Advertisement

ಈ ತ್ಯಾಜ್ಯ ಘಟಕ ಮಾದರಿಯಾಗದೇ?

12:10 PM Apr 22, 2017 | Team Udayavani |

ಬೆಂಗಳೂರು: ನಗರದಲ್ಲಿನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿದರೆ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದು ಎಂಬುದನ್ನು ಸರ್ಕಾರದ ಸಂಸ್ಥೆಯೇ ಆದ ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ನಿಗಮದ (ಕೆಸಿಡಿಸಿ) ಘಟಕ ಸಾಬೀತುಪಡಿಸಿದೆ. ಸರ್ಕಾರ ಅಥವಾ ಬಿಬಿಎಂಪಿ ಇಂತಹುದೆ ಮತ್ತಷ್ಟು ಘಟಕಗಳನ್ನು ಸ್ಥಾಪಿಸಿದರೆ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಘಟಕಗಳಲೂ ಇದೇ ಮಾದರಿ ಅಳವಡಿಸಿಕೊಂಡರೆ ತ್ಯಾಜ್ಯ ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಲು ಸಾಧ್ಯ.

Advertisement

ಬೊಮ್ಮನಹಳ್ಳಿ ಬಳಿಯ ಕೂಡ್ಲು ಪ್ರದೇಶದಲ್ಲಿರುವ ಕೆಸಿಡಿಸಿ ಘಟಕದಲ್ಲಿ ವೈಜ್ಞಾನಿಕ ಸಂಸ್ಕರಣೆ ನಡೆಯುತ್ತಿದ್ದರೂ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಾರ್ವಜನಿಕರಲ್ಲಿ ಬೇರೆ ರೀತಿಯ ಗುಲ್ಲೆಬ್ಬಿಸಿ ಘಟಕ ಬಂದ್‌ ಮಾಡಿಸುವ ಪ್ರಯತ್ನ ನಡೆಸುತ್ತಿವೆ ಎಂಬ ದೂರಿದೆ. ಜತೆಗೆ ರಿಯಲ್‌ ಎಸ್ಟೇಟ್‌ ಮಾಫಿಯಾ ಕೂಡ ಘಟಕ ಎತ್ತಂಗಡಿ ಹುನ್ನಾರ ನಡೆಸುತ್ತಿದೆ ಎಂಬ ಮಾತುಗಳು ಇವೆ. ಇದರ ನಡುವೆಯೂ ಘಟಕ ಪರಿಣಾಮಕಾರಿಯಾಗಿ ನಿರ್ವಹಿಸಿ ಪ್ರತಿದಿನ ಸುಮಾರು 120ರಿಂದ 140 ಟನ್‌ ಹಸಿ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿದ್ದು, ಸುಮಾರು 35ರಿಂದ 50 ಟನ್‌ ಗೊಬ್ಬರ ಉತ್ಪಾದಿಸುತ್ತಿದೆ.

1975ರ ಹೊತ್ತಿನಲ್ಲಿ ನಗರದಿಂದ ದೂರದಲ್ಲಿದ್ದ ಕೂಡ್ಲುವಿನಲ್ಲಿ ಕೆಸಿಡಿಸಿ ಸ್ಥಾಪನೆಯಾಗಿತ್ತು. ಆಗ ಆ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ಗಳಿರಲಿ, ಜನವಸತಿಯಾಗಲಿ, ವಾಣಿಜ್ಯ ಚಟುವಟಿಕೆ, ಶಾಲೆಗಳು ಇರಲಿಲ್ಲ. ಸುಮಾರು 200ರಿಂದ 300 ಟನ್‌ ಸಾಮರ್ಥ್ಯದ ಈ ಕಾಂಪೋಸ್ಟ್‌ ಘಟಕದಲ್ಲಿ ನಗರದ ಎಲ್ಲಾ ಭಾಗದ ಕಸವನ್ನು ವಿಂಗಡಿಸಿ, ಕಾಂಪೋಸ್ಟ್‌ ಗೊಬ್ಬರವಾಗಿ ಪರಿವರ್ತಿಸಲಾಗುತ್ತಿತ್ತು. ಈಗ ಇದರ ಪ್ರಮಾಣವನ್ನು ಸುಮಾರು 500 ಟನ್‌ ಸಾಮರ್ಥ್ಯಕ್ಕೆ ಹೆಚ್ಚಿಸಲಾಗಿದೆ.

ಘಟಕದ ಸುತ್ತಮುತ್ತಲ ಪ್ರದೇಶಗಳಾದ ಸೋಮಸುಂದರಪಾಳ್ಯ, ಮುನೇಶ್ವರ ಲೇಔಟ್‌, ಹೊಸಪಾಳ್ಯ, ಕೂಡ್ಲು ಭಾಗದಲ್ಲಿ ಈ ಘಟಕದಿಂದ ಹೊರ ಬರುವ ವಾಸನೆ ತಡೆಗಟ್ಟುವ ಉದ್ದೇಶದಿಂದ ಸಾಕಷ್ಟು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾಂಪೋಸ್ಟ್‌ ಘಟಕದ ಸುತ್ತಲೂ ಕಾಂಪೌಂಡ್‌ ನಿರ್ಮಿಸಲಾಗಿದ್ದು, ಕಾಂಪೋಸ್ಟ್‌ ಗೊಬ್ಬರವಾಗಿ ಪರಿವರ್ತನೆ ಮಾಡುವ ಪ್ರಕ್ರಿಯೆ ಸಂದರ್ಭದಲ್ಲಿ ವಾಸನೆ ಹರಡದಂತೆ ಮೇಲ್ಛಾವಣಿಸಹಿತ ಶೆಡ್‌ ನಿರ್ಮಿಸಿ ಅದರೊಳಗೆ ಕೆಲಸ ನಿರ್ವಹಿಸಲಾಗುತ್ತಿದೆ. 

ಶೆಡ್‌ ಒಳಭಾಗದಲ್ಲಿ ಕೆಲಸ ನಿರ್ವಹಿಸುವ ನೌಕರರು, ಸಿಬ್ಬಂದಿಗೆ ತೊಂದರೆಯಾಗದಂತೆ ಶುದ್ಧಗಾಳಿ ಒಳಗೆ ಹೋಗಲು ಅನುಕೂಲ ಕಲ್ಪಿಸಲಾಗಿದೆ. ಜತೆಗೆ ವಾಸನೆ ನಿವಾರಣೆಗಾಗಿ ಪ್ರತಿದಿನ ಸೋಮಸುಂದರಪಾಳ್ಯ ಮತ್ತು ಮುನೇಶ್ವರ ಲೇಔಟ್‌, ಹೊಸಪಾಳ್ಯದಲ್ಲಿ ಬೆಳಗ್ಗೆ 9ರಿಂದ 10.30ರವರೆಗೆ ಹಾಗೂ ಮಧ್ಯಾಹ್ನ 2ರಿಂದ 3.30ರವರೆಗೆ ಲೆಮೆನ್‌ಗಾಸ್‌ ಎಂಬ ರಾಸಾಯನಿಕವನ್ನು ಎರಡು ವಾಹನಗಳಲ್ಲಿ  ಸಿಂಪಡಿಸಲಾಗುತ್ತಿದೆ. ನಿಗಮದ ಈ ಕಾರ್ಯವನ್ನು ಅಲ್ಲಿನ ಬಹುತೇಕ ನಿವಾಸಿಗಳು ಒಪ್ಪಿದ್ದಾರೆ ಎನ್ನುತ್ತಾರೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವೀರಭದ್ರಯ್ಯ. 

Advertisement

ಕಸದ ಮೂಲ: ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ನಿಗಮದ ಘಟಕಕ್ಕೆ ಬೊಮ್ಮನಹಳ್ಳಿ ವಿಭಾಗ ವ್ಯಾಪ್ತಿಯ ಪುಟ್ಟೇನಹಳ್ಳಿ, ಅರಕೆರೆ, ಬಿಳೇಕಹಳ್ಳಿ, ಮಂಗಮ್ಮನಪಾಳ್ಯ, ಎಚ್‌ಎಸ್‌ಆರ್‌ಲೇಔಟ್‌, ಬೊಮ್ಮನಹಳ್ಳಿ, ಹೊಂಗಸಂದ್ರ, ಸಿಂಗಸಂದ್ರ ವಾರ್ಡ್‌ಗಳು ಹಾಗೂ ಬಿಟಿಎಂ ಲೇಔಟ್‌ ವ್ಯಾಪ್ತಿಯ ಈಜೀಪುರ, ಮಡಿವಾಳ, ಆಡುಗೋಡಿ, ಜಕ್ಕಸಂದ್ರ, ಕೋರಮಂಗಲ ವಾರ್ಡ್‌ಗಳಿಂದ ಪ್ರತಿ ದಿನ ಸುಮಾರು 120ರಿಂದ 140 ಟನ್‌ ಹಸಿ ಕಸ ಬರುತ್ತಿದೆ. ಏಪ್ರಿಲ್‌ 1ರಿಂದ 17ರವರೆಗೆ  ಬಿಟಿಎಂ ಲೇಔಟ್‌ (ದಕ್ಷಿಣ ವಿಭಾಗ)ನಿಂದ 468 ಹಾಗೂ ಬೊಮ್ಮನಹಳ್ಳಿ ವಿಭಾಗದಿಂದ 1551 ಟನ್‌ ಸೇರಿದಂತೆ ಒಟ್ಟು 2019 ಟನ್‌ ಹಸಿ ಕಸ ಸಂಗ್ರಹವಾಗಿದೆ.

ಕಸದಿಂದ ಗೊಬ್ಬರ: ಕಾಂಪೋಸ್ಟ್‌ ಘಟಕಕ್ಕೆ ಬರುವ ಟನ್‌ಗಟ್ಟಲೆ ಹಸಿ ಕಸವನ್ನು ಮೊದಲ ಹಂತವಾಗಿ “ವಿಂಡ್ರೋಸ್‌’ಗಳಲ್ಲಿ (ಕಸ ಸಂಗ್ರಹಿಸುವ ತೊಟ್ಟಿಯ ಮಾದರಿಗಳು) ಸಂಗ್ರಹಿಸಲಾಗುತ್ತದೆ. ಆ ಕಸವನ್ನು ಪ್ರತಿ 7 ದಿನಕ್ಕೊಮ್ಮೆ ಒಂದು ವಿಂಡ್ರೋಸ್‌ನಿಂದ ಮತ್ತೂಂದು ವಿಂಡ್ರೋಸ್‌ಗೆ ಬದಲಿಸಲಾಗುತ್ತದೆ. ಈ ಪ್ರಕ್ರಿಯೆ ಸುಮಾರು ಎಂಟು ವಾರ (42ದಿನ) ನಡೆಯುತ್ತದೆ. ನಂತರ ಯಂತ್ರಗಳ ಮೂಲಕ ಕಸವನ್ನು 200 ಎಂಎಂ, 100ಎಂಎಂ, 60 ಎಂಎಂ ಹಾಗೂ ಕೊನೆಯದಾಗಿ 4 ಎಂಎಂ ಗಾತ್ರದ ಜರಡಿಯಲ್ಲಿ ಸ್ವತ್ಛಗೊಳಿಸಿ ಗೊಬ್ಬರವನ್ನು ಪ್ರತ್ಯೇಕಗೊಳಿಸಲಾಗುತ್ತದೆ. ಈ ಹಂತದಲ್ಲಿ ಘನತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಪುನಃ ಸಂಸ್ಕರಿಸುವ ಕಾರ್ಯ ನಡೆಯುತ್ತದೆ. 

ತ್ಯಾಜ್ಯನೀರು ನಿರ್ವಹಣೆಗೂ ಕೂಡ ಅತ್ಯುತ್ತಮ ವ್ಯವಸ್ಥೆಯನ್ನು ಘಟಕ ಹೊಂದಿದೆ. ಪ್ರತಿದಿನ ಸುಮಾರು 36 ಸಾವಿರಕ್ಕೂ ಅಧಿಕ ಲೀಟರ್‌ ನೀರು ಇಲ್ಲಿ ಉತ್ಪತ್ತಿಯಾಗುತ್ತಿದ್ದು, ಅದನ್ನು ಟ್ಯಾಂಕರ್‌ಗಳ ಮೂಲಕ ಕಾಡುಬೀಸನಹಳ್ಳಿಯಲ್ಲಿರುವ ಎಸ್‌ಟಿಪಿ ಘಟಕಕ್ಕೆ ಕಳುಹಿಸಿಕೊಡಲಾಗುತ್ತದೆ. ಈ ತ್ಯಾಜ್ಯನೀರನ್ನು ಸಂಸ್ಕರಿಸಿ, ಉದ್ಯಾನವನಗಳಿಗೆ ಅಥವಾ ಬೇರೆ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದಾಗಿ ಕೆಸಿಡಿಸಿ ಉತ್ಪಾದನಾ ಸಹಾಯಕ ಜೋತಯ್ಯ ಮಾಹಿತಿ ನೀಡಿದ್ದಾರೆ.

ಗೊಬ್ಬರಕ್ಕೆ ರಿಯಾಯಿತಿ ದರ: ಸರ್ಕಾರವೇ ನೇರವಾಗಿ ನಿರ್ವಹಿಸುತ್ತಿರುವ ಈ ಕಾಂಪೋಸ್ಟ್‌ ಘಟಕದಲ್ಲಿ ತಯಾರಾದ ಗೊಬ್ಬರ ಅತ್ಯುತ್ತಮದಾಗಿದ್ದು, ಸುಮಾರು 40 ವರ್ಷವಾದರೂ ಯಾವುದೇ ರೀತಿಯ ದೂರುಗಳು ಬಂದಿಲ್ಲ ಎನ್ನುವುದು ಮತ್ತೂಂದು ವಿಶೇಷ. ರೈತರಿಗೆ ಉಪಯೋಗವಾಗಲಿ ಎಂಬ ಕಾರಣಕ್ಕೆ ಕೇವಲ 800 ರೂ.ಗಳಿಗೆ(ಸಾರಿಗೆ ವೆಚ್ಚ ಸೇರಿ) ಒಂದು ಟನ್‌ ಗೊಬ್ಬರ ವಿತರಿಸಲಾಗುತ್ತಿದೆ.

ಇದಕ್ಕೆ ಸರ್ಕಾರ 800 ರೂ.ಗಳ ಸಬ್ಸಿಡಿ ಕೂಡ ನೀಡುತ್ತಿದೆ. ಒಂದು ವೇಳೆ ರೈತರೇ ಗೊಬ್ಬರ ಸಾಗಾಣಿಕೆ ವೆಚ್ಚ ಭರಿಸುವುದಾದರೆ ಕೇವಲ 125ರಿಂದ 150 ರೂ.ಗಳಿಗೆ ಒಂದು ಟನ್‌ ಕಾಂಪೋಸ್ಟ್‌ ಗೊಬ್ಬರ ನೀಡಲಾಗುತ್ತಿದೆ. ಪ್ರತಿ ತಿಂಗಳು ಈ ಘಟಕದಿಂದ ಸುಮಾರು 1100ರಿಂದ 1200 ಟನ್‌ ಗೊಬ್ಬರವನ್ನು ರೈತರು ಖರೀದಿ ಮಾಡುತ್ತಿದ್ದಾರೆ. ಪ್ರಸ್ತುತ ಘಟಕದಲ್ಲಿ “ಎ’ ಗ್ರೇಡ್‌ ಗೊಬ್ಬರ 1 ಸಾವಿರ ಟನ್‌ ಹಾಗೂ “ಬಿ’ ಗ್ರೇಡ್‌ ಗೊಬ್ಬರ 2 ಸಾವಿರ ಟನ್‌ನಷ್ಟು ಸಂಗ್ರಹವಿದೆ. 

ನಗರ ಬೆಳೆದಂತೆ ಈ ಕಾಂಪೋಸ್ಟ್‌ ಘಟಕಕ್ಕೆ ಅಂಟಿಕೊಂಡಂತೆ ಮನೆ, ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿದ್ದು, ಪ್ರಸ್ತುತ ಪ್ರತಿದಿನ ಒಂದಿಲ್ಲೊಂದು ಕಾರಣ ಮುಂದಿಟ್ಟುಕೊಂಡು ಕಾಂಪೋಸ್ಟ್‌ ಘಟಕದ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ. ಇವುಗಳ ಹಿಂದೆ ವಿವಿಧೆಡೆ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡುತ್ತಿರುವ ರಿಯಲ್‌ಎಸ್ಟೇಟ್‌ ಮಾಫಿಯಾದ ಕೈವಾಡ ಕೂಡ ದಟ್ಟವಾಗಿದ್ದು, ಕಸ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸುತ್ತಿರುವ ಈ ಘಟಕವನ್ನು ಮುಚ್ಚಿಸುವ ಹುನ್ನಾರ ನಡೆಸಲಾಗುತ್ತಿದೆ.

ಕಸವನ್ನು ವಿಂಡ್ರೋಸ್‌ನಿಂದ ಮತ್ತೂಂದು ವಿಂಡ್ರೋಸ್‌ಗೆ ಬದಲಿಸುವ ವೇಳೆ ಸ್ವಲ್ಪ ವಾಸನೆ ಬರುವುದು ನಿಜ. ಕೆಲವು ಸಂದರ್ಭದಲ್ಲಿ ಗಾಳಿ ಅಧಿಕವಾಗಿದ್ದಾಗ ಸುತ್ತಮುತ್ತ 100 ಅಡಿ ದೂರದವರೆಗೂ ವಾಸನೆ ಹರಡುತ್ತದೆ. ಅದನ್ನೇ ನೆಪ ಮಾಡಿ, ಘಟಕ ಮುಚ್ಚಬೇಕೆಂದು ಆಗ್ರಹಿಸುವುದರಲ್ಲಿ ಅರ್ಥವಿಲ್ಲ. ಶೇ.70ರಷ್ಟು ವಾಸನೆ ಬೀರುವ ಪ್ರಮಾಣ ಕಡಿಮೆಯಾಗಿದೆ ಎನ್ನುತ್ತಾರೆ ಹೊಸಹಳ್ಳಿ ಮತ್ತು ಸೋಮಸುಂದರ ಪಾಳ್ಯದ ನಿವಾಸಿಗಳು.

ಪ್ರತಿದಿನ ಘಟಕಕ್ಕೆ ಸಾಗಣೆಯಾಗುವ ಹಸಿ ಕಸದಲ್ಲಿ ಶೇ.60ರಷ್ಟು ಭಾಗ ಆರ್‌ಡಿಎಫ್ (ರೆಫ್ಯೂಸ್ಡ್ ಡಿರೈವ್‌xಫ‌ುÂಯೆಲ್‌) ಇರುತ್ತದೆ. ಅದನ್ನು ಪುನರ್ಬಳಕೆಗೆ ಯೋಗ್ಯವಾಗುವಂತೆ ಸಂಸ್ಕರಿಸಿ ಇಡಲಾಗುತ್ತಿದ್ದು, ಸಿಮೆಂಟ್‌, ರಸ್ತೆ ನಿರ್ಮಾಣದಲ್ಲಿ ಬಳಸಿಕೊಳ್ಳುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ.
– ರಫೀಕ್‌, ಎಂಜಿನಿಯರ್‌, ಕೆಸಿಡಿಸಿ 

ಘಟಕದ ಕಡೆಯಿಂದ ಗಾಳಿ ಬೀಸಿದಾಗ ಕೆಟ್ಟ ವಾಸನೆ ಬರುತ್ತದೆ. ಇದರಿಂದಾಗಿ ಆಗಾಗ್ಗೆ  ಅಪಾರ್ಟ್‌ಮೆಂಟ್‌ ನಿವಾಸಿಗಳು ಕೆಸಿಡಿಸಿ ಮುಂದೆ ಪ್ರತಿಭಟನೆ ಮಾಡುತ್ತಿರುತ್ತಾರೆ. ದಿನಕ್ಕೆ ಎರಡು ಬಾರಿ ವಾಸನೆ ಬರದಂತೆ ರಾಸಾಯನಿಕ ಸಿಂಪಡಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ದುರ್ವಾಸನೆ ಪ್ರಮಾಣ ಗಣನೀಯವಾಗಿ ತಗ್ಗಿದೆ.
– ಚಂದ್ರು, ಟೈಲರ್‌, ಸೋಮಸುಂದರಪಾಳ್ಯ

ಘಟಕದಿಂದ ವಾಸನೆ ಬರದಂತೆ ವೈಜ್ಞಾನಿಕವಾಗಿ ಕ್ರಮಕೈಗೊಳ್ಳಬೇಕು. ಮೊದಲು ಈ ರಸ್ತೆಯಲ್ಲಿ ಓಡಾಡುವವರು ಮೂಗು, ಬಾಯಿ ಮುಚ್ಚಿಕೊಂಡು ಓಡಾಡುವಂತ ಸ್ಥಿತಿ ಇತ್ತು. ಈಗ ಪರಿಸ್ಥಿತಿ ಸಾಕಷ್ಟು ಸುಧಾರಣೆಯಾಗಿದೆ. ಏಕಾಏಕಿ ಘಟಕ ಮುಚ್ಚಿದರೆ ಕಸ ವಿಲೇವಾರಿ ಎಲ್ಲಿ ಮಾಡಬೇಕು? ಎಂಬುದನ್ನು ಕೂಡ ಜನರು ಅರ್ಥ ಮಾಡಿಕೊಳ್ಳಬೇಕು. 
– ಲಿಂಗರಾಜು, ಸೋಮಸುಂದರಪಾಳ್ಯ ನಿವಾಸಿ

* ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next