Advertisement

ಇಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ: ಭಾರತದಲ್ಲಿ ಶೇ.77.7ರಷ್ಟು ಸಾಕ್ಷರಸ್ಥರು

07:07 PM Sep 08, 2020 | Karthik A |

ಇಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ. ಸಾಕ್ಷರತೆಯ ಮಹತ್ವದ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಪ್ರತೀ ವರ್ಷ ಸೆಪ್ಟೆಂಬರ್‌ 8ರಂದು ವಿಶ್ವ ಸಾಕ್ಷರತಾ ದಿನವನ್ನಾಗಿ ಆಚರಿಸಲಾಗುತ್ತದೆ. ಸಾಕ್ಷರತೆಯು ವ್ಯಕ್ತಿಯೊಬ್ಬ ಘನತೆಯಿಂದ ಬದುಕಲು ಸಹಾಯ ಮಾಡುವುದರ ಜತೆಗೆ ಸ್ವಾವಲಂಬಿಯಾಗಲು ಸಹಕರಿಸುತ್ತದೆ. ಈ ಹಿನ್ನೆಲೆಯಲ್ಲಿಯೇ ಸಾಕ್ಷರತೆ ದಿನದ ಮಹತ್ವ ಏನು? ಇತಿಹಾಸವೇನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Advertisement

ಇತಿಹಾಸ
1966ರ ಅಕ್ಟೋಬರ್‌ 26ರಂದು ನಡೆದ ಯುನೆಸ್ಕೋದ 14ನೇ ಜನರಲ್‌ ಕಾನ್ಫರೆನ್ಸ್‌ನಲ್ಲಿ ಸೆ. 8ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. 1967ರಿಂದ ವಿಶ್ವವ್ಯಾಪಿಯಾಗಿ ಈ ದಿನವನ್ನು ಆಚರಿಸುತ್ತಾ ಬರಲಾಯಿತು. ಈ ಮೂಲಕ ಜನರಿಗೆ, ಸಮಾಜಕ್ಕೆ ಮತ್ತು ಸಮುದಾಯಕ್ಕೆ ಸಾಕ್ಷರತೆಯ ಮಹತ್ವಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಯಾಕೆ ಈ ಆಚರಣೆ?
ದೇಶಾದ್ಯಂತ ಜನರಿಗೆ ತಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಹಕ್ಕುಗಳ ಬಗ್ಗೆ ಅರಿವನ್ನು ಮೂಡಿಸುವುದು ಅಂತಾರಾಷ್ಟ್ರೀಯ ಸಾಕ್ಷರತಾ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದ್ದು, ಸಾಕ್ಷರತೆಯನ್ನು ಸಾಮಾಜಿಕ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾದ ಅಂಶ ಎಂದು ಪರಿಗಣಿಸಲಾಗಿದೆ. ಬಡತನ ಪ್ರಮಾಣವನ್ನು ಕುಗ್ಗಿಸುವುದು, ಜನಸಂಖ್ಯೆಯನ್ನು ನಿಯಂತ್ರಿಸುವುದು, ಲಿಂಗ ತಾರತಮ್ಯ ಮತ್ತು ಅಸಮಾನತೆಯಂತಹ ಸಮಸ್ಯೆಗಳು ನಿರ್ಮೂಲನ ಮಾಡುವಲ್ಲಿ ಸಾಕ್ಷರತೆ ಪ್ರಮುಖ ಪಾತ್ರವಹಿಸಲಿದ್ದು, ಪರಿಣಾಮಕಾರಿಯಾಗಿ ಈ ಅಂಶಗಳನ್ನು ಜಾರಿಗೆ ತರಬೇಕಾದರೆ ಪ್ರತಿಯೊಬ್ಬ ಮನುಷ್ಯನು ಸಾಕ್ಷರಸ್ಥನಾಗಿರುವುದು ಅತಿ ಮುಖ್ಯವಾಗಿರುತ್ತದೆ.

ಮೂಲ ಸಾಕ್ಷರತಾ ಕೌಶಲ ಕೊರತೆ
ಆದರೆ ಪ್ರಗತಿಯ ಹೊರತಾಗಿಯೂ, ಇನ್ನೂ ಸಹ ವಿಶ್ವಾದ್ಯಂತ 773 ಮಿಲಿಯನ್‌ ಯುವಕರು ಹಾಗೂ ವಯಸ್ಕರಿಗೆ ಮೂಲಭೂತ ಸಾಕ್ಷರತಾ ಕೌಶಲ್ಯ ಕೊರತೆ ಇದೆ ಎಂದು ವಿಶ್ವಸಂಸ್ಥೆ ಹೇಳಿದೆ. ಯುನೆಸ್ಕೋದ ಪ್ರಕಾರ, ಅಂತಾರಾಷ್ಟ್ರೀಯ ಸಾಕ್ಷರತಾ ದಿನ-2020 ಕೋವಿಡ್‌ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಕ್ಷರತೆ ಬೋಧನೆ ಮತ್ತು ಕಲಿಕೆಯ ಮೇಲೆ ಗಮನ ಹರಿಸಲಿದ್ದು, ಈ ಧ್ಯೇಯ ವಾಕ್ಯವನ್ನೇ 2020ರ ಪರಿಕಲ್ಪನೆ (ಥೀಮ್‌) ಆಗಿ ಇಟ್ಟುಕೊಂಡಿದೆ. ಅದಕ್ಕೂ ಮೀರಿ ಶಿಕ್ಷಣ ತಜ್ಞರ ಪಾತ್ರ ಹಾಗೂ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯ ಮೇಲೂ ಸಹ ತನ್ನ ಗಮನ ಹರಿಸುತ್ತದೆ. ಮುಖ್ಯವಾಗಿ ಯುವಕರು ಹಾಗೂ ವಯಸ್ಕರನ್ನು ಗುರಿಯಾಗಿಸಿಕೊಳ್ಳುತ್ತದೆ ಎಂದು ಹೇಳಿದೆ.

ದೇಶದಲ್ಲಿ ಶೇ.77.7ರಷ್ಟು ಸಾಕ್ಷರಸ್ಥರು
ಇತ್ತೀಚಿಗಿನ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಸಾಕ್ಷರತೆಯ ಪ್ರಮಾಣ ಶೇ.77.7ರಷ್ಟಿದ್ದು, ಆ ಪೈಕಿ ಶೇ.84.7 ರಷ್ಟು ಪುರುಷರಿದ್ದರೆ, ಶೇ.70.3ರಷ್ಟು ಮಹಿಳೆಯರ ಸಾಕ್ಷರತ ಪ್ರಮಾಣವಿದೆ.

Advertisement

15ನೇ ಸ್ಥಾನದಲ್ಲಿ ಕರ್ನಾಟಕ
ದೇಶದ ಸಾಕ್ಷರತಾ ಪಟ್ಟಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳು 2 ರಾಜ್ಯಗಳು ಮೊದಲು ಮತ್ತು ಕೊನೆಯ ಸ್ಥಾನದಲ್ಲಿದ್ದರೆ, ಕೇರಳ ಶೇ.96.2ರಷ್ಟು ಸಾಕ್ಷರತೆ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿ ಸಾಕ್ಷರತಾ ದರದಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿದ್ದು, ಶೇ. 88.7ರಷ್ಟು ಸಾಕ್ಷರತೆ ಸಾಧಿಸುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ ಶೇ.77.7ರಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದುವ ಮೂಲಕ 15ನೇ ಸ್ಥಾನದಲ್ಲಿದ್ದು, ಉತ್ತರಾಖಂಡದಲ್ಲಿ ಶೇ. 87.6 ರಷ್ಟು ಹಾಗೂ ಹಿಮಾಚಲ ಪ್ರದೇಶದಲ್ಲಿ ಶೇ. 86.6 ರಷ್ಟಿದೆ. ಆಂಧ್ರ ಪ್ರದೇಶ ಕೊನೆಯ ಸ್ಥಾನದಲ್ಲಿದೆ.

 

 

 

Advertisement

Udayavani is now on Telegram. Click here to join our channel and stay updated with the latest news.

Next