Advertisement

Art and Kannada; ಈಗಿನ ಯಕ್ಷಗಾನ ಚೆಲುಗನ್ನಡ ಕಾಪಾಡುತ್ತಿದೆಯಾ?

11:29 PM Feb 10, 2024 | Team Udayavani |

ಕನ್ನಡ ಭಾಷೆಯ ಪ್ರಸ್ತಾವ ಬಂದಾಗೆಲ್ಲ ನಮ್ಮ ಕರಾವಳಿಯಲ್ಲಿ ಕೇಳಿ ಬರುವ ಮಾತೆಂದರೆ ಶುದ್ಧ ಕನ್ನಡವನ್ನು ಯಕ್ಷಗಾನದವರಾದ ನಾವು ಉಳಿಸಿ ದ್ದೇವೆ ಅಥವಾ ಯಕ್ಷಗಾನ ಶುದ್ಧ ಕನ್ನಡವನ್ನು ಕಾಪಾಡಿದೆ ಎಂದು. ಇದು ವಾಸ್ತವದಲ್ಲಿ ಸವೆದು ಹೋದ ಮಾತಲ್ಲವೇ? ಹಾಗಿದ್ದರೆ ಯಕ್ಷಗಾನದಲ್ಲಿ ಕೇಳಿ ಬರುವುದು ಪರಿಶುದ್ಧ ಕನ್ನಡವೇ? ಭಾಷೆಯ ಸೌಂದರ್ಯ, ಪರಿಶುದ್ಧತೆ ಅದರ ಬಳಕೆ ಮತ್ತು ಪ್ರಸ್ತುತಿಯಲ್ಲಿದೆ ನಿಜ. ಹಾಗಿದ್ದರೆ ನಾವಿಂದು ಯಕ್ಷಗಾನದಲ್ಲಿ ನಡುಗನ್ನಡದ ಪ್ರೌಢಿಮೆಯ ಸಂಪದ್ಭರಿತ, ಕಾವ್ಯಾಮೃತವಾದ ಭಾಷಾ ವೈಭವಗಳನ್ನು ಕಾಣುತ್ತೇವಾ? ಅಭಿವ್ಯಕ್ತಿಸುತ್ತೇವಾ? ಯಕ್ಷಗಾನ ಪರಿಶುದ್ಧ ಕನ್ನಡ ಕಾಪಾಡುವುದೇ ಆದರೆ ರಂಗಸ್ಥಳದಲ್ಲೂ ಚೆಲುಗನ್ನಡದ ಸೊಗಸು ಮೆರೆಯಬೇಡವೇ?

Advertisement

ತಾಳಮದ್ದಳೆಯಲ್ಲಿ ಇಂಥ ಭಾಷಾ ಸಮೃದ್ಧಿಯ ಪದವೈಭವಗಳನ್ನು ಕಾಣಬಹು ದಾದರೂ ಬಯಲಾಟದ ರಂಗಸ್ಥಳದಲ್ಲಿ ಕಲಾ ಅಭಿವ್ಯಕ್ತಿಯೊಂದಿಗೆ ಕಲಾವಿದರಲ್ಲಿ ಭಾಷೆಯೂ ಸೊರಗುತ್ತಿದೆ. ನಾವೆಲ್ಲ 80ರ ದಶಕದಿಂದ ಬಯಲಾಟ ನೋಡುತ್ತಾ ಬೆಳೆದವರು. ಆಗ ಕಲಾವಿ ದರು ನಿರಕ್ಷರಕುಕ್ಷಿಗಳಾದರೂ ಪಾಂಡಿತ್ಯದ ಪ್ರತಿಭೆಗಳಾಗಿ ದ್ದರು. ರಂಗಕ್ಕೆಷ್ಟು ಬೇಕೋ ಅಷ್ಟೇ ಹದವರಿತ ನಾಟ್ಯ, ಅಭಿನಯಗಳೊಂದಿಗೆ ಶ್ರುತಿ ಬದ್ಧ ವಾಚಿಕತೆಗೂ ಮಹತ್ವ ವಿತ್ತು. ಆದರೀಗ ಬದಲಾದ ಕಾಲದಲ್ಲಿ ಹಿಮ್ಮೇಳವೇ ವಿಜೃಂಭಿಸಿ, ನಾಟ್ಯಾಭಿನಯ ಗಳೇ ಮುಖ್ಯವಾಗಿ ರಸ ಸೃಜಿಸುವ ಪಾಂಡಿತ್ಯಪೂರ್ಣ ಭಾಷೆಗೆ ಹಿನ್ನಡೆ ಯಾಗುತ್ತಿದೆ. ಭೌತಿಕ ಬದುಕಿನಲ್ಲಿ ನಾವು ದಿನೇದಿನೆ ಅತ್ಯಾಧುನಿಕರಾಗುತ್ತಿರುವಾಗ ಪ್ರಾಚೀನವಾದ ಹಿನ್ನೆಲೆಯ ನಮ್ಮ ಭಾಷೆಯೇಕೆ ನಮ್ಮ ಬಳಕೆಯಲ್ಲಿ ಹಿಂದುಳಿಯುತ್ತದೆ?

ದೇಶದ ಯಾವುದೇ ರಂಗಭೂಮಿಯಲ್ಲೂ ಕಲಾವಿದನಿಗೆ ಮುಕ್ತ ವಾಚಿಕ ಸ್ವಾತಂತ್ರ್ಯವಿಲ್ಲ. ಆದರೆ ಯಕ್ಷಗಾನದಲ್ಲಿ ಅಭಿನಯಿಸುವ ಕಲಾ ವಿದನಿಗೆ ನಾಟ್ಯಾಭಿನಯಗಳೊಂದಿಗೆ ಆಶು ವಾಚಿಕದ ಸ್ವಾತಂತ್ರ್ಯವಿದೆ. ಭಾಗವತರು ಸನ್ನಿ ವೇಶದ ರಸಮರ್ಮವನ್ನು ಹಾಡಿದರೆ ದೃಶ್ಯವನ್ನು ನಟನೆಯ ಬಳಿಕ ವಾಚಿಕದಲ್ಲಿ ಚೌಕಟ್ಟಿನೊಳಗೆ ಕಲಾವಿದನೇ ಕಟ್ಟಬೇಕು. ಇದನ್ನು ಪೂರ್ವ ಸೂರಿಗಳು ಅನನ್ಯವಾಗಿ ಕಟ್ಟಿದ್ದಾರೆ. ಅದು ಲೋಕಶಿಕ್ಷಣ ಶಾಲೆಯಂತೆ ಬಯಲಿನ ವಿಶ್ವ ವಿದ್ಯಾನಿಲಯವಾಗಿ ತಲೆಮಾರಿಗೆ ಪೌರಾಣಿಕ ಜ್ಞಾನಧಾರೆಯನ್ನು ಸುರಿಸಿದೆ. ಆ ಮಾತುಗಳಿಗೆಲ್ಲ ಬೌದ್ಧಿಕ ಪಕ್ವತೆಯ ತೂಕವಿತ್ತು. ಭಾಷೆಯ ಸೊಗಸಿನ ಲಾಲಿತ್ಯವಿತ್ತು. ಆದರೆ ಇತ್ತೀಚಿನ ತಲೆ ಮಾರಿನ ಕಲಾವಲಯದಲ್ಲಿ ಭಾಷೆಯ ಕಡೆಗೆ ನಿರ್ಲಕ್ಷ್ಯ ಕಾಣಿಸುತ್ತಿದೆ. ಇದು ರಂಗದ ಪಾತ್ರ ಸಂವಾದವನ್ನಷ್ಟೇ ಅಲ್ಲ ಕತೆಯ ಬಿಗಿಯನ್ನೂ ಹಗುರಾಗಿಸುತ್ತದೆ. ಕಲೆಯ ಚೆಲುವನ್ನೂ ಮಂಕಾಗಿಸುತ್ತದೆ.

ಹಿಂದೆ ಯಕ್ಷಗಾನ ಕಲಾವಿದರು ಬಹುತೇಕರು ಬಡವರು, ಅನಕ್ಷರಸ್ಥರು. ಆದರೆ ಅವರೊಳಗೆ ರಂಗದ ಎಚ್ಚರ, ಕಲಾಪ್ರಜ್ಞೆ, ಭಾಷಾಪ್ರಭುತ್ವಗಳಿದ್ದುವು. ಅವರು ರಂಗದಲ್ಲಿ ಪಾತ್ರಗಳಾಗಿ ಮಾತಾಡುತ್ತಿದ್ದ ವಿಷಯ- ವಿಧಾನ ಪ್ರಸಂಗಪಠ್ಯದ ಅದೇ ತೂಕದಲ್ಲಿತ್ತು. ಶ್ರುತಿಮಧುರ ವಾಗಿತ್ತು. ಆದರೆ ಈಗ ಯಕ್ಷಗಾನದ ಬಹುತೇಕ ಕಲಾ ವಿದರು ಸುಶಿಕ್ಷಿತರು. ಆಧುನಿಕ ಸವಲತ್ತಿನಲ್ಲಿ ಬದುಕುತ್ತಿರು ವವರು. ಆದರೆ ಅವರಾಡುವ ವಿಷಯ-ವಿಧಾನ ಕಲಾ ಮೌಲ್ಯದ ತೂಕ ಪಡೆಯುತ್ತಿವೆಯಾ? ಇದೇ ಜಿಜ್ಞಾಸೆ. ಯಾವುದೇ ಪೌರಾಣಿಕ ಪ್ರಸಂಗವನ್ನು ಆಯ್ದರೂ ಅಲ್ಲಿ ಬರುವ ಪಾತ್ರಗಳೆಲ್ಲ ಅಪೌರು ಷೇಯ ಪ್ರಪ್ರಂಚದ ಪ್ರಾತಿನಿಧಿಕ ಪಾತ್ರಗಳು. ಒಂದಷ್ಟು ದೇವರ ಪಾತ್ರ, ಇನ್ನಷ್ಟು ಪ್ರೌಢ ಋಷಿ ಮೇಧಾವಿಗಳ ಪಾತ್ರ, ಹಾಗೆಯೇ ರಕ್ಕಸ ಪಾತ್ರ ಗಳು. ಇವೆಲ್ಲ ನಮ್ಮದೇ ಬೀದಿಯ, ನಮ್ಮದೇ ಓಣಿಯ ಗೆಳೆಯರಂತೆ ಮಾತಾಡಿದರೆ ಹೇಗೆ?

“ದೇವಿ ಮಹಾತ್ಮೆ ‘ಯ ಆರಂಭದಲ್ಲಿ ಬರುವ ತ್ರಿಮೂರ್ತಿಗಳ ಪಾತ್ರ ಮತ್ತವರೊಳಗೆ ನಡೆಯುವ ಮೇಲು-ಕೀಳಿನ ಸ್ಪರ್ಧೆಯ ಮಾತುಗಳು ವರ್ತಮಾನದ ಧ್ವನಿಯಾಗಿ ಧ್ವನಿಸಲ್ಪಟ್ಟರೆ ಅದು ಪಕ್ವ ಪ್ರೇಕ್ಷಕನಿಗೆ ಹೇಗಾದೀತು? ಹಾಗೆಯೇ ಭೀಷ್ಮ, ದ್ರೋಣರೇ ಮೊದಲಾದ ಮೇಧಾವಿ ಋಷಿ ಪುಂಗವರು ಬಂದು ನಮ್ಮ ನಾಡಿನ ಆಡು ಭಾಷೆಯ ಶೈಲಿಯಲ್ಲಿ ಮಾತಾಡಿದರೆ ಹೇಗೆ? ಈಗ ರಂಗದಲ್ಲಿ ಇಂಥದ್ದನ್ನೇ ಕಾಣುತ್ತಿದ್ದೇವೆ. ಪ್ರೌಢ ಪಾತ್ರವೊಂದನ್ನು ಮಾಡಿದ ಅನುಭವಿ ಕಲಾವಿದ ಹಾಸ್ಯಗಾರನೊಡನೆ ಸಂಭಾಷಣೆ ಬೆಳೆಸುತ್ತಾ, ಆತನ ಹಾಸ್ಯದ ಹೊನಲಿಗೆ ತಾನೂ ಜಾರಿದರೆ ಹೇಗೆ? ಪ್ರೇಕ್ಷಕ ರಂಜನೆ ಎಂಬ ಅಂಗೈ ನ್ಯಾಯ ದೊಂದಿಗೆ ರಂಗದಲ್ಲಿ ಪ್ರೌಢಪ್ರಸ್ತುತಿ ನೀಡಬೇಕಾದ ಕಲಾವಿದರು ಸಂಭಾಷಣೆಗಳಿಗೆ ಬಳಸುವ ಭಾಷೆಯ ಸಂಸ್ಕಾರ, ಅದರ ಸಂಸ್ಕೃತಿ ಯನ್ನು ಕಾಪಾಡುವ ಹೊಣೆಯುಳ್ಳವರೇ ಹೌದಲ್ಲವೇ?

Advertisement

ಹಿಂದೆ ಪ್ರಬುದ್ಧ ಸಂಸ್ಕೃತ, ಕನ್ನಡ ನಾಟಕಗಳು, ಪೌರಾಣಿಕ ಸಿನೆಮಾಗಳು ಯಕ್ಷಗಾನ ಕಲಾವಿದರ ಮೇಲೆ ಪ್ರಭಾವ ಬೀರಿದ್ದವು. ವಿದ್ಯಾವಂತ ಕಲಾವಿದರ ಮೇಲೆ ಪೌರಾಣಿಕ ಗ್ರಂಥ, ಕಾದಂಬರಿಗಳ ಪರಿಣಾಮವೂ ಆಗಿತ್ತು. ಅದರಿಂದಾಗಿಯೇ ಯಕ್ಷಗಾನವೆಂಬ ಜನಪದ ರಂಗಭೂಮಿಯ ವಾಚಿಕತೆ ಸಮೃದ್ಧಿಯಿಂದ ಬೆಳೆಯಿತು. ಆಗ ಹಿರಿಯರ ಜತೆ ಬೆರೆತು ಕಿರಿಯರು ಕಲಿಯುವ ಗುರು ಪರಂಪರೆಯ ಸಂಪ್ರದಾಯಗಳೂ ಇದ್ದುವು. ಈಗ ಮೇಳ ಎಂಬ ಪರಿಕಲ್ಪನೆಗಳಿದ್ದರೂ ಕಲಾವಿದರುಮುಖಾ ಮುಖಿಯಾಗುವುದೇ ಚೌಕಿ-ರಂಗಸ್ಥಳ ದಲ್ಲಿ ಮಾತ್ರ! ಇತರ ರಂಗಭೂಮಿಯನ್ನು ನೋಡು ವುದೋ, ಕತೆ, ಕಾದಂಬರಿ, ಕಾವ್ಯ ಇನ್ನಿತ್ಯಾದಿ ತನಗೆ ಪೂರಕ ವಿಚಾರಗಳನ್ನು ಓದುವು ದಿಲ್ಲದೇ ಇರುವುದರಿಂದ ಯಕ್ಷಗಾನದಲ್ಲೂ ಚೆಲುಗನ್ನಡ ಬಸವಳಿಯುತ್ತಿದೆ ಎಂಬುದಂತೂ ವಾಸ್ತವ.

ಕಲಾವಿದನ ಮಾತುಗಳು ನುಡಿಗಡಲಾಗಿ ಭೋರ್ಗರೆಯಬೇಕಾದರೆ ಆತ ನಿತ್ಯ ನಿರಂತರ ಭಾಷಾಧ್ಯಯನ, ವಿಷಯಾಧ್ಯಯನದಲ್ಲಿ ನಿರತ ನಾಗಿರಬೇಕು. ತನ್ನ ವೃತ್ತಿಗೆ ಪೂರಕವಾದ ಆಯ್ದ, ಉತ್ತಮ ಓದಿನ ಸಂಸ್ಕಾರ ಮತ್ತು ಪ್ರೌಢವಾದ ವಾಚಿಕತೆಯ ಆಲಿಸುವಿಕೆಯಿಂದ ಇದು ಸಾಧ್ಯ. ಆದರೆ ಆಧುನಿಕ ಜಗತ್ತಿನ ಇತರ ಆಕರ್ಷಣೆಗಳ ವ್ಯಾಮೋಹದಲ್ಲಿ ಮುಳುಗೇಳುವ ಸಮಾಜದ ಜತೆ ಕಲಾವಿದರೂ ಬದುಕುತ್ತಿರುವುದರಿಂದ ಅವ ರಿಗೆ ಭಾಷಿಕ, ವಾಚಿಕ ಸಾಧನೆ ಮಾಡಬೇಕೆಂಬ ಆಸಕ್ತಿಯೂ ಮೂಡುತ್ತಿಲ್ಲ. ಹಿಂದೆ 80ರ ದಶಕ ದಲ್ಲಿ ಪ್ರಬುದ್ಧ ಪಂಡಿತ ಪರಂಪರೆಯ ಸಮಾಜ ವಿತ್ತು, ಪ್ರೇಕ್ಷಕರಿದ್ದರು. ಅವರನ್ನು ಆಕರ್ಷಿಸ ಲೆಂದೇ ಕಲಾವಿದರು ಪ್ರಯತ್ನಿಸಿ ಭೇಷ್‌ ಎನಿಸಿ ಕೊಂಡರು. ಇಂದು ಅಭಿರುಚಿ, ಆಸಕ್ತಿಯಲ್ಲಿ ಚದುರಿದ ಸಮಾಜದಲ್ಲಿ ಭಾಷಾಪ್ರಬುದ್ಧತೆ ಸೊರಗಿದೆ. ಅದುವೇ ರಂಗಸ್ಥಳದಲ್ಲೂ ಪ್ರತಿ ಬಿಂಬಿಸಿದೆ. ಹಾಗಿದ್ದರೆ ಸಂಸ್ಕೃತಿ, ಸಂಸ್ಕೃತ ಭೂಯಿಷ್ಠ ವಾದ ನಡು ಗನ್ನಡದ ಸೊಗಸಿನ ಚೆಲು ಗನ್ನಡವನ್ನು ಈಗ ರಂಗ ಸ್ಥಳ ಕಾಪಾಡುತ್ತಿದೆಯಾ?

ಎಂ.ನಾ. ಚಂಬಲ್ತಿಮಾರ್‌

Advertisement

Udayavani is now on Telegram. Click here to join our channel and stay updated with the latest news.

Next