Advertisement

Interview: ಉತ್ತಮ ಶಾಸಕ ಪ್ರಶಸ್ತಿ ಆಯ್ಕೆಗೆ ತಜ್ಞರ ಸಮಿತಿ ರಚನೆ ಚಿಂತನೆ: ಸ್ಪೀಕರ್‌ ಖಾದರ್‌

12:41 AM Nov 26, 2023 | Team Udayavani |

ಬೆಂಗಳೂರು: ಉತ್ತಮ ಶಾಸಕ ಪ್ರಶಸ್ತಿ ಆಯ್ಕೆಗೆ ಸಮಿತಿ ರಚಿಸುವ ಉದ್ದೇಶವಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದ್ದಾರೆ.

Advertisement

“ಉದಯವಾಣಿ’ ಬೆಂಗಳೂರು ಕಚೇರಿಯಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷವೂ ಉತ್ತಮ ಶಾಸಕ ಪ್ರಶಸ್ತಿಯನ್ನು ವಿಧಾನಸಭೆಯಿಂದ ನೀಡಲಾಗುತ್ತದೆ. ಸಭಾಧ್ಯಕ್ಷರೇ ಆಯ್ಕೆ ಪ್ರಕ್ರಿಯೆ ನಡೆಸುವ ಪದ್ಧತಿ ಈಗ ಇದೆ. ಅದರ ಬದಲು ಮಾಜಿ ಸ್ಪೀಕರ್‌, ನಿವೃತ್ತ ನ್ಯಾಯಾಧೀಶರು, ಮಾಜಿ ಉಪನ್ಯಾಸಕರನ್ನು ಒಳಗೊಂಡ ಸಮಿತಿ ರಚಿಸುವ ಉದ್ದೇಶವಿದೆ. ವರ್ಷಪೂರ್ತಿ ಒಬ್ಬ ಶಾಸಕ ಶಾಸನ ಸಭೆಯಲ್ಲಿ ಹೇಗೆ ನಡೆದುಕೊಂಡಿದ್ದಾನೆ? ಎಷ್ಟು ಜನಪರ ವಿಚಾರಗಳಿಗೆ ಸ್ಪಂದಿಸಿದ್ದಾನೆ ? ನಿಯಮಾವಳಿ ಪ್ರಕಾರ ಯಾವ ರೀತಿ ಕಲಾಪದ ಭಾಗವಾಗಿದ್ದಾನೆ ಮುಂತಾದ ವಿಚಾರಗಳನ್ನು ಅವಲೋಕಿಸಿ ಈ ಸಮಿತಿ ಉತ್ತಮ ಶಾಸಕನನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ ಎಂದು ತಿಳಿಸಿದರು.

ಬಾಲಬ್ರೂಯಿಯಲ್ಲಿ ಶಾಸಕರ ಸಂಸ್ಥೆ ಸ್ಥಾಪನೆ
ಬೆಂಗಳೂರಿನ ಬಾಲಬ್ರೂಯಿ ಅತಿಥಿಗೃಹ ಇರುವ ಸ್ಥಳದಲ್ಲಿ ನ್ಯಾಯಾಲಯದ ಆದೇಶದಂತೆ ಯಾವುದೇ ಮರ, ಕಟ್ಟಡಗಳಿಗೂ ಹಾನಿ ಮಾಡದೆ ಶಾಸಕರಿಗಾಗಿ ಸಂಸ್ಥೆಯೊಂದನ್ನು ಸ್ಥಾಪಿಸಲಾಗುತ್ತದೆ. ಈಗಿರುವ ಮರ-ಗಿಡಗಳ ಜತೆಗೆ ಇನ್ನಷ್ಟು ಸಸಿಗಳನ್ನು ನೆಟ್ಟು ಸಂರಕ್ಷಿಸಲಾಗುತ್ತದೆ. ವಾಹನ ನಿಲುಗಡೆಗೂ ಅವಕಾಶ ಕಲ್ಪಿಸಲಾಗುತ್ತದೆ. ಅದು ಮನೋರಂಜನ ಕ್ಲಬ್‌ ಆಗಿರುವುದಿಲ್ಲ. ಐಎಎಸ್‌ ಅಧಿಕಾರಿಗಳು, ಕೆಎಎಸ್‌ ಅಧಿಕಾರಿಗಳು, ಸರಕಾರಿ ನೌಕರರಿಗೆ ಸಂಘ-ಸಂಸ್ಥೆಗಳು ಇರುವ ರೀತಿಯಲ್ಲಿಯೇ ಇದು ಶಾಸಕರು ಹಾಗೂ ಮಾಜಿ ಶಾಸಕರು ಒಂದೆಡೆ ಸೇರುವ ತಾಣವಾಗಿರಲಿದೆ.

ಕುಟುಂಬ ಸಮೇತ ಕೂಡ ಕಾಲ ಕಳೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಸುಸಜ್ಜಿತವಾದ ಗ್ರಂಥಾಲಯ, ವಾಚನಾಲಯ, ಸಭಾಂಗಣ, ಉಪಾಹಾರ ಕೇಂದ್ರ, ಕೇರಂ, ಚೆಸ್‌ ಇತ್ಯಾದಿ ಒಳಾಂಗಣ ಕ್ರೀಡೆಗಳಿಗೆ ಅವಕಾಶ ಇರಲಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಜಾಗವನ್ನು ಹಸ್ತಾಂತರಿಸಲಾಗಿದ್ದು, ಶೀಘ್ರದಲ್ಲೇ ಶಾಸಕರ ಸಂಸ್ಥೆ ಸ್ಥಾಪನೆಯಾಗಲಿದೆ. ಮುಂದಿನ ದಿನಗಳಲ್ಲಿ ಕ್ಲಬ್‌ನ ಸದಸ್ಯತ್ವ ಶುಲ್ಕ ನಿರ್ಧಾರ ಆಗಲಿದ್ದು, ಅದಕ್ಕೂ ಚುನಾವಣೆ ಮೂಲಕ ಅಧ್ಯಕ್ಷ, ಉಪಾಧ್ಯಕ್ಷ, ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.

ನಾಯಕರ ಮಧ್ಯೆ ಸೌಹಾರ್ದ ಅಗತ್ಯ
ಖಾದರ್‌ಗೆ ಕಾಂಗ್ರೆಸ್‌ ನಾಯಕರ ಜತೆ ಇರುವಷ್ಟೇ ಆತ್ಮೀಯತೆ ಕಲ್ಲಡ್ಕ ಪ್ರಭಾಕರ ಭಟ್ಟರ ಜತೆಯೂ ಇರುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಮಾರ್ಮಿಕ ಉತ್ತರ ನೀಡಿದ ಅವರು, ಸಮಾಜದಲ್ಲಿ ನಾಯಕರು, ಮುಖಂಡರು ಎನ್ನಿಸಿಕೊಂಡವರ ಮಧ್ಯೆ ಸೌಹಾರ್ದ ವಾತಾವರಣ ಇಲ್ಲದೇ ಇದ್ದಾಗ ನಮ್ಮ ಬೆಂಬಲಿಗರು ಹಾಗೂ ವಿಭಿನ್ನ ಸಮಾಜದ ಮಧ್ಯೆ ಜಗಳವಾಗುತ್ತದೆ. ಮುಖಂಡರ ನಡುವೆ ಸೌಹಾರ್ದ ಇದ್ದರೆ ಸಮಾಜದಲ್ಲೂ ಶಾಂತಿ ಇರುತ್ತದೆ. ಹೀಗಾಗಿ ಕಲ್ಲಡ್ಕ ಪ್ರಭಾಕರ ಭಟ್‌ ಸಹಿತ ಎಲ್ಲರ ಜತೆಯೂ ವಿಶ್ವಾಸದಿಂದ ಇದ್ದೇನೆ. ಸಂಸ್ಕೃತಿ ಹಾಗೂ ರಾಜಕೀಯ ಬೇರೆ ಬೇರೆ. ಎಲ್ಲರ ಜತೆಗೆ ವಿಶ್ವಾಸದಿಂದ ಇದ್ದಾಗ ಮಾತ್ರ ಅನುಮಾನ ಹಾಗೂ ದ್ವೇಷ ಮರೆಯಾಗುತ್ತದೆ ಎಂದು ಸ್ಪೀಕರ್‌ ಖಾದರ್‌ ಅಭಿಪ್ರಾಯಪಟ್ಟರು.

Advertisement

ಲಾಕರ್‌ ನೀಡಲು ನಿರ್ಧಾರ
ಯಾವುದೇ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಸುಲಭದ ಮಾತಲ್ಲ. ಸ್ಪೀಕರ್‌ ಆಗಿ ಸದನ ನಡೆಸುವ ಜತೆಗೆ ಶಾಸಕರಿಗೆ ಅನುಕೂಲಕರ ವಾತಾವರಣ ನಿರ್ಮಿಸುವುದು ನಮ್ಮ ಉದ್ದೇಶ. ಈ ಹಿಂದೆ ಶಾಸಕರ ಗುರುತಿನ ಚೀಟಿಗೆ ಗುಣಮಟ್ಟ ಇರಲಿಲ್ಲ. ಈಗ ಬಂಗಾರ ಹಾಗೂ ಬೆಳ್ಳಿ ಬಣ್ಣದ ಗುರುತಿನ ಚೀಟಿ ನೀಡಲಾಗಿದೆ. ಅದೇ ರೀತಿ ಶಾಸಕರ ಭವನದಲ್ಲಿ ಉತ್ತಮ ಗುಣಮಟ್ಟದ ಬೆಡ್‌ ಹಾಗೂ ಬೆಡ್‌ಶೀಟ್‌ ವ್ಯವಸ್ಥೆ ಮಾಡಲಾಗಿದೆ. ಶುದ್ಧ ಕುಡಿಯುವ ನೀರಿಗಾಗಿ ವಾಟರ್‌ ಫ್ಯೂರಿಪೈಯರ್‌ ನೀಡಲು ನಿರ್ಧರಿಸಿದ್ದೇವೆ. ಜತೆಗೆ ಲಾಕರ್‌ ವ್ಯವಸ್ಥೆ ಮಾಡಲೂ ನಿರ್ಧರಿಸಲಾಗಿದೆ ಎಂದು ಖಾದರ್‌ ಹೇಳಿದರು.

ನಾಯಕರ ಮಧ್ಯೆ ಸೌಹಾರ್ದ ಅಗತ್ಯ

ಖಾದರ್‌ಗೆ ಕಾಂಗ್ರೆಸ್‌ ನಾಯಕರ ಜತೆ ಇರುವಷ್ಟೇ ಆತ್ಮೀಯತೆ ಕಲ್ಲಡ್ಕ ಪ್ರಭಾಕರ ಭಟ್ಟರ ಜತೆಯೂ ಇರುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಮಾರ್ಮಿಕ ಉತ್ತರ ನೀಡಿದ ಅವರು, ಸಮಾಜದಲ್ಲಿ ನಾಯಕರು, ಮುಖಂಡರು ಎನ್ನಿಸಿಕೊಂಡವರ ಮಧ್ಯೆ ಸೌಹಾರ್ದ ವಾತಾವರಣ ಇಲ್ಲದೇ ಇದ್ದಾಗ ನಮ್ಮ ಬೆಂಬಲಿಗರು ಹಾಗೂ ವಿಭಿನ್ನ ಸಮಾಜದ ಮಧ್ಯೆ ಜಗಳವಾಗುತ್ತದೆ. ಮುಖಂಡರ ನಡುವೆ ಸೌಹಾರ್ದ ಇದ್ದರೆ ಸಮಾಜದಲ್ಲೂ ಶಾಂತಿ ಇರುತ್ತದೆ. ಹೀಗಾಗಿ ಕಲ್ಲಡ್ಕ ಪ್ರಭಾಕರ ಭಟ್‌ ಸಹಿತ ಎಲ್ಲರ ಜತೆಯೂ ವಿಶ್ವಾಸದಿಂದ ಇದ್ದೇನೆ. ಸಂಸ್ಕೃತಿ ಹಾಗೂ ರಾಜಕೀಯ ಬೇರೆ ಬೇರೆ. ಎಲ್ಲರ ಜತೆಗೆ ವಿಶ್ವಾಸದಿಂದ ಇದ್ದಾಗ ಮಾತ್ರ ಅನುಮಾನ ಹಾಗೂ ದ್ವೇಷ ಮರೆಯಾಗುತ್ತದೆ ಎಂದು ಸ್ಪೀಕರ್‌ ಖಾದರ್‌ ಅಭಿಪ್ರಾಯಪಟ್ಟರು.

ಸದನದೊಳಗೆ ಪ್ರಸ್ತಾವ ಬೇಡ
ಸಭಾಧ್ಯಕ್ಷರ ಪೀಠದ ಬಗ್ಗೆ ಸಚಿವ ಜಮೀರ್‌ ಅಹ್ಮದ್‌ ನೀಡಿರುವ ಹೇಳಿಕೆ ಬಗ್ಗೆ ನಾನು ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಈ ವಿಚಾರದ ಬಗ್ಗೆ ಯಾವುದೇ ಕಾರಣಕ್ಕೂ ಸದನದಲ್ಲಿ ಚರ್ಚೆ ಬೇಡ ಎಂದು ಸ್ಪೀಕರ್‌ ಯು.ಟಿ.ಖಾದರ್‌ ಮನವಿ ಮಾಡಿದ್ದಾರೆ. ಪೀಠದ ಬಗ್ಗೆ ಸದನದ ಒಳಗಾಗಲಿ, ಹೊರಗಾಗಲಿ ಚರ್ಚೆ ನಡೆಸಬಾರದು. ಸದನದ ಹೊರಗೆ ಆದ ಈ ವಿದ್ಯಮಾನದ ಬಗ್ಗೆ ರಾಜಕೀಯ ಬೆರೆಸುವುದು ಬೇಡ. ಕಲಾಪದಲ್ಲಿ ಆ ಬಗ್ಗೆ ಯಾರೂ ಚರ್ಚೆ ಮಾಡದಿದ್ದರೆ ಉತ್ತಮ ಎಂಬುದು ನನ್ನ ಅಭಿಪ್ರಾಯ ಎಂದರು.

ಗುಣಾತ್ಮಕ ಚರ್ಚೆಗೆ 60 ದಿನ ಕಲಾಪ ಅಗತ್ಯ: ಖಾದರ್‌
ಬೆಂಗಳೂರು: ಸದನದಲ್ಲಿ ಗುಣಮಟ್ಟದ ಚರ್ಚೆಯಾಗಬೇಕಾದರೆ ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ. ಸೀಮಿತ ಅವಧಿಯ ಕಲಾಪದಲ್ಲಿ ಉತ್ಕೃಷ್ಟ ಸಂಸದೀಯ ಫ‌ಲ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ವಾರ್ಷಿಕ 60 ದಿನ ಕಡ್ಡಾಯವಾಗಿ ಅಧಿವೇಶನ ನಡೆಸುವ ಬಗ್ಗೆ ಸರಕಾರ ತೀರ್ಮಾನ ಕೈಗೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದ್ದಾರೆ.

ಬೆಂಗಳೂರು “ಉದಯ ವಾಣಿ’ ಕಚೇರಿಯಲ್ಲಿ ಶನಿ ವಾರ ನಡೆದ “ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಜನರ ಎಲ್ಲ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದಕ್ಕೆ ಅವಕಾಶವಿದೆ. ಹೀಗಾಗಿ ಸರಕಾರ ವರ್ಷದಲ್ಲಿ 60 ದಿನ ಅಧಿವೇಶನ ನಡೆಸುವುದಕ್ಕೆ ಅವಕಾಶ ಕಲ್ಪಿಸಿದರೆ ಉತ್ತಮ, ನಾವಂತೂ ಕಲಾಪ ನಡೆಸು ವುದಕ್ಕೆ ಸಿದ್ಧರಿದ್ದೇವೆ. ಸ್ಪೀಕರ್‌ ಆದವನು ಸದಾ “ವಿಪಕ್ಷದ ಮಿತ್ರ’. ನಾನು ಕೂಡ ಅದೇ ರೀತಿ ನಡೆದುಕೊಳ್ಳುತ್ತೇನೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಆ ಭಾಗದ ಚರ್ಚೆಗೆ ಹೆಚ್ಚು ಆದ್ಯತೆ ಸಿಗಬೇಕು ಎಂದು ಅಭಿ ಪ್ರಾಯಪಟ್ಟರು.

ಕರ್ನಾಟಕ ಸುವರ್ಣ ಸಂಭ್ರಮ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನ ನಡೆಯುತ್ತಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದ ರೈತರು, ಕಾರ್ಮಿಕರು ಹಾಗೂ ಸಮಸ್ಯೆ ಬಗ್ಗೆ ಹೆಚ್ಚು ಚರ್ಚೆಯಾಗಬೇಕು. ನಮ್ಮೆಲ್ಲ ಶಾಸಕರಿಗೂ ಜವಾಬ್ದಾರಿ ಇದೆ. ಚುನಾವಣೆ ಸಂದರ್ಭ ಮಾತ್ರ ರಾಜಕಾರಣ ಮಾಡೋಣ. ಉಳಿದ ಸಂದರ್ಭ ಅಭಿವೃದ್ಧಿಯೇ ಆದ್ಯತೆ
ಯಾಗಲಿ. ಕಲಾಪದಲ್ಲಿ ಶಾಸಕರು ಬೇರೆಯವರನ್ನು ರೊಚ್ಚಿಗೆಬ್ಬಿಸುವುದು ಉತ್ತಮ ಸಂಸದೀಯ ನಡಾವಳಿ ಎಂದು ಭಾವಿಸಿಕೊಳ್ಳಬಾರದು. ಕಲಾಪ ದಲ್ಲಿ ನೀವು ನಡೆದುಕೊಳ್ಳುವ ರೀತಿ ಹಾಗೂ ನಡಾವಳಿಗಳು ನಿಮ್ಮ ರಾಜಕೀಯ ಭವಿಷ್ಯವನ್ನೂ ರೂಪಿ ಸುತ್ತವೆ ಎಂದರು.

ಮೊದಲ ಅಧಿವೇಶನದಲ್ಲಿ ನನಗೆ ಸಿಹಿ ಘಟನೆಯೇ ಎದುರಾಗಿದೆ. ಕಹಿ ಘಟನೆಗಳನ್ನು ನಾನು ಅನುಭವ ಎಂದು ಪರಿಗಣಿಸಿದ್ದೇನೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಾಗ ಸಂವಿಧಾನ ಪ್ರಕಾರವೇ ಕ್ರಮವಾಗು ತ್ತದೆ. ನಾನಂತೂ ವಿಪಕ್ಷ ಸದಸ್ಯರಿಗೆ ಆತ್ಮವಿಶ್ವಾಸ ತುಂಬಿ ಅವರಿಗೆ ಹೆಚ್ಚು ಆತ್ಮೀಯನಾಗಿರುತ್ತೇನೆ. ಸ್ಪೀಕರ್‌ ಸ್ಥಾನ ಅತ್ಯಂತ ಗೌರವದ ಹುದ್ದೆ. ಈಗ ಪಕ್ಷ ಮತ್ತು ಚುನಾವಣ ಚಟುವಟಿಕೆಯಿಂದ ದೂರವಿದ್ದೇನೆ ಎಂಬುದನ್ನು ಬಿಟ್ಟರೆ ಬೇರೆ ಯಾವುದೇ ಬೇಸರವಿಲ್ಲ ಎಂದರು.

ಕಾಗದರಹಿತ ವ್ಯವಸ್ಥೆ
ವಿಧಾನಮಂಡಲದ ಕಲಾಪ ಗಳನ್ನು ಸಂಪೂರ್ಣವಾಗಿ ಕಾಗದರಹಿತ ವಾಗಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಇ-ವಿಧಾನ್‌ ವ್ಯವಸ್ಥೆ ಜಾರಿಗೆ ತರುತ್ತೇವೆ. ಇದಕ್ಕಾಗಿ ಏಕೀಕೃತ ಸಾಫ್ಟ್ವೇರ್‌ ಅಭಿವೃದ್ಧಿಪಡಿಸಬೇಕು ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next