Advertisement

Team India ಸತ್ಯವಾಯ್ತು ಕೋಚ್ ದ್ರಾವಿಡ್ ಮಾತು…; ವಿರಾಟ್- ರೋಹಿತ್ ಟಿ20 ಆಟ ಮುಗಿಯಿತು

06:16 PM Jul 06, 2023 | ಕೀರ್ತನ್ ಶೆಟ್ಟಿ ಬೋಳ |

2022ರ ಟಿ20 ವಿಶ್ವಕಪ್ ಕೂಟದಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಗೆದ್ದು ಶುಭಾರಂಭವೇನೋ ಮಾಡಿತ್ತು, ಆದರೆ ಫೈನಲ್ ಗೇರಲು ವಿಫಲವಾಗಿತ್ತು. ಮತ್ತೊಂದು ಐಸಿಸಿ ಕೂಟದ ಸೋಲಿನ ಬಳಿಕ ತಂಡದಲ್ಲಿ ಬದಲಾವಣೆ ಆಗಬೇಕು ಎಂಬ ಕೂಗು ಬಲವಾಗಿತ್ತು. ಈ ಸಮಯದಲ್ಲಿ ಕೋಚ್ ರಾಹುಲ್ ದ್ರಾವಿಡ್ ಹೇಳಿದ ಮಾತೊಂದು ಈಗ ನಿಜವಾಗುವ ಲಕ್ಷಣ ಕಾಣುತ್ತಿದೆ. ಇದು ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಲ್ಲದ ಟಿ20 ತಂಡ.

Advertisement

ಹೌದು, ಆಗಸ್ಟ್ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ನೂತನ ಮುಖ್ಯಸ್ಥ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ವಿರಾಟ್- ರೋಹಿತ್ ಟಿ20 ಭವಿಷ್ಯದ ಬಗ್ಗೆ ಮತ್ತೆ ಬೆಳಕು ಚೆಲ್ಲಿದೆ.

ವಿಂಡೀಸ್ ಪ್ರವಾಸದ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಸ್ಥಾನ ಪಡೆದಿರುವ ವಿರಾಟ್ ಮತ್ತು ರೋಹಿತ್ ಟಿ20 ಸರಣಿಗೆ ಜಾಗ ಪಡೆದಿಲ್ಲ. ಹೀಗಾಗಿ ಅವರಿಬ್ಬರನ್ನು ಬಿಟ್ಟು ಭಾರತ ಹೊಸ ತಂಡವನ್ನು ಕಟ್ಟುವ ಯೋಚನೆ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ.

ಟಿ20 ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದದ ಸೋಲಿನ ಬಳಿಕ ಕೋಚ್ ರಾಹುಲ್ ದ್ರಾವಿಡ್ ಅವರು ಯುವಕರ ತಂಡವನ್ನು ಕಟ್ಟುವ ಬಗ್ಗೆ ಹೇಳಿಕೆ ನೀಡಿದ್ದರು. ನಾವು ಮುಂದಿನ ಟಿ20 ಸೈಕಲ್ ಗಮನದಲ್ಲಿರಿಸಿದ್ದೇವೆ.  ಹೊಸ ಯುವ ಆಟಗಾರರನ್ನು ಪ್ರಯತ್ನಿಸುತ್ತೇವೆ ಎಂದಿದ್ದರು.

Advertisement

ಗುಜರಾತ್ ಟೈಟಾನ್ಸ್ ತಂಡವನ್ನು ಒಮ್ಮೆ ಚಾಂಪಿಯನ್ ಮತ್ತೊಮ್ಮೆ ರನ್ನರ್ ಅಪ್ ಮಾಡಿದ ನಾಯಕ ಹಾರ್ದಿಕ್ ಪಾಂಡ್ಯ ಸದ್ಯ ಭಾರತ ತಂಡವನ್ನು ಚುಟುಕು ಮಾದರಿಯಲ್ಲಿ ಮುನ್ನಡೆಸುತ್ತಿದ್ದಾರೆ. ಟಿ20 ವಿಶ್ವಕಪ್ ಬಳಿಕ ಒಂದೇ ಒಂದು ಟಿ20 ಸರಣಿಗೂ ರೋಹಿತ್- ವಿರಾಟ್ ಆಯ್ಕೆಯಾಗಿಲ್ಲ. ತಂಡ ಪ್ರಕಟವಾದಾಗೆಲ್ಲಾ ಮುಂದಿನ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಅವರಿಗೆ ವಿರಾಮ ನೀಡಲಾಗಿದೆ ಎಂಬ ಸಿದ್ದ ಉತ್ತರ ಬರುತ್ತದೆ. ಆದರೆ ಇಬ್ಬರು ದಿಗ್ಗಜರ ಹೊರಗುಳಿಯುವಿಕೆಯ ಹಿಂದೆ ವಿರಾಮ ಮಾತ್ರ ಕಾರಣ ಅಲ್ಲ ಎನ್ನುವುದು ಸಾಮಾನ್ಯ ಕ್ರಿಕೆಟ್ ಅಭಿಮಾನಿಗೂ ಅರ್ಥವಾಗುವ ಸಂಗತಿ.

ಇದಕ್ಕೆ ಪುರಾವೆ ಎನ್ನುವಂತೆ ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆಯಾಗಿರುವ ತಂಡದಲ್ಲಿ ಸೇರಿರುವ ಯುವ ಆಟಗಾರರು. ಸೂರ್ಯಕುಮಾರ್ ಯಾದವ್ ಗೆ ಉಪ ನಾಯಕತ್ವ ನೀಡಿರುವ ಆಯ್ಕೆ ಸಮಿತಿಯು ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾರಂತಹ ಯುವ ಆಟಗಾರರಿಗೆ ಮೊದಲ ಬಾರಿಗೆ ತಂಡಕ್ಕೆ ಕರೆಸಿದೆ. ವಿರಾಟ್ ಕೊಹ್ಲಿ ಜಾಗದಲ್ಲಿ ಈ ಇಬ್ಬರು ಆಟಗಾರರಲ್ಲಿ ಒಬ್ಬರನ್ನು ಪ್ರಯೋಗ ಮಾಡುವುದು ಬಹುತೇಕ ಖಚಿತ. ತಿಲಕ್ ಮತ್ತು ಯಶಸ್ವಿ ಇಬ್ಬರೂ ವಿರಾಟ್ ರೀತಿಯ ಬ್ಯಾಟರ್ ಗಳು. ಹೀಗಾಗಿ ವಿರಾಟ್ ಜಾಗಕ್ಕೆ ಸರಿಯಾದ ಯುವ ಉತ್ತರಾಧಿಕಾರಿಯನ್ನು ತರಲು ಹೊರಟಿದೆ ಬಿಸಿಸಿಐ.

ರೋಹಿತ್ ಶರ್ಮಾಗೆ ಇದೀಗ 36 ವರ್ಷ. ವಿರಾಟ್ ಕೊಹ್ಲಿಗೆ 34 ವರ್ಷ. ಉತ್ತಮವಾಗಿ ಆಡುತ್ತಿದ್ದರೂ, ಅನುಭವಿಗಳಾಗಿದ್ದರೂ ಮುಂದಿನ ಟಿ20 ವಿಶ್ವಕಪ್ ವೇಳೆಗೆ ಇವರಿಬ್ಬರ ಅವಲಂಬನೆಯಿಂದ ಸಂಪೂರ್ಣ ಹೊರಬರಲು ಬಿಸಿಸಿಐ ಚಿಂತಿಸುತ್ತಿದೆ. ಹೀಗಾಗಿ ಐಪಿಎಲ್ ಮಿಂಚುತ್ತಿರುವ ಯುವಕರಿಗೆ ಈಗಲೇ ಅವಕಾಶ ಕೊಟ್ಟು, ತಪ್ಪು ತಿದ್ದಿಕೊಳ್ಳಲು ಸಮಯ ನೀಡುವ ಯೋಚನೆಯಲ್ಲಿದೆ.

ಐಪಿಎಲ್ ನಲ್ಲಿ ಯಶಸ್ಸು- ವಿಶ್ವಕಪ್ ಸಿಗುತ್ತಿಲ್ಲ: 2007ರ ಟಿ20 ವಿಶ್ವಕಪ್ ಗೆಲುವು ಭಾರತದಲ್ಲಿ ಐಪಿಎಲ್ ಎಂಬ ಕ್ರಿಕೆಟ್ ಕೂಟದ ಹುಟ್ಟಿಗೆ ಕಾರಣವಾಯಿತು. ವಿಶ್ವದ ಶ್ರೀಮಂತ ಕ್ರಿಕೆಟ್ ಕೂಟ ಐಪಿಎಲ್ ಹುಟ್ಟಿ 15 ಸೀಸನ್ ಕಳೆದರೂ ಭಾರತ ಬಳಿಕ ಒಂದೇ ಒಂದು ವಿಶ್ವಕಪ್ ಗೆದ್ದಿಲ್ಲ. ವಿಶ್ವ ಶ್ರೇಷ್ಠ ಕ್ರಿಕೆಟಿಗರ ಎದುರು ತಮ್ಮ ಪ್ರತಿಭೆ ಪ್ರದರ್ಶಿಸುವ ಯುವ ಆಟಗಾರರಿಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿದ್ದು ಕಡಿಮೆ.

ಇದಕ್ಕೆ ಪ್ರಮುಖ ಕಾರಣ ಭಾರತ ಮೂರು ಮಾದರಿ ಕ್ರಿಕೆಟ್ ಗೂ ಒಂದೇ ತೆರನಾದ ತಂಡವನ್ನು ನೆಚ್ಚಿಕೊಂಡಿದ್ದು. ಅಂದರೆ ಪ್ರಮುಖ ಅರರಿಂದ ಏಳು ಮಂದಿ ಆಟಗಾರರು ಮೂರು ಮಾದರಿಯಲ್ಲೂ ಆಡುತ್ತಾರೆ. ತಂಡದ ಸಮತೋಲನ ಕಾಯ್ದುಕೊಳ್ಳಲು ಬಿಸಿಸಿಐ ಈ ರೀತಿ ಮಾಡುತ್ತಿತ್ತು. ಇದೀಗ ಇದರ ಬದಲಾವಣೆ ಕಂಡು ಬಂದಿದೆ.

ವಿಭಜಿತ ನಾಯಕತ್ವ: ಬಿಸಿಸಿಐ ಎಂದಿಗೂ ಭಾರತ ತಂಡದಲ್ಲಿ ವಿಭಜಕ ನಾಯಕತ್ವವನ್ನು ಇಷ್ಟಪಟ್ಟಿಲ್ಲ. ಮೂರು ಮಾದರಿ ತಂಡಕ್ಕೂ ಒಬ್ಬನೇ ನಾಯಕ ಇರಬೇಕು ಅಥವಾ ಕನಿಷ್ಠ ಏಕದಿನ ಮತ್ತು ಟಿ20 ತಂಡಕ್ಕೆ ಏಕ ನಾಯಕತ್ವ ಇರಬೇಕು ಎಂಬ ಇರಾದೆ ಹೊಂದಿದ್ದು ಸುಸ್ಪಷ್ಟ. ವಿರಾಟ್ ಕೊಹ್ಲಿ ಅವರು ಟಿ20 ನಾಯಕತ್ವಕ್ಕೆ ವಿದಾಯ ಹೇಳಿದಾಗ ಇದೇ ಕಾರಣ ನೀಡಿ ಅವರನ್ನು ಏಕದಿನ ಕ್ಯಾಪ್ಟನ್ಸಿಯಿಂದಲೂ ಕೆಳಗಿಳಿಸಲಾಗಿತ್ತು. ಆದರೆ ಇದೀಗ ಮತ್ತೆ ಅನಧಿಕೃತವಾಗಿಯಾದರೂ ಇದೇ ಸ್ಪ್ಲಿಟ್ ಕ್ಯಾಪ್ಟೆನ್ಸಿ ಟೀಂ ಇಂಡಿಯಾದಲ್ಲಿ ಜಾರಿಯಲ್ಲಿದೆ. ಟೆಸ್ಟ್ ಮತ್ತು ಏಕದಿನ ತಂಡಕ್ಕೆ ರೋಹಿತ್, ಟಿ20 ತಂಡಕ್ಕೆ ಹಾರ್ದಿಕ್ ನಾಯಕರಾಗಿದ್ದಾರೆ.

ಆದರೆ ಇದುವರೆಗೂ ಹಾರ್ದಿಕ್ ಪಾಂಡ್ಯ ಅವರನ್ನು ಟಿ20 ತಂಡದ ಅಧಿಕೃತ ನಾಯಕ ಎಂದು ಬಿಸಿಸಿಐ ಘೋಷಿಸಿಲ್ಲ. ರೋಹಿತ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಎಂಬ ತಂತ್ರದ ಮಾತನ್ನು ಮುಂದಿಡುತ್ತಿದೆ. ಆದರೆ ಅಕ್ಟೋಬರ್- ನವೆಂಬರ್ ನಲ್ಲಿ ನಡೆಯುವ ಏಕದಿನ ವಿಶ್ವಕಪ್ ಬಳಿಕ ಅದು ಅಧಿಕೃತವಾಗಲಿದೆ. ಹೆಚ್ಚುವರಿಯಾಗಿ ಹಾರ್ದಿಕ್ ಗೆ ಏಕದಿನ ತಂಡದ ನಾಯಕತ್ವವೂ ಸಿಗಬಹುದು.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next