Advertisement

ಸರಕಾರದ ಸಂಶಯಾಸ್ಪದ ನಡೆ ವರ್ಗಾವಣೆ ಪರಿಹಾರವೇ?

07:34 AM Jul 18, 2017 | |

ಜೈಲಿನ ಅಕ್ರಮಗಳ ಕುರಿತು ಮಾಹಿತಿ ಹೊಂದಿದ್ದಾರೆ ಎನ್ನಲಾಗಿರುವ 32 ಕೈದಿಗಳನ್ನು ರಾತೋರಾತ್ರಿ ಬೇರೆ ಜೈಲುಗಳಿಗೆ ಸಾಗಹಾಕಿರುವುದು ಸಾಕ್ಷಿಗಳ ಬಾಯಿ ಮುಚ್ಚಿಸುವ ಪ್ರಯತ್ನವಲ್ಲದೇ ಮತ್ತೇನು?

Advertisement

ರಾಜ್ಯದಲ್ಲಿ ಅತಿ ಹೆಚ್ಚು ವಿವಾದಕ್ಕೊಳಗಾಗಿರುವ ಇಲಾಖೆಯೊಂದಿದ್ದರೆ ಅದು ಪೊಲೀಸ್‌ ಇಲಾಖೆ. ಕಾಂಗ್ರೆಸ್‌ ಅಧಿಕಾರಕ್ಕೇರಿದ ಬಳಿಕ ಈ ಇಲಾಖೆ ಕೆಟ್ಟ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿರುವುದು ವಿಷಾದದ ವಿಚಾರ. ಗೃಹ ಇಲಾಖೆಯ ಅಸಮರ್ಪಕ ನಿರ್ವಹಣೆಗೆ ಈ ಸರಕಾರದ ಅವಧಿಯಲ್ಲಿ ಸಾಲು ಸಾಲು ಉದಾಹರಣೆಗಳು ಸಿಗುತ್ತವೆ. ಈ ಸಾಲಿಗೆ ಇನ್ನೊಂದು ಸೇರ್ಪಡೆ ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡ. ಡಿಐಜಿ ರೂಪಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಹಿರಂಗಗೊಳಿಸಿದ ಬಳಿಕ ನಡೆದಿರುವ ಪ್ರತಿಯೊಂದು ಘಟನೆ ಪೊಲೀಸ್‌ ಇಲಾಖೆಯ ನೈತಿಕ ಸ್ಥೆರ್ಯ ಕುಂದಿಸುವಂತಿದೆ.   

 ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಮತ್ತು ನಕಲಿ ಛಾಪಾ ಕಾಗದ ಹಗರಣದ ಆರೋಪಿ ಅಬ್ದುಲ್‌ ಕರೀಂ ತೆಲಗಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ ಎಂದು ವರದಿ ಮಾಡಿದ್ದರು ರೂಪಾ. ಜತೆಗೆ ಬಂದೀಖಾನೆಗಳ ಡಿಐಜಿ ಸತ್ಯನಾರಾಯಣ 
ರಾವ್‌ಗೆ ಶಶಿಕಲಾ 2 ಕೋ. ರೂ. ಲಂಚ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವುದನ್ನು ಉಲ್ಲೇಖೀಸಿದ್ದರು. ಆದರೆ ಅನಂತರ ಇದು ಹಲವು ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಂಡು ಕಡೆಗೆ ಪೊಲೀಸ್‌ ವರ್ಸಸ್‌ ಪೊಲೀಸ್‌ ಎಂಬ ಹಂತಕ್ಕೆ ಬಂದು ತಲುಪಿದೆ. ಜೈಲಿನ ಅಕ್ರಮಗಳ ಕುರಿತು ಮಾಹಿತಿ ಹೊಂದಿದ್ದಾರೆ ಎನ್ನಲಾಗಿರುವ 32 ಕೈದಿಗಳನ್ನು ರಾತೋರಾತ್ರಿ ಬೇರೆ ಜೈಲುಗಳಿಗೆ ಸಾಗಹಾಕಿರುವುದು ಸಾಕ್ಷಿಗಳ ಬಾಯಿ ಮುಚ್ಚಿಸುವ ಪ್ರಯತ್ನವಲ್ಲದೇ ಮತ್ತೇನು? ತಡರಾತ್ರಿ ಈ ಕೈದಿಗಳನ್ನು ಬೇರೆ ಜೈಲುಗಳಿಗೆ ಸಾಗಿಸಿರುವುದಲ್ಲದೆ ಅವರನ್ನು ಥಳಿಸಲಾಗಿದೆ. ಬಳ್ಳಾರಿ ಜೈಲಿಗೆ ಕರೆದೊಯ್ದ ಕೈದಿಗಳಿಗೆ ನಡೆಯಲು ಕೂಡ ಆಗುತ್ತಿರಲಿಲ್ಲ. ಇನ್ನೂ ಒಂದು ಗಮನಾರ್ಹ ವಿಷಯವೆಂದರೆ ಈ ಪೈಕಿ ಹೆಚ್ಚಿನ ಕೈದಿಗಳು ರೂಪಾ ಪರವಾಗಿರುವವರು. ಅಂದರೆ ಜೈಲಿನ ಅಕ್ರಮಗಳ ಕುರಿತು ರೂಪಾಗೆ ಮಾಹಿತಿ ನೀಡಿದವರು ಮತ್ತು ಅಕ್ರಮಗಳನ್ನು ಪ್ರತಿಭಟಿಸಿದವರು. ರೂಪಾ ಮಾಡಿರುವ ಆರೋಪಗಳ ಕುರಿತು ನಿಷ್ಪಕ್ಷ ತನಿಖೆ ನಡೆಸಬೇಕಿದ್ದ ಸರಕಾರ ಯಾವುದೋ ಗೂಢ ಉದ್ದೇಶ ಇಟ್ಟುಕೊಂಡು ಇಡೀ ಪ್ರಕರಣವನ್ನು ಹಳ್ಳ ಹಿಡಿಸಲು ಪ್ರಯತ್ನಿಸುತ್ತಿರುವಂತಿದೆ.

ಆರೋಪಗಳ ಕುರಿತು ತನಿಖೆ ಮಾಡಲು ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರನ್ನು ನೇಮಿಸಿದೆ ನಿಜ. ಆದರೆ ಈ ಅಧಿಕಾರಿ ತನಿಖೆ ಪ್ರಾರಂಭಿಸುವುದಕ್ಕೂ ಮೊದಲೇ ರೂಪಾ ಅವರನ್ನು ಸಂಚಾರ ವಿಭಾಗಕ್ಕೆ ಎತ್ತಂಗಡಿ ಮಾಡಲಾಗಿದೆ. ಬರೀ ರೂಪಾ ಒಬ್ಬರನ್ನೇ ವರ್ಗಾಯಿಸಿದರೆ ಟೀಕೆಗೆ ಗುರಿಯಾಗಬಹುದೆಂದು ಸತ್ಯನಾರಾಯಣ  ಮತ್ತು ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ ಕೃಷ್ಣ ಕುಮಾರ್‌ರನ್ನೂ ವರ್ಗಾಯಿಸಲಾಗಿದೆ. ಎಂ.ಕೆ. ಗಣಪತಿ, ಕಲ್ಲಪ್ಪ ಹಂಡಿಬಾಗ್‌ ಮತ್ತಿತರ ಪೊಲೀಸ್‌ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಾಗಲೂ ಸರಕಾರದ ಹೀಗೇ ಸಂಶಯಾಸ್ಪದವಾಗಿತ್ತು. ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ ಬಂಡೆ ಸಾವು ಕೂಡ ಅನುಮಾನಗಳನ್ನು ಹುಟ್ಟಿಸಿದೆ. ಕಾಟಾಚಾರಕ್ಕೆ ಈ ಪ್ರಕರಣಗಳ ಸಿಐಡಿ ತನಿಖೆ ನಡೆಸಲಾಗಿದ್ದರೂ ಸಿಐಡಿ ತನಿಖೆ ನಡೆಸುವುದೇ ಆರೋಪಿಗಳನ್ನು ಬಚಾವು ಮಾಡಲು ಎಂಬ ಕುಖ್ಯಾತಿ ಬಂದಿರುವುದಷ್ಟೇ ಆಗಿರುವ ಲಾಭ. ಪೊಲೀಸ್‌ ಸಿಬಂದಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಪರಿಸರ ಸೃಷ್ಟಿಸಿಕೊಡಿ ಎಂದು ಆಗ್ರಹಿಸಿ ಮುಷ್ಕರ ಹೂಡಲು ಮುಂದಾದಾಗ ಸರಕಾರ ನಿರ್ದಯವಾಗಿ ಈ ಪ್ರತಿಭಟನೆಯನ್ನು ದಮನಿಸಿತು. ಅನುಪಮಾ ಶೆಣೈ ಸೇರಿ ಕೆಲವು ಪೊಲೀಸ್‌ ಅಧಿಕಾರಿಗಳು ಕಿರುಕುಳ ಸಹಿಸಲಾಗದೆ ಹೊರಬಂದರು. ಯಾವುದೇ ಇಲಾಖೆ ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕಾದರೆ ದಕ್ಷ ಸಚಿವರು ಇರಬೇಕು. ಇಲ್ಲದಿದ್ದರೇನಾಗುತ್ತದೆ ಎಂದರೆ ಕರಾವಳಿ ಯಲ್ಲಿ ನಡೆದಿರುವ ಕೋಮುಗಲಭೆಯೇ ಸಾಕ್ಷಿ. ಕರ್ನಾಟಕದ ದುರಾ ದೃಷ್ಟವೆಂದರೆ ಇಲ್ಲಿ ಪೂರ್ಣಾವಧಿ ಗೃಹ ಸಚಿವರೇ ಇಲ್ಲ. ಸಿಎಂ ಅವರೇ ಗೃಹ ಇಲಾಖೆಯನ್ನೂ ನಿಭಾಯಿಸುತ್ತಿದ್ದಾರೆ. ಇಲಾಖೆಯ ಸಮಸ್ತ ಚಟುವಟಿಕೆಗಳಿಗೆ ಅವರು ಅವಲಂಬಿಸಿರುವುದು ನಿವೃತ್ತ ಅಧಿಕಾರಿ ಕೆಂಪಯ್ಯರನ್ನು. ಏನೇ ಸಮಸ್ಯೆ ಕಾಣಿಸಿಕೊಂಡರೂ ಒಂದಷ್ಟು ಅಧಿಕಾರಿ ಗಳನ್ನು ವರ್ಗಾಯಿಸಿ ಎಂದು ಸಲಹೆ ನೀಡುವುದಷ್ಟೇ ಅವರು ಮಾಡುತ್ತಿರುವ ಕೆಲಸ. ವರ್ಗಾವಣೆಯೊಂದರಿಂದಲೇ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆಯೇ? ಈ ಪ್ರಶ್ನೆಗೆ ಸರಕಾರವೇ ಉತ್ತರ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next