Advertisement

ಆವ ರೂಪದೊಳು ಬಂದರೆ ಸರಿ?

11:47 AM Aug 20, 2019 | Lakshmi GovindaRaj |

ಪ್ರತಿ ಅಡಿಯ ಗಣಪತಿಗೆ 1.5ರಿಂದ 2 ಕೆ.ಜಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಬಳಕೆಯಾಗುತ್ತದೆ. ಇನ್ನು ಸರಾಸರಿ 5 ಅಡಿ ಗಣಪನಿಗೆ ಕನಿಷ್ಠ 20 ಕೆಜಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಹಾಕಲಾಗುತ್ತದೆ. ಅದೇ ರೀತಿ, ಪ್ರತಿ ಅಡಿ ಬಣ್ಣದ ಗಣಪನಿಗೆ 20 ಗ್ರಾಂ ಸೀಸ ಬಳಸಲಾಗುತ್ತದೆ. ಇಡೀ ಬೆಂಗಳೂರಿನಲ್ಲಿ ಪ್ರತಿಷ್ಠಾಪಿಸುವ ಗಣೇಶ ವಿಗ್ರಹಗಳಿಗೆ ಲೆಕ್ಕಹಾಕಿದರೆ, ನೂರಾರು ಟನ್‌ ಆಗುತ್ತದೆ.

Advertisement

ತಜ್ಞರ ಪ್ರಕಾರ ಬಣ್ಣಲೇಪಿತ ಗಣೇಶನ ಮೂರ್ತಿಯ ಪ್ರತಿ ಅಡಿಯಲ್ಲೂ 20 ಗ್ರಾಂ ವಿಷಕಾರಿ ಸೀಸದ ಅಂಶವಿರುತ್ತದೆ. ಇಷ್ಟು ವಿಷವು 20 ಎಕರೆ ವಿಸ್ತೀರ್ಣವಿರುವ ಕೆರೆಯ ನೀರನ್ನೂ ಸಹ ಕಲುಷಿತಗೊಳಿಸಬಲ್ಲದು ಎನ್ನುತ್ತಾರೆ ತಜ್ಞರು ಮತ್ತು ಪರಿಸರ ವಾದಿಗಳು. ಹಾಗಿದ್ದರೆ, ನಾವು ಬರಮಾಡಿಕೊಳ್ಳಲಿರುವ ಗಣಪ ಹೇಗಿರಬೇಕು ಎಂದು ನಿರ್ಧರಿಸಲು ಇದು ಸಕಾಲ. ಭಕ್ತರ ಮುಂದೆ ಈಗ ಎರಡು ಆಯ್ಕೆಗಳಿವೆ. ಅವುಗಳ ವಾದ-ವಿವಾದಗಳ ಸುತ್ತ ಒಂದು ನೋಟ ಈ ಬಾರಿಯ ಸುದ್ದಿ ಸುತ್ತಾಟ.

ಗಣೇಶ ಉತ್ಸವಕ್ಕೆ ಈಗ ದಿನಗಣನೆ ಆರಂಭವಾಗಿದೆ. ಬೆನ್ನಲ್ಲೇ ಗಣೇಶನ ಮೂರ್ತಿಗಳ ಪ್ರಕಾರಗಳ ಬಗೆಗಿನ ಚರ್ಚೆಯೂ ಮುನ್ನೆಲೆಗೆ ಬಂದಿದೆ. ಈ ಚರ್ಚೆಯು ಪರಿಸರಕ್ಕೆ ಪೂರಕ-ಮಾರಕ ಇವೆರಡರ ನಡುವೆಯೇ ಗಿರಕಿ ಹೊಡೆಯುತ್ತಿದೆ. ಇದರಿಂದ ಮಣ್ಣಿನ ಗಣಪ ವರ್ಸಸ್‌ ಪಿಒಪಿ ಗಣಪ ಎನ್ನುವಂತಾಗಿದೆ. ಮಣ್ಣಿನ ಗಣೇಶ ಉತ್ಸವಕ್ಕೆ ಬಿಬಿಎಂಪಿ ಸೇರಿದಂತೆ ಹತ್ತುಹಲವು ಸರ್ಕಾರೇತರ ಸಂಘ-ಸಂಸ್ಥೆಗಳು ಉಚಿತ ಮಣ್ಣು ವಿತರಣೆ, ಬೀಜದ ಉಂಡೆಗಳಿರುವ ಮೂರ್ತಿ, ವಿದ್ಯಾರ್ಥಿಗಳಿಗೆ ಗಣೇಶನ ತಯಾರಿಕೆ ಬಗ್ಗೆ ತರಬೇತಿ, ಚಿನ್ನ ಅಥವಾ ಬೆಳ್ಳಿ ನಾಣ್ಯಗಳನ್ನಿಟ್ಟು ಭಕ್ತರನ್ನು ಅದೃಷ್ಟ ಪರೀಕ್ಷೆಗೊಡ್ಡುವ ಪ್ರಯೋಗಗಳು ನಡೆಯುತ್ತಿವೆ.

ಈ ಮಧ್ಯೆಯೇ ನಾಲ್ಕೈದು ತಿಂಗಳು ಮುಂಚಿತವಾಗಿಯೇ ಗ್ರಾಹಕರಿಂದ ಆರ್ಡರ್‌ ಗಿಟ್ಟಿಸಿಕೊಂಡು, ಪಿಒಪಿ (ಪ್ಲಾಸ್ಟರ್‌ ಆಫ್ ಪ್ಯಾರಿಸ್‌) ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ವಿವಿಧ ಭಂಗಿಗಳಲ್ಲಿ ಆಕರ್ಷಕ ಬಣ್ಣಗಳಿಂದ ಕಂಗೊಳಿಸುವ ಈ ಮೂರ್ತಿಗಳು ಭಕ್ತರನ್ನು ಕೈಬೀಸಿ ಕರೆಯುತ್ತಿವೆ. ಜತೆಗೆ ಪಿಒಪಿ ಮಾರಕವಲ್ಲ; ಮರುಬಳಕೆ ವಸ್ತು ಎಂಬ ವಾದವನ್ನು ಈ ಬಾರಿ ತಯಾರಕರು ಮುಂದಿಡುತ್ತಿದ್ದಾರೆ. ಪರಿಸರ ಸ್ನೇಹಿ ಗಣೇಶನತ್ತ ಭಕ್ತರನ್ನು ಸೆಳೆಯಲು ಹಲವು ಜಾಗೃತಿ ಶಿಬಿರಗಳು, ಆಕರ್ಷಕ ಕಾರ್ಯಕ್ರಮಗಳು ಪಾಲಿಕೆ ಮತ್ತು ಸಂಘ-ಸಂಸ್ಥೆಗಳಿಂದ ನಡೆಯುತ್ತಿದೆ. ಅವುಗಳ ಪೈಕಿ ಕೆಲ ಮಾಹಿತಿ ಇಲ್ಲಿದೆ.

ಮಣ್ಣಿನ ಮೂರ್ತಿ ಉಚಿತ ವಿತರಣೆ: “ಕೆರೆಯ ಮಣ್ಣನ್ನು ಕೆರೆಗೆ ಚೆಲ್ಲಬೇಕು. ನಾವೇ ಮಣ್ಣಿನಲ್ಲಿ ಮಾಡಿದ ಗಣಪತಿಯನ್ನು ಪೂಜೆ ಮಾಡೋಣ’ ಎನ್ನುವ ಪರಿಕಲ್ಪನೆಯೊಂದಿಗೆ ರಾಜಾಜಿನಗರದ ಸಮಯ ಪ್ರತಿಷ್ಠಾನವು ಕಳೆದ ನಾಲ್ಕು ವರ್ಷಗಳಿಂದ ನಗರದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಯನ್ನು ಉಚಿತವಾಗಿ ನೀಡುತ್ತಿದೆ. “ಈ ಹಿಂದೆ ಮಣ್ಣಿನ ಗಣಪತಿ ಕೂರಿಸುವುದು ಪರಿಸರದ ಒಂದು ಭಾಗವಾಗಿರುತ್ತಿತ್ತು. ಕೆರೆಗಳಲ್ಲಿನ ಜೇಡಿಮಣ್ಣನ್ನು ತೆಗೆದು ಗಣೇಶ ಮೂರ್ತಿ ರಚನೆ ಮಾಡಲಾಗುತ್ತಿತ್ತು.

Advertisement

ಮತ್ತೆ ಅದೇ ಕೆರೆಗಳಲ್ಲಿ ಮತ್ತೆ ಮಣ್ಣಿನ ಮೂರ್ತಿಯನ್ನು ಬಿಡುವ ಮೂಲಕ ಕೆರೆಯ ಮಣ್ಣನ್ನು ಕೆರೆಗೇ ಚೆಲ್ಲುವ ಪರಿಕಲ್ಪನೆಯನ್ನು ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿದ್ದರು. ಇದರಿಂದ ಕೆರೆಗಳಲ್ಲಿ ಹೂಳಿನ ಪ್ರಮಾಣ ಕಡಿಮೆಯಾಗುವುದರ ಜತೆಗೆ ನದಿಗಳೂ ಶುದ್ಧವಾಗಿದ್ದವು. ಆ ಹಾದಿಯಲ್ಲೇ ಮುಂದುವರಿಯುವ ಪ್ರಯತ್ನ ಇದಾಗಿದೆ. ಈ ಬಾರಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೂ ತರಬೇತಿ ನೀಡಲಾಗುತ್ತಿದೆ. ನಗರದ ಮಕ್ಕಳು ಮಣ್ಣಿನಲ್ಲಿ ಆಟವಾಡುವುದು ಕಡಿಮೆ. ಜೇಡಿ ಮಣ್ಣಿನ ಮೂಲಕ ಗಣೇಶ ಮಾಡುವುದು ಮಕ್ಕಳಿಗೂ ಹೊಸ ಅನುಭವ. ಈ ವರ್ಷ ಒಂದು ಸಾವಿರ ಮಣ್ಣಿನ ಗಣಪತಿ ನೀಡುವ ಗುರಿ ಹೊಂದಿದ್ದೇವೆ’ ಎಂದು ವಿವರಿಸುತ್ತಾರೆ ಸಮಯ ಫೌಂಡೇಷನ್‌ನ ಸಂಸ್ಥಾಪಕಿ ಕಾವೇರಿ.

ಜೇಡಿಮಣ್ಣು ಉಚಿತ: ಪರಿಸರ ಸ್ನೇಹಿ ಮಣ್ಣಿನ ಗಣಪತಿ ಬಗ್ಗೆ ಜಾಗೃತಿ ಮೂಡಿಸಲು ಪುಲಕೇಶಿನಗರದ ಸಂಪತ್‌ ಎಂಬುವರು ಉಚಿತವಾಗಿ ಜೇಡಿಮಣ್ಣು ವಿತರಿಸುತ್ತಿದ್ದಾರೆ. ಈ ವರ್ಷ ಒಂದು ಸಾವಿರ ಜನರಿಗೆ ಜೇಡಿಮಣ್ಣು ನೀಡುವ ಗುರಿ ಇದೆ ಎನ್ನುತ್ತಾರೆ ಸಂಪತ್‌. ಇನ್ನು ಬಿ-ಪ್ಯಾಕ್‌ ಸಂಸ್ಥೆ ಕಳೆದ ಮೂರು ವರ್ಷಗಳಿಂದ “ಮನೆ-ಮನೆಯಲ್ಲಿ ಮಣ್ಣಿನ ಗಣಪ’ ಎನ್ನುವ ಅಭಿಯಾನ ನಡೆಸುತ್ತಿದೆ. ಮಣ್ಣಿನಿಂದಲೇ ತಯಾರಿಸಿದ ಗಣಪತಿಯನ್ನು ಉಚಿತವಾಗಿ ನೀಡುತ್ತಿದೆ. ಸಾರ್ವಜನಿಕರಿಂದ ಮಣ್ಣಿನ ಗಣೇಶ ಮೂರ್ತಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಬಿಬಿಎಂಪಿ ಸಹಯೋಗದೊಂದಿಗೆ ಶಾಲಾ-ಕಾಲೇಜು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಮಣ್ಣಿನ ಗಣಪತಿ ಮಾಡುವುದಕ್ಕೆ ತರಬೇತಿ ನೀಡಲಾಗುತ್ತಿದೆ.

“ಮಕ್ಕಳಿಗೆ ಮಣ್ಣಿನ ಗಣಪತಿ ಮಾಡುವುದರ ಬಗ್ಗೆ ತರಬೇತಿ ಪ್ರಾರಂಭಿಸಿದ ಮೇಲೆ ಮಕ್ಕಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಕ್ಕಳು ತಮ್ಮದೇ ಶೈಲಿಯಲ್ಲಿ ಗಣೇಶನ ಮೂರ್ತಿ ಮಾಡುವುದನ್ನು ಕಲಿತಿದ್ದು, ಇತರರಿಗೂ ಕಲಿಸುತ್ತಿದ್ದಾರೆ’ ಎನ್ನುತ್ತಾರೆ ಬಿ-ಪ್ಯಾಕ್‌ ಮಾಧ್ಯಮ ಸಂಯೋಜಕ ರಾಘವೇಂದ್ರ. ಅಲ್ಲದೆ, ಬಿ-ಪ್ಯಾಕ್‌ ಸಂಸ್ಥೆಯು ಈ ಹಿಂದೆ ಸಾರ್ವಜನಿಕ ಪ್ರದೇಶಗಳಲ್ಲಿ ಮಣ್ಣಿನ ಗಣಪತಿ ಮಾಡುವುದಕ್ಕೆ ತರಬೇತಿ ನೀಡುತ್ತಿತ್ತು. ಈ ವರ್ಷದಿಂದ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಮಣ್ಣಿನ ಗಣಪತಿ ಮಾಡುವುದಕ್ಕೆ ತರಬೇತಿ ನೀಡುವುದಕ್ಕೆ ಮುಂದಾಗಿದೆ. ಈಗಾಗಲೇ ನೂರಾರು ಮಕ್ಕಳು ಮಣ್ಣಿನ ಗಣಪತಿ ಮಾಡುವುದನ್ನು ಕಲಿತಿದ್ದಾರೆ. ಈ ಬಾರಿ ಒಟ್ಟಾರೆ 25 ಸಾವಿರ ಮಣ್ಣಿನ ಗಣೇಶ ಮೂರ್ತಿಗಳನ್ನು ನೀಡುವ ಗುರಿ ಹೊಂದಿದೆ. ಇದಕ್ಕೆ ಹಲವು ಪಾಲಿಕೆ ಸದಸ್ಯರು ಸಹಾಕಾರ ನೀಡಿದ್ದಾರೆ ಎನ್ನುತ್ತಾರೆ ಬಿ.ಪ್ಯಾಕ್‌ ಸದಸ್ಯರು.

ಬಣ್ಣ ಬಳಿಯುವ ಮಕ್ಕಳು: ಮಣ್ಣಿನ ಗಣೇಶ ಮೂರ್ತಿಗೆ ಮಕ್ಕಳೇ ಇಲ್ಲಿ ಬಣ್ಣ ಬಳಿಯುತ್ತಾರೆ. ಅದರಲ್ಲೂ ನೈಸರ್ಗಿಕ ಬಣ್ಣ ಬಳಿಯುವ ಮೂಲಕ ಪರಿಸರ ಸ್ನೇಹಿಯಾಗಿದ್ದಾರೆ! ಹೀಗೆ ಬಣ್ಣ ಬಳಿಯುವವರು ಯಾರು ಗೊತ್ತಾ? ಮನಪರಿವರ್ತನ ಕೇಂದ್ರದ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳು. ಸಮರ್ಪಣ ಸಂಸ್ಥೆ ಕಳೆದ 13 ವರ್ಷದಿಂದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಕಲಾವಿದರಿಂದ ತಯಾರಿಸಿ ಮೂರ್ತಿಗಳಿಗೆ ಮನ ಪರಿವರ್ತನ ಕೇಂದ್ರದ ಮಕ್ಕಳಿಂದ ಬಣ್ಣ ಅಚ್ಚಿಸುತ್ತಾರೆ. ಇಲ್ಲಿನ ಮಕ್ಕಳು ಗಣೇಶ ಮೂರ್ತಿಯ ಕಿರೀಟ, ದಂತ, ಕಾಲಿಗೆ ಬಣ್ಣ ಬಳಿಯುತ್ತಾರೆ. ಕಳೆದ ಬಾರಿ 8 ಸಾವಿರ ಮೂರ್ತಿಗಳಿಗೆ ಬಣ್ಣ ಬಳಿದಿದ್ದು, ಈ ಬಾರಿ 13 ಸಾವಿರ ಮೂರ್ತಿಗಳಿಗೆ ಬಣ್ಣ ಬಳಿಯುತ್ತಿದ್ದಾರೆ.

ಒಂದು ಮೂರ್ತಿಗೆ ಬಣ್ಣ ಅಚ್ಚುವುದಕ್ಕೆ ಸಂಸ್ಥೆ 25 ರೂ. ನೀಡುತ್ತದೆ. 7ರಿಂದ 19 ಇಂಚಿನ ಮೂರ್ತಿ: ಗಣೇಶ ಮೂರ್ತಿ ತಯಾರಿಕರು ಏಳು ಇಂಚಿನ ಮೂರ್ತಿಯಿಂದ 19 ಇಂಚು ಎತ್ತರದ ಮೂರ್ತಿ ತಯಾರಿಕೆ ಮಾಡುತ್ತಾರೆ. ಏಳು ಇಂಚಿನ ಮೂರ್ತಿಯೂ 340 ಗ್ರಾಂ ಇದ್ದು, 19 ಇಂಚಿನ ಮೂರ್ತಿ 6 ಕೆ.ಜಿ. ತೂಕ ಇರಲಿದೆ. ಮೂರ್ತಿ ತಯಾರಿಕರ ಬ್ಯಾಂಕ್‌ ಖಾತೆಗೆ ಸಮರ್ಪಣ ಸಂಸ್ಥೆಯವರು ಹಣ ಜಮೆ ಮಾಡುತ್ತಾರೆ. ಬಹುತೇಕ ಎಲ್ಲಾ ಮೂರ್ತಿಗಳಲ್ಲಿ ಒಂದೊಂದು ಬೆಳ್ಳಿ ನಾಣ್ಯ ಮತ್ತು ಕೆಲ ಬೀಜದುಂಡೆಗಳನ್ನು ಹಾಕಲಾಗಿರುತ್ತದೆ. ಮೂರ್ತಿಯನ್ನು ಬಕೆಟ್‌ಗಳಲ್ಲಿ ಮುಳುಗಿಸಿದ ನಂತರ ನಾಟ್ಯ ತೆಗೆದುಕೊಂಡು ಮೂರ್ತಿ ಮಣ್ಣನ್ನು ಮನೆಯ ಮುಂದೆ ಹಾಕಿದಾಗ ಗಿಡ ಬೆಳೆಯುತ್ತದೆ. ಇದರಿಂದ ಗಿಡ ನೆಡುವುದಕ್ಕೂ ಉತ್ತೇಜನೆ ನೀಡಿದಂತಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಹೊಸಮನಿ.

ಪಿಒಪಿ ಗಣೇಶ ಮೂರ್ತಿಗಳ ಅಬ್ಬರ: ರಾಜಧಾನಿಯಲ್ಲಿ ಪಿಒಪಿ ಗಣೇಶ ಮೂರ್ತಿ ಸಂಪೂರ್ಣವಾಗಿ ನಿಷೇಧಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ತೀರ್ಮಾನಿಸಿದೆ. ಆದರೆ, ಈಗಾಗಲೇ ನಗರದ ಹಲವು ಮಾರುಕಟ್ಟೆಗಳಲ್ಲಿ ಪಿಒಪಿ ಗಣೇಶ ಮೂರ್ತಿಗಳ ಅಬ್ಬರ ಶುರುವಾಗಿದೆ. ಉತ್ಸವ ಸಮೀಪಿಸುತಿದ್ದಂತೆ ಎಚ್ಚರಗೊಳ್ಳುವ ಸರ್ಕಾರಿ ಸಂಸ್ಥೆಗಳು, ವರ್ಷವಿಡೀ ಯಾವುದೇ ಕ್ರಮ ಜರುಗಿಸುವುದಿಲ್ಲ. ಹಾಗಾಗಿ, ಪ್ರತಿ ವರ್ಷದಂತೆ ಮೂರು ತಿಂಗಳ ಹಿಂದಿನಿಂದಲೇ ಗಣೇಶನ ಮೂರ್ತಿ ಬುಕಿಂಗ್‌ ಪ್ರಕ್ರಿಯೆ ಪ್ರಾರಂಭಿಸುವ ತಯಾರಕರು, ಈಗಾಗಲೇ ಸಾವಿರಾರು ರೂ. ಬೆಲೆಬಾಳುವ ಗಣೇಶ ಮೂರ್ತಿಗಳನ್ನು ತಯಾರಿಸಿದ್ದು, ಮಣ್ಣಿನ ಗಣೇಶನಿಗೆ ಪೈಪೋಟಿ ನೀಡಲು ತುದಿಗಾಲಲ್ಲಿ ನಿಂತಿವೆ.

2106ರಲ್ಲಿ ಹಸಿರು ನ್ಯಾಯಾಧೀಕರಣವು ಪಿಒಪಿ ಗಣೇಶ ಬಳಸದಂತೆ ಆದೇಶಿಸಿದೆ. ಅದರಂತೆ ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಿಂದ ಪಿಒಪಿ ಗಣೇಶ ಮೂರ್ತಿ ಬಳಕೆಯನ್ನು ಕಡಿಮೆ ಮಾಡಲು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಸೇರಿದಂತೆ ಹಲವು ಕಾನೂನುಗಳನ್ನು ಪಾಲಿಕೆ ರೂಪಿಸಿದೆ. ಇದಕ್ಕೆ ಪೂರಕವಾಗಿ ಗಣೇಶ ಮೂರ್ತಿ ತಯಾರಿಸುವ ಘಟಕಗಳ ಮೇಲೆ ದಾಳಿ ನಡೆಸುವ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ಎಂದಿನಂತೆ ಎಚ್ಚರಿಕೆ ನೀಡಿ ನೋಟಿಸ್‌ ಜಾರಿ ಮಾಡುತ್ತಾರೆ. ನಂತರ ಕೆಲ ದಿನಗಳ ಕಾಲ ಗಣೇಶ ತಯಾರಿಕೆಯನ್ನು ನಿಲ್ಲಿಸುವ ಮಾಲಿಕರು, ಪಾಲಿಕೆ ಅಧಿಕಾರಿಗಳು ವಾಪಸಾಗುತಿದ್ದಂತೆ ತಮ್ಮ ಕೆಲಸಗಳನ್ನು ಯಥಾವತ್ತಾಗಿ ಮುಂದುವರಿಸುತ್ತಾರೆ.

ಬೆಂಗಳೂರು ಒಂದಕ್ಕೇ ಸುಮಾರು ಒಂದು ಲಕ್ಷ ಗಣೇಶ ಮೂರ್ತಿಗಳ ಬೇಡಿಕೆ ಇದ್ದು, ನಗರದ ಹೊರವಲಯಗಳಿಂದ ಹತ್ತು ಸಾವಿರ ಮೂರ್ತಿಗಳನ್ನು ಪೂರೈಕೆ ಮಾಡಲಾಗುತ್ತದೆ. ಇನ್ನುಳಿದ 90 ಸಾವಿರ ಮೂರ್ತಿಗಳು ಆಂಧ್ರಪ್ರದೇಶ, ತೆಲಂಗಾಣ, ಕೊಲ್ಲಾಪುರ, ಮುಂಬೈ, ಕೊಲ್ಕತ್ತ, ತಮಿಳುನಾಡಿನ ಕೆಲ ಭಾಗಗಳಿಂದ ಪೂರೈಕೆಯಾಗುತ್ತಿದೆ. ಇವುಗಳು ರಾತ್ರಿ ವೇಳೆ ನಗರಗಳಿಗೆ ಪ್ರವೇಶಿಸುತ್ತವೆ. ಚೆಕ್‌ ಗೇಟ್‌ಗಳಲ್ಲಿ ಪರಿಶೀಲನೆ ಮಾಡಿ ನಗರಗಳಿಗೆ ಪ್ರವೇಶಿಸದಂತೆ ತಡೆಯುವ ಕೆಲಸ ಆಯಾ ಜಿಲ್ಲೆ ಪೊಲೀಸ್‌ ಅಧಿಕಾರಿಗಳು ಮಾಡಬೇಕಿದೆ. ಇದು ಸಮರ್ಪಕವಾಗಿ ಆಗುತ್ತಿಲ್ಲ ಎಂದು ಪರಿಸರವಾದಿಗಳು ಆರೋಪಿಸುತ್ತಾರೆ.

ಹಸಿರು ನ್ಯಾಯಾಧೀಕರಣದ ಆದೇಶವನ್ನು ಕಟ್ಟುನಿಟ್ಟಾಗಿ ಪ್ರಸಕ್ತ ವರ್ಷದಿಂದಲೇ ಅನುಷ್ಠಾನಗೊಳಿಸಿದರೆ, ಈಗಾಗಲೇ ತಯಾರಿಸಿರುವ ಗಣೇಶ ಮೂರ್ತಿಗಳ ಸಮೀಕ್ಷೆ ಮಾಡಿ ಸರ್ಕಾರಗಳೇ ಗೋದಾಮುಗಳನ್ನು ನಿರ್ಮಿಸಿ ಶೇಖರಿಸಬೇಕಾಗುತ್ತದೆ. ನಂತರ ಈ ಮೂರ್ತಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಸರ್ಕಾರವೇ ವಿಸರ್ಜಿಸಬೇಕು. ಬಳಿಕ 2020ನೇ ಸಾಲಿನಲ್ಲಿ ನಗರದ ಯಾವುದೇ ಭಾಗದಲ್ಲಿ ಪಿಒಪಿ ಗಣೇಶ ಕಂಡುಬಂದರೆ ಮೂರ್ತಿ ಮಾರಾಟಗಾರ ಮತ್ತು ಗ್ರಾಹಕರಿಬ್ಬರ ಮೇಲೆ ದೂರು ದಾಖಲಿಸಿ, ದಂಡ ವಸೂಲಿ ಮಾಡಬೇಕಿದೆ ಎಂದು ಕೆಲ ಪರಿಸರವಾದಿಗಳು ಸಲಹೆ ಮಾಡುತ್ತಾರೆ.

ಈ ಬಾರಿಯ ಕತೆ ಏನು?: ಈಗಾಗಲೇ ನಗರದ ಹೊರವಲಯಗಳಲ್ಲಿ 20ಸಾವಿರಕ್ಕೂ ಅಧಿಕ ಪಿಒಪಿ ಗಣೇಶ ಮೂರ್ತಿಗಳು ಮಾರಾಟಕ್ಕೆ ಲಭ್ಯವಿದ್ದು, ನಗರದ ಮಾವಳ್ಳಿ, ಸರಾಯಿಪಾಳ್ಯ, ಟ್ಯಾನರಿ ರಸ್ತೆ, ಯಲಹಂಕ ಸೇರಿದಂತೆ ಹಲವು ಪ್ರದೇಶಗಳ ಬೀದಿಗಳಲ್ಲಿ ಗಣೇಶ ಮೂರ್ತಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಇನ್ನು ಈ ಮಳಿಗೆಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ದಾಳಿ ನಡೆಸುವ ಭೀತಿಯಲ್ಲಿ ಮಾರಾಟಗಾರರಿದ್ದಾರೆ. ದಾಳಿ ಬಳಿಕ ಸ್ಥಳದಲ್ಲಿ ಪತ್ತೆಯಾದ ಮೂರ್ತಿಗಳನ್ನು ಬಿಬಿಎಂಪಿ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ. ಈವರೆಗೆ ನಗರದ ವಿವಿಧ ಗಣೇಶ ಮಳಿಗೆಗಳ ಮೇಲೆ ದಾಳಿ ನಡೆಸಿರುವ ಪಾಲಿಕೆ ಅಧಿಕಾರಿಗಳು 156 ಮೂರ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

ತಯಾರಿಕೆ ಕಷ್ಟವೇ?: ಮಣ್ಣಿನಲ್ಲಿ ಐದು ಅಡಿಗಿಂತ ಎತ್ತರದ ಗಣೇಶ ಮೂರ್ತಿಯನ್ನು ತಯಾರಿಸುವುದು ಕಷ್ಟವಾಗಿದ್ದು, ಇದರಲ್ಲಿ ಒಳ್ಳೆಯ ಆಕೃತಿಗಳನ್ನು ಮಾಡಲು ಆಗುವುದಿಲ್ಲ. ಇದಲ್ಲದೆ ಮಣ್ಣಿನ ಗಣೇಶ ಮೂರ್ತಿಗಳಿಗೆ ಬಣ್ಣ ಕೂಡ ಚೆನ್ನಾಗಿ ಸರಿಹೊಂದುವುದಿಲ್ಲ ಜತೆಗೆ ಸಾಮಾನ್ಯ ಗಾತ್ರದ ಮೂರ್ತಿಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸುವ ವೇಳೆ ಬಿರುಕು ಬಿಡುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಬುಕಿಂಗ್‌ ಮಾಡಿರುವ ಗಣೇಶ ಮೂರ್ತಿಗಳ ಪೈಕಿ ಶೇ. 90ರಷ್ಟು ಪಿಒಪಿ ಮೂರ್ತಿಗಳೇ ಆಗಿದ್ದು, ಎಲ್ಲಾ ಮೂರ್ತಿಗಳು 15 ಅಡಿಗಿಂತ ಹೆಚ್ಚು ಎತ್ತರ ಮಾಡುವಂತೆ ಬೇಡಿಕೆ ಸಲ್ಲಿಸಿದ್ದಾರೆ ಎಂದು ತಯಾರಕರು ತಿಳಿಸುತ್ತಾರೆ.

ಲಾಭ ನಷ್ಟದ ಲೆಕ್ಕಾಚಾರ ಹೇಗೆ: ರಾಜಧಾನಿಯ ಗಣೇಶ ಉತ್ಸವಕ್ಕೆ ಕನಿಷ್ಠ ಒಂದು ಲಕ್ಷ ಮೂರ್ತಿಗಳು ನಗರವನ್ನು ಪ್ರವೇಶಿಸುತ್ತವೆ. ಅವುಗಳ ಬೆಲೆ 100 ರೂ. ನಿಂದ 50 ಸಾವಿರ ರೂ.ವರೆಗೆ ಇದೆ. ಬೆಂಗಳೂರಿಗೆ ಪ್ರತಿ ವರ್ಷ ಸರಾಸರಿ ಹತ್ತು ಕೋಟಿ ಬೆಲೆ ಬಾಳುವಷ್ಟು ಮೂರ್ತಿಗಳು ಪೂರೈಕೆಯಾಗುತ್ತಿವೆ. ನಗರದಲ್ಲಿ ಸುಮಾರು 300ಕ್ಕೂ ಹೆಚ್ಚು ಗಣೇಶ ಮೂರ್ತಿ ಮಾರಾಟಗಾರರಿದ್ದು, ಹತ್ತಕ್ಕೂ ಹೆಚ್ಚು ಮೂರ್ತಿ ತಯಾರಿಕಾ ಘಟಕಗಳಿವೆ. ಈ ಎಲ್ಲಾ ಘಟಕಗಳಲ್ಲಿ ಕಳೆದ ಮೂರು ತಿಂಗಳುಗಳಿಂದ ಹತ್ತು ಸಾವಿರಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತಿದ್ದಾರೆ. ಪ್ರತಿ ಘಟಕದಲ್ಲಿ ಕನಿಷ್ಠ ಹತ್ತು ಲಕ್ಷ ವಹಿವಾಟನ್ನು ನಡೆಯಲಿದ್ದು, ಕೆಲ ದೊಡ್ಡ ಘಟಕಗಳು 50 ಲಕ್ಷ ರೂ.ಗಳಷ್ಟು ವಹಿವಾಟು ನಡೆಸುತ್ತವೆ ಎಂದು ಗಣೇಶಮೂರ್ತಿ ತಯಾರಕರ ಸಂಘದ ಪದಾಧಿಕಾರಿ ಗುರುದೇವ್‌ ಮಾಹಿತಿ ನೀಡಿದರು.

ಇದೇ ತಿಂಗಳು 21ರಂದು ಪ್ರತಿಭಟನೆ: ಹಬ್ಬಗಳನ್ನು ಹೀಗೇ ಆಚರಿಸಬೇಕು ಎಂದು ಒತ್ತಡ ಹಾಕುವುದು ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಧೋರಣೆಯನ್ನು ಖಂಡಿಸಿ ಆ.21ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ತಿಳಿಸಿದೆ.

ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ ಸಹಯೋಗದಿಂದ ಪುಣೆ ಮಹಾನಗರ ಪಾಲಿಕೆಯು ಪಿಒಪಿ ಮೂರ್ತಿಗಳನ್ನು 48 ಗಂಟೆಗಳಲ್ಲಿ ವೈಜ್ಞಾನಿಕವಾಗಿ ಕರಗಿಸುವ ವಿಧಾನವನ್ನು ಅಳವಡಿಸಿಕೊಂಡಿದೆ. ಅಡಿಗೆ ಸೋಡ ಬಳಸಿ ಮೂರ್ತಿಗಳನ್ನು ಕರಗಿಸಿದ ಬಳಿಕ ನೀರನ್ನು ಪಾರ್ಕ್‌ಗಳಿಗೆ ಮತ್ತು ಪಿಒಪಿ ಅವಶೇಷಗಳನ್ನು ಇಟ್ಟಿಗೆ ತಯಾರಿಸಲು ಬಳಸಬಹುದು ಎಂದು ಸಂಶೋಧನೆ ತಿಳಿಸಿದೆ.
-ಗುರುದೇವ್‌, ಪಿಒಪಿ ಗಣೇಶ ಮೂರ್ತಿ ತಯಾರಕರ ಸಂಘದ ಪದಾಧಿಕಾರಿ

ಪಿಒಪಿ ಗಣೇಶ ಮೂರ್ತಿ ಪೂಜೆ ಮಾಡುವುದಕ್ಕೂಯೋಗ್ಯವಲ್ಲ. ಇದನ್ನು ಪೂಜೆ ಮಾಡುವುದು ರಾಸಾಯನಿಕಗಳನ್ನು ಪೂಜೆಮಾಡಿದಂತೆ! ಪಿಒಪಿ ಗಣೇಶಮೂರ್ತಿಯನ್ನುಕೆರೆಗಳಲ್ಲಿ ವಿರ್ಸಜನೆ ಮಾಡಿದರೆ ಅಂತರ್ಜಲವೂ ಕಲುಷಿತವಾಗುತ್ತದೆ. ರಾಸಾಯನಿಕಮತ್ತು ಲೋಹದ ಅಂಶದಿಂದ ಕೂಡಿರುವ ಗಣೇಶ ಮೂರ್ತಿಯನ್ನುಪೂಜೆ ಮಾಡಿ ಮತ್ತೇ ಈಗಾಗಲೇ ಕಲುಷಿತವಾಗಿರುವ ಕೆರೆಗಳಿಗೆ ಬಿಡುತ್ತೇವೆಎಲ್ಲವೂ ದೇವರನ್ನೇ ಅವಮಾನಿಸಿದಂತೆ.
-ಪ್ರೊ.ಟಿ.ವಿ ರಾಮಚಂದ್ರ, ವಿಜ್ಞಾನಿ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)

ಉಚಿತ ಮಣ್ಣಿನ ಮೂರ್ತಿಗಾಗಿ ಇಲ್ಲಿ ಸಂಪರ್ಕಿಸಿ
ಬಿ-ಪ್ಯಾಕ್‌: 96638 06688
ಸಮಯ: 93797 30303
ಸಮರ್ಪಣ (ವಿನಾಯಿತಿ ದರ): 96064 02979

* ಹಿತೇಶ್‌ ವೈ/ಲೋಕೇಶ್‌ ರಾಮ್‌

Advertisement

Udayavani is now on Telegram. Click here to join our channel and stay updated with the latest news.

Next