Advertisement

International Day of Persons with Disabilities:ಅಂಗವೈಕಲ್ಯವನ್ನು ಹಂಗಿಸದಿರೋಣ

12:13 AM Dec 03, 2023 | Team Udayavani |

ಎಲ್ಲ ಪೋಷಕರೂ ತಮ್ಮ ಮಕ್ಕಳು ದೈಹಿಕವಾಗಿ ಮತ್ತು ಬೌದ್ಧಿಕವಾಗಿ ಸಮರ್ಥರಿರಬೇಕೆಂದೇ ಬಯಸುತ್ತಾರೆ. ಆದರೆ ತಮಗೆ ಜನಿಸಿದ ಮಕ್ಕಳು ಸ್ವಾವಲಂಬೀ ಬದುಕನ್ನು ಕಟ್ಟಿಕೊಳ್ಳಲು ಶಕ್ತರಲ್ಲವೆಂದು ತಿಳಿದಾಗ ಅಂತಹ ಹೆತ್ತವರಿಗೆ ಅದರಲ್ಲೂ ತಾಯಿಗೆ ಆಗುವ ನೋವು, ಸಂಕಟ, ಭಯ ಆಘಾತ ಊಹಿಸಲೂ ಕಷ್ಟ . ಆದರೂ ತಾಯಿಯೊಬ್ಬಳು ತನ್ನ ಮಗು ಹೇಗೇ ಇರಲಿ ಅದರ ರಕ್ಷಣೆಗೆ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ. ಇಂತಹ ಮಕ್ಕಳ ತಾಯಂದಿರಿಗೆ ವಿರಾಮವೆಂಬುದೇ ಇರುವುದಿಲ್ಲ. ತನ್ನ ಸ್ವಂತ ಬೇಕು ಬೇಡಗಳಿಗೂ ಸಮಯ ದೊರೆಯುವುದಿಲ್ಲ. ಮಕ್ಕಳ ನಿರ್ವಹಣೆಯ ಜವಾಬ್ದಾರಿ ತಾಯಿಯೊಬ್ಬಳದ್ದೇ ಎಂದು ಪರಿಗಣಿಸಿ ಕುಟುಂಬ ವರ್ಗದವರು ಇವರನ್ನು ಪ್ರತ್ಯೇಕಿಸಿ ಬಿಡುತ್ತಾರೆ. ತಮ್ಮ ಪರಿಸರದಲ್ಲಿರುವ ಇಂತಹ ಮಕ್ಕಳ ಬಗೆಗೆ ಸಹಾನುಭೂತಿ ವ್ಯಕ್ತಪಡಿಸುವ ಜನ ತಮ್ಮದೇ ಕುಟುಂಬದಲ್ಲಿ ಇಂತಹ ಮಗುವಿದೆ ಎಂದು ಹೇಳಿಕೊಳ್ಳಲು ಸಿದ್ಧರಿರುವುದಿಲ್ಲ.

Advertisement

ಸಾಧ್ಯವಾದಷ್ಟೂ ಅದನ್ನು ಮುಚ್ಚಿಡುವ ಪ್ರಯತ್ನವನ್ನು ವಿದ್ಯಾವಂತರೆನಿಸಿಕೊಂಡವರೂ ಮಾಡುತ್ತಾರೆ.
ದೈಹಿಕ ಅಂಗವಿಕಲತೆಯುಳ್ಳವರು ತಮ್ಮ ಬದುಕನ್ನು ರೂಪಿಸಿ ಕೊಳ್ಳಲು ಶಕ್ತರಿರುತ್ತಾರೆ. ಅಲ್ಲದೆ ಸಾರ್ವಜನಿಕವಾಗಿ ಕಾಣಿಸಿ ಕೊಂಡಾಗ ಅವರಿಗೆ ಜನರ ಸಹಾನುಭೂತಿ, ಸಹಕಾರ ದೊರೆ ಯುತ್ತದೆ. ಸರಕಾರ ಅಂಗವಿಕಲರಿಗೆಂದು ಮೀಸಲಿಟ್ಟ ಸೌಲಭ್ಯ ಗಳನ್ನು ಸದುಪಯೋಗಪಡಿಸಿಕೊಂಡು ಬದುಕು ರೂಪಿಸಿ ಕೊಳ್ಳುವ ಚಿಂತನೆ ಅವರಲ್ಲಿರುತ್ತದೆ. ಆದರೆ ಬೌದ್ಧಿಕ ಬೆಳವಣಿ ಗೆಯ ಕೊರತೆಯಿರುವ ಮಕ್ಕಳ ಬದುಕು ಅತ್ಯಂತ ಹೀನಾಯ ವಾದದ್ದು. ಇವರ ನಿರ್ವಹಣೆಗೆ ಯಾವ ರೀತಿಯ ಸೌಲಭ್ಯ ಗಳಿರಬೇಕು ಎಂಬುದರ ಬಗ್ಗೆ ಇನ್ನೂ ಸಮರ್ಪಕ ಚಿಂತನೆಗಳಿಲ್ಲ. ಎಲ್ಲ ಪೋಷಕರೂ ತಮ್ಮ ಮಕ್ಕಳಲ್ಲಿ ಇಂತಹ ನ್ಯೂನತೆಗಳಿದ್ದರೂ ಮೊದಲು ಮೊರೆ ಹೋಗುವುದು ವೈದ್ಯರನ್ನೇ. ಆದರೆ ಆಟಿಸಂ (ಸ್ವಲೀನತೆ)ನಂತಹ ಸಮಸ್ಯೆಗೆ ವೈದ್ಯಕೀಯ ಜಗತ್ತಿನಲ್ಲಿ ಪರಿಹಾರವೇ ಇಲ್ಲ. ನಮ್ಮ ದೇಶದಲ್ಲಿ ಇಂತಹ ಮಕ್ಕಳನ್ನು ಗುರುತಿಸಲು ಪ್ರತೀ ಜಿಲ್ಲಾ ಆಸ್ಪತ್ರೆಯಲ್ಲಿ ವ್ಯವಸ್ಥೆಯಿದೆ. ಆದರೆ ಇದು ಸಮಸ್ಯೆಯನ್ನು ಗುರುತಿನ ಚೀಟಿ ನೀಡಿ ಮುಗಿಸುವುದಕ್ಕಷ್ಟೇ ಸೀಮಿತವಾಗಿದೆ.

ಯಾವುದೇ ಒಂದು ಕುಟುಂಬದಲ್ಲಿ ಬೌದ್ಧಿಕ ಬೆಳವಣಿಗೆಯಲ್ಲಿ ಹಿಂದುಳಿದ ಮಕ್ಕಳಿದ್ದರೆ ಇಡೀ ಕುಟುಂಬವೇ ಸಮಾಜದ ಮುಖ್ಯವಾಹಿನಿಯಿಂದ ಪ್ರತ್ಯೇಕಿಸಲ್ಪಡುತ್ತದೆ. ಅವರನ್ನು ನಿಕೃಷ್ಟ ವಾಗಿ ಕಾಣುವುದು ಅಥವಾ ಅನಗತ್ಯವಾಗಿ ಸಹಾನುಭೂತಿ ವ್ಯಕ್ತ ಪಡಿಸುವುದು, ತಾವೇ ಬುದ್ಧಿವಂತರೆಂದು ಅವರಿಗೆ ಅನಗತ್ಯ ಸಲಹೆಗಳನ್ನು ಪದೇಪದೆ ನೀಡುವುದು ಹೆಚ್ಚಿನವರ ಪ್ರವೃತ್ತಿ ಯಾಗಿ ಬಿಟ್ಟಿದೆ. ಮೇಲ್ನೋಟಕ್ಕೆ ಗುರುತಿಸಲಾಗದ ಆಟಿಸಂ ಮಕ್ಕಳು ಮತ್ತು ಅವರ ಕುಟುಂಬದವರು ಅತ್ಯಂತ ಕೀಳರಿಮೆ ಯಿಂದ ಬಳಲುವ ಸ್ಥಿತಿ ಬಂದೊದಗಿದೆ. ಪರಿಸರದೊಂದಿಗೆ ಹೊಂದಿಕೊಳ್ಳಲಾಗದೇ ಸಮಾಜಮುಖೀ ಬೆಳವಣಿಗೆಯಿಲ್ಲದೆ ಒದ್ದಾಡುತ್ತಿದ್ದಾರೆ. ಅಂಗವಿಕಲ ಕಾಯ್ದೆಯಡಿಯಲ್ಲಿ ಆಟಿಸಂ ಕೂಡ ಗುರುತಿಸಲ್ಪಟ್ಟಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಪ್ರಸ್ತುತ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರನ್ನು ಯಾವುದಾದರೂ ವಿಶೇಷ ಶಾಲೆಗಳಲ್ಲಿ 25 ವರ್ಷಗಳಾ ಗುವವರೆಗೆ ಸೇರ್ಪಡೆಗೊಳಿಸಬಹುದು. ಆದರೆ ಇಂತಹ ಮಕ್ಕಳ ನಿರ್ವಹಣೆ, ಅವರು ವಯಸ್ಕರಾದಂತೆ ಪೋಷಕರಿಗೆ ಹೆಚ್ಚಿನ ಪ್ರಯಾಸಕರವಾದದ್ದು. ಪೋಷಕರೂ ವಯೋಸಹಜವಾಗಿ ದುರ್ಬಲರಾಗುತ್ತಾರೆ. ಇಂತಹ ಪೋಷಕರಿಗೆ ಅವರ ಮಕ್ಕಳ ನಿರ್ವಹಣೆ ಹೇಗೆಂಬುದೇ ದೊಡ್ಡ ಸವಾಲು. ಅಂತಹ ಮಕ್ಕಳಿಗೆ ಸಹೋದರನೋ ಸಹೋದರಿಯಿದ್ದರೂ ಅವರಿಗೆ ಜವಾ ಬ್ದಾರಿಯನ್ನು ನೀಡುವುದು ಕಷ್ಟವೇ.

ಬೇರೆಯೇ ಕುಟುಂಬದಿಂದ ಬರುವ ಅವರ ಜೀವನ ಸಂಗಾತಿಗಳು ಇವರನ್ನು ಒಪ್ಪಿಕೊಳ್ಳಲು ಸಿದ್ಧರಿರುತ್ತಾರೆಯೇ. ಅದಕ್ಕೇನು ಚಿಂತೆ ಬಿಡಿ, ಯಾವುದಾದರೂ ಸಂಸ್ಥೆಗಳಿಗೆ ಸೇರಿಸಿದರಾಯಿತು ಎಂದು ಹೇಳಿ ನಿರಾಳವಾಗಿ ಬಿಡುತ್ತಾರೆ ಅವರ ಸಮೀಪದ ಬಂಧುಗಳು. ಹಿಂದೆ ಕುಟುಂಬದ ಯಜ ಮಾನಿಕೆ ಬಲವಾಗಿದ್ದಾಗ ಮತ್ತು ಒಡಹುಟ್ಟಿದವರ ಸಂಖ್ಯೆ ಹೆಚ್ಚಿದ್ದಾಗ ಎಲ್ಲರೂ ಜತೆಗೂಡಿ ಇವರ ನಿರ್ವಹಣೆ ಮಾಡ ಬಹುದಿತ್ತು. ಆದರೆ ಇಂದು ಚಿಕ್ಕ ಕುಟುಂಬವನ್ನು ಆಯ್ಕೆ ಮಾಡಿಕೊಂಡಿರುವ ನಾವು ಎಲ್ಲೋ ತಪ್ಪು ಮಾಡಿದೆವು ಅನಿಸಿ ಬಿಡುತ್ತದೆ. ಅಂಗವಿಕಲರ ವ್ಯವಸ್ಥಿತ ಜೀವನಕ್ಕಾಗಿ ಹಲವು ಸೌಲ ಭ್ಯಗಳು, ಯೋಜನೆಗಳು ಜಾರಿಯಾಗಿವೆ. ಆದರೆ ಇದು ಕೇವಲ ಬಾಯಾ¾ತಿಗೆ, ಒಂದು ದಿನದ ಆಚರಣೆಗೆ ಸೀಮಿತವಾಗದೆ ಇಂತಹ ವ್ಯಕ್ತಿಗಳ ಪಾಲನೆ, ಪೋಷಣೆ, ಆರೈಕೆ ಬಗೆಗೆ ಸಮಾಜ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ.

Advertisement

ಅಂಗವಿಕಲರ ನಿರ್ವಹಣೆಗೆ ಬೇಕಾಗಿರುವ ಸೌಲಭ್ಯಗಳು

ಅಂಗವಿಕಲ ಅಥವಾ ಬೌದ್ಧಿಕ ಬೆಳವಣಿಗೆ ಕೊರತೆ ಇರುವ ಮಕ್ಕ ಳನ್ನು ಹೊಂದಿದ ಕುಟುಂಬದವರಿಗೆ ಅಂತಹ ಮಕ್ಕಳ ನಿರ್ವ ಹಣೆಗೆ ಪರಿಣತ ಶುಶ್ರೂಷಕರನ್ನು ಒದಗಿಸುವ ಕೆಲಸ ಸರಕಾರ ದಿಂದಲೇ ಆಗಬೇಕು. ಇಂತಹ ಮಕ್ಕಳಿಗೆ ಸರಕಾರ ನೀಡುತ್ತಿರುವ ಪೋಷಣ ಭತ್ತೆಗೆ ಪೋಷಕರ ಆದಾಯದ ಮಿತಿಯ ಮಾನದಂ ಡವನ್ನು ಹೇರಬಾರದು. ಪಿತ್ರಾರ್ಜಿತವಾಗಿ ಇವರಿಗೆ ಬರುವ ಆಸ್ತಿ, ಇವರನ್ನು ನೋಡಿಕೊಳ್ಳುತ್ತಿರುವವರಿಗೆ ಕ್ಷಿಪ್ರಕಾಲದಲ್ಲಿ ದೊರಕುವಂತಾಗಬೇಕು. ಈ ಸಂಬಂಧ ವ್ಯಾಜ್ಯಗಳಿದ್ದರೆ ಅವುಗಳ ಶೀಘ್ರ ಇತ್ಯರ್ಥ್ಯಕ್ಕೆ ಕಾನೂನಿನಲ್ಲಿ ಅಗತ್ಯ ಮಾರ್ಪಾ ಡುಗಳನ್ನು ಮಾಡಿ ಸೂಕ್ತ ವ್ಯವಸ್ಥೆ ಮಾಡಬೇಕು. ಪೋಷಕರ ಕುಟುಂಬ ಪಿಂಚಣಿಯನ್ನು ಅವರ ಜೀವಿತಾವಧಿಯಲ್ಲಿಯೇ ಇಂತಹ ಮಕ್ಕಳಿಗೆ ಮಂಜೂರು ಮಾಡಲು ಈಗಿರುವ ನಿಯಮಾವಳಿಗಳಲ್ಲಿ ಸೂಕ್ತ ತಿದ್ದುಪಡಿ ಮಾಡಬೇಕು. ಪೋಷಕರ ನಿಧನಾನಂತರ ಸಮೀಪದ ಬಂಧುಗಳು ಕಾನೂನುಬದ್ಧ ವಾರಸುದಾರರಾಗಿರುವಂತೆ ಕ್ರಮ ಕೈಗೊಳ್ಳಬೇಕು. ಆದರೆ ಈ ಸೌಲಭ್ಯಗಳಾವುವೂ ದುರುಪಯೋಗವಾಗದಂತೆ, ಅಂಗವಿಕಲ ಅಥವಾ ಬೌದ್ಧಿಕ ಬೆಳವಣಿಗೆ ಕುಂಠಿತವಾಗಿರುವ ಮಕ್ಕಳು/ವ್ಯಕ್ತಿಗಳ ಪೋಷಣೆ, ಆರೈಕೆಗೆ ಬಳಕೆಯಾಗುವುದನ್ನು ಖಾತರಿ ಪಡಿಸಿಕೊಳ್ಳುವ ಹೊಣೆಗಾರಿಕೆ ಸರಕಾರದ ಸಂಬಂಧಿತ ಇಲಾಖೆಗಳದ್ದಾಗಿದೆ.
ಎಲ್ಲ ಅಂಗವಿಕಲರನ್ನೂ ಪ್ರೀತಿಯಿಂದ ಗೌರವಿಸಿ, ಬದುಕಿನ ಕೆಲವು ಕ್ಷಣಗಳನ್ನಾದರೂ ಆನಂದಿಸಲು ಅವರಿಗೆ ಇಡೀ ಮಾನವ ಸಮುದಾಯ ಅವಕಾಶ ಮಾಡಿಕೊಡಬೇಕು. ಯಾವುದೇ ತರದ ದೈಹಿಕ ಮತ್ತು ಬೌದ್ಧಿಕ ಸಮಸ್ಯೆಯನ್ನು ಹೊಂದಿದ ಮಕ್ಕಳಿರುವ ಕುಟುಂಬಗಳು ಕೀಳರಿಮೆಯಿಂದ ಬಳಲುತ್ತಿವೆ. ಈ ಕೀಳರಿಮೆಯಿಂದ ಹೊರಬಂದು ಸಮಾಜದಲ್ಲಿ ಇತರ ಕುಟುಂಬಗಳಂತೆ ಸ್ವಾವಲಂಬಿಯಾಗಿ ಬದುಕುವಂತಾಗಬೇಕು. ಈ ನಿಟ್ಟಿನಲ್ಲಿ ಪೋಷಕರು, ಸಮಾಜ ಮತ್ತು ಸರಕಾರದ ಪಾತ್ರ ಬಲುಮುಖ್ಯವಾದುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next