Advertisement

ಗ್ರಾಮರಾಜ್ಯ, ರಾಮ ರಾಜ್ಯದ ಕನಸು ನನಸಾಗಿದೆಯೇ?

12:32 PM Mar 12, 2020 | mahesh |

ಪಂಚಾಯತಿ ಸದಸ್ಯನಾಗಿ ತಿಂಗಳ ಸಭೆಗೆ ಹೋಗಿ ಅಲ್ಲಿ ಸಿಗುವ ಶುಲ್ಕವನ್ನು ತೆಗೆದುಕೊಂಡು ಬರುವುದು ಬಿಟ್ಟರೆ ಹಲವರಿಗೆ ತಮ್ಮ ಕರ್ತವ್ಯವೇನು, ಸಭೆಯಲ್ಲಿ ಏನು ನಿರ್ಣಯಗಳಾಗಿವೆ ಎಂಬುದು ಕೂಡ ತಿಳಿಯಲಾಗದಷ್ಟು ಪ್ರಜ್ಞಾವಂತಿಕೆಯಿಂದ ದೂರ ಉಳಿದಿದ್ದಾರೆ. ಅವರನ್ನು ದಕ್ಷರಾಗಿ ನಿರೂಪಿಸುವಲ್ಲಿ ಸರಕಾರದ ತರಬೇತಿ ವ್ಯವಸ್ಥೆಯೇ ವೈಫ‌ಲ್ಯ ಹೊಂದಿದೆ. ಗ್ರಾಮ ಸಭೆಯ ನಿರ್ಣಯಗಳಂತೂ ಜಾರಿಗೆ ಬರುವುದಿಲ್ಲ ಎಂದು ಜನರಿಗೂ ಅದರ ಬಗೆಗೆ ಭ್ರಮನಿರಸನವಾಗಿದೆ.

Advertisement

ಮತ್ತೂಮ್ಮೆ ಗ್ರಾಮ ಪಂಚಾಯತ್‌ ಚುನಾವಣೆ ಹತ್ತಿರವಾಗುತ್ತಿರುವ ಸಮಯದಲ್ಲಿ ಗ್ರಾಮೀಣ ಜನರು ಮತ್ತು ಸರಕಾರದ ಚುಕ್ಕಾಣಿ ಹಿಡಿದವರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವೂ ಸನ್ನಿಹಿತವಾಗಿದೆ.

ಗ್ರಾಮ ರಾಜ್ಯದ ಕನಸಿಗೊಂದು ರೂಪರೇಷೆ ನೀಡಿದವರು, ಮಂಡಲ ಪಂಚಾಯಿತಿಗಳ ಸೃಷ್ಟಿಯ ಮೂಲಕ ಅದರ ಅನುಷ್ಠಾನಕ್ಕೊಂದು ವಿಧಿಯನ್ನು ರೂಪಿಸಿದವರು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ. ಹಾಗೆಯೇ ನೀರು ದಾನಿಯೆನಿಸಿದ ನಜೀರ ಸಾಬರು. ಅನಂತರ ಬಂದ ಪ್ರತಿಯೊಂದು ಪಕ್ಷದ ಸರಕಾರವೂ ಅದನ್ನು ಉನ್ನತಗೊಳಿಸಲು ತಿದ್ದುಪಡಿಯ ನೆವದಲ್ಲಿ ಕೈಯಿಕ್ಕಿ ಹಾಳು ಮಾಡಿತು ವಿನಃ ಸಮುದಾಯಕ್ಕೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ಪ್ರಬುದ್ಧವಾಗಿ ರೂಪಿಸಲು ಸಮರ್ಥವಾಗಲಿಲ್ಲ. ನೆರೆಯ ಕೇರಳ ರಾಜ್ಯದ ಮಾದರಿಯನ್ನಾದರೂ ಗಮನಿಸಬಹುದಿತ್ತು. ಅಲ್ಲಿ ಕುಟುಂಬಶ್ರೀ ಎಂಬ ಸ್ವಸಹಾಯ ಪದ್ಧತಿಯ ಮೂಲಕ ಗ್ರಾಮೀಣ ಮಹಿಳೆಯರ ಬದುಕಿಗೆ ನೀಡಿದ ಕಾಯಕಲ್ಪ ಇಡೀ ದೇಶಕ್ಕೆ ಮಾದರಿಯಾಗುವಂತಿದೆ. ರೈತನ ತೋಟದ ತೆಂಗಿನಕಾಯಿ ತೆಗೆಯುವುದರಿಂದ ಆರಂಭಿಸಿ, ಸರಕಾರದ ಬಸ್‌ ಚಾಲನೆಯ ತನಕ ಮಹಿಳೆಯರನ್ನೇ ಆಯ್ಕೆ ಮಾಡುವ ಮೂಲಕ ಸಾಧಿಸಿದ ಅದ್ಭುತ ಆರ್ಥಿಕ ಪ್ರಗತಿಗೆ ಗ್ರಾಮ ಪಂಚಾಯತಿಗಳು ಕಾರಣವಾಗಿವೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬೆರಳೆಣಿಕೆಯ ಪಂಚಾಯತಿಗಳ ಹೊರತು ಬಹುತೇಕ ಎಲ್ಲವೂ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳೆಂಬ ಬಿಳಿಯಾನೆಗಳನ್ನು ಸಾಕುವ ತಾಣಗಳಾಗಿವೆ. ಕೊಲನಿ ನಿವಾಸಿಗಳಿಗೆ ನೀರು ಪೂರೈಸುವ ಕಾರ್ಯಕ್ರಮದಲ್ಲಿಯೇ ಸುಸ್ತಾಗುವ ಪಂಚಾಯಿತಿಗಳು ಬೇರೆ ಏನು ಮಾಡುತ್ತಿವೆ? ಪ್ರತಿಯೊಂದು ಮನೆಯಿಂದಲೂ ವರ್ಷಾವಧಿ ತೆರಿಗೆ ಕಿತ್ತುಕೊಳ್ಳುವ ಈ ಪಂಚಾಯತಿಗಳಿಂದ ಆ ಮನೆಯ ನಿವಾಸಿಗಳಿಗೆ ಸಿಗುವ ಸೇವೆಯಾದರೂ ಏನಿದೆ? ರಸ್ತೆಗಳಿಗೆ ತಾಲೂಕು ಪಂಚಾಯತಿನ ಅನುದಾನ ಬರಬೇಕು, ಮೋರಿಗಳಿಗೆ ಶಾಸಕರು ಕೊಟ್ಟರೆ ಉಂಟು. ಮನೆಗಳ ಹಂಚಿಕೆಗೂ ಪಂಚಾಯತ್‌ ಸದಸ್ಯರ ಶಿಫಾರಸು ನಾಮ್‌ ಕೇ ವಾಸ್ತೆ. ಮನೆ ನಿನ್ನದು, ಚೊಂಬು ಮಾತ್ರ ಮುಟ್ಟಬೇಡ ಎಂಬಂತೆ ಪಂಚಾಯತಿ ಸದಸ್ಯನಾಗಿ ತಿಂಗಳ ಸಭೆಗೆ ಹೋಗಿ ಅಲ್ಲಿ ಸಿಗುವ ಶುಲ್ಕವನ್ನು ತೆಗೆದುಕೊಂಡು ಬರುವುದು ಬಿಟ್ಟರೆ ಹಲವರಿಗೆ ತಮ್ಮ ಕರ್ತವ್ಯವೇನು, ಸಭೆಯಲ್ಲಿ ಏನು ನಿರ್ಣಯಗಳಾಗಿವೆ ಎಂಬುದು ಕೂಡ ತಿಳಿಯಲಾಗದಷ್ಟು ಪ್ರಜ್ಞಾವಂತಿಕೆಯಿಂದ ದೂರ ಉಳಿದಿದ್ದಾರೆ. ಅವರನ್ನು ದಕ್ಷರಾಗಿ ನಿರೂಪಿಸುವಲ್ಲಿ ಸರಕಾರದ ತರಬೇತಿ ವ್ಯವಸ್ಥೆಯೇ ವೈಫ‌ಲ್ಯ ಹೊಂದಿದೆ. ಗ್ರಾಮ ಸಭೆಯ ನಿರ್ಣಯಗಳಂತೂ ಜಾರಿಗೆ ಬರುವುದಿಲ್ಲ ಎಂದು ಜನರಿಗೂ ಅದರ ಬಗೆಗೆ ಭ್ರಮನಿರಸನವಾಗಿದೆ.

ಎಂತಹ ನಾಚಿಕೆಗೇಡು! ಸಾಕ್ಷರತೆಯ ಬಗೆಗೆ, ಅರ್ಧದಲ್ಲೇ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಬಗೆಗೆ ಗ್ರಾಮ ಪಂಚಾಯಿತಿಗಳಿಗೆ ಹೊಣೆ ಹೊರಿಸುವ ಸರಕಾರ ಅಧಿಕಾರ ವಿಕೇಂದ್ರಿಕರಣದ ಹೆಸರಿನಲ್ಲಿ ಕನಿಷ್ಠ ಓದು, ಬರಹ ತಿಳಿಯದವರಿಗೂ ಸದಸ್ಯನಾಗುವ ಅರ್ಹತೆ ಒದಗಿಸಿದೆ. ತಳಮಟ್ಟದಲ್ಲಿರುವವರನ್ನು ಮೇಲಕ್ಕೆ ತರಬೇಕೆಂಬ ಆಶಯಕ್ಕೆ ಯಾರದೂ ವಿರೋಧವಿಲ್ಲ. ಆದರೆ ಅಕ್ಷರ ಜ್ಞಾನಕ್ಕೂ ಆಡಳಿತ ನಿರ್ವಹಣೆಗೂ ಯಾವುದೇ ಸಂಬಂಧವಿಲ್ಲ, ಲೇಖನಿ ಹಿಡಿಯಲಾರದವರೂ ಯೋಗ್ಯ ಗ್ರಾಮ ನಿರ್ಮಾಣ ಮಾಡಬಲ್ಲರು ಎಂಬ ಭಾವನೆ ಎಲ್ಲೋ ಅಪರೂಪಕ್ಕೊಮ್ಮೆ ಸರಿ ಹೊಂದಬಹುದು. ಆದರೂ ಸಾರಾಸಗಟಾಗಿ ನೋಡಿದರೆ ಇಂತಹ ಪವಾಡ ಸಾಧನೆಗಾಗಿ ನೀಡಿದ ವಿಪರೀತ ಮೀಸಲಾತಿಗಳಿಂದಲೇ ನಿಷ್ಕ್ರಿಯ ಗ್ರಾಮ ಪಂಚಾಯತಿಗಳ ಸೃಷ್ಟಿಯಾಗಿವೆ. ಇನ್ನಾದರೂ ಕನಿಷ್ಠ ಆದೇಶಗಳನ್ನು ಓದಲು ಬಲ್ಲವರಾದರೂ ಸದಸ್ಯರಾಗುವಂತೆ ಕಾನೂನಿನಲ್ಲಿ ತಿದ್ದುಪಡಿಯಾದರೆ ಅಧ್ಯಕ್ಷರು, ಸದಸ್ಯರ ದೌರ್ಬಲ್ಯವನ್ನು ನಗದೀಕರಿಸಿಕೊಂಡು ಗ್ರಾಮಾಭಿವೃದ್ಧಿಯಲ್ಲಿ ಔದಾಸಿನ್ಯ ತೋರುವ ಅಭಿವೃದ್ಧಿ ಅಧಿಕಾರಿಗಳು ಜಾಗೃತರಾದರೂ ಆಗಬಹುದು.

Advertisement

ಪಂಚಾಯತಿಗಳು ತಮ್ಮ ವೆಚ್ಚಕ್ಕೆ ಬೇಕಾದ ಸಂಪನ್ಮೂಲವನ್ನು ತಾವೇ ಕ್ರೋಢೀಕರಿಸಬೇಕೆಂದು ಸರಕಾರ ಹೇಳುತ್ತದೆ. ಬಹಳಷ್ಟು ಪಂಚಾಯಿತಿಗಳಲ್ಲಿ ಐದು ವರ್ಷಕ್ಕೊಮ್ಮೆ ಮನೆ ಕಂದಾಯ ಏರಿಸುವುದರ ಹೊರತು ಬೇರೆ ಯಾವ ಮಾರ್ಗವೂ ಇಲ್ಲ. ಒಬ್ಬ ವ್ಯಕ್ತಿ ತನ್ನ ಬೆವರಿನ ಹಣದಿಂದ ಮನೆ ಕಟ್ಟಿ ಅದರಲ್ಲಿ ವಾಸವಾಗಿರುವುದಕ್ಕೂ ಗ್ರಾಮಾಡಳಿತಕ್ಕೆ ಸುಂಕ ಕೊಡಬೇಕಾಗಿದೆ. ಪ್ರತಿಫ‌ಲವಾಗಿ ಅವನಿಗೆ ಅಲ್ಲಿಂದ ಏನು ಸಿಗುತ್ತದೆ? ಕೊಲನಿಗಳಿಗೆ ಒದಗಿಸುವ ಕುಡಿಯುವ ನೀರಿನ ಸಂಬಂಧ ವಿದ್ಯುತ್‌ ಇಲಾಖೆಗೆ, ದಾರಿದೀಪದ ವ್ಯವಸ್ಥೆಗೆ ಹಣ ಸಾಕಾಗುವುದಿಲ್ಲ ಎಂದು ಉತ್ತರ ಬರುತ್ತದೆ. ಸರಕಾರ ಅಡುಗೆ ಅನಿಲದ ಬೆಲೆ ಏರಿಸುವಾಗ ಬಡವರಿಗೆ ತೊಂದರೆಯಾಗುತ್ತದೆಂದು ಕಾಯುವುದಿಲ್ಲ. ಬಸ್ಸಿನ ಟಿಕೆಟ್‌ ದರ ಹೆಚ್ಚಿಸುವಾಗ ಬಡವರಿಗೆ ರಿಯಾಯಿತಿ ತೋರುವುದಿಲ್ಲ. ಹಾಗೆಯೇ ಪಂಚಾಯತಿಗಳು ಕೂಡ ನೀರು ಕುಡಿಯುವವರಿಂದಲೇ ಅದರ ವೆಚ್ಚವನ್ನು ಸರಿದೂಗಿಸುವ ಬದಲು ತೊಗಟೆ ದಪ್ಪವಿರುವ ಮರಗಳನ್ನೇ ಕೆತ್ತುವುದರಲ್ಲಿ ಏನರ್ಥವಿದೆ?

ಸುಗಮವಾದ ಆಡಳಿತ ನೀಡುವ ಬಗೆಗೆ ಸದಸ್ಯರಿಗೆ ಯೋಗ್ಯ ಮಾರ್ಗದರ್ಶನವೂ ಇಲ್ಲ. ಗ್ರಾಮೀಣ ಪ್ರಗತಿಯ ಬಗೆಗೆ ನಿಖರವಾದ ಗುರಿಯೂ ಇಲ್ಲ. ರಾಜಕೀಯ ರಹಿತ ಎಂಬ ಮಾತು ಹೇಳುತ್ತಲೇ ಪಕ್ಷಗಳ ಬೆಂಬಲದಿಂದ ಗೆದ್ದವರು ವಿಜಯೋತ್ಸವ ನಡೆಸುತ್ತಾರೆ. ಮತ್ತೆ ಐದು ವರ್ಷ ಸದಸ್ಯರಾಗಿ ಇರುತ್ತಾರೆ ವಿನಃ ಇದು ಅವರ ಅವಧಿಯಲ್ಲಿ ಆದ ಅಭಿವೃದ್ಧಿ ಎಂದು ಗುರುತಿಸಲ್ಪಡುವ ಒಂದು ಕೆಲಸವನ್ನೂ ಮಾಡಿರುವುದಿಲ್ಲ. ಸ್ವಂತ ಹಿತಾಸಕ್ತಿಯ ಸಾಧನೆ ಮಾಡಿಕೊಂಡವರ ಉದಾಹರಣೆಗಳು ಇವೆ. ಗ್ರಾಮಗಳಲ್ಲಿ ಮಾಡುವುದಾದರೆ ಸಾಕಷ್ಟು ಅವಕಾಶಗಳಿವೆ. ಆದರೆ ಮಾಡುವ ಮನಸ್ಸುಗಳ ಕೊರತೆಯಿದೆ. ಪ್ರಧಾನಿ ಮೋದಿ ಸ್ವತ್ಛ ಭಾರತದ ಬಗೆಗೆ ಘೋಷಣೆ ಮಾಡಿದಾಗ ಕಸರಹಿತ ಗ್ರಾಮವನ್ನಾಗಿಸುವಲ್ಲಿ ಇದ್ದ ಆಮೋದಗಳು ಈಗ ತಳ ಹಿಡಿದಿವೆ. ಇಲ್ಲಿ ಕಸ ಹಾಕಬಾರದು ಎಂಬ ಫ‌ಲಕದ ಕೆಳಗೆ ರಾಶಿ ಬಿದ್ದ ಕಸವನ್ನು ಕಂಡರೆ ಎಲ್ಲೋ ಆಡಳಿತ ದಕ್ಷತೆಯ ಕೊರತೆ ಅನಿಸದೆ ಇರದು.

ಈ ಸಲದ ಚುನಾವಣೆಯಲ್ಲಾದರೂ ರಾಜಕೀಯ ದೃಷ್ಟಿಯಿಂದ ದೂರವಾದ ಆಯ್ಕೆಗಳು ನಡೆಯುವಂತಾಗಲಿ. ಯುವ ಉತ್ಸಾಹಿಗಳ ಪ್ರವೇಶವಾಗಲಿ. ಈ ಗ್ರಾಮವನ್ನು ಹೇಗೆ ಸಂಪದ್ಭರಿತಗೊಳಿಸಬಹುದು, ಸೌಲಭ್ಯಗಳ ವಿಸ್ತರಣೆಯ ಮೂಲಕ ಪ್ರತಿಯೊಂದು ಮನೆಯನ್ನೂ ಹೇಗೆ ತಲುಪಬಹುದು ಎಂಬ ಚಿಂತನೆಗಳು ನಡೆಯಲಿ. ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳ ವೈವಿಧ್ಯಗಳಿಗೆ ಅವಕಾಶ ಹೆಚ್ಚಲಿ. ಪಕ್ಷದ ನೀತಿಯ ಹೆಸರಿನಲ್ಲಿ ಬೇರೆಯವರ ಬದುಕಿಗೆ ಕಿಡಿ ಹಚ್ಚದೆ ಸರ್ವರನ್ನೂ ಸಮಭಾವದಲ್ಲಿ ಕಾಣುವ ಉದಾರ ಚರಿತರಿಂದ ಸುಶೋಭಿತವಾದ ಆಡಳಿತ ಸಿಕ್ಕಿದರೆ ರಾಮ ರಾಜ್ಯದ ಕನಸಿನಲ್ಲಿ ಪಾಲು ಸಿಗುವಂತಾದೀತು.

– ಪ. ರಾಮಕೃಷ್ಣಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next