Advertisement

Isreal: ಇಸ್ರೇಲ್‌ ಬೇಹುಗಾರಿಕೆ ವಿಫ‌ಲವಾಗಿದ್ದು ಹೇಗೆ?

12:07 AM Oct 11, 2023 | Team Udayavani |

ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ನಡುವಿನ ಸಂಘರ್ಷ ವರದಿಯಾದಂತೆ ಕರಾವಳಿಯ ಅದೆಷ್ಟೋ ಕುಟುಂಬಗಳಲ್ಲಿ ಭೀತಿಯ ವಾತಾರವಣ ಸೃಷ್ಟಿಯಾಗುತ್ತದೆ. ಗಲ್ಫ್ ರಾಷ್ಟ್ರಗಳ ನಂತರ ಈ ಪುಟ್ಟ ಯಹೂದಿ ದೇಶವು ಕರ್ನಾಟಕದ ಕರಾವಳಿಯ ಸಾವಿರಾರು ಜನರಿಗೆ ನೆಲೆ ಒದಗಿಸಿದೆ. ಅಲ್ಲಿ ಉದ್ಯೋಗ ಪಡೆಯಬೇಕಾದರೆ ಲಕ್ಷಾಂತರ ಮೊತ್ತ ಖರ್ಚು ಮಾಡಬೇಕಾದರೂ ನಂತರ ದೊರೆಯುವ ಆರಂಕಿ ಸಂಬಳ ಮತ್ತು ಮುಕ್ತವಾಗಿ ಬದುಕಲು ದೊರೆಯುವ ಸ್ವಾತಂತ್ರ್ಯವು ಇಲ್ಲಿನ ಅದೆಷ್ಟೋ ಜನರನ್ನು ಅಲ್ಲಿಗೆ ಸೆಳೆದಿದೆ. ಆದರೆ ಪ್ಯಾಲೆಸ್ತಿನ್‌ ಮತ್ತು ಇಸ್ರೇಲ್‌ ನಡುವಿನ ಸಂಘರ್ಷ ಮತ್ತೆ ಮತ್ತೆ ಅಲ್ಲಿ ಮಾತ್ರವಲ್ಲದೆ, ಇಲ್ಲಿ ಪೋಷಕರ ಮನದಲ್ಲಿಯೂ ಭೀತಿಯ ಛಾಯೆಯನ್ನು ಮೂಡಿಸುತ್ತದೆ,

Advertisement

ಅಂದ ಹಾಗೆ ಈ ಬಾರಿ ಇದು ಸಂಘರ್ಷದ ಹಂತಕ್ಕೆ ನಿಂತಿಲ್ಲ. ಇಸ್ರೇಲಿನ ಪ್ರಧಾನಿ ಬೆಂಜಮಿನ್‌ ನೆತನ್ಯಹು ಹೇಳಿರುವಂತೆ ಅಲ್ಲಿ ಈಗ ಅಲ್ಲಿ ಯುದ್ಧ ನಡೆಯುತ್ತಿದೆ. ಅಲ್ಲಿ ಹೋದವರಿಗೆ ರಾಕೆಟ್‌ ಹಾಗೂ ಸೈರನ್‌ನ ಶಬ್ದ ಹೊಸದೇನೂ ಅಲ್ಲ. ಅಲ್ಲಿ ದುಡಿಯುವ ಕನ್ನಡಿಗರು ಈ ಪ್ರಭಾವಿ ದೇಶದ ಮೇಲೆ ನಡೆಯುವ ರಾಕೆಟ್‌ ದಾಳಿ, ಐರನ್‌ ಡೋಮ್‌ ಎಂಬ ತಂತ್ರಜ್ಞಾನದ ಮೂಲಕ ಅದನ್ನು ಹೊಡೆದು ಹಾಕುವ ಇತ್ಯಾದಿಗಳ ಕುರಿತು ಆಗಾಗ್ಗೆ ತಮ್ಮ ಸಂಬಂಧಿಕರೊಂದಿಗೆ ವಿಡಿಯೋ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಅಷ್ಟೇ ಅಲ್ಲದೆ ಪ್ರತಿ ದೂರವಾಣಿ ಸಂಭಾಷಣೆಯ ವೇಳೆ ಈ ಬಗ್ಗೆ ಉಲ್ಲೇಖೀಸುತ್ತಾರೆ. ಆದರೆ ಈ ಬಾರಿ ಮಾತ್ರ ಪರಿಸ್ಥಿತಿಯು ತುಸು ಭಿನ್ನವಾಗಿದೆ. ಕೇವಲ ಎರಡು ದಿನಗಳೊಳಗೆ ಬರೋಬ್ಬರಿ ಒಂದು ಸಾವಿರಕ್ಕೂ ಮಿಕ್ಕಿದ ಜನರು ಈ ಕಲಹದಲ್ಲಿ ಸಾವನ್ನಪ್ಪಿದ್ದಾರೆ. ಯಹೂದಿಗಳ ಪಾಲಿಗೆ ಈ ಸಂಘರ್ಷ, ಯುದ್ಧ, ಸಾವುನೋವುಗಳ ಹೊಸತೇನಲ್ಲ. ಇತಿಹಾಸದುದ್ದಕ್ಕೂ ಅವರು ಹೋರಾಡುತ್ತಲೇ ಬಂದಿದ್ದಾರೆ, ಅಲ್ಲದೆ ಇಸ್ರೇಲಿನ ಬೇಹುಗಾರಿಕೆಗೆ ವಿಶ್ವದಲ್ಲೇ ವಿಶೇಷ ಹೆಸರು ಇದೆ. ದೇಶದೊಳಗಿನ ಶಿನ್‌ ಬೆಟ್‌ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೊಸಾದ್‌ ಬೇಹುಗಾರಿಕೆ ಸಂಸ್ಥೆ ಎರಡಕ್ಕೂ ಅಪಾಯವನ್ನು ಮೊದಲೇ ಊಹಿಸುವ ಶಕ್ತಿ ಇದೆ. ಜೊತೆಗೆ ಗಡಿಯಲ್ಲಿ ಭದ್ರತಾ ಕ್ಯಾಮರಾಗಳಿವೆ. ಅಲ್ಲದೆ ಆ ಪ್ರದೇಶದಲ್ಲೇ ಅತ್ಯಂತ ಶಕ್ತಿಶಾಲಿ ಸೈನ್ಯವನ್ನು ಇಸ್ರೇಲ್‌ ಹೊಂದಿದೆ.

ಆದರೆ ಈ ಬಾರಿ ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಡೆದಿದೆ. ಗಾಜಾ ಪಟ್ಟಿಯಲ್ಲಿರುವ ಹಮಾಸ್‌ ಬಂಡುಕೋರರಿಂದ ಇಷ್ಟೊಂದು ಪ್ರಮಾಣದಲ್ಲಿ ನಡೆದ ದಾಳಿಯನ್ನು ಮೊದಲೇ ಊಹಿಸಲು ಇಸ್ರೇಲ್‌ ಹೇಗೆ ವಿಫಲವಾಯಿತು ಎನ್ನುವ ಪ್ರಶ್ನೆಯು ಮಾಧ್ಯಮ ವಲಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚರ್ಚೆಗೆ ಈಡಾಗಿದೆ. ಅದೂ ಸಹ ಈಜಿಪ್ಟ್ ಮತ್ತು ಸಿರಿಯಾ ನೇತೃತ್ವದ ಅರಬ್‌ ರಾಷ್ಟ್ರಗಳೊಂದಿಗೆ ಯುದ್ಧ ನಡೆದು 50 ವರ್ಷಗಳು ತುಂಬುವ ಹೊತ್ತಿಗೆ ಇಸ್ರೇಲ್‌ ಏಕೆ ಇಷ್ಟೊಂದು ಮಟ್ಟದಲ್ಲಿ ನಿರ್ಲಕ್ಷ್ಯ ವಹಿಸಿತು ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಹಮಾಸ್‌ ಉಗ್ರರು ನೆಲ, ಜಲ ಹಾಗೂ ವಾಯುಮಾರ್ಗದ ಮೂಲಕ ಇಸ್ರೇಲ್‌ ಮೇಲೆ ಭೀಕರ ದಾಳಿ ನಡೆಸಿದ್ದೇ ಅಲ್ಲದೆ ಅನೇಕ ನಾಗರಿಕರು, ಸೈನಿಕರು ಮತ್ತು ಅಲ್ಲಿಗೆ ಕೆಲಸಕ್ಕೆ ಬಂದ ವಿದೇಶೀಯರನ್ನು (ಇವರು ಅಲ್ಲಿನ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ನೇಪಾಳಿಗಳು ಎನ್ನಲಾಗುತ್ತಿದೆ) ಒತ್ತೆಯಾಳುಗಳನ್ನಾಗಿ ಹೊತ್ತೂಯ್ಯವ ತನಕ ಇಸ್ರೇಲ್‌ಗೆ ಸುಳಿವೇ ದೊರೆಯಲಿಲ್ಲ.

ಆದರೆ ಈ ಯಹೂದಿ ರಾಷ್ಟ್ರವಂತು ಸುಮ್ಮನಿರುವುದಿಲ್ಲ ಎನ್ನುವುದು ಇಡೀ ಜಗತ್ತಿಗೆ ತಿಳಿದಿದೆ. ಜನಸಂಖ್ಯೆಯ ಅನುಪಾತದಲ್ಲಿ ನೋಡಿದರೆ, ಸುಮಾರು ಒಂದು ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿರುವ ಈ ದೇಶವು ವಿಶ್ವದಲ್ಲೇ ಅತೀ ಹೆಚ್ಚು ಪ್ರಮಾಣದಲ್ಲಿ ಭಯೋತ್ಪಾದನೆಗೆ ಒಳಗಾದ ರಾಷ್ಟ್ರ. ತನ್ನದೇ ಆದ ಒಂದು ದೇಶವನ್ನು ರಚಿಸಬೇಕೆಂದು 1948ರಲ್ಲಿ ಇಸ್ರೇಲಿನಲ್ಲಿ ಒಗ್ಗೂಡಿದ ಯಹೂದಿಗಳು ಅಲ್ಲಿನ ಪಶ್ಚಿಮ ದಂಡೆ, ಪೂರ್ವ ಜೆರುಸಲೇಮ್‌ ಮತ್ತು ಗಾಜಾ ಪಟ್ಟಿಯಲ್ಲಿ ಸ್ಥಳವನ್ನು ಕಬಳಿಸಿದ್ದಾರೆ. ಪರಿಣಾಮವಾಗಿ ಇಸ್ರೇಲಿಗಳು ರಕ್ತಸಿಕ್ತ ಸಂಘರ್ಷವನ್ನು ಎದುರಿಸುತ್ತಲೇ ಬಂದಿದ್ದಾರೆ. ಆದರೆ ತಾಂತ್ರಿಕ ನಿಪುಣತೆ ಮತ್ತು ಶಕ್ತಿಶಾಲಿ ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲ ಇರುವುದರಿಂದಲೇ ನೆರೆರಾಷ್ಟ್ರಗಳ ಸಂಘರ್ಷವನ್ನು ಇಸ್ರೇಲ್‌ ಹಿಮ್ಮೆಟ್ಟಿಸುತ್ತಲೇ ಬಂದಿದೆ. ಇನ್ನೊಂದೆಡೆ ಅರಬ್‌ ರಾಷ್ಟ್ರಗಳು ನೆಲೆ ಕಳೆದುಕೊಂಡ ಪ್ಯಾಲೆಸ್ತೀನಿನ ಬೆನ್ನಿಗೆ ನಿಂತಿವೆ.

Advertisement

ಅರಬ್‌ ಮಾಧ್ಯಮಗಳು ನಿರಂತರವಾಗಿ ಇಸ್ರೇಲ್‌ ಅನ್ನು ಒಂದು ರಾಕ್ಷಸನಂತೆ ಬಿಂಬಿಸುತ್ತಾ ಬಂದಿವೆ. ಕ್ರೆ„ಸ್ತ, ಮುಸಲ್ಮಾನ ಹಾಗೂ ಯಹೂದಿಗಳಿಗೆ ಪವಿತ್ರವೆನಿಸಿರುವ ಸ್ಥಳಗಳನ್ನು ತನ್ನ ಅಂಕೆಯಲ್ಲಿ ಇರಿಸಿರುವ ಈ ಯಹೂದಿ ರಾಷ್ಟ್ರದ ಪ್ರತಿ ಹಿನ್ನಡೆಯನ್ನು ಅರಬ್‌ ಮಾಧ್ಯಮಗಳು ಸಂಭ್ರಮಿಸಿದರೆ, ಇಸ್ರೇಲ್‌ ಆಕ್ರಮಣವನ್ನು ಕಟುವಾದ ಮಾತಿನಿಂದ ಖಂಡಿಸುತ್ತಲೇ ಬಂದಿವೆ. ಈ ಯಹೂದಿ ರಾಷ್ಟ್ರವೂ ಕೂಡಾ ಅರಬ್‌ ರಾಷ್ಟ್ರಗಳ ಕುರಿತು ಬಿಗಿಯಾದ ಪಟ್ಟನ್ನೇ ಹೊಂದಿತ್ತು.

ಇನ್ನೊಂದೆಡೆ ಪ್ಯಾಲೆಸ್ತೀನ್‌ ಹೋರಾಟದ ಮುಖವೆನಿಸಿದ್ದ ಯಾಸರ್‌ ಅರಾಫತ್‌ ಅವರು ಎರಡು ದಶಕಗಳ ಹಿಂದೆ ಸಾವನ್ನಪ್ಪಿದ ನಂತರ ಇವರ ನಾಯಕತ್ವದಲ್ಲಿ ನಿರ್ವಾತವೊಂದು ಕಾಣಿಸಿಕೊಂಡಿದೆ. ಸೂಕ್ತ ನಾಯಕತ್ವದ ಕೊರತೆಯ ಹಿನ್ನೆಲೆಯಲ್ಲಿ ಅರಬ್‌ ರಾಷ್ಟ್ರಗಳು ಸಹ ಮೌನಕ್ಕೆ ಶರಣಾಗುವಂತೆ ಕಾಣುತ್ತಿದೆ. ತಮ್ಮ ಹೋರಾಟಕ್ಕೆ ಸರಿಯಾದ ಬೆಂಬಲ ಸಿಗುತ್ತಿಲ್ಲ ಎಂಬುದಾಗಿ ಪ್ಯಾಲೆಸ್ತೀನಿಯರೇ ಬೇಸರ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಸರಿಯಾಗಿ ಐದು ದಶಕಗಳ ಹಿಂದೆ ಇಸ್ರೇಲ್‌ ವಿರುದ್ಧದ ಹೋರಾಟಕ್ಕೆ ನಾಯಕತ್ವ ವಹಿಸಿದ್ದ ಈಜಿಪ್ಟ್ ದೇಶವು 1979ರಲ್ಲೇ ಇಸ್ರೇಲ್‌ ಜೊತೆಗೆ ತನ್ನ ಸಂಬಂಧವನ್ನು ಸರಿಪಡಿಸಿಕೊಂಡು ಸುಮ್ಮನಾಯಿತು. ಈ ಹೋರಾಟದಲ್ಲಿ ಈಜಿಪ್ಟ್ ಗೆ ಸಾಥ್‌ ನೀಡಿದ್ದ ಜೋರ್ಡಾನ್‌ ಸಹ 1994ರಲ್ಲಿ ಇದೇ ದಾರಿಯನ್ನು ಹಿಡಿದು ಸುಮ್ಮನಾಯಿತು. ಅಷ್ಟೇ ಅಲ್ಲದೆ ಇಸ್ರೇಲ್‌ ನಲ್ಲಿ ಉತ್ಪತ್ತಿಯಾಗುತ್ತಿದ್ದ ಹಣ್ಣು ಹಂಪಲುಗಳು, ಆಲಿವ್‌ ಎಣ್ಣೆ ಇತ್ಯಾದಿ ಉತ್ಪನ್ನಗಳನ್ನು ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡುವುದಕ್ಕಾಗಿ ತನ್ನ ಮೂಲಕ ರಹದಾರಿಯನ್ನು ತೆರೆದುಕೊಟ್ಟಿತು. ಏಕೆಂದರೆ ಇಸ್ರೇಲ್‌ ಉತ್ಪನ್ನಗಳಿಗೆ ಆ ಸಂದರ್ಭದಲ್ಲಿ ಈ ತೈಲ ಸಮೃದ್ಧ ಗಲ್ಫ್‌ ರಾಷ್ಟ್ರಗಳಿಗೆ ನೇರ ಪ್ರವೇಶವಿರಲಿಲ್ಲ.

ಆದರೆ ಮೂರು ವರ್ಷಗಳ ಹಿಂದೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಮತ್ತು ಇಸ್ರೇಲ್‌ ನಡುವೆ ನಡೆದ ಒಡಂಬಡಿಕೆಯು ಮಧ್ಯಪ್ರಾಚ್ಯ ರಾಷ್ಟ್ರಗಳ ಅಂತರಾಷ್ಟ್ರೀಯ ಸಂಬಂಧದ ಸಮೀಕರಣವನ್ನೇ ಬದಲಾಯಿಸಿತು. ಪುಟ್ಟ ಗಲ್ಫ್ ರಾಷ್ಟ್ರವಾದ ಬಹ್ರೈನ್‌ ಸಹ ಜೆರುಸಲೇಂ ಜೊತೆಗೆ ತನ್ನ ಸಂಬಂಧವನ್ನು ಸುಧಾರಿಸಲು ಮುಂದಾಯಿತು. ಪರಿಣಾಮವಾಗಿ ಕೆಲ ಗಲ್ಫ್ ರಾಷ್ಟ್ರಗಳು ಮತ್ತು ಇಸ್ರೇಲ್‌ ನಡುವೆ ರಾಜತಾಂತ್ರಿಕ ಸಂಬಂಧದ ಹೊಸ ಅಧ್ಯಾಯವೊಂದು ಪ್ರಾರಂಭವಾಯಿತು.

ಸೌದಿ ಅರೇಬಿಯಾ, ಒಮಾನ್‌, ಬಹ್ರೈನ್‌, ಕತಾರ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಮತ್ತು ಕುವೈಟ್‌ ರಾಷ್ಟ್ರಗಳನ್ನು ಒಳಗೊಂಡಿರುವ ಗಲ್ಫ್ ರಾಷ್ಟ್ರಗಳ ಹಿರಿಯಣ್ಣನೆನಿಸಿದ ಸೌದಿಯು ನೇರವಾಗಿ ಈ ಯಹೂದಿ ರಾಷ್ಟ್ರದ ಜೊತೆಗೆ ಸಂಬಂಧವನ್ನು ಸುಧಾರಿಸದೇ ಇದ್ದರೂ, ಅಮೆರಿಕದ ಒತ್ತಡಕ್ಕೆ ಮಣಿದು ತಣ್ಣಗಾಗಿದೆ. ಹೀಗಾಗಿಯೇ ಪ್ಯಾಲೆಸ್ತೀನಿನ ಹೋರಾಟವು ಕಳೆಗುಂದಿತ್ತು. ಆಗಾಗ್ಗೆ ಸಣ್ಣಪುಟ್ಟ ದಾಳಿಗಳನ್ನು ನಡೆಸಿ ಕೈ ಸುಟ್ಟುಕೊಳ್ಳುತ್ತಿದ್ದರೇ ಹೊರತು ಇಷ್ಟೊಂದು ದೊಡ್ಡ ಪ್ರಮಾಣದ ಸಂಘಟಿತ ದಾಳಿ ಇತ್ತೀಚಿನ ವರ್ಷಗಳಲ್ಲಿ ನಡೆದಿರಲಿಲ್ಲ. ಒಂದೇ ದಿನದ ದಾಳಿಯಲ್ಲಿ 600ಕ್ಕೂ ಹೆಚ್ಚಿನ ಇಸ್ರೇಲಿಗಳು ಸಾವನ್ನಪ್ಪಿದ್ದರೆ 1,500ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಇಸ್ರೇಲಿನ ರಾಷ್ಟ್ರೀಯ ಭದ್ರತಾ ಮಂಡಳಿಯ ಮಾಜಿ ಮುಖ್ಯಸ್ಥರಾದ ನಿವೃತ್ತ ಜನರಲ್‌ ಜಿಯೊರಾ ಎರ್ಯಾಂಡ್‌ ಹೇಳಿರುವ ಪ್ರಕಾರ 50 ವರ್ಷಗಳ ಸನ್ನಿವೇಶ ಮತ್ತೆ ಮರುಕಳಿಸಿದೆ. ಈ ಸಂಯೋಜಿತ ಹೋರಾಟದಿಂದಾಗಿ ಇಸ್ರೇಲ್‌ ಅಚ್ಚರಿಗೊಳಗಾಗಿದೆ.

ಇಸ್ರೇಲ್‌ ಮೇಲಿನ ದಾಳಿಯನ್ನು ಹಮಾಸ್‌ ಸಂಭ್ರಮಿಸುತ್ತಿದೆ. ಇಸ್ರೇಲ್‌ ನಡೆಸುತ್ತಿರುವ ಅನ್ಯಾಯ, ಅತಿಕ್ರಮಣದ ವಿರುದ್ಧ ತನ್ನ ಗೆಲುವೆಂದು ಈ ಉಗ್ರರ ಸಂಘಟನೆಯು ಹೇಳಿಕೊಂಡಿದೆ. ಈ ಹಮಾಸ್‌ಗೆ ಇರಾನ್‌ನ ಬೆಂಬಲವೇನೋ ಇದೆ. ಲೆಬನಾನಿನ ಹಿಜ್ಬುಲ್ಲಾ ಎಂಬ ಉಗ್ರವಾದಿ ಸಂಘಟನೆಯೂ ಇವರೊಂದಿಗೆ ಕೈ ಜೋಡಿಸಿದೆ ಎನ್ನಲಾಗುತ್ತಿದೆ. ಆದರೆ ಈ ಯಹೂದಿ ರಾಷ್ಟ್ರ ಸುಮ್ಮನಿರುವುದಿಲ್ಲ ಎಂಬುದು ಅವರಿಗೂ ಗೊತ್ತು. ಇಸ್ರೇಲ್‌ ನಡೆಸುವ ಪ್ರತಿದಾಳಿ ಎಷ್ಟು ಭೀಕರವಾಗಿರುತ್ತದೆ ಎಂಬುದು ಒಂದು ದಿನದೊಳಗೆಯೇ ತಿಳಿದು ಬಂದಿದೆ. ಹಮಾಸ್‌ ಬಂಡುಕೋರರು ಮಾತ್ರವಲ್ಲದೆ, ಪ್ಯಾಲೆಸ್ತೀನಿನ ನಿವಾಸಿಗಳು ಸಹ ಇಸ್ರೇಲ್‌ ನೊಳಗೆ ನಡೆಯುವ ಪ್ರತಿಯೊಂದು ಸಾವಿಗೂ ದುಬಾರಿ ಬೆಲೆಯನ್ನು ತೆರಬೇಕಾಗುತ್ತದೆ. ಪ್ರತಿ ಬಾರಿಯೂ ಪ್ಯಾಲೆಸ್ತೀನ್‌ ಕಡೆಯಿಂದ ದಾಳಿ ನಡೆದಾಗ ಪ್ರತಿದಾಳಿ ನಡೆಸುವ ಇಸ್ರೇಲ್‌, ವಿರೋಧಿ ಪಾಳಯದಲ್ಲಿ ಹತ್ತು ಪಟ್ಟು ನಷ್ಟವನ್ನುಂಟು ಮಾಡಿ ಸುಮ್ಮನಾಗುತ್ತದೆ. ಅಲ್ಲಿಗೆ ಒಂದು ಅಧ್ಯಾಯವು ಮುಗಿಯುತ್ತದೆ. ಆ ಪ್ರದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದವರಿಗೆ ಇದರಲ್ಲೇನೂ ಹೊಸತು ಕಾಣಿಸಿಕೊಳ್ಳುವುದಿಲ್ಲ. ಆದರೂ ಹಮಾಸ್‌ ಬಂಡುಕೋರರು ಈ ಹುಂಬ ಧೈರ್ಯವನ್ನು ತೋರುವ ಸಾಹಸಕ್ಕೆ ಯಾಕೆ ಕೈ ಹಾಕಿದ್ದಾರೆ ಎಂಬ ಯಕ್ಷಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ.

ಮೆಲ್ವಿನ್‌ ಕಲತ್ರಪಾದೆ

 

Advertisement

Udayavani is now on Telegram. Click here to join our channel and stay updated with the latest news.

Next