Advertisement

Interview: ಪಕ್ಷದಲ್ಲಿ ತುಸು ಗೊಂದಲ ನಿಜ; ಅದನ್ನು ಸರಿ ಮಾಡುತ್ತೇವೆ…

12:21 AM Dec 20, 2023 | Team Udayavani |

“ನಾನು ವಿಜಯೇಂದ್ರ ಅವರ ನೆರಳಲ್ಲಿ ಇಲ್ಲ, ವಿಜಯೇಂದ್ರ ನನ್ನ ಹಾಗೂ ಯಡಿಯೂರಪ್ಪನವರ ನೆರಳಲ್ಲೂ ಇಲ್ಲ. ನಮಗೆಲ್ಲರಿಗೂ ವೈಯಕ್ತಿಕ ಸಾಮರ್ಥ್ಯ, ಸ್ವಂತಿಕೆ ಹಾಗೂ ಹಿನ್ನೆಲೆ ಇದೆ. ಹಳೆ ಬೇರು-ಹೊಸ ಚಿಗುರು ಎಂಬ ಸೂತ್ರದ ಅಡಿ ವರಿಷ್ಠರು ಪಕ್ಷ ಸಂಘಟನೆಗಾಗಿ ಈ ನೇಮಕ ಮಾಡಿದ್ದಾರೆ. ನಮಗಿಬ್ಬರಿಗೂ ಇದು ಹೊಸ ಅವಕಾಶ. ಬಿಜೆಪಿ ಎಂದರೆ ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಪಕ್ಷವಲ್ಲ. ಇಲ್ಲಿ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಈ ಕಾರಣಕ್ಕಾಗಿ ಪಕ್ಷ ನಮಗೆ ಜವಾಬ್ದಾರಿ ನೀಡಿದ್ದು, ಒಟ್ಟಿಗೆ ಕೆಲಸ ಮಾಡುತ್ತೇವೆ’ ಎಂದು ವಿಪ‌ಕ್ಷ ನಾಯಕ ಆರ್‌.ಅಶೋಕ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ವಿಪಕ್ಷ ನಾಯಕನಾಗಿ ನೇಮಕಗೊಂಡ ಅನಂತರ ಎದುರಾದ ಮೊದಲ ಅಧಿವೇಶನ, ಪಕ್ಷದೊಳಗಿನ ಗೊಂದಲ ಹಾಗೂ ಸರಕಾರದ ವಿರುದ್ಧ ನಡೆಸಲು ಉದ್ದೇಶಿಸಿರುವ ಹೋರಾಟದ ಬಗ್ಗೆ “ಉದಯವಾಣಿ”ಯ ನೇರಾನೇರ ಸಂದರ್ಶನದಲ್ಲಿ ಅಶೋಕ್‌ ಅಭಿಪ್ರಾಯ ಹಂಚಿಕೊಂಡಿದ್ದು, “ನನ್ನದು ಅಟಲ್‌ ಬಿಹಾರಿ ವಾಜಪೇಯಿ ಮಾದರಿ ರಾಜಕಾರಣ. ಮೃದುಭಾಷಿಯೆಂದ ಮಾತ್ರಕ್ಕೆ ನನ್ನನ್ನು ದುರ್ಬಲ ಎಂದು ಪರಿಗಣಿಸಬೇಕಾದ ಅಗತ್ಯವಿಲ್ಲ” ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಸಂದರ್ಶನದ ಪೂರ್ಣ ಪಾಠ ಹೀಗಿದೆ…

ವಿಪಕ್ಷ ನಾಯಕರಾದ ಬಳಿಕ ಮೊದಲ ಬಾರಿಗೆ ಎದುರಾದ ಅಧಿವೇಶನದಲ್ಲಿ ನೀವು ವಿಫ‌ಲರಾದಿರಿ ಎಂಬ ಟೀಕೆ ವ್ಯಕ್ತವಾಗುತ್ತಿದೆ. ಒಪ್ಪಿಕೊಳ್ಳುತ್ತೀರಾ?
ಆರ್‌.ಅಶೋಕ್‌ ವಿಫ‌ಲ ಎಂದು ಒಂದೇ ಅಧಿವೇಶನದಿಂದ ಹೇಗೆ ಅಳೆಯುತ್ತೀರಿ? ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಯ ಕೆಲವು ಗೊಂದಲಗಳು ಮಾತ್ರ ಮಾಧ್ಯಮದಲ್ಲಿ ವಿಜೃಂ ಭಿಸಿದವು. ನೀವು ಕಲಾಪದ ಇನ್ನೊಂದು ಬದಿ ಯನ್ನು ಏಕೆ ಪ್ರಸ್ತಾವಿಸುತ್ತಿಲ್ಲ? ಈ ಅಧಿವೇಶನದಲ್ಲಿ 3 ಗಂಟೆ 14 ನಿಮಿಷಗಳ ಕಾಲ ನಾನು ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಅಂಕಿ-ಸಂಖ್ಯೆ ಸಮೇತ ಮಾತನಾಡಿ ಸರಕಾರದ ಗಮನ ಸೆಳೆದಿದ್ದೇನೆ. ಪಕ್ಷದ ಸೈದ್ಧಾಂತಿಕ ವಿಚಾರಗಳು ಬಂದಾಗ ದೃಢವಾಗಿ ಧ್ವನಿ ಎತ್ತಿದ್ದೇನೆ. ಪ್ರತಿದಿನವೂ ಒಂದಿಲ್ಲೊಂದು ವಿಚಾರವನ್ನು ಮುನ್ನೆಲೆಗೆ ತಂದು ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿದ್ದೇನೆ. ಇದೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳದೆ ವೈಫ‌ಲ್ಯದ ಷರಾ ಬರೆದರೆ ಹೇಗೆ?

ಪಕ್ಷದಲ್ಲಿ ಗೊಂದಲ ಇದೆ. ತಹಬದಿಗೆ ಬರುವ ಲಕ್ಷಣ ಕಾಣುತ್ತಿಲ್ಲ ಎಂಬುದು ನಿಜವಲ್ಲವೇ?
ಹೌದು. ಸ್ವಲ್ಪ ಗೊಂದಲ ಇರುವುದು. ನಮ್ಮಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಿಪಕ್ಷ ನಾಯಕ ಸ್ಥಾನಕ್ಕೆ ಆಕಾಂಕ್ಷೆ ಪಟ್ಟವರು ಹಲವರಿದ್ದರು. ಆದರೆ ವರಿಷ್ಠರು ನಮ್ಮ ಮೇಲೆ ನಿರೀಕ್ಷೆ ಇಟ್ಟು ಜವಾಬ್ದಾರಿ ನೀಡಿದ್ದಾರೆ. ಈ ಕಾರಣಕ್ಕಾಗಿ ಕೆಲವರಿಗೆ ಬೇಸರವಾಗಿದೆ. ಈ ಗೊಂದಲದಿಂದ ಹೊರ ಬರುವುದಕ್ಕೆ ಸ್ವಲ್ಪ ಸಮಯಬೇಕು. ಆದರೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಗುಣ ಹಾಗೂ ನಡತೆ ನನ್ನಲ್ಲಿ ಇದೆ. ಪಕ್ಷದ ಹಿತದೃಷ್ಟಿಯಿಂದ ಅರವಿಂದ್‌ ಬೆಲ್ಲದ್‌ ಜತೆಗೆ ಈಗಾಗಲೇ ಮಾತನಾಡಿದ್ದೇನೆ. ಯತ್ನಾಳ್‌, ಎಸ್‌.ಆರ್‌.ವಿಶ್ವನಾಥ್‌ ಜತೆಗೂ ಮಾತನಾಡುತ್ತೇನೆ. ಯಾರನ್ನೂ ಪಕ್ಕಕ್ಕೆ ಇಟ್ಟು ರಾಜಕಾರಣ ಮಾಡುವ ಸ್ವಭಾವ ನನ್ನದಲ್ಲ. ಎಲ್ಲರೊಟ್ಟಿಗೆ ಹೆಜ್ಜೆ ಇಡುತ್ತೇನೆ.

ವಿಪಕ್ಷ ನಾಯಕನ ಪಟ್ಟ ಕಟ್ಟುತ್ತಾರೆ ಎಂಬ ನಿರೀಕ್ಷೆ ನಿಮಗಿತ್ತಾ?
ರಾಜ್ಯ ವಿಧಾನಸಭಾ ಚುನಾವಣೆ ಫ‌ಲಿತಾಂಶದ ಬಳಿಕ ವಿಪಕ್ಷ ನಾಯಕ ಸೇರಿದಂತೆ ಆಯಕಟ್ಟಿನ ಸ್ಥಾನಗಳಿಗೆ ನೇಮಕವಾಗಿರಲಿಲ್ಲ. ನಿಜ ಹೇಳಬೇಕೆಂದರೆ ನಾನು ರಾಜ್ಯಾಧ್ಯಕ್ಷ ಸ್ಥಾನವನ್ನು ಬಯಸಿದ್ದೆ. ವರಿಷ್ಠರಲ್ಲಿಯೂ ಈ ಆಕಾಂಕ್ಷೆಯನ್ನು ತೋಡಿಕೊಂಡಿದ್ದೆ. ಆದರೆ ವಿಪಕ್ಷ ನಾಯಕನ ಸ್ಥಾನವನ್ನು ನಿರೀಕ್ಷೆ ಮಾಡಿರಲಿಲ್ಲ. ಅದು ಅನಿರೀಕ್ಷಿತ. ನಾನು ಪಕ್ಷದ “ಕೇಡರ್‌’ನಿಂದ ಬೆಳೆದು ಬಂದವನು. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಸಾಂವಿಧಾನಿಕ ಜವಾಬ್ದಾರಿ ಕೊಟ್ಟಿದೆ. ಹೊಣೆಗಾರಿಕೆ ಹೆಚ್ಚಾಗಿದೆ.

Advertisement

ಸದನದ ಒಳಗೆ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕೆ ಸಿಗುವ ಅವಧಿ ಹೆಚ್ಚೆಂದರೆ 60 ದಿನ. ಆದರೆ ಸದನದ ಹೊರಗೆ ಹೊಣೆಗಾರಿಕೆ ಜಾಸ್ತಿ. ಇದಕ್ಕಾಗಿ ನಿಮ್ಮ ಆ್ಯಕ್ಷನ್‌ ಪ್ಲ್ರಾನ್‌ ಏನು ?
60 ದಿನಗಳ ಕಾಲ ಅಧಿವೇಶನ ನಡೆದಿದ್ದೇ ಕಡಿಮೆ. ಹೆಚ್ಚೆಂದರೆ ವರ್ಷದಲ್ಲಿ 30ರಿಂದ 40 ದಿನಗಳ ಕಾಲ ಮಾತ್ರ ಕಲಾಪ ನಡೆಯುತ್ತದೆ. ಹೀಗಾಗಿ ಸದನದ ಹೊರಗೆ ಹೆಚ್ಚಿನ ಹೋರಾಟ ಹಾಗೂ ಪ್ರವಾಸ ನಡೆಸಬೇಕಾದ ಹೊಣೆಗಾರಿಕೆ ವಿಪಕ್ಷ ನಾಯಕನ ಮೇಲಿರುತ್ತದೆ. ಜನರು ಬಯಸುವುದು ಕೂಡಾ ಅದನ್ನೇ. ಜನರಿಗೆ ನ್ಯಾಯ ಕೊಡಿಸಲು ರಾಜ್ಯ ಸುತ್ತಬೇಕು. ಇದಕ್ಕಾಗಿ ಯೋಜನೆ ರೂಪಿಸಿದ್ದೇನೆ. ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ, ಭ್ರೂಣ ಹತ್ಯೆ, ಮಾಲೂರು ಹಾಸ್ಟೇಲ್‌ ಪ್ರಕರಣ ಸಂಬಂಧ ಕೇವಲ ಸ್ಥಳ ಪರಿಶೀಲನೆ ನಡೆಸಿದ್ದು ಮಾತ್ರವಲ್ಲ ಹೋರಾಟವನ್ನೂ ಮಾಡಿದ್ದೇನೆ. ಜನಪರ ಹೋರಾಟದ ಪ್ರಶ್ನೆ ಎದುರಾದಾಗ ಕೈಕಟ್ಟಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ.

ಎಂದಿನಿಂದ ನಿಮ್ಮ ಹೋರಾಟ ಆರಂಭ?
ಎಂದಿನಿಂದ ಎಂಬ ಪ್ರಶ್ನೆಯೇ ಇಲ್ಲ. ಪ್ರತಿದಿನವೂ ಹೋರಾಟ. ಭ್ರೂಣ ಹತ್ಯೆ ವಿಚಾರಕ್ಕೆ ಸಂಬಂಧಪಟ್ಟಂತೆ ಕಲಾಪದಲ್ಲಿ ಸರಕಾರ ಕೊಟ್ಟ ಉತ್ತರ ನಮಗೆ ತೃಪ್ತಿ ನೀಡಿಲ್ಲ. ಏನಿಲ್ಲವೆಂದರೂ ರಾಜ್ಯದಲ್ಲಿ 4000-5000 ಹೆಣ್ಣು ಭ್ರೂಣಹತ್ಯೆ ಕಳೆದ ಕೆಲವು ತಿಂಗಳಲ್ಲಿ ನಡೆದಿರಬಹುದು. ಮೇಲ್ಮನೆಯಲ್ಲಿ ಸರಕಾರ ಸಿಐಡಿ ತನಿಖೆಗೆ ಆದೇಶಿಸಿದ ಮರುದಿನವೇ ಹೊಸಕೋಟೆ ಸಮೀಪ ಭ್ರೂಣ ಹತ್ಯೆ ನಡೆಯಿತು. ಇದರರ್ಥ ಏನು? ಎಲ್ಲ ಪ್ರಕರಣವನ್ನೂ ಸರಕಾರ ಸಿಐಡಿಗೆ ಒಪ್ಪಿಸಿ ಕೈ ತೊಳೆದುಕೊಳ್ಳುತ್ತಿದೆ.

ನಿಮ್ಮದು ಸಾಫ್ಟ್ ನೇಚರ್‌. ಭಾಷೆಯ ಬಳಕೆಯಲ್ಲೂ ಅಬ್ಬರವಿಲ್ಲ. ಈ ಮೃದುತ್ವದ ಕಾರಣಕ್ಕಾಗಿಯೇ ನಿಮ್ಮನ್ನು ಅಡ್ಜೆಸ್ಟ್‌ಮೆಂಟ್‌ ರಾಜಕಾರಣಿ ಎನ್ನುತ್ತಾರೋ? ಅಥವಾ…
(ನಸುನಗುತ್ತಾ) ಈ ರಾಜ್ಯದ ಮುತ್ಸದ್ಧಿ ರಾಜಕಾರಣಿಗಳ ಪಟ್ಟಿಯಲ್ಲಿ ಅಗ್ರಗಣ್ಯರೆನಿಸಿ ಕೊಂಡವರು ಮಾಜಿ ಸಿಎಂಗಳಾದ ರಾಮಕೃಷ್ಣ ಹೆಗಡೆ ಹಾಗೂ ಎಸ್‌.ಎಂ.ಕೃಷ್ಣ. ಅವರಿಬ್ಬರೂ ಮೃದು ಭಾಷಿಗಳಾಗಿದ್ದರು. ಆದಾಗಿಯೂ ನಾಡು ಕಂಡ ಶ್ರೇಷ್ಠ ಸಂಸದೀಯ ಪಟುಗಳೆಂದು ಪರಿಗಣಿಸುತ್ತಾರೆ. ಧ್ವನಿ ದೊಡ್ಡದಾಗಿದ್ದವರು ಮಾತ್ರ ದೊಡ್ಡ ನಾಯಕರು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ನಾನು ಕಲಾಪದಲ್ಲಾಗಲಿ, ಹೊರಗಾಗಲಿ ಅಸಂಸದೀಯ ಪದವನ್ನು ಬಳಸುವುದಿಲ್ಲ. ಅಟಲ್‌ ಬಿಹಾರಿ ವಾಜಪೇಯಿ ನನ್ನ ಮಾದರಿ ರಾಜಕಾರಣಿ. ಪದಗಳ ವಿಜೃಂಭಣೆ ಇಲ್ಲದೆಯೂ ಸರಕಾರಕ್ಕೆ ಚಾಟಿ ಬೀಸಬಹುದು. ಈ ಕಾರಣಕ್ಕೆ ನನ್ನನ್ನು ಅಡ್ಜಸ್ಟ್‌ಮೆಂಟ್‌ ರಾಜಕಾರಣಿ ಎಂದರೆ ನಾನೇನು ಮಾಡಲು ಸಾಧ್ಯ?

ಡಿ.ಕೆ.ಶಿವಕುಮಾರ್‌ ವಿಚಾರವನ್ನು ಕೊನೆಯ ದಿನ ತಂದಿರಿ. ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಿಮಗೆ ಸಾಧ್ಯವಾಗಲೇ ಇಲ್ಲ?
ಡಿ.ಕೆ.ಶಿವಕುಮಾರ್‌ ವಿಚಾರದ ಬಗ್ಗೆ ಚರ್ಚಿಸಲು ನಾವು ಅಧಿವೇಶನದ ಮೊದಲ ದಿನ ಅವಕಾಶ ಕೋರಿದ್ದರೂ ಸ್ಪೀಕರ್‌ ಇದೇ ರೀತಿ ನಡೆದುಕೊಳ್ಳುತ್ತಿದ್ದರು. ಬೆಳಗಾವಿಗೆ ಬಂದು ಉತ್ತರ ಕರ್ನಾಟಕದ ಚರ್ಚೆಗೆ ಅವಕಾಶ ಕೊಡದೇ ಇದ್ದರೆ ತಪ್ಪಾಗುತ್ತದೆ ಎಂದು ಕೊನೆಯಲ್ಲಿ ಪ್ರಸ್ತಾವಿಸಿದೆವು. ಅದೇ ದಿನ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆಯೂ ನಡೆಯುತ್ತಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ನಿಯಮಾವಳಿಗಳ ಪ್ರಕಾರ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಇರುವ ಪ್ರಕರಣಗಳ ಬಗ್ಗೆ ಸ್ಪೀಕರ್‌ ಚರ್ಚೆಗೆ ಅವಕಾಶ ಕೊಟ್ಟ ಉದಾಹರಣೆಗಳು ಕಡಿಮೆ. ಹೀಗಾಗಿ ಸದನದ ಕಲಾಪವನ್ನು ವಿನಾಕಾರಣ ಹಾಳು ಮಾಡಬಾರದೆಂದು ಕೊನೆಯಲ್ಲಿ ಪ್ರಸ್ತಾವಿಸಿದೆವು. ಸ್ಪೀಕರ್‌ ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಆದರೆ ಈ ವಿಚಾರದಲ್ಲಿ ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ.

ಜೆಡಿಎಸ್‌ ಜತೆಗಿನ ಮೈತ್ರಿಯಿಂದ ಲೋಕಸಭೆ ಯಲ್ಲಿ ನಿಮಗೆ ಲಾಭವೋ, ನಷ್ಟವೋ ?
ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ನಮಗೆ ಖಂಡಿತ ಅನುಕೂಲವಾಗುತ್ತದೆ. ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ತಳಹಂತದಲ್ಲಿ ಯಾವುದೇ ವೈರತ್ವ ಇಲ್ಲ. ಆದರೆ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರಿಗೆ ಹೊಂದಾಣಿಕೆಯಾಗುವುದಿಲ್ಲ. ಹೀಗಾಗಿ ಈ ಮೈತ್ರಿ ನಮಗೆ ಅನುಕೂಲವಾಗುತ್ತದೆ. ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಂಘಟನೆ ಬಲಪಡಿಸುತ್ತೇವೆ. ಸದ್ಯದಲ್ಲೇ ರಾಜ್ಯ ಪ್ರವಾಸ ನಡೆಸುತ್ತೇನೆ.

ಪದಾಧಿಕಾರಿಗಳು ಹಾಗೂ ಉಳಿದ ಹುದ್ದೆಯ ನೇಮಕ ಯಾವಾಗ ?
ಮುಂದಿನ ವಾರಾಂತ್ಯದ ವೇಳೆಗೆ ದಿಲ್ಲಿಗೆ ತೆರಳಿ ಮೇಲ್ಮನೆ ವಿಪಕ್ಷ ನಾಯಕ, ಉಪನಾಯಕ, ಸಚೇತಕ, ವಿಧಾನಸಭೆಯ ಉಪನಾಯಕ, ಸಚೇತಕರ ಆಯ್ಕೆ ಹಾಗೂ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತೇವೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತೇನೆಂಬ ವಿಶ್ವಾಸ ನನಗಿದೆ.

ಸದನದಲ್ಲಿ ಸರಕಾರವನ್ನು ಕಟ್ಟಿ ಹಾಕುವುದಕ್ಕೆ ಇದ್ದ ಅವಕಾಶಗಳನ್ನು ಅನಾಯಾಸವಾಗಿ ಕೈಚೆಲ್ಲಿದಿರಿ ಎಂದು ಅನ್ನಿಸುತ್ತಿಲ್ಲವೇ?
ಇಲ್ಲ. ನಾವು ಯಾವ ವಿಚಾರವನ್ನು ಬಿಟ್ಟಿದ್ದೇವೆ ಹೇಳಿ? ಕಾರ್ಯಕರ್ತರ ಮೇಲಿನ ಹಲ್ಲೆಯಿಂದ ಹಿಡಿದು ಜಮೀರ್‌ ರಾಜೀನಾಮೆಗೆ ಆಗ್ರಹಿಸಿದ್ದು ಸೇರಿದಂತೆ ಎಲ್ಲದರ ವಿರುದ್ಧ ಹೋರಾಟ ನಡೆಸಿದ್ದೇವೆ. ಆದರೆ ನಮ್ಮ ಪಕ್ಷದ ಆಂತರಿಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಣ್ಣಪುಟ್ಟ ವಿಚಾರಗಳು ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆದಿದ್ದರಿಂದ ಈ ರೀತಿಯ ಭಾವನೆ ಮೂಡಿದೆ. ಇನ್ನೊಂದು ಮುಖವನ್ನು ಯಾರೂ ಗಮನಿಸಿಲ್ಲ ಎಂಬುದು ಬೇಸರದ ಸಂಗತಿ.

 ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next