ಪ್ರೇಮಿಗಳಿಗಾಗಲಿ, ಯಾರಿಗೂ ಕನ್ನಡ ಬೇಕಾಗಿಲ್ಲ. ಇವರಿಗೂ ಬಾವುಟ ಸುಟ್ಟ ರಾಕ್ಷಸರಿಗೂ ಯಾವುದೇ ವ್ಯತ್ಯಾಸವಿಲ್ಲ. ಇವರಿಗೆ ಮನರಂಜನೆ ಬೇಕು, ವ್ಯಾಪಾರ ಆಗಬೇಕು ಅಷ್ಟೇ. ಈ ವ್ಯಾಪಾರ ಹಾಗೂ ಮನರಂಜನೆಯಲ್ಲಿ ನಮ್ಮ ಸೊಗಡುತನ, ಭಾಷಾಭಿಮಾನ, ನಮ್ಮ ನೆಲದ ಘಮಲು ಎಲ್ಲವೂ ಅಂತ್ಯ ಕಾಣುವ ದಿನಗಳು ಹತ್ತಿರವಾಗುತ್ತಿವೆ. ನಾವು ಅದರಿಂದ ದೂರ ಇದ್ದೇವೆ ಅಂದುಕೊಂಡು ಮೂಕಿಗಳಾಗಿದ್ದೇವೆ. ನಮ್ಮ ಮೌನಕ್ಕೆ ಜಡಿದಿರುವ ಬೀಗವನ್ನು ಸಡಿಸಗೊಳಿಸಿ ಈಗ ಕನ್ನಡಕ್ಕೆ ಹೋರಾಟ ನಡೆಸದಿದ್ದರೂ, ಹೋರಾಟ ನಡೆಸುವವರ ಜೊತೆ ನಿಲ್ಲಬೇಕಾದ್ದು ಇಲ್ಲಿನ ಪ್ರತಿಯೊಬ್ಬರ ಕರ್ತವ್ಯ. ಸಾಮಾಜಿಕ ನ್ಯಾಯ, ಬದ್ಧತೆ, ಶಿಸ್ತು ಇರುವ ಅಧಿಕಾರಿಗಳು, ಕಲಾವಿದರು, ರಾಜಕಾರಣಿಗಳು, ಹಾಗೂ ಜನಸಾಮಾನ್ಯರಿಗೂ ಇದು ಅನ್ವಯವಾಗುತ್ತದೆ. ತೆಲುಗಿನ ಪುಷ್ಪ ಒಂದು ಚಿಕ್ಕ ಉದಾಹರಣೆಯಷ್ಟೆ. ಇಂತಹ ಸಾವಿರ ವಿಪರ್ಯಾಸಗಳು ನಮ್ಮ ಸುತ್ತಲೇ ನಡೆಯುತ್ತಿವೆ. ನಾವು ಬೇಗ ಎಚ್ಚರವಾಗಬೇಕಾದ್ದು ಅನಿವಾರ್ಯ.

ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳು ತೆರೆ ಕಾಣಲಿ. ಅದರೆ ಅದಕ್ಕೆ ನಿರ್ದಿಷ್ಟ ಚಿತ್ರಮಂದಿರಗಳು ನಿಗದಿಯಾಗಲಿ. ಎಲ್ಲಾ ಸಂವಹನ ಮಾಧ್ಯಮಗಳಲ್ಲಿ ಕನ್ನಡವೇ ತುಂಬಲಿ. ಅವಶ್ಯಕತೆಗನುಗುಣವಾಗಿ ಬೇರೆ ಭಾಷೆಯ ಬಳಕೆಯಾಗಲಿ. ಇದು ಕನ್ನಡದ ಅಸ್ತಿತ್ವದ ಪ್ರಶ್ನೆ ಮಾತ್ರ ಅಲ್ಲ. ನಮ್ಮ ನಿಮ್ಮೆಲ್ಲರ ಅಸ್ತಿತ್ವದ ಪ್ರಶ್ನೆ. ಈ ವಿಷಯದಲ್ಲಿ ಕೈ ಜೋಡಿಸದಿದ್ದರೂ ಕೂಡ, ಕನ್ನಡಕ್ಕೆ ಕುತ್ತುತರುವ ವಿಷಯಗಳಿಗೆ ದಯವಿಟ್ಟು ಸ್ಪಂದಿಸಿ. ಅದು ನೀವಿರುವುದರ ಗುರುತಾಗುತ್ತದೆ.

ಜೈ ಕನ್ನಡ

– ಅನಂತ ಕುಣಿಗಲ್.

Advertisement

Udayavani is now on Telegram. Click here to join our channel and stay updated with the latest news.

Next