Advertisement

ಮೇಲ್ದರ್ಜೆಗೇರುವುದೇ ಪೆರಾಜೆ-ತೊಡಿಕಾನ ರಸ್ತೆ?

11:16 AM Dec 06, 2018 | Team Udayavani |

ಅರಂತೋಡು: ಪೆರಾಜೆ- ಅಮಚೂರು-ತೊಡಿಕಾನ ರಸ್ತೆ ಬಹಳ ಕಿರಿದಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ಮೇಲ್ದರ್ಜೆಗೇರಿಸಬೇಕು ಎನ್ನುವ ಸ್ಥಳೀಯರ ಹಲವು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ. ಪೆರಾಜೆ ರಾಜ್ಯ ಹೆದ್ದಾರಿಯಿಂದ ಪೆರಾಜೆ-ತೊಡಿಕಾನ ರಸ್ತೆ ಆರಂಭಗೊಳ್ಳುತ್ತದೆ. ಇದು ಅಲ್ಲಲ್ಲಿ ಕಿರಿದಾಗಿದೆ. ರಸ್ತೆಯ ಮಧ್ಯೆ ಅನೇಕ ತಿರುವುಗಳಿವೆ. ಅಲ್ಲಲ್ಲಿ ಡಾಮರು ಕಿತ್ತು ಹೋಗಿದೆ. ಈ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಗುತ್ತಿದೆ.

Advertisement

ಅಪಾಯದಲ್ಲಿ ಸೇತುವೆ
ತೊಡಿಕಾನ ಅಮಚೂರು ಸಮೀಪದ ಹೊಳೆಗೆ ಸುಮಾರು 35 ವರ್ಷಗಳ ಹಿಂದೆ ನಿರ್ಮಿಸಲಾದ ಸೇತುವೆಯ ಬದಿಯ ಕೆಲ ಭಾಗಗಳು ಕುಸಿತಗೊಂಡಿದ್ದು, ಅಪಾಯದ ಮುನ್ಸೂಚನೆ ಕಂಡುಬರುತ್ತಿದೆ.

ಕಾವೇರಿ ರಸ್ತೆ ಅಭಿವೃದ್ಧಿಗೊಳ್ಳಲಿ
ಪೆರಾಜೆ- ತೊಡಿಕಾನ- ಪಟ್ಟಿ ರಸ್ತೆ ಅಭಿವೃದ್ದಿಯಾಗಬೇಕು ಎನ್ನುವುದು ಪೆರಾಜೆ ಜನತೆಯ ಇನ್ನೊಂದು ಮುಖ್ಯ ಬೇಡಿಕೆ. ಕಾವೇರಿ ರಸ್ತೆಯೂ ಅಭಿವೃದ್ಧಿಯಾಗಬೇಕು ಎನ್ನುವ ಬೇಡಿಕೆಯೂ ಇದೆ.

ಪೆರಾಜೆ ಶಾಸ್ತಾವು ದೇಗುಲ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲ, ಕೊಡಗಿನ ತಲಕಾವೇರಿ, ಭಾಗಮಂಡಲ ಭಗಂಡೇಶ್ವರ ದೇಗುಲಕ್ಕೆ ನೇರ ಸಂಬಂಧಗಳಿವೆ. ಪೆರಾಜೆ- ತೊಡಿಕಾನ- ಪಟ್ಟಿ- ಭಾಗಮಂಡಲ ರಸ್ತೆ ಮೂಲಕ ಈ ಭಾಗದ ಜನರು ಕೊಡಗಿನ ಭಾಗಮಂಡಲಕ್ಕೆ ಹಾಗೂ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು.

ಪೆರಾಜೆ ಶಾಸ್ತಾವು ದೇಗುಲದ ಪಕ್ಕ ಈಗಲೂ ಕಾವೇರಿ ಗದ್ದೆ ಇದ್ದು, ಇದರಲ್ಲಿ ಬೆಳೆದ ಕದಿರನ್ನು ತೆಗೆದು ಚೌತಿಯ ಸಂದರ್ಭ ಭಾಗಮಂಡಲದ ಭಗಂಡೇಶ್ವರ ಮತ್ತು ತಲಾಕಾವೇರಿಗೆ ಈ ರಸ್ತೆಯ ಮೂಲಕ ಸಾಗಿ ಕದಿರು ಕಟ್ಟುತ್ತಿದ್ದರು. ಬ್ರಿಟಿಷ್‌ ಸರಕಾರದ ದಾಖಲೆಯಲ್ಲಿ ಇದನ್ನು ‘ಕಾವೇರಿ ರಸ್ತೆ’ ಎಂದೇ ನಮೂದಿಸಲಾಗಿದೆ. ಬ್ರಿಟಿಷ್‌ ಆಡಳಿತದಲ್ಲಿ ಸ್ಥಳೀಯಾಡಳಿತದ ವ್ಯವಸ್ಥೆಗೆ ಸಂಬಂಧಿಸಿದ ಪಟ್ಟಿ ಮಾಡುತ್ತಿದ್ದ ಕಾರಣ ಈ ಊರಿಗೆ ಪಟ್ಟಿ ಎಂಬ ಹೆಸರು ಬಂದಿದೆ ಎಂದು ಹಿರಿಯರು ಹೇಳುತ್ತಾರೆ.

Advertisement

5 ಕೋ.ರೂ. ಅನುದಾನ; ಕಾಮಗಾರಿಗೆ ತೊಡಕು
ತೊಡಿಕಾನ- ಪಟ್ಟಿ- ಬಾಚಿಮಲೆ ರಸ್ತೆ ಅಭಿವೃದ್ಧಿಗೆ ರಾಜ್ಯ ಸರಕಾರ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಮುಂದಿನ ಕೆಲಸ ನಡೆಯಬೇಕಾಗಿದೆ. ಅರಣ್ಯ ಪ್ರದೇಶದಲ್ಲಿ ಈ ರಸ್ತೆ ಹಾದು ಹೋಗುವುದರಿಂದ ಕೆಲವು ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕಿದೆ. ಆ ಬಳಿಕವಷ್ಟೇ ಕೆಲಸ ಪೂರ್ಣಗೊಳಿಸಲು ಸಾಧ್ಯ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಸ್ತಾರಗೊಳ್ಳಬೇಕು
ಪೆರಾಜೆ-ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆ ಒಂದು ಧಾರ್ಮಿಕ ಇತಿಹಾಸ ಸಂಬಂಧವುಳ್ಳ ರಸ್ತೆ. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲ,ಪೆರಾಜೆ ಶ್ರೀ ಶಾಸ್ತಾವು ದೇಗುಲ, ಅಡೂರು ಶ್ರೀ ಮಹಾಲಿಂಗೇಶ್ವರ ದೇಗುಲ, ತಲಕಾವೇರಿ, ಭಾಗಮಂಡಲ ಭಗವಂಡೇಶ್ವರ ದೇಗುಲ ಧಾರ್ಮಿಕ ಐತಿಹಾಸಿಕ ಸಂಬಂಧ ಹೊಂದಿದೆ. ಇಲ್ಲಿನ ರಸ್ತೆ ಮೂಲಕವೇ ಹಿಂದಿನ ಕಾಲದಲ್ಲಿ ಜನರು ತೆರಳುತ್ತಿದ್ದರು. ಈ ರಸ್ತೆ ಅಭಿವೃದ್ಧಿಯಾಗಬೇಕು. ತೊಡಿಕಾನ-ಅಮಚೂರು-ಪೆರಾಜೆ ರಸ್ತೆ ತುಂಬಾ ಕಿರಿದಾಗಿದ್ದು, ಎರಡು ವಾಹನಗಳು ಎದುರುಗೊಂಡಾಗ ಸಮಸ್ಯೆಯಾಗುತ್ತಿದೆ. ಈ ರಸ್ತೆ ವಿಸ್ತಾರಗೊಳ್ಳಬೇಕು.
– ಎ.ಸಿ. ಹೊನ್ನಪ್ಪ ಅಮಚೂರು, ಸ್ಥಳೀಯರು

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next