Advertisement

BJP : ಒಕ್ಕಲಿಗರ ಅವಹೇಳನ: ಭಗವಾನ್‌ ವಿರುದ್ಧ ಬಿಜೆಪಿ ಆಕ್ರೋಶ

10:23 PM Oct 14, 2023 | Pranav MS |

ಬೆಂಗಳೂರು: ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಸಾಹಿತಿ ಪ್ರೊ| ಭಗವಾನ್‌ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ತಲೆತಿರುಕ, ಮೆಂಟಲ್‌ ಗಿರಾಕಿ ಭಗವಾನ್‌ಗೆ ಕಾಂಗ್ರೆಸ್‌ ಸರಕಾರ ರಕ್ಷಣೆ ನೀಡುತ್ತಿದೆ ಎಂದು ಮಾಜಿ ಸಚಿವ ಆರ್‌.ಅಶೋಕ್‌ ಆರೋಪಿಸಿದ್ದಾರೆ.

Advertisement

ಭಗವಾನ್‌ ವಿರುದ್ಧ ಎಲ್ಲೆಡೆ ಪ್ರತಿಭಟನೆಗಳು ನಡೆದಿವೆ. ಅವರ ಹೇಳಿಕೆಯಿಂದ ಇಡೀ ಜನಾಂಗಕ್ಕೆ ಅವಮಾನವಾಗಿದೆ. ಇದರ ಹಿಂದೆ ಯಾರಿದ್ದಾರೆ? ಭಗವಾನ್‌ ಕಾರ್ಯಕ್ರಮಕ್ಕೆ ಹೋಗುವವರೆಲ್ಲ ಕಾಂಗ್ರೆಸ್‌ ಪಕ್ಷದವರೇ ಆಗಿದ್ದಾರೆ. ಅವನಿಗೆ ರಕ್ಷಣೆ ಕೊಡುವವರು, ಬೆಂಬಲ ಕೊಡುವವರು ಕಾಂಗ್ರೆಸ್‌ನವರು. ಹೀಗಾಗಿ ಈ ಹೇಳಿಕೆ ಬಗ್ಗೆ ಕಾಂಗ್ರೆಸ್‌ ನಾಯಕರು ಸ್ಪಷ್ಟನೆ ಕೊಡಬೇಕು ಎಂದು ಒತ್ತಾಯಿಸಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಯಾವುದೇ ಸಮುದಾಯದ ವಿರುದ್ಧ ಮಾತನಾಡುವ ವ್ಯಕ್ತಿಗಳು ಹೀನ ಮನಸ್ಥಿತಿಯವರು. ಅವರು ತಮಗೆ ಬೇಕಾದವರನ್ನು ಹೊಗಳಿಕೊಳ್ಳಲಿ. ಆದರೆ ಬುದ್ಧಿಜೀವಿಗಳೆಂದು ಬಿಂಬಿಸಿಕೊಂಡು ಒಂದು ಸಮುದಾಯದ ವಿರುದ್ಧ ತುತ್ಛವಾಗಿ ಮಾತನಾಡುವುದು ಸರಿಯಲ್ಲ. ಇಂತವರಿಗೆ ಸರಕಾರ ಬೆಂಬಲ ಕೊಡುತ್ತಿರುವುದರಿಂದ ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಬಿಜೆಪಿ ಅಧಿಕೃತ “ಎಕ್ಸ್‌’ ಖಾತೆಯಲ್ಲೂ ಟೀಕೆ ವ್ಯಕ್ತಪಡಿಸಲಾಗಿದೆ. ಕತ್ತಲಾಗುತ್ತಿದ್ದಂತೆ ವಿಷಜಂತುಗಳು ತಾವಾಗಿಯೇ ಬಿಲದಿಂದ ಹೊರಬರುತ್ತವೆ. ಹಾಗೆಯೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ಅದರ ವಿಷವರ್ತುಲ ಸಕ್ರಿಯವಾಗಲಾರಂಭಿಸುತ್ತದೆ. ಹಿಂದೂ ಧರ್ಮವೇ ಒಂದು ವ್ಯಾಧಿ ಎಂದು ಕಾಂಗ್ರೆಸ್‌ ಪಟಾಲಂನ ಟೂಲ್‌ ಕಿಟ್‌ ರಾಜ್ಯದಲ್ಲೂ ಪ್ರಾರಂಭವಾಗಿದೆ. ಕಳೆದ ಬಾರಿ ವೀರಶೈವ-ಲಿಂಗಾಯತರನ್ನು ಒಡೆಯುವ ಪ್ರಯತ್ನ ಮಾಡಿದ ಸಿದ್ದರಾಮಯ್ಯನವರ ಈ ಬಾರಿಯ ಅಜೆಂಡಾ ಒಕ್ಕಲಿಗರು ಎಂಬ ಸೂಚನೆ ಭಗವಾನ್‌ ಮಾತುಗಳಲ್ಲಿ ವ್ಯಕ್ತವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next