Advertisement

ಆತ್ಮನಿರ್ಭರ ಅಭಿಯಾನ ತರುತ್ತಿದೆಯೇ ಬದಲಾವಣೆ?

12:18 AM Nov 13, 2020 | mahesh |

ಮೇ 12ರಂದು, ಅಂದರೆ ಕೊರೊನಾ ತಡೆಗಾಗಿ ಲಾಕ್‌ಡೌನ್‌ 3.0 ಜಾರಿ­ಯಲ್ಲಿದ್ದಾಗಲೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡಿ “ಆತ್ಮನಿರ್ಭರ ಭಾರತ ಅಭಿಯಾನ’ದ ಘೋಷಣೆ ಮಾಡಿದರು. ಭಾರತ ಆತ್ಮನಿರ್ಭರ ದೇಶವಾಗಬೇಕು ಎಂಬ ಧ್ಯೇಯವಾಕ್ಯದೊಂದಿಗೆ ಮೋದಿ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್‌ ಘೋಷಿಸಿದರು. ಈ ಪ್ರಮಾಣ ನಮ್ಮ ಜಿಡಿಪಿಯ 10 ಪ್ರತಿಶತದಷ್ಟಿತ್ತು.

Advertisement

ಕಾರ್ಮಿಕರು, ರೈತರು, ಎಂಎಸ್‌ಎಂಇಗಳು, ತೆರಿಗೆದಾರರು ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಧ್ಯಮವರ್ಗಕ್ಕಾಗಿ ಈ ಪ್ಯಾಕೇಜ್‌ ಘೋಷಿಸಲಾಗಿದೆ ಎಂದು ಮೋದಿ ಹೇಳಿದ್ದರು. ಆರ್ಥಿಕತೆ, ಮೂಲ ಭೂತ ಸೌಲಭ್ಯ, ತಂತ್ರಜ್ಞಾನ ಆಧಾರಿತ ಆಡಳಿತ ವ್ಯವಸ್ಥೆ, ನಮ್ಮ ಭೌಗೋಳಿಕ ವೈವಿಧ್ಯತೆ ಹಾಗೂ ಬೇಡಿಕೆ ಎಂಬ ಐದು ಆಧಾರ ಸ್ತಂಭಗಳ ಮೇಲೆ ಭಾರತದ ಆತ್ಮನಿರ್ಭರತೆ ನಿಂತಿದೆ ಎಂದು ಸರಕಾರ ಹೇಳಿತು.

ಮಹತ್ತರ ಘೋಷಣೆಗಳು
ಕೊರೊನಾದಿಂದಾಗಿ ದೇಶದಲ್ಲೇ ಹೆಚ್ಚಿನ ಪ್ರಮಾಣಲ್ಲಿ ನಷ್ಟ ಅನುಭವಿಸಿದ ಸಣ್ಣ, ಮಧ್ಯಮ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗಾಗಿ 3 ಲಕ್ಷ ಕೋಟಿ ರೂಪಾಯಿಗಳ ಸಾಲ ಯೋಜನೆ, 20 ಸಾ.ಕೋ. ಸಬ್‌ಆರ್ಡಿನೇಟ್‌ ಸಾಲ, 200 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಸರ್ಕಾರಿ ಟೆಂಡರ್‌ನಲ್ಲಿ ವಿದೇಶಿ ಭಾಗವಹಿಸುವಿಕೆ ನಿಷೇಧ, ಮಧ್ಯಮ ವರ್ಗದ ಜನರಿಗೆ ಸಾಲ ಸಬ್ಸಿಡಿ ಯೋಜನೆ. 6 ರಿಂದ 18 ಲಕ್ಷದವರೆಗಿನ ವೇತನದಾರರಿಗೆ ಇದರ ಪ್ರಯೋಜನದಂಥ ಮಹತ್ತರ ಘೋಷಣೆಗಳನ್ನು ಮಾಡಲಾಯಿತು. ಈಗ ಲಾಕ್‌ಡೌನ್‌ ಕೂಡ ಕೊನೆಗೊಂಡು ಮಾರುಕಟ್ಟೆ ಮತ್ತೆ ಸಕ್ರಿಯವಾಗಿರುವುದರಿಂದ, ಎಂಎಸ್‌ಎಂಗಳು ವೇಗವಾಗಿ ಚೇತರಿಸಿಕೊಳ್ಳುತ್ತಿವೆ ಎನ್ನುತ್ತಾರೆ ವಿತ್ತ ಪರಿಣತರು. ದೇಶದ ಬೀದಿ ಬದಿ ವ್ಯಾಪಾರಿಗಳನ್ನು ಆರ್ಥಿಕ ಸಂಕಷ್ಟದಿಂದ ದೂರ ತರಲು ಕೇಂದ್ರ ಸರಕಾರ ಪಿಎಂ ಆತ್ಮನಿರ್ಭರ ನಿಧಿ(ಸ್ವನಿಧಿ) ಯೋಜನೆಯನ್ನೂ ಜಾರಿ ಮಾಡಿದ್ದು, ಇದರಡಿ ಬೀದಿಬದಿ ವ್ಯಾಪಾರಿಗಳಿಗೆ ಗರಿಷ್ಠ 10 ಸಾವಿರ ರೂಪಾಯಿಯವರೆಗೆ ಬಡ್ಡಿ ರಹಿತ ಸಾಲ ದೊರೆಯುತ್ತದೆ. ರಾಜ್ಯದಲ್ಲೂ ಜಿಲ್ಲಾಡಳಿತಗಳು ಅರ್ಹರನ್ನು ಗುರುತಿಸಿ(ತಳ್ಳು ಬಂಡಿಯಲ್ಲಿ ತಿಂಡಿ, ತರಕಾರಿ, ಹೂ-ಕಾಯಿ, ಆಟಿಕೆಗಳನ್ನು ಮಾರುವವರು, , ಬುಟ್ಟಿ ವ್ಯಾಪಾರಿಗಳು, ಚರ್ಮೋತ್ಪನ್ನಗಳ ರಿಪೇರಿ ) ಈ ಯೋಜನೆಯಡಿಯಲ್ಲಿ ಸಾಲ ವಿತರಿಸಲಾರಂಭಿಸಿವೆ.

ಕಾರ್ಮಿಕ ಬಾಹುಳ್ಯದ ಕ್ಷೇತ್ರದಳಿಗೆ ಬೇಕು ಹೆಚ್ಚಿನ ಒತ್ತು
ಆತ್ಮನಿರ್ಭರ 1 ಮತ್ತು 2ರಡಿ ಈಗ ಔಷಧೋದ್ಯಮ. ರಕ್ಷಣಾ ಉತ್ಪಾದನೆ ಮತ್ತು ಎಲೆಕ್ಟ್ರಾನಿಕ್ಸ್‌ ವಲಯಕ್ಕೆ ಉತ್ತೇಜನ ನೀಡಿ, ಭಾರತದಲ್ಲೇ ಮೌಲ್ಯವರ್ಧಿತ ಪ್ರಾಡಕ್ಟ್ಗಳ ಉತ್ಪಾದನೆಗೆ ಪ್ರೋತ್ಸಾಹಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಮಿಕ ಬಾಹುಳ್ಯದ ಕ್ಷೇತ್ರಗಳಾದ ಚರ್ಮೋದ್ಯಮ, ಜವಳಿ, ಆಹಾರ ಸಂಸ್ಕರಣೆ ವಲಯಕ್ಕೂ ಇದೇ ರೀತಿಯ ಉತ್ತೇಜನ ಸಿಗುವ ನಿರೀಕ್ಷೆಯಿದೆ.

ದಿಶೆ ಬದಲಿಸುವುದೇ ಪಿಎಲ್‌ಐ?
ಭಾರತೀಯ ಉತ್ಪಾದನಾ ರಂಗದಲ್ಲಿ ಎಲೆಕ್ಟ್ರಾನಿಕ್ಸ್‌ ಪರಿಕರಗಳ ಉತ್ಪಾದನೆ ಈಗಲೂ ಹೇಳಿಕೊಳ್ಳುವಂತಿಲ್ಲ. ಆದರೂ ಈ ವಲಯದಲ್ಲಿ 2018ರಲ್ಲಿ 6.4 ಶತಕೋಟಿ ಡಾಲರ್‌ಗಳಷ್ಟಿದ್ದ ಭಾರತದ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ರಫ್ತು 2020ರ ವೇಳೆಗೆ 11.8 ಶತಕೋಟಿ ಡಾಲರ್‌ ತಲುಪಿದೆ. ಆದರೂ, ಉತ್ಪಾದನಾ ಪ್ರಮಾಣ ಹಾಗೂ ಮೌಲ್ಯವರ್ಧನೆಯ ವಿಚಾರದಲ್ಲಿ ಈಗಲೂ ಪ್ರಶ್ನೆಗಳು, ಸವಾಲುಗಳು ಇದ್ದೇ ಇವೆ. ಆತ್ಮನಿರ್ಭರದಡಿಯಲ್ಲಿ ಜಾರಿಮಾಡಲಾಗಿರುವ ಪ್ರಾಡಕ್ಟ್ ಲಿಂಕ್ಡ್ ಇನ್ಲಂಟಿವ್‌(ಪಿಎಲ್‌ಐ) ಯೋಜನೆಯಿಂದಾಗಿ ಮೊಬೈಲ್‌ ಫೋನ್‌ ಮತ್ತು ಇತರೆ ಎಲೆಕ್ಟ್ರಾನಿಕ್‌ ಪ್ರಾಡಕ್ಟ್ಗಳ ಉತ್ಪಾದನೆಗೆ 11.5 ಟ್ರಿಲಿಯನ್‌ ಡಾಲರ್‌ಗಳಷ್ಟಾದರೂ ಹೂಡಿಕೆ ಹರಿದು ಬರುವ ನಿರೀಕ್ಷೆ ಕೇಂದ್ರ ಸರ್ಕಾರಕ್ಕಿದೆ. ಇದೇನಾದರೂ ನಿಜವಾದರೆ ಭಾರತದ ಡಿಜಿಟಲ್‌ ಆರ್ಥಿಕತೆ 2025ರ ವೇಳೆಗೆ 1 ಟ್ರಿಲಿಟನ್‌ ಡಾಲರ್‌ ತಲುಪಬಲ್ಲದು.

Advertisement

ಸ್ವಾಸ್ಥ್ಯ ಪರಿಕರಗಳ ಉತ್ಪಾದನೆಯಲ್ಲಿ ಭಾರೀ ಬೆಳವಣಿಗೆ
ಇಡೀ ಜಗತ್ತು ಕೋವಿಡ್‌ ವಿರುದ್ಧ ಹೋರಾಡುತ್ತಿರುವ ಸಮಯದಲ್ಲೇ, ಭಾರತವು ಲಸಿಕೆಯ ಅಭಿವೃದ್ಧಿ ಮತ್ತು ಉತ್ಪಾದನೆಯತ್ತಲೂ ಚಿತ್ತಹರಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಾರ್ಚ್‌ ತಿಂಗಳವರೆಗೆ ಒಂದೇ ಒಂದು ಪಿಪಿಇ ಕಿಟ್‌ ಅನ್ನೂ ಉತ್ಪಾದಿಸದ ಭಾರತ ಕೇಂದ್ರ ಸರ್ಕಾರದಿಂದ ದೊರೆತ ನೆರವಿನ ಕಾರಣದಿಂದಾಗಿ ಇಂದು ನಿತ್ಯ 6 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್‌ಗಳನ್ನು ಉತ್ಪಾದಿಸುತ್ತಿದೆ. ಜುಲೈ ತಿಂಗಳೊಳಗೆ ಭಾರತ 23 ಲಕ್ಷ ಪಿಪಿಇ ಕಿಟ್‌ಗಳನ್ನು ಅಮೆರಿಕ, ಬ್ರಿಟನ್‌, ಯುಎಇ, ಸೆನೆಗಲ್‌ ಮತ್ತು ಸ್ಲೊವೇನಿಯಾಕ್ಕೆ ರಫ್ತು ಮಾಡಿತು. ಆಗಸ್ಟ್‌ ತಿಂಗಳೊಳಗೆ 1.40 ಕೋಟಿ ಪಿಪಿಇ ಕಿಟ್‌ಗಳ ಉತ್ಪಾದನೆಯಾಗಿತ್ತು. ವೆಂಟಿಲೇಟರ್‌ಗಳ ಉತ್ಪಾದನೆಗೂ ಕೇಂದ್ರ ಅನುದಾನ ನೀಡುತ್ತಿದೆ. ಇನ್ನು ಮಾಸ್ಕ್ಗಳ ತಯಾರಿಕೆಗಾಗಿಯೇ 12 ಸಾವಿರ ಸ್ವಸಹಾಯ ಸಂಘಗಳ ಸ್ಥಾಪನೆಯೂ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next