Advertisement

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

12:49 AM Sep 19, 2024 | Team Udayavani |

ಬೆಂಗಳೂರು: ರಾಜಭವನ ಹಾಗೂ ಸರಕಾರದ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿದ್ದು, ಇದೀಗ ರಾಜ್ಯಪಾಲರ ಆಡಳಿತಾತ್ಮಕ ಅಧಿಕಾರಕ್ಕೆ ಕತ್ತರಿ ಹಾಕುವ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಸರಕಾರ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

Advertisement

ಒಂದು ವೇಳೆ ಇದು ಜಾರಿಯಾದರೆ 2 ಸಂವಿಧಾನಾತ್ಮಕ ಸಂಸ್ಥೆಗಳ ಮಧ್ಯೆ ಮತ್ತೊಂದು ಹಗ್ಗಜಗ್ಗಾಟಕ್ಕೆ ಕಾರಣ ವಾಗುವ ಸಾಧ್ಯತೆ ಇದೆ. ಮಂಗಳವಾರ ಕಲ ಬುರಗಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆದಿದೆ.

ವಿಶೇಷವಾಗಿ ವಿಶ್ವವಿದ್ಯಾನಿಲಯದ ಕುಲಪತಿಗಳು, ಸಿಂಡಿಕೇಟ್‌ ಸದಸ್ಯರ ನೇಮಕ ಸಹಿತ ರಾಜ್ಯಪಾಲರಿಗೆ ಇರುವ ಆಡಳಿತಾತ್ಮಕ ಹುದ್ದೆಗಳಿಗೆ ಕತ್ತರಿ ಹಾಕುವಂತೆ ಸಚಿವ ಸಂಪುಟ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಪಶ್ಚಿಮ ಬಂಗಾಲ ಹಾಗೂ ತಮಿಳುನಾಡು ರೀತಿಯಲ್ಲಿ ಕರ್ನಾಟಕದಲ್ಲೂ ರಾಜಭವನದ ಜತೆಗೆ ಸರಕಾರ “ನೇರಾನೇರ’ ಕಾದಾಟಕ್ಕೆ ಮುಂದಾಗಿದೆ.

“ಉದಯವಾಣಿ’ಗೆ ಸರಕಾರದ ಉನ್ನತ ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ, ಕಲಬುರಗಿ ಸಂಪುಟ ಸಭೆಯಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾನಿಲಯ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಪಡೆಯುವ ಸಂದರ್ಭದಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ.

ಹೊಸದರ ಜತೆಗೆ ಸಾಂಪ್ರದಾಯಿಕ ವಿ.ವಿ. ಕುಲಪತಿಗಳ ನೇಮಕ ಸಂದರ್ಭದಲ್ಲೂ ರಾಜ್ಯಪಾಲರ ಪರಮಾಧಿಕಾರಕ್ಕೆ ಕಡಿವಾಣ ಹಾಕಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಗಿದೆ. ಇದರ ಪೂರ್ವಭಾವಿ ಹೆಜ್ಜೆಯಾಗಿ ಪಂಚಾಯತ್‌ ರಾಜ್‌ ವಿ.ವಿ.ಯ ಕುಲಪತಿ ನೇಮಕ ಸಂದರ್ಭದಲ್ಲೇ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ ಹಾಕಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

ಕಾನೂನು ಸಂಘರ್ಷಕ್ಕೂ ಸಿದ್ಧತೆ
ಆದರೆ ರಾಜ್ಯಪಾಲರ ಆಡಳಿತಾತ್ಮಕ ಅಧಿಕಾರಕ್ಕೆ ಕತ್ತರಿ ಹಾಕುವ ಪ್ರಸ್ತಾವ ಸಂವಿಧಾನಾತ್ಮಕ ಸಂಘರ್ಷಕ್ಕೂ ಎಡೆಮಾಡಿಕೊಡುವ ಸಾಧ್ಯತೆ ಇದೆ. ಹೀಗಾಗಿ ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರು ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ| ಎಂ.ಸಿ. ಸುಧಾಕರ್‌, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ, ವೈದ್ಯ ಶಿಕ್ಷಣ ಸಚಿವ ಡಾ| ಶರಣ್‌ ಪ್ರಕಾಶ್‌ ಪಾಟೀಲ್‌ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

11 ಮಸೂದೆ ವಾಪಸ್‌
ಕಳೆದ 2 ತಿಂಗಳ ಅವಧಿಯಲ್ಲಿ ರಾಜ್ಯಪಾಲರು ಒಟ್ಟು 11 ಮಸೂದೆಗಳನ್ನು ವಾಪಸ್‌ ಕಳುಹಿಸಿದ್ದರು. ಇದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಡಾ ಪ್ರಕರಣದ ಬಳಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಈ ಹಿಂದಿನ ರಾಜ್ಯಪಾಲರು ಕೂಡ ಮಸೂದೆಗಳನ್ನು ವಾಪಸ್‌ ಕಳುಹಿಸಿದ್ದ ದೃಷ್ಟಾಂತವನ್ನು ಆಧರಿಸಿ 5 ಪ್ರಕರಣ ಸಂಬಂಧ ಸರಕಾರ ಸ್ಪಷ್ಟನೆ ನೀಡಿದೆ. 6 ಮಸೂದೆಗಳಿಗೆ ಹೆಚ್ಚಿನ ಮಾಹಿತಿ ಹಾಗೂ ಟಿಪ್ಪಣಿಯೊಂದಿಗೆ ರಾಜಭವನಕ್ಕೆ ಕಳುಹಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಇದಾದ ಬಳಿಕ 3 ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದರು.

ಯಾಕೆ ಈ ಲೆಕ್ಕಾಚಾರ?
-ರಾಜ್ಯ ಸರಕಾರ ಹಾಗೂ ರಾಜ್ಯಪಾಲರ ನಡುವೆ ಹಲವು ವಿಚಾರಗಳಿಗೆ ಸಂಘರ್ಷ
-ಸರಕಾರದ 11 ಮಸೂದೆಗಳಿಗೆ ಸಹಿ ಹಾಕದೇ ಹಿಂದೆ ಕಳುಹಿಸಿರುವ ರಾಜ್ಯಪಾಲರು
-ಮುಡಾ ಪ್ರಕರಣದಲ್ಲಿ ಸಿಎಂ ವಿಚಾರಣೆಗೆ ರಾಜ್ಯಪಾಲರ ಅನುಮತಿ, ಸರಕಾರಕ್ಕೆ ಸಿಟ್ಟು?
-ವಿ.ವಿ. ಕುಲಪತಿಗಳು, ಸಿಂಡಿಕೇಟ್‌ ಸದಸ್ಯರ ನೇಮಕ ಅಧಿಕಾರಕ್ಕೆ ಕತ್ತರಿ ಹಾಕಿ ಸಡ್ಡು?

ಚಳಿಗಾಲದ ಅಧಿವೇಶನದಲ್ಲೇ “ಅಂಕುಶ’ ಮಸೂದೆ?
ವಿಶ್ವವಿದ್ಯಾನಿಲಯ ಕಾಯಿದೆಗೆ ಸಮಗ್ರ ತಿದ್ದುಪಡಿ ತರುವ ಮೂಲಕ ರಾಜ್ಯಪಾಲರ ಅಧಿಕಾರಕ್ಕೆ ಮೂಗುದಾರ ಹಾಕುವುದು ಸರಕಾರದ ಲೆಕ್ಕಾಚಾರ ಎನ್ನಲಾಗಿದೆ. ಮುಂದಿನ ಚಳಿಗಾಲದ ಅಧಿವೇಶನದಲ್ಲೇ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯತೆ ಇದ್ದು, ಶಿಕ್ಷಣ ತಜ್ಞರ ಜತೆಗೆ ಸಮಾಲೋಚನೆ ನಡೆಯುವ ಸಾಧ್ಯತೆಯೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ಅಧಿವೇಶನದೊಳಗೆ ವಿಧಾನ ಪರಿಷತ್ತಿನಲ್ಲೂ ಕಾಂಗ್ರೆಸ್‌ನ ಸಂಖ್ಯಾಬಲ ಹೆಚ್ಚುವುದರಿಂದ ಈ ಪ್ರಯೋಗಕ್ಕೆ ಇರುವ ಅಡ್ಡಿಯೂ ನಿವಾರಣೆಯಾಗುತ್ತದೆ ಎಂಬುದು ಸರಕಾರದ ಲೆಕ್ಕಾಚಾರವಾಗಿದೆ.

-ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next