Advertisement

“ಗುಂಡು’ಮಲ್ಲಿಗೆ “ಗೀತಾ’“ಬ್ರಹ್ಮಗಂಟು’ಗುಂಡಮ್ಮಳ ಎಪಿಸೋಡ್‌

03:45 AM Jun 28, 2017 | Harsha Rao |

ಮುದ್ದು ಮನಸ್ಸಿನ ಮುದ್ದು ಹುಡುಗಿ, ಸದ್ಯ ಕಿರುತೆರೆ ವೀಕ್ಷಕರ ಕಣ್ಮಣಿ. ದಪ್ಪಗಿರುವ ಎಷ್ಟೋ ಹುಡುಗಿಯರಿಗೆ ರೋಲ್‌ ಮಾಡೆಲ್‌. ಇಷ್ಟು ಹೇಳಿದ ಮೇಲೆ ನಾವು ಯಾರನ್ನು ಪರಿಚಯಿಸಲು ಹೊರಟಿದ್ದೇವೆ ಎಂದು ನಿಮಗೆ ತಿಳಿದು ಹೋಗಿರುತ್ತದೆ. ಹೌದು, ಅದು ಬೇರಾರೂ ಅಲ್ಲ… “ಬ್ರಹ್ಮಗಂಟು’ ಧಾರಾವಾಹಿಯ ಗುಂಡಮ್ಮ! ಗೀತಾ ಭಾರತಿ ಭಟ್‌ ಎಂಬುದು ಅವರ ಸಂಪೂರ್ಣ ಹೆಸರು. ಅಭಿನಯ, ಹಾಡುಗಾರಿಕೆಯನ್ನು ಒಟ್ಟಿಗೇ ನಿಭಾಯಿಸುತ್ತಿರುವ ಇವರದ್ದು ಬಹುಮುಖ ಪ್ರತಿಭೆ ಎಂದರೂ ತಪ್ಪಾಗಲ್ಲ.  

Advertisement

– ಈಗ “ಗುಂಡಮ್ಮ’ ಎಂದು ಯಾರಾದರೂ ಕರೆದರೆ ಬೇಜಾರಾಗುತ್ತಾ? 
ಮೊದಲು ನನ್ನನ್ನು “ಗುಂಡಮ್ಮ’ ಎಂದು ಯಾರಾದರೂ ಕರೆದರೆ ನನಗೆ ಅದರಲ್ಲಿ ಒಂದು ವ್ಯಂಗ್ಯ, ಕುಚೋದ್ಯ ಕಾಣುತ್ತಿತ್ತು. ಆಗೆಲ್ಲಾ ತುಂಬಾ ಸಿಟ್ಟು ಬರುತ್ತಿತ್ತು. “ಬ್ರಹ್ಮಗಂಟು’ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ ಬಳಿಕ ಗುಂಡಮ್ಮ ಎಂದು ಯಾರಾದರೂ ಕರೆದರೆ ಅದರಲ್ಲಿ ಪ್ರೀತಿ ಎದ್ದು ಕಾಣುತ್ತಿದೆ. ಕಾರಣ, ಗುಂಡಮ್ಮನೊಳಗೂ ಒಂದು ಮನಸ್ಸಿದೆ ಎಂಬುದನ್ನು “ಬ್ರಹ್ಮಗಂಟು’ ಧಾರಾವಾಹಿ ಜನಕ್ಕೆ ತಿಳಿಸಿಕೊಟ್ಟಿತು. ಈಗ ಜನ ಗುಂಡಮ್ಮನನ್ನು ಪ್ರೀತಿಸುತ್ತಾರೆ.

– ನಿಮ್ಮ ವ್ಯಕ್ತಿತ್ವ ಕೂಡ ಗುಂಡಮ್ಮನ ವ್ಯಕ್ತಿತ್ವಕ್ಕೆ ಹೋಲುತ್ತದೆಯಾ?
ಹೌದು. ತುಂಬಾ ಹೋಲುತ್ತದೆ. ನಾನು ಗುಂಡಮ್ಮಳಂತೆಯೇ ತುಂಬಾ ಪಾಸಿಟಿವ್‌ ವೈಬ್ಸ್ಗಳನ್ನು ಸುತ್ತಲೂ ಹರಡುತ್ತೇನೆ. ನನ್ನ ಸುತ್ತಲಿರುವವರನ್ನು ನಗಿಸುತ್ತಾ ನಾನು ನಗುನಗುತ್ತಾ ಇರುತ್ತೇನೆ. ನಾನೂ ಅವಳ ಹಾಗೆಯೇ ಮುಗೆœ ಕೂಡ. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂದು ಗೊತ್ತಾಗಲ್ಲ. 

– ಆದರೆ, ಚಿಕ್ಕವಳಿದ್ದಾಗ ಬಜಾರಿಯಾಗಿದ್ದಿರಿ ಎಂದಿರಿ? 
ಹೌದು. ನಾನು ತುಂಬಾ ಜೋರು. ನನಗೆ ಎಷ್ಟು ಧೈರ್ಯ ಇತ್ತು ಎಂದರೆ ನಾನು ಯಾರಿಗೂ ಅಂಜುತ್ತಿರಲಿಲ್ಲ. ರಸ್ತೆಯಲ್ಲಿ ಓಡಾಡುವವರನ್ನೆಲ್ಲಾ ಮಾತನಾಡಿಸುತ್ತಿದ್ದೆ. ಸದಾ ಯಾರದ್ದಾದರೂ ಮನೆಗೆ ಹೋಗಿ ಕುಳಿತುಕೊಂಡಿರುತ್ತಿದ್ದೆ. ಅಮ್ಮ ಕೇರಿಯ ಮಧ್ಯ ಭಾಗಕ್ಕೆ ಬಂದು ಸೀತಾ (ಮನೆಯಲ್ಲಿ ಕರೆಯುವ ಹೆಸರು) ಎಂದು ಗಟ್ಟಿಯಾಗಿ ಕೂಗುತ್ತಿದ್ದರು. ಆಗ ಯಾರದ್ದಾದರೂ ಮನೆಯಿಂದ ಹೊರಬರುತ್ತಿದ್ದೆ. 

– ನೀವು ಹಾಡುಗಾತಿ ಕೂಡ ಅಲ್ವಾ? 
ಹೌದು. ನಾನು ಚಿಕ್ಕಂದಿನಿಂದ ಸಂಗೀತ ಕಲಿತಿದ್ದೇನೆ. ಮೊದಲೆಲ್ಲಾ ಹವ್ಯಾಸ ಎಂದು ಕಲಿಯುತ್ತಿದ್ದೆ. ಕಾಲಿಗೆ ಗಾಯವಾದ ಬಳಿಕ ಸಂಗೀತದ ಕಡೆ ಹೆಚ್ಚು ಗಮನ ಹರಿಸಲು ಪ್ರಾರಂಭಿಸಿದೆ. ಸಂಗೀತದಲ್ಲಿ ಎಷ್ಟು ಮುಳುಗಿ ಹೋಗಿದ್ದೆ ಎಂದರೆ ವರ್ಷಕ್ಕೆ ಕನಿಷ್ಠ 300 ಬಹುಮಾನಗಳನ್ನು ಗೆಲ್ಲುತ್ತಿದ್ದೆ. ಬಿ.ಕಾಂ. ಮಗಿಸಿದ ಬಳಿಕ “ನಾರ್ಧರ್ನ್ ಟ್ರಸ್ಟ್‌’ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲೂ ಬರೀ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಒಮ್ಮೆ ಮ್ಯಾನೇಜರ್‌ ಸರಿಯಾಗಿ ಬೈದರು. ಬಳಿಕ ನಾನು ಕೆಲಸವನ್ನೇ ಬಿಟ್ಟು ಸಂಪೂರ್ಣವಾಗಿ ಸಂಗೀತದ ಕಡೆ ತೊಡಗಿಸಿಕೊಂಡೆ.

Advertisement

– ನಿಮ್ಮ ಸಂಗೀತದ ಜರ್ನಿ ಬಗ್ಗೆ ಹೇಳಿ? 
ನಾನು ಗಾಯಕಿ ಎಂದು ನನ್ನನ್ನು ನಾನು ಹೊರಪ್ರಪಂಚಕ್ಕೆ ತೋರಿಸಿಕೊಂಡಿದ್ದೇ ಸೋಷಿಯಲ್‌ ಮೀಡಿಯಾ ಮೂಲಕ. ಕೆಲ ಸಂಗೀತಾಸಕ್ತರು ಮತ್ತು ಸಂಗೀತಗಾರರನ್ನು ಫೇಸ್‌ಬುಕ್‌  ಮೂಲಕ ಪರಿಚಯ ಮಾಡಿಕೊಂಡೆ. ಅವರ ಮೂಲಕ “ಉದಯ ಟೀವಿ’ಗಾಗಿ “ಸಂಗೀತಾ’ ಎಂಬ ಕಾರ್ಯಕ್ರಮ ಮಾಡಲು ಅವಕಾಶ ಪಡೆದೆ. ಹಾಗೆ ಹಲವಾರು ಕಾರ್ಯಕ್ರಮಗಳಲ್ಲಿ ಹಾಡುವ ಅವಕಾಶ ಗಿಟ್ಟಿಸಿಕೊಂಡೆ. ಯುಟ್ಯೂಬ್‌ ನಲ್ಲಿ ನನ್ನ ಸಂಗೀತ ಕಾರ್ಯಕ್ರಮದ ವಿಡಿಯೋ ನೋಡಿಯೇ ನನಗೆ “ಬ್ರಹ್ಮಗಂಟು’ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು. 

– ಅಪ್ಪ, ಅಮ್ಮ ನಿಮ್ಮೆಲ್ಲಾ ಸಾಂಸ್ಕೃತಿಕ ಚಟುವಟಿಕೆಗೆ ಬೆಂಬಲ ಕೊಡ್ತಾಯಿದ್ರಾ? 
ಇಲ್ಲ. ನಮ್ಮದು ಕೆಳ ಮಧ್ಯಮ ವರ್ಗದ ಕುಟುಂಬ. ನಿಮಗೇ ಗೊತ್ತಿರುತ್ತದೆ “ನಮಗೆಲ್ಲಾ ಶಿಕ್ಷಣ, ಒಂದು ಓಳ್ಳೆಯ ಉದ್ಯೋಗವೇ ಆಸ್ತಿ’ ಅಂತ. ಅವರಿಗೆ ಸಂಗೀತವನ್ನು ನನ್ನ ಉದ್ಯೋಗವನ್ನಾಗಿ ಮಾಡಿಕೊಳ್ಳುವುದು ಇಷ್ಟ ಇರಲಿಲ್ಲ. ಸಂಗೀತಕ್ಕೇ “ನೋ’ ಎಂದವರು ಅಭಿನಯ ಎಂದರೆ “ಎಸ್‌’ ಎನ್ನುತ್ತಾರಾ?

– ಬಿಡುವಿನ ಸಮಯದಲ್ಲಿ ಏನು ಮಾಡುತ್ತೀರ?
ಅಂಧ ಮಕ್ಕಳ ಶಾಲೆಗಳಿಗೆ ಭೇಟಿ ನೀಡುತ್ತೇನೆ, ಕ್ಯಾನ್ಸರ್‌ ಅಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೋಸ್ಕರ ಹಾಡುತ್ತೇನೆ. ಅವರನ್ನೆಲ್ಲ  ನೋಡಿದಾಗ ನಮ್ಮ ಜೀವನದಲ್ಲಿ ಏನೂ ಕಮ್ಮಿಯಾಗಿಲ್ಲ ಎಂಬುದು ಅರಿವಾಗುತ್ತದೆ. 

– ಧಾರಾವಾಹಿಯಲ್ಲಿ ಗೀತಾ ಮದುವೆಯಾಗಲು ಏಕೆ ತುದಿಗಾಲ ಮೇಲೆ ನಿಂತಿರುತ್ತಾಳೆ? ಆಕೆಗೆ ಮದುವೆ ಅಷ್ಟೇ ಜೀವನವಾ?
ಗೀತಾ ಹಾಗೆ ಯೋಚಿಸಲೂ ಒಂದು ಕಾರಣವಿದೆ. ದಪ್ಪಗಿರುವ ಕಾರಣ ಆಕೆಯನ್ನು ಎಲ್ಲರೂ  ಈ ವರೆಗೆ ತಿರಸ್ಕಾರದಿಂದ ಕಂಡಿರುತ್ತಾರೆ. ಆಕೆಯೂ ಎಲ್ಲರಂತೆ ಮನುಷ್ಯಳು. ಆಕೆಗೂ ಭಾವನೆಗಳಿವೆ ಎಂದು ಯಾರು ಆಕೆಯನ್ನು ನೋಡಿರುವುದಿಲ್ಲ. ಅವಳು ಮನಸ್ಸಲ್ಲಿ ಬಹಳಾ ನೋವು ತಿನ್ನುತ್ತಿರುತ್ತಾಳೆ. ಆಕೆ ಹಂಬಲಿಸುತ್ತಿರುವುದು ಮದುವೆಗಲ್ಲ. ಆದರೆ, ಅವಳನ್ನು ಅರ್ಥ ಮಾಡಿಕ್ಕೊಳ್ಳುವ ಒಬ್ಬ “ಜೀವನ ಸಂಗಾತಿ’ಗಾಗಿ. 

– ಧಾರಾವಾಹಿಯಲ್ಲಿ ಗೀತಾ ಅನುಭವಿಸಿದ ಅವಮಾನಗಳನ್ನು ನೀವೂ ಅನುಭವಿಸಿದ್ದೀರಾ?
ಹೌದು. “ದಪ್ಪಗಿದ್ದೀನಿ’ ಎಂದು ಸ್ನೇಹಿತೆಯರು ನನ್ನನ್ನು ಯಾವಾಗಲೂ ದೂರವೇ ಇಡುತ್ತಿದ್ದರು. ಆಗೆಲ್ಲಾ ಹತ್ತಿರ ಸೇರಿಸಿಕೊಂಡರೂ ನಾನೊಬ್ಬ ಅಸಹಜ ವ್ಯಕ್ತಿ ಎಂಬಂತೆ ಮಾತನಾಡುತ್ತಿದ್ದರು. ಇದರಿಂದೆಲ್ಲಾ ನಾನು ಕುಗ್ಗಿ ಹೋಗುತ್ತಿದ್ದೆ. ಪದವಿಗೆ ಬಂದ ಮೇಲೆ ಒಂದು ವಿಷಯ ಅರ್ಥ ಮಾಡಿಕೊಂಡೆ. ನನ್ನನ್ನು ನೋಡಿ ನಾನೇ ನಕ್ಕರೆ ಸುತ್ತಲಿದ್ದವರೆಲ್ಲಾ ತೆಪ್ಪಗಾಗುತ್ತಾರೆ ಅಂತ. ಒಮ್ಮೆ ಮೈಸೂರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಹೀಗೆ ಆಯಿತು. ನಾನು ಮೆಟ್ಟಿಲಿಳಿದು ಸ್ಟೇಜ್‌ಗೆ ನಡೆದುಕೊಂಡು ಬರುತ್ತಿದ್ದೆ, ಕಾಲಿಗೆ ಸೀರೆ ಸಿಕ್ಕು ಧಬಾರ್‌ ಅಂತ ಬಿದ್ದೆ. ತಕ್ಷಣ ಎದ್ದು ಕೂತು ನಗಲು ಆರಂಭಿಸಿದೆ. ಆಗ ನನ್ನನ್ನು ನೋಡಿ ಯಾರೂ ನಗಲಿಲ್ಲ. ಇದನ್ನೇ ಈಗಲೂ ಪಾಲಿಸುತ್ತಿದ್ದೇನೆ. ಇನ್ನೊಂದು ವಿಷಯ ಹೇಳಾÉ? ನಾನು ದಪ್ಪ ಇರದಿದ್ದರೆ “ಗುಂಡಮ್ಮ’ನ ಪಾತ್ರ ಸಿಗುತ್ತಿತ್ತಾ? ಅದಕ್ಕೇ ಎಲ್ಲದನ್ನೂ ಪಾಸಿಟಿವ್‌ ಆಗಿ ನೋಡಬೇಕು ಅಂತೇನೆ ನಾನು. 

ಭಾವಗೀತೆಗಳನ್ನು ಕೇಳುತ್ತಾ ಅಳುತ್ತೇನೆ…
ಸಮಯವಿದ್ದಾಗಲೆಲ್ಲಾ ಭಾವಗೀತೆಗಳನ್ನು ಕೇಳುತ್ತೇನೆ. ಕೇಳುತ್ತಾ ಅದರಲ್ಲೇ ತಲ್ಲೀನಳಾಗುತ್ತೇನೆ. ಎಷ್ಟೋ ಭಾವಗೀತೆಗಳನ್ನು ಕೇಳುತ್ತಾ ನನಗರಿವಾದಂತೆ ಅಳುತ್ತೇನೆ. “ಎಲ್ಲಿ ಜಾರಿತೋ ಮನವು’ ಹಾಡು ಕೇಳುತ್ತಾ ಸಾಕಷ್ಟು ಬಾರಿ ಅತ್ತಿದ್ದೇನೆ. ಕೆಎಸ್‌ನ ಅವರ “ತೌರ ಸುಖದೊಳೆನ್ನ’ ಮತ್ತು “ಮೊದಲ ದಿನ ಮೌನ’ ಗೀತೆಗಳನ್ನು ಕೇಳುವ ವೇಳೆ ನನ್ನಲ್ಲಿರುವ ಹೆಣ್ಣು ಸಾಕಷ್ಟು ಬಾರಿ ಮರುಗಿದ್ದಾಳೆ, ನೊಂದಿದ್ದಾಳೆ. ಅದರಲ್ಲೂ ರಾಜು ಅನಂತಸ್ವಾಮಿ ಗಾಯನ ಎಂದರೆ ನನಗೆ ಇನ್ನಿಲ್ಲದ  ಪ್ರೀತಿ. ಭಾವಗೀತೆಗಳು ನನ್ನನ್ನು ನಗಿಸುತ್ತವೆ, ಅಳಿಸುತ್ತವೆ. ಒಟ್ಟಿನಲ್ಲಿ ಜೀವನದ ಸಾರ ಹೇಳುತ್ತವೆ. 

ನಾನು ನಾಯಿಗೇ ಕಚ್ಚಿದ್ದೆ…
ಚಿಕ್ಕವಳಿದ್ದಾಗ ನಾನು ರೌಡಿ ಥರಾ ವರ್ತಿಸುತ್ತಿದ್ದೆ. ಕೋಪ ಬಂದಾಗ ನನ್ನ ಸ್ನೇಹಿತರಿಗೆ ಕಚ್ಚುವುದು, ಪರಚುವುದು, ಹೊಡೆಯುವುದು ಮಾಡುತ್ತಿದ್ದೆ. ನಾನು ಎಲ್‌ಕೆಜಿಯಲ್ಲಿರುವಾಗ ಸ್ಕೂಲ್‌ ಮುಗಿಸಿಕೊಂಡು ಡೇ ಕೇರ್‌ಗೆ ಹೋಗುತ್ತಿದ್ದೆ. ಅಲ್ಲಿ ಒಂದು ನಾಯಿ ಮರಿ ಇತ್ತು. ಅದು ಸದಾ ಓಡಿ ಬಂದು ಮುಖ ನೆಕ್ಕುವುದು, ಮೈ ಮೇಲೆ ಎಗರುವುದು ಮಾಡುತ್ತಿತ್ತು. ಒಂದಿನ ಸ್ವಲ್ಪ ಅತಿಯೇ ಮಾಡಿತು. ನನಗೆ ಕೋಪ ಬಂದು ಅದನ್ನು ಎತ್ತಿಕೊಂಡು ಅದಕ್ಕೇ ಕಚ್ಚಿ ಬಿಟ್ಟೆ!

ಔಷಧದಿಂದ ದಪ್ಪಗಾದೆ
ನಾನು ಉತ್ತಮ ಕ್ರೀಟಾಪಟುವಾಗಿದ್ದೆ. ಪ್ರೌಢಶಾಲೆಯಲ್ಲಿ ಕರಾಟೆ, ಬಾಸ್ಕೆಟ್‌ ಬಾಲ್‌, ಶಾಟ್‌ಪುಟ್‌ ಆಡ್ತಾ ಇದ್ದೆ. ಒಂದು ದಿನ ಶಾಲೆ ಮೈದಾನದಲ್ಲಿ ಆಟವಾಡುವಾಗ ಬಿದ್ದೆ. ಕಾಲಿಗೆ ತುಂಬಾ ಪೆಟ್ಟಾಯಿತು. ಎಷ್ಟೋ ಪರೀಕ್ಷೆಗಳ ಬಳಿಕ ತಿಳಿಯಿತು: ಮೂಳೆಯೊಳಗೆ ಇನ್‌³ಫೆಕ್ಷನ್‌ ಆಗಿದೆ ಅಂತ. ಆಮೇಲೆ ವರ್ಷಗಟ್ಟಲೆ ಮಾತ್ರೆ, ಔಷಧಿ ಸೇವಿಸಿದೆ, ಔಷಧಿಯಿಂದ ದಪ್ಪಗಾಗುತ್ತಾ ಹೋದೆ. ಆನಂತರದಲ್ಲಿ ನನಗಿಷ್ಟದ ಕ್ರೀಡಾ ಚಟುವಟಿಕೆಗಳೆಲ್ಲಾ ನಿಂತೇ ಹೋದವು.

ನನ್ನನ್ನು ದೂರವಿಟ್ಟವರೆಲ್ಲಾ ಈಗ ಆತ್ಮೀಯರಂತೆ ಮಾತಾಡಿಸ್ತಾರೆ!
ನನ್ನದು ಕೆಳ ಮಧ್ಯಮ ಕುಟುಂಬ. ನಮ್ಮ ಅನೇಕ ಬಂಧುಗಳು ನಮ್ಮನ್ನು ಕಂಡರೆ ಉದಾಸೀನ ಮಾಡುತ್ತಿದ್ದರು. ಇನ್ನು ಕೆಲವರು ನಾನು ದಪ್ಪಗಿದ್ದೀನಿ ಎಂದು ಗೇಲಿ ಮಾಡುತ್ತಿದ್ದರು. ಈಗ ಅವರೆಲ್ಲರೂ ಬಂದು ಆತ್ಮೀಯವಾಗಿ ಮಾತನಾಡಿಸುತ್ತಾರೆ. ನನಗೇ ಕೆಲವೊಮ್ಮೆ ಮಾತನಾಡಬೇಕೋ ಬೇಡವೋ ಎಂದು ಗೊಂದಲವಾಗುತ್ತದೆ. ಹೈ ಸ್ಕೂಲ್‌, ಕಾಲೇಜು ದಿನಗಳಲ್ಲಿ ನನ್ನ ಸಹಪಾಠಿಗಳು ನನ್ನನ್ನು ದೂರ ಇಡುತ್ತಿದ್ದರು. ನಾನು ಆದಷ್ಟೂ ಒಬ್ಬಳೇ ಇರುತ್ತಿದ್ದೆ. ನನಗೇ ನನ್ನ ಬಗ್ಗೆ ಕೀಳರಿಮೆ ಬರುವಂತೆ ಮಾಡುತ್ತಿದ್ದರು. ಅವರು ಕೂಡ ಈಗ ನನ್ನ ಕಡೆ ಬೆರಗಿನಿಂದ ತಿರುಗಿ ನೋಡುತ್ತಿದ್ದಾರೆ. 

ದಪ್ಪಗಿರುವ ಹುಡುಗಿಯರಿಗೆ ನಾನು ಸ್ಫೂರ್ತಿಯಂತೆ!
“ಬ್ರಹ್ಮಗಂಟು’ ಧಾರಾವಾಹಿ, ದಪ್ಪಗಿರುವ ಎಷ್ಟೋ ಹುಡುಗಿಯರ ಆತ್ಮವಿಶ್ವಾಸ ಹೆಚ್ಚಿಸಿದೆ. ಎಷ್ಟೋ ಹುಡುಗಿಯರು ಫೋನ್‌ ಮಾಡಿ, ನಾನು ದಪ್ಪಗಿದ್ದೀನಿ ಅಂತ ನನಗೆ ಕೀಳರಿಮೆ ಇತ್ತು. ಈಗ ನಿನ್ನನ್ನು ನೋಡಿ ನನಗೆ ಆತ್ಮವಿಶ್ವಾಸ ಹೆಚ್ಚಾಗಿದೆ. ಜೀವನದಲ್ಲಿ ಏನಾದರೂ ಸಾಧಿಸುವ ಆಸೆ ಆಗುತ್ತಿದೆ ಎಂದು ಹೇಳುತ್ತಾರೆ. ಗೀತಾ ಆಗಿ ಹೇಳಲು ಆಗದ ಎಷ್ಟೋ ವಿಷಯಗಳನ್ನು ನಾನು “ಗುಂಡಮ್ಮ’ ಆಗಿ ಹೇಳುತ್ತಿದ್ದೇನೆ. 

– ಚೇತನ ಜೆ.ಕೆ

Advertisement

Udayavani is now on Telegram. Click here to join our channel and stay updated with the latest news.

Next