Advertisement

ಇಡೀ ರಾಜ್ಯಕ್ಕೆ ಐಟಿ ವಿಸ್ತರಣೆ: ಡಿಸಿಎಂ ಡಾ|ಸಿ.ಎನ್‌. ಅಶ್ವತ್ಥ್ ನಾರಾಯಣ

03:18 PM Jan 11, 2021 | Nagendra Trasi |

ಕಲಬುರಗಿ: ರಾಜ್ಯದ ಐಟಿ ಉದ್ಯಮದ ಶೇ. 95ರಷ್ಟು ವಹಿವಾಟು ಬೆಂಗಳೂರಿನಿಂದಲೇ ಆಗುತ್ತಿದ್ದು, ಅದನ್ನು ಕಲ್ಯಾಣ ಕರ್ನಾಟಕ ಜಿಲ್ಲೆಗಳು ಸೇರಿದಂತೆ ಇತರ ನಗರಗಳಿಗೆ ವಿಸ್ತರಿಸಲು ಗುರಿ ಹೊಂದಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥ್ ನಾರಾಯಣ ಹೇಳಿದರು.

Advertisement

ರವಿವಾರ ಬೆಂಗಳೂರಿನ ಸದಾಶಿವ ನಗರದಲ್ಲಿ ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ನೂತನ ಶಾಲಾ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಬೆಂಗಳೂರು ಕೇಂದ್ರಿತ ಐಟಿ-ಬಿಟಿ ವಲಯವನ್ನು ಬ್ಯಾಂಡ್‌ ಬೆಂಗಳೂರು ಯೋಜನೆ ಮೂಲಕ ರಾಜ್ಯದ ಇತರ ಜಿಲ್ಲೆಗಳಿಗೆ ವಿಸ್ತರಣೆ ಮಾಡಿ ಮುಂದಿನ ಐದು ವರ್ಷಗಳಲ್ಲಿ 300 ಬಿಲಿಯನ್‌ ಡಾಲರ್‌ ವಹಿವಾಟು ನಡೆಸುವ ಮಟ್ಟಕ್ಕೆ ತಲುಪಿಸಲು ರಾಜ್ಯ
ಸರ್ಕಾರ ಕಾರ್ಯನಿರ್ವಹಿಸುತ್ತಿದೆ . ಉತ್ತಮ ಗುಣಮಟ್ಟದ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕಬಹುದು. ಐದುವರೆ ವರ್ಷಗಳ ಅಧ್ಯಯನ, ಪ್ರಯತ್ನದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತಿದೆ.

ಹಾಲಿ ಇರುವ ಶಿಕ್ಷಣವೂ ಮಕ್ಕಳ ಕೇಂದ್ರಿತವಾಗಿಲ್ಲ. ಅದರಲ್ಲಿ ಸುಧಾರಣೆ ಮಾಡಲು ಮತ್ತು ಆರ್ಥಿಕ ಸಂಪನ್ಮೂಲ ಜೊತೆಗೆ ಗುಣಮಟ್ಟದ ಮಾನವ ಸಂಪನ್ಮೂಲ ಒದಗಿಸಲು ರಾಜ್ಯ ಸರಕಾರ ಬದ್ಧವಾಗಿದೆ. 3 ರಿಂದ 6 ವರ್ಷದ ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ಶೇ. 85 ಕಲಿಕೆ ಈ ಅವಧಿಯಲ್ಲಿ ಆಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ 3ನೇ ವರ್ಷದಿಂದಲೇ ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸಲಾಗಿದೆ ಎಂದು ಹೇಳಿದರು. ಕಲ್ಯಾಣ ಕರ್ನಾಟಕ ಭಾಗದ ನೇಮಕಕ್ಕೆ ಇರುವ ಅಡೆತಡೆ ನಿವಾರಣೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಇದೇ ಸಂದರ್ಭ ದಲ್ಲಿ ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ರಾಜ್ಯಸಭೆ ಸದಸ್ಯ ಡಾ| ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಅಮೆರಿಕ, ಚೀನಾ ಸೇರಿದಂತೆ ಮುಂದುವರೆದ ರಾಷ್ಟ್ರಗಳ ಜೊತೆ ಭಾರತ ಸ್ಪರ್ಧೆ ಮಾಡಬೇಕು ಎಂದರೆ ಶಿಕ್ಷಣವು ಭವಿಷ್ಯದ ಯೋಚನೆಗಳಿಂದ ಕೂಡಿರಬೇಕು. ಇಂಗ್ಲಿಷ, ವಿಜ್ಞಾನ, ಗಣಿತ ವಿಷಯಗಳಿಗೆ ಆದ್ಯತೆ ನೀಡಬೇಕು. ಹಿಂದಿನ ಕಾಲದ ಶಿಕ್ಷಣ ನೀಡುವ ಮೂಲಕ ಹಿಮ್ಮುಖವಾಗಿ ಹೋಗಬಾರದು ಎಂದರು.

ಮನುಸ್ಮೃತಿ, ಪುರಾಣ, ಧಾರ್ಮಿಕ ವಿಚಾರಗಳನ್ನು ಮನೆಯಲ್ಲಿ ಓದಿಕೊಳ್ಳಿ. ಶೈಕ್ಷಣಿಕ ಪುಸ್ತಕಗಳಲ್ಲಿ ಅವುಗಳನ್ನು ತಂದರೆ ಘರ್ಷಣೆ ಆಗಬಹುದು. ಹೀಗಾಗಿ, ಅಂತಹ ವಿಚಾರಗಳನ್ನು ಕೈ ಬಿಟ್ಟು ಆಧುನಿಕ ಶಿಕ್ಷಣ ಇರಬೇಕು ಎಂದು ಹೇಳಿದರು. ಎಲ್ಲರನ್ನು ಸಮಾನವಾಗಿ ಕಾಣಬೇಕು. ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿ, ಸುಧಾರಣೆಯಾಗಬೇಕು ಎಂದು ಸಮಾಜ ಸುಧಾರಕ ಬಸವಣ್ಣನವರು ಹೇಳಿದ್ದಾರೆ.

Advertisement

ಇತ್ತೀಚೆಗೆ ಅನುಭವ ಮಂಟಪ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಎಲ್ಲರಿಗೂ ಸಮಾನ ಅವಕಾಶ ನೀಡುವ ಅನುಭವ ಮಂಟಪ ಕಟ್ಟಿಸುತ್ತಿರುವ ಕಾರಣ ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಎಲ್ಲರಿಗೂ ಅವಕಾಶ ನೀಡುವಂತಿರಬೇಕು. ಶಿಕ್ಷಣವು ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸಮಾನತೆ ಸಾರಬೇಕು. ಎಲ್ಲರಿಗೂ ಸಮಾನ ಅವಕಾಶ ನೀಡಬೇಕು. ಕೆಲವು ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗುವಂತೆ ಮಾಡಬಾರದು ಎಂದು ಸಲಹೆ ನೀಡಿದರು.

ಕಲ್ಯಾಣ ಕರ್ನಾಟಕ ಭಾಗದ ಸರಕಾರಿ, ಅನುದಾನಿತ ಸಂಸ್ಥೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು ಆರ್ಥಿಕ ಕಾರಣ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಹಿಂದುಳಿದ ಭಾಗ ಆಗಿರುವ ಕಾರಣ ಆರ್ಥಿಕ ಲೆಕ್ಕಾಚಾರ ಮಾಡುವ ಬದಲು ಅಭಿವೃದ್ಧಿ ಮತ್ತು ಸುಧಾರಣೆಗಾಗಿ ಆರ್ಥಿಕ ಇಲಾಖೆಯ ನಿಬಂಧನೆಗಳನ್ನು ತೆರವು ಮಾಡಿ ಅನುಮತಿ ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ಖರ್ಗೆ ಒತ್ತಾಯಿಸಿದರು.

ಹೈದ್ರಾಬಾದ್‌ ಶಿಕ್ಷಣ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಭೀಮಾಶಂಕರ ಸಿ. ಬಿಲಗುಂದಿ ಮಾತನಾಡಿ, ಸದಾಶಿವನಗರದಲ್ಲಿ ಖಾಲಿ ಬಿದ್ದಿರುವ ಸಾಕಷ್ಟು ವಿಶಾಲ ಜಾಗದಲ್ಲಿ 2009ರಲ್ಲಿ ಬೆಂಗಳೂರಿನಲ್ಲಿ ಉತ್ತಮ ಶಾಲೆ ನಿರ್ಮಿಸಬೇಕು ಎನ್ನುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಕೆಲಸ ನಡೆಯುತ್ತಲೇ ಇತ್ತು. ನಾನು ಬಂದ ಬಳಿಕ ಕೇವಲ 20 ತಿಂಗಳಲ್ಲಿ ಶಾಲೆ ಕಟ್ಟಡ ನಿರ್ಮಾಣವಾಗಿದೆ. ಉತ್ತಮವಾದ ಶಾಲಾ ಕಟ್ಟಡ ತಲೆ ಎತ್ತಲು ಸಂಸ್ಥೆಯ ಎಲ್ಲರೂ ಸರಕಾರ ನೀಡಿದ್ದಾರೆ. ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯು 52 ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಹೊಸ ಶಿಕ್ಷಣ ಸಂಸ್ಥೆಗಳ ನಿರ್ಮಾಣ ಮತ್ತು ವಿಸ್ತರಣೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷ ಡಾ| ಶಿವಾನಂದ ಎಸ್‌.ದೇವರಮನಿ, ಕಾರ್ಯದರ್ಶಿ ನಿತೀನ್‌ ಬಿ. ಜವಳಿ, ಜಂಟಿ ಕಾರ್ಯದರ್ಶಿ ಡಾ| ಗಂಗಾಧರ ಏಲಿ, ಆಡಳಿತ ಮಂಡಳಿ ಸದಸ್ಯರಾದ ಡಾ| ಸಂಪತ್‌ಕುಮಾರ ಲೋಯಾ, ವಿಜಯ ಕುಮಾರ ದೇಶಮುಖ, ಡಾ| ಬಸವರಾಜ ಪಾಟೀಲ, ಅರುಣಕುಮಾರ ಎಂ. ಪಾಟೀಲ, ಅನೀಲಕುಮಾರ ಮರಗೋಳ, ಸತೀಶ್ಚಂದ್ರ ಹಡಗಿಲ್‌ವುಠ, ಉದಯಕುಮಾರ ಚಿಂಚೋಳಿ, ಡೀನ್‌ ಡಾ| ಉಮೇಶ್ಚಂದ್ರ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಮತ್ತು ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಅ ಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದರು.

ಕಲ್ಯಾಣ ಕರ್ನಾಟಕ ಮಾಡಲು ಸಂವಿಧಾನ ತಿದ್ದುಪಡಿ
ಹೈದ್ರಾಬಾದ್‌ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಲು ರಾಜ್ಯ ಸರಕಾರ ನಿರ್ಧಾರ ತೆಗೆದುಕೊಂಡಿದೆ. ಸಂವಿಧಾನದಲ್ಲಿ ಈ ಕುರಿತು ತಿದ್ದುಪಡಿ ಆಗಬೇಕು. ಶೀಘ್ರದಲ್ಲೇ ತಿದ್ದುಪಡಿ ಮಾಡಲು ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ
ಡಾ| ಸಿ.ಎನ್‌ ಅಶ್ವತ್ಥ ನಾರಾಯಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next