Advertisement

ಸಂದರ್ಶನ: ಚಂದ್ರಶೇಖರ ಉಚ್ಚಿಲ ಬಂಟ್ವಾಳ ಕ್ಷೇತ್ರ ಬಿಜೆಪಿ ಉಸ್ತುವಾರಿ

01:01 PM Mar 16, 2018 | Team Udayavani |

ಬಂಟ್ವಾಳದಲ್ಲಿ ಬಿಜೆಪಿ ಚುನಾವಣಾ ತಯಾರಿ ಹೇಗಿದೆ?
ಕ್ಷೇತ್ರದಲ್ಲಿ ಈಗಾಗಲೇ ಪ್ರತಿ ಬೂತ್‌ಗೂ ಬಿಜೆಪಿ ಪ್ರಮುಖರು ಭೇಟಿ ನೀಡಿ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ. ಪ್ರತಿ 3 ಬೂತ್‌ಗಳಿಗೆ ಓರ್ವ ಪ್ರಮುಖರನ್ನು ನೇಮಿಸಿ ಅವರ ಮೂಲಕ ಕಾರ್ಯಕರ್ತರಲ್ಲಿ ಹುರುಪು ತುಂಬುವ ಕಾರ್ಯ ನಡೆದಿದೆ. ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಗ್ರಾಮವಾಸ್ತವ್ಯದ ಮೂಲಕ ಜನರ ಬಳಿ ತೆರಳಲಾಗಿದೆ. ಪರಿವರ್ತನಾ ಯಾತ್ರೆ, ಅಮಿತ್‌ ಶಾ ಭೇಟಿಯಿಂದ ಕಾರ್ಯಕರ್ತರು ಉತ್ಸಾಹಿತರಾಗಿದ್ದಾರೆ. ಇಲ್ಲಿನ ಹೊಂದಾಣಿಕೆಯ ಕಾರ್ಯಾಚರಣೆ ಗೆಲುವನ್ನು ತರಲಿದೆ.

Advertisement

ಬಿಜೆಪಿ ಗೆಲುವಿಗೆ ಪೂರಕ ಅಂಶಗಳೇನು?
ಸಚಿವ ರೈ ಅವರ ಹಿಂದೂ ವಿರೋಧಿ ನೀತಿಯೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಕಲ್ಲಡ್ಕ ಶಾಲೆಯ ಮಧ್ಯಾಹ್ನ ಊಟದ ಅನುದಾನ ಕಡಿತ ಮತ್ತಿತರ ವಿಚಾರಗಳನ್ನು ಇಟ್ಟುಕೊಂಡು ಮತಯಾಚನೆ ಮಾಡಲಿದ್ದೇವೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಚಿಂತನೆಗಳು ಬಿಜೆಪಿ ಪಕ್ಷಕ್ಕೆ ಪೂರಕವಾಗಲಿವೆ.

ಬಂಟ್ವಾಳ ಕ್ಷೇತ್ರಕ್ಕೆ ಬಿಜೆಪಿಯ ಕೊಡುಗೆ ಏನು?
ಬಹುತೇಕ ಅವಧಿಯಲ್ಲಿ ರಮಾನಾಥ ರೈ ಅವರೇ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಹಿಂದೆ ನಾಗರಾಜ ಶೆಟ್ಟಿ ಶಾಸಕರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಜನತೆ ಅದನ್ನು ಈಗಲೂ ಸ್ಮರಿಸುತ್ತಾರೆ. ಸಂಸದರು ಆದ್ಯತೆಯ ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮುಂದೆ ಅಧಿಕಾರಕ್ಕೆ ಬಂದು ಇನ್ನಷ್ಟು ಕೆಲಸ ಕಾರ್ಯಗಳು ಇಲ್ಲಿ ನಡೆಯಲಿವೆ.

ಕ್ಷೇತ್ರದ ಉಸ್ತುವಾರಿಯಾಗಿ ನಿಮ್ಮ ಕಾರ್ಯಚಟುವಟಿಕೆ ?
ನಾನು ಬಂಟ್ವಾಳ ಕ್ಷೇತ್ರದವನು ಅಲ್ಲವಾದರೂ ಸಮೀಪದ ಮಂಗಳೂರು ಕ್ಷೇತ್ರದವನು. ಆದರೆ ಬಂಟ್ವಾಳ ಕ್ಷೇತ್ರದ ಪರಿಚಯ ಚೆನ್ನಾಗಿದೆ. ಈ ಹಿಂದೆ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರ ಸುತ್ತಿದ್ದೇನೆ. ನಾನು ತಳಮಟ್ಟದಿಂದ ಬಂದಿರುವುದರಿಂದ ತಳಮಟ್ಟದ ಕಾರ್ಯಕರ್ತರನ್ನು ತಲುಪಲಿದ್ದೇನೆ.

ಜನತೆ ರಾಜೇಶ್‌  ನಾಯ್ಕ್ ಗೆ ಯಾಕೆ ಮತ ಹಾಕಬೇಕು?
ರಾಜೇಶ್‌ ನಾಯ್ಕ ಅಧಿಕೃತವಾಗಿ ಅಭ್ಯರ್ಥಿಯಾಗಿ ಘೋಷಣೆ ಆಗದಿದ್ದರೂ ಇಲ್ಲಿ ಅನ್ಯ ಅಭ್ಯರ್ಥಿಗಳು ಇಲ್ಲ. ರಾಜೇಶ್‌ ನಾಯ್ಕ್ ಸರಳ, ಸಜ್ಜನಿಕೆಯ ವ್ಯಕ್ತಿ. ಜನ ಸಾಮಾನ್ಯರನ್ನೂ ಪ್ರೀತಿಯಿಂದ ಮಾತನಾಡಿಸಿ ಅವರ ಕಷ್ಟಗಳಿಗೆ ಸ್ಪಂದಿಸುವವರು. ಹೀಗಾಗಿ ಅವರನ್ನು ಇಲ್ಲಿನ ಜನತೆ ಸ್ಮರಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಮತ ಹಾಕಿ ಗೆಲ್ಲಿಸಲಿದ್ದಾರೆ.

Advertisement

„ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next