Advertisement

ಕಾಂಗ್ರೆಸ್‌ನ ಕೊನೆಯ ಅಸ್ತ್ರ ನಿಜಕ್ಕೂ ಪರಿಣಾಮಕಾರಿಯೇ?

12:50 AM Jan 25, 2019 | Harsha Rao |

“ಪ್ರಿಯಾಂಕಾರಿಂದ ಉತ್ತರಪ್ರದೇಶದಲ್ಲಿ ಏನಾದರೂ ಬದಲಾವಣೆಗಳು ಆಗುತ್ತಿವೆಯೇ?’ ಎನ್ನುವ ಪ್ರಶ್ನೆಯು ದಿನನಿತ್ಯದ ಚರ್ಚೆಯ ಭಾಗವಾಗಲಿದೆ. ಆದರೂ, ಪ್ರಿಯಾಂಕಾ ಗಾಂಧಿಯವರ ರಾಜಕೀಯ ಪ್ರವೇಶದಿಂದ ರಾತ್ರೋರಾತ್ರಿ ಕಾಂಗ್ರೆಸ್‌ನ ಅದೃಷ್ಟ ಖುಲಾಯಿಸುವ ಸಾಧ್ಯತೆ ಕಡಿಮೆಯೇ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಒಂದಂಕಿಯ ಸ್ಥಾನಗಳಿಗೇ ಸೀಮಿತವಾಗಬಹುದು

Advertisement

ಬ್ರಹ್ಮಾಸ್ತ್ರಕ್ಕೆ ಜಗತ್ತನ್ನೇ ನಾಶ ಮಾಡುವ ಶಕ್ತಿಯಿರುತ್ತದೆ. ಯುದ್ಧದಲ್ಲಿ ಬೇರೆ ದಾರಿಯೇ ಇಲ್ಲವಾದಾಗ ಕೊನೆಯ ಅಸ್ತ್ರವಾಗಿ ಅದನ್ನು ಬಳಸಲಾಗುತ್ತದೆ. ಒಂದೋ ಬ್ರಹ್ಮಾಸ್ತ್ರವನ್ನು ಬಳಸಬೇಕು, ಇಲ್ಲವೇ ಅಂತ್ಯವನ್ನು ಎದುರಿಸಬೇಕು! 

ಮೊದಲಿನಿಂದಲೂ ಪ್ರಿಯಾಂಕಾ ಗಾಂಧಿಯವರನ್ನು ಕಾಂಗ್ರೆಸ್‌ನ ಬ್ರಹ್ಮಾಸ್ತ್ರ ಎಂದೇ ಕರೆಯುತ್ತಾ ಬರಲಾಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಅಂತ್ಯವನ್ನು ಸಮೀಪಿಸುತ್ತಿರುವ ಕಾರಣದಿಂದ ಕೊನೆಗೂ ಪ್ರಿಯಾಂಕಾರನ್ನು ಅಖಾಡಕ್ಕೆ ತರಲಾಗಿದೆ. ಸಮಾಜವಾದಿ ಮತ್ತು ಬಹುಜನಸಮಾಜವಾದಿ ಪಕ್ಷಗಳ ಮೈತ್ರಿಯ ನಂತರ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಲೆಕ್ಕಕ್ಕೇ ಇಲ್ಲದಂತಾಗಿದೆ. 1985ರ ನಂತರ ಇದೇ ಮೊದಲ ಬಾರಿಗೆ ಆ ರಾಜ್ಯವು ಕೇವಲ ಎರಡು ಪಕ್ಷಗಳ ನಡುವಿನ ಸ್ಪರ್ಧೆಯಂತೆ ಕಾಣಿಸುತ್ತಿದೆ. ಪ್ರಿಯಾಂಕಾರನ್ನು ಉತ್ತರಪ್ರದೇಶದ ಪೂರ್ವ ವಲಯದ ಉಸ್ತುವಾರಿಯಾಗಿ  ನೇಮಿಸಿರುವುದು, ಆ ರಾಜ್ಯದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರಿಗೆ ಮರು ಶಕ್ತಿ ಬರುವುದಕ್ಕೆ ಸಹಾಯ ಮಾಡಲಿದೆ. ಅದರಲ್ಲೂ ಅಲಹಾಬಾದ್‌ಕಾಂಗ್ರೆಸ್‌ ಘಟಕಕ್ಕಂತೂ ಸಂತಸ ಹೆಚ್ಚಿರಬಹುದು. ಏಕೆಂದರೆ ಅದು “ಪ್ರಿಯಾಂಕಾ ಅಧಿಕೃತವಾಗಿ ರಾಜಕೀಯಕ್ಕೆ ಬರಬೇಕು’ ಎಂದು ಆಗಾಗ ಬಹಿರಂಗವಾಗಿಯೇ ಆಗ್ರಹಿಸುತ್ತಿತ್ತು. 

ಪ್ರಿಯಾಂಕಾರ ರಾಜಕೀಯ ಪ್ರವೇಶವು ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ನೈತಿಕ ಸ್ಥೈರ್ಯವನ್ನು ಉಳಿಸುವ ಜೊತೆಯಲ್ಲೇ, ಉತ್ತರ ಪ್ರದೇಶದ ಚುನಾವಣಾ ಚರ್ಚೆಯಿಂದ ಕಾಂಗ್ರೆಸ್‌ನ ಹೆಸರು ಜಾರಿಹೋಗದಂತೆ ನೋಡಿಕೊಳ್ಳಲಿದೆ.  ಮಾಧ್ಯಮಗಳು ಈಗ ದೆಹಲಿ ಮತ್ತು ಲಖೌ°ನಿಂದ ದೇವರಿಯಾ ಮತ್ತು ಲಾಲ್‌ಗ‌ಂಜ್‌ಗೆ ದೌಡಾಯಿಸಿ “ಪ್ರಿಯಾಂಕಾ ಫ್ಯಾಕ್ಟರ್‌’ ಕಾಂಗ್ರೆಸ್‌ಗೆ ಸಹಾಯ ಮಾಡುತ್ತಿದೆಯೋ ಇಲ್ಲವೋ ಎನ್ನುವುದನ್ನು ನಿರಂತರವಾಗಿ ತಿಳಿದುಕೊಳ್ಳಲಿವೆ. “ಪ್ರಿಯಾಂಕಾರಿಂದ ಏನಾದರೂ ಬದಲಾವ ಣೆಗಳು ಆಗುತ್ತಿವೆಯೇ?’ ಎನ್ನುವ ಪ್ರಶ್ನೆಯು ದಿನನಿತ್ಯತ ಚರ್ಚೆಯ ಭಾಗವಾಗಲಿದೆ.  ಆದರೂ, ಪ್ರಿಯಾಂಕಾ ಗಾಂಧಿಯವರ ರಾಜಕೀಯ ಪ್ರವೇಶದಿಂದ ರಾತ್ರೋರಾತ್ರಿ ಕಾಂಗ್ರೆಸ್‌ನ ಅದೃಷ್ಟ ಖುಲಾಯಿಸುವ ಸಾಧ್ಯತೆ ಕಡಿಮೆಯೇ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಒಂದಂಕಿ ಸ್ಥಾನಗಳಿಗೇ ಸೀಮಿತವಾಗಬಹುದು. 

ತ್ರಿಕೋನ ಸ್ಪರ್ಧೆಯಾಗಬಲ್ಲದೇ? 
ಪ್ರಿಯಾಂಕಾ ಗಾಂಧಿ ಮತ್ತು ಜ್ಯೋತಿರಾದಿತ್ಯ ಸಿಂದಿಯಾ ಜೋಡಿ ಉತ್ತರಪ್ರದೇಶ ಚುನಾವಣೆಯನ್ನು ತ್ರಿಕೋನ ಸ್ಪರ್ಧೆ ಮಾಡಬಲ್ಲದೇ? ಸದ್ಯಕ್ಕಂತೂ ಇದು ಅಸಂಭವ ಎಂದೆನಿಸುತ್ತಿದೆ. ಉತ್ತರಪ್ರದೇಶದ ಜಾತಿ ಗಣಿತ ಹೇಗಿದೆಯೆಂದರೆ, 80 ಸ್ಥಾನಗಳಲ್ಲಿ ಒಟ್ಟು 75 ಸ್ಥಾನಗಳಲ್ಲಿ ಕಾಂಗ್ರೆಸ್‌ ರೇಸ್‌ನಲ್ಲೇ ಇಲ್ಲ! ಕಾಂಗ್ರೆಸ್‌ ಪರ ಒಲವಿರುವ ಮತದಾರರೂ ಕೂಡ ಆ ಪಕ್ಷ ಗೆಲ್ಲುವ ಸ್ಥಿತಿಯಲ್ಲಿಲ್ಲ ಎಂದೇ ನೋಡುತ್ತಾರೆ. ಗೆಲುವು ಒಂದೋ ಬಿಜೆಪಿಯತ್ತ ಅಥವಾ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮೈತ್ರಿಯತ್ತ ತಿರುಗಲಿದೆ. 

Advertisement

ಅದರಲ್ಲೂ ಮುಸ್ಲಿಂ ಮತದಾರರ ವಿಷಯಕ್ಕೆ ಬಂದಾಗ ಈ ವಾದ ಸ್ಪಷ್ಟವಾಗುತ್ತದೆ. ಕಾಂಗ್ರೆಸ್‌ ತಾನು “ಗೆಲ್ಲಬಲ್ಲೆ’ ಎಂಬ ಭಾವನೆಯನ್ನು ಮೂಡಿಸದ ಹೊರತು ಮುಸ್ಲಿಂ ಮತದಾರರು ಎಸ್‌ಪಿ-ಬಿಎಸ್‌ಪಿಯನ್ನು ಕೈಬಿಡಲಾರರು.  ಇನ್ನು ಎಸ್‌ಪಿ-ಬಿಎಸ್‌ಪಿಯಿಂದ ಮುನಿಸಿಕೊಂಡಿರುವ ಮತದಾರರು ಪ್ರಿಯಾಂಕಾರನ್ನು ಮೂರನೇ ಆಯ್ಕೆ ಎಂದು ನೋಡಿದರೂ, ಇದರಿಂದ ಕಾಂಗ್ರೆಸ್‌ಗೆ ಮತ ಹಂಚಿಕೆಯಲ್ಲಿ ತುಸು ಉತ್ತಮ ಪಾಲು ದೊರೆಯುತ್ತದಷ್ಟೆ. ಆ ಮತಗಳು ಸ್ಥಾನಗಳನ್ನೇನೂ ತಂದುಕೊಡಲಾರವು.

ರಾಷ್ಟ್ರೀಯ ವರ್ಸಸ್‌ ಪ್ರಾದೇಶಿಕ?
ಪ್ರಿಯಾಂಕಾ ಗಾಂಧಿ ಮತ್ತು ಜ್ಯೋತಿರಾದಿತ್ಯ ಸಿಂದಿಯಾರನ್ನು  ಅಖಾಡಕ್ಕಿಳಿಸುವ ಮೂಲಕ ಕಾಂಗ್ರೆಸ್‌ ಉತ್ತರ ಪ್ರದೇಶದಲ್ಲಿನ ಲೋಕಸಭಾ ಚುನಾವಣೆಗಳಿಗೆ “ರಾಷ್ಟ್ರೀಯ ಚಹರೆ’ಯನ್ನು ಕೊಡಲು ಪ್ರಯತ್ನಿಸುತ್ತಿದೆ. ಆ ಮೂಲಕ ಎಸ್‌ಪಿ- ಬಿಎಸ್‌ಪಿ ಮೈತ್ರಿಯ ಮಹತ್ವವನ್ನು ತಗ್ಗಿಸುವ ಇರಾದೆ  ಕಾಂಗ್ರೆಸ್‌ಗಿದೆ. 2009ರ ಚುನಾವಣೆಯಲ್ಲಿ ಕಾಂಗ್ರೆಸ್‌ ಇದೇ ರೀತಿಯೇ ಮಾಡಿ 80ರಲ್ಲಿ 21 ಸ್ಥಾನಗಳನ್ನು ಗೆದ್ದಿತ್ತು. ಆದರೆ 2009ರ ಚುನಾವಣೆಯು ಚತುಷೊRàನ ಸ್ಪರ್ಧೆಯಾಗಿತ್ತು, ಆಗ ಯುಪಿಎ 1 ಸರ್ಕಾರವು “ನರೇಗಾ’ ಮತ್ತು “ಸಾಲಮನ್ನಾ ಯೋಜನೆ’ಯಿಂದ ಉತ್ತರಪ್ರದೇಶದಲ್ಲಿ ಪ್ರಸಿದ್ಧಿಪಡೆದಿತ್ತು. ಕಾಂಗ್ರೆಸ್‌ ಆ ಸಮಯದಲ್ಲಿ ಸಮಾಜವಾದಿ ಪಕ್ಷ ಎದುರಿಗಿಟ್ಟಿದ್ದ ಮೈತ್ರಿಯ ಪ್ರಸ್ತಾಪವನ್ನು ತಳ್ಳಿಹಾಕಿತ್ತು. ಅತ್ತ ಬಿಜೆಪಿಯೂ ಬಹಳ ದುರ್ಬಲವಾಗಿತ್ತು.  ಇದು 2019. 2009 ಅಲ್ಲ. ಆದರೂ ಯಾರಿಗೆ ಗೊತ್ತು, ಪ್ರಿಯಾಂಕಾ ಉತ್ತರಪ್ರದೇಶದಲ್ಲಿ  ತಮ್ಮ ಪಕ್ಷವನ್ನು “ಬಿಜೆಪಿಯ ರಾಷ್ಟ್ರೀಯ ಎದುರಾಳಿ’ ಎಂದು ಬಿಂಬಿಸುವಲ್ಲಿ ಯಶಸ್ವಿಯಾಗಿ ಕೆಲವು ಅಚ್ಚರಿಯ ಸ್ಥಾನಗಳನ್ನು ಗೆಲ್ಲಬಹುದೇನೋ? 

ಒಂದು ವೇಳೆ ಕಾಂಗ್ರೆಸ್‌ ಪ್ರಿಯಾಂಕಾ ಗಾಂಧಿಯವರನ್ನು ವಾರಾಣಸಿಯಲ್ಲಿ ನರೇಂದ್ರ ಮೋದಿಯವರ ವಿರುದ್ಧ ಸ್ಪರ್ಧೆಗೆ ನಿಲ್ಲಿಸಿತೆಂದರೆ, ಕಾಂಗ್ರೆಸ್‌ಗೆ ಯುಪಿಯಲ್ಲಿ ತುಸು ಲಾಭವಾಗಬಹುದು. ಆದರೆ ಇದರಿಂದ ಅನ್ಯ ಪಕ್ಷಗಳಿಗೆ ಹಾನಿಯಾಗುತ್ತದಾದರೂ, ಆ ಹಾನಿಯ ಪ್ರಮಾಣ ಚಿಕ್ಕದಾಗಿರುತ್ತದೆ. 

ಪ್ರಿಯಾಂಕಾರತ್ತ ಬ್ರಾಹ್ಮಣರು?
ಉತ್ತರಪ್ರದೇಶದ ಬ್ರಾಹ್ಮಣರು ಕಾಂಗ್ರೆಸ್‌ ಪರವಿದ್ದಾರೆ ಎನ್ನಲಾಗುತ್ತದೆ. ಹಾಗಿದ್ದರೆ ಪ್ರಿಯಾಂಕಾರ ಪ್ರವೇಶದಿಂದಾಗಿ ಬ್ರಾಹ್ಮಣರ ಮತಗಳು ಕಾಂಗ್ರೆಸ್‌ನತ್ತ  ಹರಿದುಹೋಗಬಹುದಾ? ಹೋಗಲೂಬಹುದು. ಏಕೆಂದರೆ, ಈಗ ಉತ್ತರಪ್ರದೇಶದ ರಾಜಕೀಯದಲ್ಲಿ ಠಾಕೂರರ ಪ್ರಾಬಲ್ಯವೇ ಅಧಿಕವಿದೆ (ಮುಖ್ಯಮಂತ್ರಿಯವರ ಜಾತಿ). ಆದರೂ, ಉತ್ತರಪ್ರದೇಶದ ಬ್ರಾಹ್ಮಣರು ಕಾಂಗ್ರೆಸ್‌ ಪರವಿದ್ದಾರೆ ಎನ್ನುವ ಅಂಶವನ್ನು ಉತ್ಪ್ರೇಕ್ಷೆ ಮಾಡುತ್ತಾ ಬರಲಾಗಿದೆ. ಸತ್ಯವೇನೆಂದರೆ, ಬಹಳಷ್ಟು ಬ್ರಾಹ್ಮಣರು ಹಿಂದುತ್ವ ರಾಜಕಾರಣದ ಪರವಿದ್ದಾರೆ. ಬಿಜೆಪಿ ದುರ್ಬಲವಾಗಿದ್ದಾಗ ಮಾತ್ರ ಅವರಿಗೆ ಕಾಂಗ್ರೆಸ್‌ ಒಂದು ಆಯ್ಕೆಯಾಗುತ್ತದೆ. 

ಕಳೆದ ವರ್ಷ ಫ‌ೂಲ್ಪುರ ಉಪಚುನಾವಣೆಯಲ್ಲಿ ಕಾಂಗ್ರೆಸ್‌, ಮನೀಷ್‌ ಮಿಶ್ರಾ ಎಂಬ ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆ ಅಭ್ಯರ್ಥಿ 20 ಸಾವಿರಕ್ಕಿಂತಲೂ ಕಡಿಮೆ ಮತಗಳನ್ನು ಪಡೆದ, ಆ ಕ್ಷೇತ್ರದಲ್ಲಿ ಎಸ್‌ಪಿ-ಬಿಎಸ್‌ಪಿ ಅಭ್ಯರ್ಥಿ ಪಡೆದದ್ದು 3.42 ಲಕ್ಷ ಮತಗಳನ್ನು! ಇದು ಫ‌ೂಲ್ಪುರದ ಕಥೆಯಾಯಿತು, ಅಂದರೆ ಖುದ್ದು ಜವಾಹರ್‌ಲಾಲ್‌ ನೆಹರೂ ಅವರ ಸ್ಥಾನ! 

ಇದೆಲ್ಲದರ ಹೊರತಾಗಿಯೂ, ಒಂದು ವೇಳೆ ಬ್ರಾಹ್ಮಣರು ಬೃಹತ್‌ ಸಂಖ್ಯೆಯಲ್ಲಿ ಕಾಂಗ್ರೆಸ್‌ನತ್ತ ಹರಿದುಹೋದರೆ, ಬಿಜೆಪಿಗಂತೂ ಪೆಟ್ಟು ಬೀಳುತ್ತ¤ದೆ ಮತ್ತು ಎಸ್‌ಪಿ-ಬಿಎಸ್‌ಪಿಗೆ ಸಹಾಯವಾಗುತ್ತದೆ. ಆದರೆ ಈ ಮತಗಳು ಕಾಂಗ್ರೆಸ್‌ ಪಾಲಿಗೆ “ಸ್ಥಾನ’ಗಳಾಗಿ ಪರಿವರ್ತನೆಯಾಗುವುದಿಲ್ಲ. 

ಪ್ರಿಯಾಂಕಾರತ್ತ ಒಬಿಸಿ?
ಕಾಂಗ್ರೆಸ್‌ ಪಕ್ಷ ಇತರೆ ಹಿಂದುಳಿದ ವರ್ಗ ಅಥವಾ ದಲಿತರ ಮತಗಳನ್ನು ಪಡೆಯುವಂಥ ಅಚ್ಚರಿಯ ನಡೆಯಿಡುವ ಸಾಧ್ಯತೆ ಇದೆ. ಈ ವಿಷಯದಲ್ಲಿ ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ಗೆ ಪುನರುಜ್ಜೀವ ನೀಡುವ ದೀರ್ಘಾವಧಿ ಯೋಜನೆಯ ಭಾಗವಾಗಿರಬಹುದು. 

ಆದರೆ ಈ ಬದಲಾವಣೆ ಪ್ರಸಕ್ತ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮತ್ತು ಪ್ರಣಾಳಿಕೆಯಲ್ಲಿನ ಭರವಸೆಗಳ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ಕಾಂಗ್ರೆಸ್‌ ಏನಾದರೂ ಇತರೆ ಹಿಂದುಳಿದ ವರ್ಗಗಳಿಗೆ 52 ಪರ್ಸೆಂಟ್‌ ಮೀಸಲಾತಿ ಕೊಡಬೇಕೆಂಬ ವಾದಕ್ಕೆ ಬೆಂಬಲ ನೀಡಿತೆಂದರೆ, ಆಗ ನಿಜಕ್ಕೂ ಎಸ್‌ಪಿ-ಬಿಎಸ್‌ಪಿ ಮೈತ್ರಿಗೆ ಬಲವಾದ ಪೆಟ್ಟು ಬೀಳಲಾರಂಭಿಸಬಹುದು. 

2014ರಿಂದ ಯಾದವೇತರ ಹಿಂದುಳಿದ ವರ್ಗಗಳು ಬಿಜೆಪಿಯೊಂದಿವೆ. ಆದರೀಗ ಆಡಳಿತವಿರೋಧಿ ಅಲೆ ಮತ್ತು ಮೇಲ್ಜಾತಿಯ ಮುಖ್ಯಮಂತ್ರಿಯೆಡೆಗಿನ ಅಸಮಾಧಾನದಿಂದಾಗಿ , ಇತರೆ ಹಿಂದುಳಿದ ವರ್ಗಗಳು ಎಸ್‌ಪಿ-ಬಿಎಸ್‌ಪಿಯತ್ತ ಹರಿದುಹೋಗಬಹುದು. ಯಾದವೇತರ ಒಬಿಸಿಗಳ ಚಿಕ್ಕ ಸ್ಥಾನಪಲ್ಲಟವೂ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಸೀಟು ಕಳೆದುಕೊಳ್ಳುವಂತೆ ಮಾಡಬಲ್ಲದು. ಒಂದು ವೇಳೆ ಕಾಂಗ್ರೆಸ್‌ ಏನಾದರೂ ಈ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಿತೆಂದರೆ, ಎಸ್‌ಪಿ-ಬಿಎಸ್‌ಪಿ ಮೈತ್ರಿಯ ಅಗಾಧ ದಾಳಿಯಿಂದ ಬದುಕುಳಿಯಲು ಬಿಜೆಪಿಗೆ ಸಾಧ್ಯವಾಗಿಬಿಡುತ್ತದೆ! ಬಿಜೆಪಿಗೆ ಸಹಾಯವಾಗುವಂಥ ಇಷ್ಟೊಂದು ದೊಡ್ಡ ರಿಸ್ಕ್ ಅನ್ನು ತೆಗೆದುಕೊಳ್ಳುವುದೇ ಕಾಂಗ್ರೆಸ್‌? ಅಸಂಭವವೆನಿಸುತ್ತಿದೆ…
(ಕೃಪೆ: ದಿ ಪ್ರಿಂಟ್‌)

– ಶಿವಂ ವಿಜ್‌

Advertisement

Udayavani is now on Telegram. Click here to join our channel and stay updated with the latest news.

Next