Advertisement

ಐಎಎಸ್‌, ಐಪಿಎಸ್‌ನಂತೆ ಐಎಸ್‌ಡಿಎಸ್‌ ಸೇವೆ ಆರಂಭ: ಅನಂತ್‌

06:15 AM Sep 10, 2017 | Team Udayavani |

ಬೆಂಗಳೂರು: ಐಎಎಸ್‌, ಐಎಫ್ಎಸ್‌, ಐಆರ್‌ಎಸ್‌, ಐಪಿಎಸ್‌ ಮಾದರಿಯಲ್ಲಿ ಭಾರತೀಯ ಕೌಶಲ್ಯ ಅಭಿವೃದ್ಧಿ ಸೇವೆ(ಐಎಸ್‌ಡಿಎಸ್‌) ಯನ್ನು ಮುಂದಿನ ಎರಡೂ¾ರು ವರ್ಷದಲ್ಲಿ ಆರಂಭಿಸಲಿದ್ದೇವೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್‌ಕುಮಾರ್‌ ಹೆಗಡೆ ತಿಳಿಸಿದರು.

Advertisement

ಅನಂತ್‌ಕುಮಾರ್‌ ಹೆಗಡೆ ಗೆಳೆಯರು ಮತ್ತು ಹಿತೈಶಿಗಳು ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಅನಂತಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೌಶಲಾಭಿವೃದ್ಧಿ ಹೆಚ್ಚಿಸಲು ಕೌಶಲ್ಯ ತರಬೇತಿ ವಿಶ್ವವಿದ್ಯಾಲಯ ಆರಂಭಿಸಲಿದ್ದೇವೆ. ಐಎಎಸ್‌, ಐಆರ್‌ಎಸ್‌, ಐಎಫ್ಎಸ್‌, ಐಪಿಎಸ್‌ ಮಾದರಿಯಲ್ಲಿ ಕೌಶಲ್ಯಾಭಿವೃದ್ಧಿಗೆ ಸೇವೆ ಸಲ್ಲಿಸಲು  ಐಎಸ್‌ಡಿಎಸ್‌ ಸೇವೆ ಜಾರಿ ಮಾಡಲಿದ್ದೇವೆ. ಯುಪಿಎಸ್‌ಇ ಪರೀಕ್ಷೆ ಮೂಲಕವೇ ಅಧಿಕಾರಿಗಳ ನೇಮಕ ಮಾಡಲಿದ್ದೇವೆ. ಎರಡರಿಂದ ಮೂರು ವರ್ಷದಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎಂಬ ಭರವಸೆ ನೀಡಿದರು.

ದೇಶಾದ್ಯಂತ ಕೌಶಲಾಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಬೆಂಗಳೂರಿನಲ್ಲಿ ಜರ್ಮನಿ ಮತ್ತು ಜಪಾನ್‌ ಸಹಭಾಗಿತ್ವದಲ್ಲಿ ಕೌಶಲ್ಯ ತರಬೇತುದಾರರ ತರಬೇತಿ ಕೇಂದ್ರ ಆರಂಭಿಸಲಿದ್ದೇವೆ. ದೇಶದ ನಾಲ್ಕು ಕಡೆಗಳಲ್ಲಿ ಈ ರೀತಿಯ ಕೇಂದ್ರ ತೆರೆಯಲು ವಿದೇಶಿ ಸಂಸ್ಥೆ ಮುಂದೆ ಬಂದಿದೆ. ನಮ್ಮವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೌಶಲಾಭಿವೃದ್ಧಿ ಹೊಂದಬೇಕು. ಜಪಾನ್‌, ಕೆನಡಾ, ಅಮೆರಿಕ ಮೊದಲಾದ ದೇಶದಲ್ಲಿ ನಮ್ಮವರ ಕೌಶಲತೆಗೆ ಮಾನ್ಯತೆ ಸಿಗುವಂತ ಪ್ರಮಾಣ ಪತ್ರ ವಿತರಣೆ ಮಾಡಲಿದ್ದೇವೆ ಎಂದು ಹೇಳಿದರು.

ಶ್ವೇತ ಪತ್ರ:
ಸಚಿವನಾಗಿ ಅಧಿಕಾರ ವಹಿಸಿಕೊಂಡ ನಾಲ್ಕೈದು ದಿನದಲ್ಲೇ ಇಲಾಖೆಯ ಎಲ್ಲ ಅಧಿಕಾರಿಗಳ ಸಭೆ ನಡೆಸಿದ್ದೇನೆ. ರಾಜಕಾರಣಿಗಳಿಗೆ ಭಾನುವಾರದ ರಜೆ ಇಲ್ಲ, ಹಗಲು ರಾತ್ರಿ ಎನ್ನದೇ ಸೇವೆ ಸಲ್ಲಿಸುತ್ತೇವೆ. ಹಾಗೆಯೇ ಅಧಿಕಾರಿಗಳು ಮಾನಸಿಕವಾಗಿ ಸಿದ್ಧರಾಗಬೇಕು ಎಂಬುದನ್ನು ಸೂಚಿಸಲಾಗಿದೆ. 2018ರ ಸೆ.30ರೊಳಗೆ ಕೌಶಲಾಭಿವೃದ್ಧಿ ಇಲಾಖೆಯ  ಕೆಲಸಪೂರೈಸಿ, ಹಮ್ಮಿಕೊಂಡಿರುವ ಯೋಜನೆ, ಒಂದು ವರ್ಷದ ಸಾಧನೆಯ ಶ್ವೇತಪತ್ರವನ್ನು ಜನರ ಮುಂದಿಡಲಿದ್ದೇನೆ. ಕರ್ನಾಟಕದಲ್ಲೇ ಶ್ವೇತಪತ್ರ ಬಿಡುಗಡೆ ಮಾಡಲಿದ್ದೇನೆ ಎಂದು ಹೇಳಿದರು.

ಗೌರವ ಹೆಚ್ಚಿಸುವುದೇ ಸ್ಕಿಲ್‌ ಇಂಡಿಯಾ:
ವಿಜ್ಞಾನ, ತಂತ್ರಜ್ಞಾನ ಅಥವಾ ಆಧುನಿಕ ಬೆಳವಣಿಗೆಯೇ ಕೌಶಲತೆ ಅಲ್ಲ. ಪ್ರತಿ ಹುದ್ದೆಗೂ ಗೌರವದ ಜತೆಗೆ ಪ್ರಮಾಣ ಪತ್ರ ನೀಡುವುದೇ ಸ್ಕಿಲ್‌ ಇಂಡಿಯಾದ ಪರಿಕಲ್ಪನೆಯಾಗಿದೆ.  ವಿಶ್ವವಿದ್ಯಾಲಯದಲ್ಲಿ  ನೀಡುವ ಪಿಎಚ್‌.ಡಿ ಮೌಲ್ಯ ಹೆಚ್ಚೋ ಅಥವಾ ಗ್ರಾಮೀಣ ಪ್ರದೇಶದ ಸ್ವಂತ ಉದ್ಯೋಗ ತೂಕವೋ ಎಂಬುದರ ವಿವರಣೆ ಪ್ರಮಾಣ ಪತ್ರದಲ್ಲಿ ನೀಡಲಿದ್ದೇವೆ. ಶಿಕ್ಷಣ ಮತ್ತು ಸಂಸ್ಕಾರದ ಅರ್ಥ ತಿಳಿದುಕೊಳ್ಳುವಂತೆ ಮಾಡುತ್ತೇವೆ. ಸಸ್ಯಜನ್ಯ ಔಷಧಕ್ಕೆ ಆದ್ಯತೆ ನೀಡಲಿದ್ದೇವೆ ಎಂದು ಹೇಳಿದರು.

Advertisement

ರಾಜಕೀಯ ಪ್ರವೇಶ ಅನಿರೀಕ್ಷಿತ:
ಇಂದಿನ ರಾಜಕೀಯ ಪರಿಸ್ಥಿತಿ ಗಮನಿಸಿದರೆ ಕೆಲವೊಮ್ಮೆ ಹೆದರಿಕೆಯಾಗುತ್ತದೆ. ಖಂಡಿತವಾಗಿ ತಪ್ಪು ದಾರಿಯಲ್ಲಿ ಹೋಗುವುದಿಲ್ಲ. ಆದರೆ, ಅನೇಕ ಬಾರಿ ತಪ್ಪು ಮಾಡಿದ್ದೇವೆ, ಹಿರಿಯರ ಮಾರ್ಗದರ್ಶನದಲ್ಲಿ ಅದನ್ನು ತಿದ್ದಿಕೊಂಡಿದ್ದೇವೆ. ರಾಜಕಾರಣಕ್ಕೆ ಬರುವ ನಿರೀಕ್ಷೆಯೇ ಇರಲಿಲ್ಲ. ರಾಜಕಾರಣ ಮತ್ತು ರಾಜಕೀಯವನ್ನು ಅತ್ಯಂತ ಕೆಟ್ಟ ಶಬ್ಧಗಳಿಂದ ಬೈದಿರುವ ನನ್ನನ್ನು ಆಕಸ್ಮಿಕವಾಗಿ ರಾಜಕೀಯಕ್ಕೆ ಕರೆದು ತಂದರು. ಸುದೈವವೋ, ದುರ್ದೈವೋ ಗೊತ್ತಿಲ್ಲ ರಾಜಕಾರಣದಲ್ಲೇ ಮುಂದುವರಿಯುತ್ತದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಪತ್ರಕರ್ತ ಸುದರ್ಶನ್‌ ಬೇಳೂರು, ನಿವೃತ್ತ ಐಎಎಸ್‌ ಅಧಿಕಾರಿ ಶಂಕರ ಬಿದರಿ, ಕೈಗಾರಿಕೋದ್ಯಮಿ ಜೆ.ಕ್ರಾಸ್ಟಾ ಮೊದಲಾದರು ಉಪಸ್ಥಿತರಿದ್ದರು.

ಸಚಿವ ಸ್ಥಾನ ಚಾಲೆಂಜ್‌:
ಐದು ವರ್ಷ ಸಂಸದನಾದರೂ ಪಕ್ಷ ಅಥವಾ ರಾಜಕಾರಣದಿಂದ ಏನನ್ನು ನಿರೀಕ್ಷೆ ಮಾಡಿಲ್ಲ. ಪ್ರತಿ ಬಾರಿ ಚುನಾವಣೆ ಬಂದಾಗಲೂ ಬೇರೆ ಅಭ್ಯರ್ಥಿಗಳನ್ನು ಹುಡುಕಿ ಎನ್ನುತ್ತಿದ್ದೆ. ಕಾರಣ, ಇವತ್ತಿನ ರಾಜಕಾರಣಿಗಳ ದಾರಿಯನ್ನು ಜನ ಒಪ್ಪುತ್ತಿಲ್ಲ. ರಾಜಕಾರಣಿಯನ್ನು ಮೋಸಗಾರ, ಸುಳ್ಳುಗಾರ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಇಷ್ಟು ಮಾತ್ರವಲ್ಲದೇ, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಮ್ಮವರೇ ಸಹಿಸದ ಸ್ಥಿತಿ ಇದೆ. ಹೀಗಾಗಿ ಕೆಲ ಸಮಯದ ರಾಜಕಾರಣದಿಂದ ದೂರ ಹೋಗಿದ್ದೆ. ಕೆಲವು ದಿನದ ಹಿಂದೆ ದೆಹಲಿಯಿಂದ ಪಕ್ಷದ ವರಿಷ್ಠರೊಬ್ಬರು ಫೋನ್‌ ಮಾಡಿ, ದೆಹಲಿಗೆ ಬರುವಂತೆ ನಿರ್ದೇಶಿಸಿದ್ದರು. ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಮತ್ತೂಮ್ಮೆ ಫೋನ್‌ ಬಂತು, ನಮ್ಮ ಮನೆಗೆ ಬರಬೇಕು ಎಂದರು. ಅವರ ಮನೆಯಲ್ಲಿ ತಿಂಡಿ ಮುಗಿಸಿದ ನಂತರ ನಾಳೆ ಬೆಳಗ್ಗೆ ಪ್ರಮಾಣ ವಚನ ತೆಗೆದುಕೊಳ್ಳಬೇಕು. ಯಾರಿಗೂ ಹೇಳಬೇಡ ಎಂದು ಸೂಚಿಸಿ, ಜವಾಬ್ದಾರಿ ಕೊಡುತ್ತಿಲ್ಲ, ಚಾಲೆಂಜ್‌ ಕೊಡುತ್ತಿದ್ದೇನೆ ಎಂದು ಹೊಣೆಗಾರಿಕೆ ಒಪ್ಪಿಸಿದರು ಎಂಬುದನ್ನು ವಿವರಿಸಿದರು.

ಜ್ಞಾನಕ್ಕೆ ಸಂಸ್ಕೃತವೇ ಅಡಿಪಾಯ. ದೇಶದ ಅಭಿವೃದ್ಧಿಯ ಜತೆಗೆ ನಾವು ನಂಬಿರುವ ತತ್ವ ಸಿದ್ಧಾಂತದಂತೆ ನಡೆಯುತ್ತೇವೆ. ರಾಜಕಾರಣಕ್ಕಾಗಿ ರಾಜಿ ಮಾಡಿಕೊಳ್ಳುವುದಿಲ್ಲ.
– ಅನಂತ್‌ ಕುಮಾರ್‌ ಹೆಗಡೆ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next