Advertisement

ಪಕೋಡಾ ಮಾರುವುದು ಭಿಕ್ಷಾಟನೆಯಾ?

03:40 PM Feb 07, 2018 | Team Udayavani |

ಪಕೋಡಾ ಮಾರುವುದು, ಭಿಕ್ಷೆ ಬೇಡುವುದಕ್ಕೆ ಸಮ ಎನ್ನಿಸುವುದು ಆ ಮಾನಸಿಕತೆಗೆ ಕಾರಣ. ಇಂದು ಪಕೋಡಾ ಮಾರುವವನು ನಾಳೆ ಹೋಟೆಲ್‌ ಮಾಲೀಕನಾಗಿಬಿಟ್ಟರೆ, ಉದ್ಯೋಗ ಸೃಷ್ಟಿಯಾಗಿಲ್ಲವೆಂದು ಮನರೆಗಾ ಅಡಿ ಕೈ ಒಡ್ಡುವುದಿಲ್ಲ. ನಿಮ್ಮ ಬಿಟ್ಟಿ ಭಾಗ್ಯಗಳಿಗಾಗಿ ಕಾದು ಕೂರುವುದಿಲ್ಲ. ನೀವು ಮಹಾತ್ಮಾ ಗಾಂಧಿಯ ವಂಶಸ್ಥರೆಂದು ಮೋಸ ಹೋಗುವುದಿಲ್ಲ, ಅಜ್ಞಾನಿ ಯಾಗುಳಿದು ನಿಮಗೆ ವೋಟೊತ್ತುವುದಿಲ್ಲ!

Advertisement

ಒಬ್ಟಾತ ಇಂಗ್ಲೆಂಡಿನ ಒಂದು ಚರ್ಚಿನಲ್ಲಿ ಗಂಟೆ ಬಾರಿಸುವ ಕೆಲಸ ಮಾಡುತ್ತಿರುತ್ತಾನೆ. ಒಮ್ಮೆ ಫಾದರ್‌ ಬಂದು, “”ನೋಡು ತಮ್ಮ, ನೀನು ಇನ್ನು ಮುಂದೆ ಇಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಕನಿಷ್ಠ ಎಂಟನೆಯ ತರಗತಿಯಾದರೂ ಮುಗಿಸಿರಬೇಕೆಂಬ ಹೊಸ ನಿಬಂಧನೆಯನ್ನು ಹಾಕಲಾಗಿದೆ. ಸಾರಿ!” ಎನ್ನುತ್ತಾರೆ‡. ಶಾಲೆಗೆ ಹೋಗದ ತನಗೆ ಇದ್ದ ಕೆಲಸವೂ ಇಲ್ಲದಂತಾಯಿತಲ್ಲ ಎಂದು ಬೇಸರದಿಂದ ಆಚೆ ಬಂದು, ಸಿಗರೆಟ್‌ ಹತ್ತಿಸಲು ಪ್ರಯತ್ನ ಮಾಡುತ್ತಾನೆ. ಜೇಬಲ್ಲಿ ಕಡ್ಡಿಪೆಟ್ಟಿಗೆ ಇಲ್ಲ. ಅತ್ತ ಇತ್ತ ತಿರುಗಿ ನೋಡಿದರೆ, ಕಾಣುವಷ್ಟು ದೂರದುದ್ದಕ್ಕೆ ಒಂದೂ ಪೆಟ್ಟಿಗೆ ಅಂಗಡಿ ಇಲ್ಲ. ಸಣ್ಣದೊಂದು ಅಂಗಡಿ ಹಾಕಿದರೆ? ವರ್ಷಗಳು ಉರುಳುತ್ತಿದ್ದಂತೆ ಆತ ಒಂದು ಸೂಪರ್‌ ಮಾರ್ಕೆಟ್‌ ಸರಣಿಗೇ ಒಡೆಯನಾಗುತ್ತಾನೆ. ಮಾಲೀಕರನ್ನು ಸಂದರ್ಶನ ಮಾಡಲು ಬಂದ ಒಬ್ಬ ಪತ್ರಕರ್ತ “”ಸರ್‌, ನಿಮ್ಮ ಕ್ವಾಲಿಫಿಕೇಷನ್‌ ಏನು?” ಎಂದಾಗ, “”ಎಂಟನೆ ಕ್ಲಾಸ್‌ ಫೇಲು” ಎನ್ನುತ್ತಾನೆ! 

“”ಹೌದಾ! ಅಷ್ಟಕ್ಕೆ ಹೀಗಾ? ನೀವೇನಾದ್ರು ಓದಿ ದೊಡ್ಡವರಾಗಿದ್ದರೆ ಇನ್ನೆಷ್ಟು ಸಾಧಿಸುತ್ತಿದ್ದಿರೋ?” ಎಂದಿದ್ದಕ್ಕೆ ನಕ್ಕು, “”ಹಾಂ? ಚರ್ಚಿನಲ್ಲಿ ಗಂಟೆ ಬಾರಿಸುತ್ತಿದ್ದೆ!” ಎನ್ನುತ್ತಾನೆ. ಸಾಮರ್ಸೆಟ್‌ ಮಾಮ್‌ರ ಈ ಸಣ್ಣಕಥೆಯನ್ನು ಚಿಕ್ಕ ವಯಸ್ಸಿನಲ್ಲಿ ಓದಿದ್ದ ನೆನಪು. ವಿಚಾರ ಇಷ್ಟೆ. Enterpriseನಿಂದ Entrepreneur ಹುಟ್ಟಿಕೊಂಡದ್ದು. ಉದ್ಯಮಿ ಹುಟ್ಟುವುದು ಉದ್ಯಮಶೀಲತೆಯಿಂದ. ಶಿಕ್ಷಣ, ಹೂಡಿಕೆ, ವ್ಯಾಪಾರೋದ್ಯಮ ಎಲ್ಲವೂ ನಂತರವೇ. ಎಲ್ಲದಕ್ಕಿಂತ ಮೊದಲು ಹಸಿದ ಹೊಟ್ಟೆ ಮತ್ತು ಸಾಧಿಸುವ ಕಿಚ್ಚು ಮನುಷ್ಯನಿಗೆ ಅಗತ್ಯ. ಹೆಸರಿನ ಹಿಂದೆ ಹತ್ತು ಡಿಗ್ರಿಗಳನ್ನು ಹೊತ್ತು, ಶಕ್ತಿ ಇದ್ದಷ್ಟು ಕಾಲ ಬೇರೆಯವರಿಗಾಗಿ ಹೆಣ ಹೊತ್ತಿದ್ದೇನೆ, ನೀನು ಹಾಗಾಗಬೇಡ, ಎಷ್ಟು ಬೇಕೋ ಅಷ್ಟು ಓದು. ಆದರೆ ಸ್ವಾವಲಂಬಿಯಾಗು, ಸಂಬಳಕ್ಕೆ ದುಡಿಯುವ ಬದುಕು ನಿನಗೆ ಬೇಡ ಎಂದು ನನ್ನ ಮಧ್ಯಮವರ್ಗದ ಬ್ರಾಹ್ಮಣ ಬ್ಯಾಂಕ್‌ ಉದ್ಯೋಗಿ ಅಪ್ಪ ಸದಾ ಹೇಳಿದ್ದುಂಟು. ತನಗೆ ತಾನೆ ಬಾಸ್‌ ಆಗಿರುವುದಕ್ಕಿಂತ ಸುಖ ಇನ್ನೊಂದಿಲ್ಲ. ಅವರ ಕಾಲಕ್ಕೆ ಎಂಬಿಎನೂ ಇರಲಿಲ್ಲ, ತೆರೆದ ಮಾರುಕಟ್ಟೆ/ಉದಾರೀಕರಣಗಳೂ ಇರಲಿಲ್ಲ.

ಮನುಷ್ಯ ಎಂದರೆ ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮಗಳ ಸಮ್ಮಿಲನ ಎನ್ನುತ್ತಾರೆ ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯ ತಮ್ಮ ಏಕಾತ್ಮ ಮಾನವ ದರ್ಶನದಲ್ಲಿ. ನಮ್ಮ ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮಗಳು…ಧರ್ಮ, ಅರ್ಥ, ಕಾಮ, ಮೊಕ್ಷಗಳೆಂದು ಚತುರ್ವಿಧ ಪುರುಷಾರ್ಥಗಳ ಸಾಧನೆಯನ್ನು ಬಯಸುತ್ತವೆ. ಅರ್ಥ ಪುರುಷಾರ್ಥ ಸಾಧನೆಯ ಬಗ್ಗೆ ನಮಗೆ ಯಾವುದೇ ಸಂಕೋಚವಿಟ್ಟುಕೊಳ್ಳುವ ಅಗತ್ಯವಿಲ್ಲ. 

ಹಣದ ಅವಶ್ಯಕತೆ ಮನುಷ್ಯನಿಗೆ ಸಹಜ ಮತ್ತು ಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದೂ ಸಹಜವೇ. ನಮ್ಮ ಅಗತ್ಯಕ್ಕೆ ಬೇಕಿರುವಷ್ಟು ಸ್ವಂತಕ್ಕೆ ಬಳಸಿ, ಹೆಚ್ಚು/ಶೇಷವನ್ನು ಸಮಾಜದ ಪಾರುಪತ್ಯಗಾರನಾಗಿ, ಧರ್ಮದರ್ಶಿಯಾಗಿ ನಿರ್ವಹಿಸಬೇಕೆಂಬುದು ಉಪಾಧ್ಯಾಯರ ಅದ್ಭುತ ಕಲ್ಪನೆ. ತಮ್ಮ ಅರ್ಥಾಯಾಮದಲ್ಲಿ, ಈ ವಿಚಾರದ ಕುರಿತು ಸುದೀರ್ಘ‌ವಾಗಿ ವಿವರಿಸುತ್ತಾರೆ. 

Advertisement

ಮನುಷ್ಯನಿಗೆ ಕಾಮನೆಗಳಿರಬಾರದು, ಹಣ ಗಳಿಸಬಾರದೆಂದು ಸನಾತನ ಧರ್ಮದ ಯಾವ ಗ್ರಂಥವೂ ಹೇಳುವುದಿಲ್ಲ. ಗಳಿಸಿದರಷ್ಟೇ ಸಾಕೆನ್ನಿಸುವುದು, ಸಾಕೆನ್ನಿಸಿದಾಗಲೇ ಅದಕ್ಕಿಂತ ಮಿಗಿಲಾದುದರ ಹುಡುಕಾಟ ಪ್ರಾರಂಭವಾಗುವುದು. ಆತ್ಮಜ್ಞಾನದ ಪರಿಚಯ ಜೀವನ್ಮುಕ್ತಿಯ ಸಾಧನೆ ಎಲ್ಲವೂ ಆಗುವುದು. ಹಣ ಅಥವಾ ಕಾಂಚಾಣದ ಸಂಪಾದನೆಗೆ ತಡೆ ಇಲ್ಲ ಎಂದ ಮೇಲೆ, ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ. “”ಕಳ್ಳತನ, ಸುಳ್ಳು, ಮೋಸ, ಕೊಲೆ, ಸುಲಿಗೆ” ಮಾಡದೆ ಸಂಪಾದನೆ ಮಾಡುವುದಾದರೆ ಯಾವ ಕೆಲಸ ಮಾಡಿದರೂ ತಪ್ಪಿಲ್ಲ ಅಂತ ಅಮ್ಮ ಚಿಕ್ಕಂದಿನಲ್ಲಿ ಹೇಳುತ್ತಿದ್ದಳು. ಕೂಲಿನಾದ್ರು ಮಾಡು, ಯಾರ ಮುಂದೆಯೂ ಕೈ ಒಡ್ಡಬೇಡ ಎಂದಿದ್ದಳು. ಇವೆಲ್ಲವೂ ಸಾರ್ವತ್ರಿಕ, ಸಾರ್ವಕಾಲಿಕ, ಸನಾತನ ಸತ್ಯಗಳು. 

ಒಂದು ರಾಜಕೀಯ ಪಕ್ಷದ ಮಾನಸಿಕತೆ, ಸಿದ್ಧಾಂತ- ಅದರ ನೀತಿಗಳ ಮೂಲಕ ವ್ಯಕ್ತವಾಗುತ್ತದೆ. 1950ರಲ್ಲಿ Sovereign Democratic Republic ಆಗಿದ್ದ ಭಾರತ ಆಳುವ ಕುಟುಂಬ ಒಂದೇ ಆಗಿ ಉಳಿಯಬೇಕೆನ್ನುವ ಕಾರಣಕ್ಕೆ 1976ರಲ್ಲಿ Sovereign Socialist Secular Democratic Republic ಆಯಿತು. ಸಂಪತ್ತು ಆಳುವವರ ಕೈಯಲ್ಲಿ ಕೇಂದ್ರೀಕೃತವಾಗಿರಬೇಕು! ಎಲ್ಲ ಭಾರತೀಯರೂ ಉದ್ಯಮಶೀಲರಾಗಿಬಿಟ್ಟರೆ, ಸ್ವಾವಲಂಬಿಗಳಾಗಿಬಿಟ್ಟರೆ, ಒಂದೇ ಕುಟುಂಬದ ಸದಸ್ಯರು ಮತ್ತೆ ಮತ್ತೆ ಪ್ರಧಾನಿಗಳಾಗೋದು ಹೇಗೆ? ಹಾಗಾಗಿ ಸಮಾಜವಾದದ ಸೋಗಿನಲ್ಲಿ ಲೈಸೆನ್ಸ್‌ ರಾಜ್‌, ರಾಷ್ಟ್ರೀಕರಣ, ಪ್ರಿವಿ ಪರ್ಸ್‌ ರದ್ದು, ಎಲ್ಲರೂ ಕಾರ್ಮಿಕರಾಗಿ…

ಅದಕ್ಕೇ 75 ವರ್ಷಗಳ ನಂತರವೂ, ಇಂದಿಗೂ ಎಷ್ಟೇ ಅನರ್ಹನಾಗಿದ್ದರೂ ಮರಿಮಗನೆ ಪಟ್ಟ(ಕ್ಷ)ದ ರಾಜ! ಸಂಭಾವ್ಯ ಪ್ರಧಾನಿ? ನಮ್ಮ ಭಾವನವರು/ಆರ್‌ಎಸ್‌ಎಸ್‌ನ ಹಿರಿಯ ಸ್ವಯಂ ಸೇವಕರು. ಎಳಂದೂರು ರಂಗನಾಥ್‌ ಬಹಳ ಸರಳವಾಗಿ, “”ಅವರು ಬಡತನ ಹಂಚುತ್ತಾರೆ, ನಾವು ಶ್ರೀಮಂತಿಕೆಯನ್ನು ಹಂಚುತ್ತೇವೆ” ಎನ್ನುತ್ತಾರೆ. ಎಡ/ ಕಾಂಗ್ರೆಸ್‌ ಮತ್ತು ಬಲದ ಸಿದ್ಧಾಂತದ ವ್ಯತ್ಯಾಸವನ್ನು ವಿವರಿಸುವಾಗ. 

ಬಡತನ ಹೋಗಿಸಿ, ಕೂಲಿಗಾಗಿ ದುಡಿಯುವುದನ್ನು ಬಿಟ್ಟು ಸ್ವಂತ ಕಾಲಿನ ಮೇಲೆ ನಿಂತರೆ ಚಹಾ ಮಾರುವವನು ಪ್ರಧಾನಿಯಾಗಿಬಿಡುತ್ತಾನೆಂಬ ಭಯ, ಕಾಂಗ್ರೆಸ್‌ನ ಉನ್ನತವಾದಿ ರಾಜಕಾರಣಿಗಳಿಗೆ!

ಪಕೋಡಾ ಮಾರುವುದು, ಭಿಕ್ಷೆ ಬೇಡುವುದಕ್ಕೆ ಸಮ ಎನ್ನಿಸುವುದು ಆ ಮಾನಸಿಕತೆಗೆ ಕಾರಣ. ಇಂದು ಪಕೋಡಾ ಮಾರುವವನು ನಾಳೆ ಹೋಟೆಲ್‌ ಮಾಲೀಕನಾಗಿಬಿಟ್ಟರೆ, ಉದ್ಯೋಗ ಸೃಷ್ಟಿಯಾಗಿಲ್ಲವೆಂದು ಮನೆÅಗಾ ಅಡಿ ಕೈ ಒಡ್ಡುವುದಿಲ್ಲ. ನಿಮ್ಮ ಬಿಟ್ಟಿ ಭಾಗ್ಯಗಳಿಗಾಗಿ ಕಾದು ಕೂರುವುದಿಲ್ಲ. ನೀವು ಮಹಾತ್ಮಾ ಗಾಂಧಿಯ ವಂಶಸ್ಥರೆಂದು ಮೋಸ ಹೋಗುವುದಿಲ್ಲ, ಅಜ್ಞಾನಿಯಾಗುಳಿದು ನಿಮಗೆ ವೋಟೊತ್ತುವುದಿಲ್ಲ!

ಉದಾರೀಕರಣ, ಖಾಸಗೀಕರಣ, ಆಧುನೀಕರಣಕ್ಕೆ ನಿಜವಾದ ಅರ್ಥ ಸಿಗುವುದು ಸಾಮಾನ್ಯಾತಿ ಸಾಮಾನ್ಯನೊಬ್ಬ ತನ್ನ ಕನಸನ್ನು ಕಟ್ಟಿಕೊಂಡಾಗ. ಮುದ್ರಾ ಯೋಜನೆ, ದೀನ್‌ ದಯಾಳ್‌ ಉಪಾಧ್ಯಾಯರ, ಏಕಾತ್ಮಮಾನವ ದರ್ಶನವನ್ನು ಸಾಕಾರವಾಗಿಸಿರುವ ಒಂದು ಮಹತ್ವಾಕಾಂಕ್ಷೆಯ ಯೋಜನೆ. ಎಲ್ಲರೂ ಉದ್ಯೋಗವನ್ನೇ ನೆಚ್ಚಿ ಕುಳಿತರೆ ಹೇಗೆ? ಉದ್ಯೋಗ ಪಡೆಯುವುದಕ್ಕಿಂತ ಯುವ ಭಾರತೀಯ ಉದ್ಯೋಗವನ್ನು ಸೃಷ್ಟಿಸಬೇಕು, ಇದು ಮೋದೀಜಿಯವರ ಉದ್ದೇಶ. ಸರಿ, ಕನಸು ಕಾಣೋಕ್ಕೆ ಶುಲ್ಕವಿಲ್ಲ, ಆದರೆ ನನಸಾಗಿಸಿಕೊಳ್ಳುವುದಕ್ಕೆ ಹಣ ಬೇಕಲ್ಲ. ಮನೆ/ಭೂಮಿ ಒತ್ತೆ ಇಡಲು ಇದ್ದಿದ್ದರೆ ಕೆಲಸದ ಹುಡುಕಾಟವೇ ಇರುತ್ತಿರಲಿಲ್ಲವಲ್ಲ! ನನ್ನನ್ನು ನಂಬಿ ಯಾರು ಸಾಲ ಕೊಡುತ್ತಾರೆ? ಯಾರು ಗ್ಯಾರಂಟಿ? ಅಂತಹ ಉದ್ಯಮಶೀಲ ಯುವಕರಿಗೆ, ಪ್ರಧಾನಿಗಳೇ ಗ್ಯಾರಂಟಿ! ಮುದ್ರಾ ಯೋಜನೆ ಹುಟ್ಟಿದ್ದು ಹಾಗೆ. ಜನಧನ ಯೋಜನೆಗೂ ಅದೇ ಅಡಿಪಾಯ. 

ಅಕೌಂಟ್‌ ಇಲ್ಲದವರಿಗೆ ಜೀರೋ ಬ್ಯಾಲೆನ್ಸ್‌ ಅಕೌಂಟ್‌, ಗ್ಯಾರಂಟಿ/ಶೂರಿಟಿಗಳಿಲ್ಲದೆ ಸಣ್ಣ ವ್ಯಾಪಾರಸ್ಥರಿಗೆ ಬ್ಯಾಂಕುಗಳು ನೀಡುವ ಸಾಲ-ಶಿಶು, ತರುಣ್‌, ಕಿಶೋರ್‌(50000  -1000000 ರೂಪಾಯಿ ಅಷ್ಟು) ಈವರೆಗೆ 10.38 ಕೋಟಿಯಷ್ಟು ಫ‌ಲಾನುಭವಿಗಳು 4.6 ಲಕ್ಷ ಕೋಟಿಯಷ್ಟು ಸಾಲವನ್ನು ಪಡೆದಿರುತ್ತಾರೆ, 2014-2017ರವರೆಗೆ.

ಬಡವರ ಕಲ್ಯಾಣ ಎನ್ನುವ ಹೆಸರಿನಲ್ಲಿ ಪಾಪ್ಯುಲಿಸ್ಟ್‌ ಕಾರ್ಯಕ್ರಮಗಳ ಆಮಿಷ ಒಡ್ಡಿ ಬಡವರನ್ನು ಬಡವರಾಗಿಯೇ ಇಡುವುದು, ಮಧ್ಯಮ ವರ್ಗ/ಕಾರ್ಮಿಕ ವರ್ಗವನ್ನು ಆಜೀವ ಪರ್ಯಂತ ಸಾಲದ  ಬವಣೆಯಲ್ಲೇ ಮುಳುಗಿಸಿಡುವುದು ಮತ್ತು ಸರ್ಕಾರಿ ಹಣದಿಂದ ತಮ್ಮ ಜೇಬು ತುಂಬಿಸಿಕೊಂಡು ಸದಾಕಾಲ ತಾವೇ ಅಧಿಕಾರದಲ್ಲಿರುವುದು, ಅವರ ರಾಜಕೀಯ ನೀತಿ ಮತ್ತು ಪ್ರತೀತಿ. (ಆಲೋಚಿಸಿ ನೋಡಿ. 1990ರ ಪ್ರಾರಂಭದಲ್ಲಿ ಭಾರತ ತನ್ನ ಮಾರುಕಟ್ಟೆಗಳನ್ನು ತೆರವುಗೊಳಿಸಿದಾಗ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್‌ ಆದರೂ ಗದ್ದುಗೆ ಹತ್ತಿರ ಕೂಡ ನೆಹರು-ಗಾಂಧಿಗಳ ಛಾಯೆ ಇರಲಿಲ್ಲ) ಸೆಡ್ಡು ಹೊಡೆದು, ಎಲ್ಲರೂ ಕನಸು ಕಾಣಲರ್ಹರು, ಮೇಕ್‌ ಇನ್‌ ಇಂಡಿಯಾ, ಸ್ಟಾಂಡ್‌ ಅಪ್‌ ಇಂಡಿಯಾ, ಸ್ಟ್ರಾರ್ಟ್‌ ಅಪ್‌ ಇಂಡಿಯಾ ಕೌಶಲ್ಯಾಭಿವೃದ್ಧಿಗೆ ಒಂದು ವಿಶೇಷ ಸಚಿವಾಲಯ ಎಂದೊಬ್ಬ ನುಡಿದಾಗ…? ತಮ್ಮ ಕಾಲಿನ ಕೆಳಗಿದ್ದ ನೆಲವನ್ನು ಕಸಿದುಕೊಂಡಂತಾಗಿದೆ ಕಾಂಗ್ರೆಸ್ಸಿಗೆ. 

ಶಿಕ್ಷಣವನ್ನು ದಂಧೆಯ ಮಟ್ಟಕ್ಕಿಳಿಸಿ, ತಲೆಯಲ್ಲಿ ನಾಲ್ಕು ಅಕ್ಷರಗಳಿಲ್ಲದಿದ್ದರೂ, ಹೆಸರಿನ ಹಿಂದೆ ಅಕ್ಷರಗಳನ್ನು ಸೇರಿಸಿಕೊಂಡ ಯಾಂತ್ರಿಕ ಪಡೆಯನ್ನು ನಿರ್ಮಿಸಿ ಅವರಿಗೆ ನಿರುದ್ಯೋಗಿ ಎಂಬ ಕಿರೀಟ ತೊಡಿಸಿ ಕೂರಿಸಿರುವ ಕಾಂಗ್ರೆಸ್‌ ಸಂಸ್ಕೃತಿಯಿಂದ ಭಾರತದ ಜನತೆ ಮುಕ್ತರಾಗಬೇಕಿದೆ. ಭಾರತದ ಎಡಿಸನ್‌ ಎಂದು ಖ್ಯಾತರಾಗಿದ್ದ, ಆಟೊಮೊಬೈಲ್‌ ಎಂಜಿನಿಯರಿಂಗ್‌ ಜೀನಿಯಸ್‌ ಜಿ.ಡಿ. ನಾಯ್ಡು ಅವರಿಗೆ ಪ್ರಾಥಮಿಕ ಶಿಕ್ಷಣವಷ್ಟೇ ಇದ್ದದ್ದು ನೆನಪಾಗುತ್ತದೆ. ಬ್ರಿಟಿಷರ ಆಗಮನಕ್ಕೆ ಮುನ್ನ ನಮ್ಮ ರತ್ನಕೋಶದಲ್ಲಿ ನಿರುದ್ಯೋಗವೆಂಬ ಪದವಿತ್ತೇ? ಕಾಯಕವೇ ಕೈಲಾಸವೆಂದಿದ್ದರು ಬಸವೇಶ್ವರರು. ದುಡಿಮೆಯ ಘನತೆ(Dignity of labour) ಬಗ್ಗೆ ಸವಿಸ್ತಾರವಾಗಿ ಮಹಾತ್ಮಾ ಗಾಂಧೀಜಿ ಪ್ರತಿಪಾದಿಸಿದ್ದರು. ಸ್ವಾತಂತ್ರÂದ ನಂತರ ಕಾಂಗ್ರೆಸ್ಸನ್ನು ವಿಸರ್ಜಿಸಬೇಕೆಂದು ಗಾಂಧೀಜಿ ಅಭಿಪ್ರಾಯಪಟ್ಟಿದ್ದು ಯಾಕೆ ಎಂದು ಮತ್ತೂಮ್ಮೆ ನಿರೂಪಿತವಾಗಿದೆ. 

– ಮಾಳವಿಕ ಅವಿನಾಶ್‌

Advertisement

Udayavani is now on Telegram. Click here to join our channel and stay updated with the latest news.

Next