Advertisement

Ram Mandi: ಇನ್ನೊಬ್ಬ ಕನ್ನಡಿಗ ಶಿಲ್ಪಿಯ ರಾಮ ವಿಗ್ರಹ ರಾಜ್ಯದಲ್ಲಿ ಸ್ಥಾಪನೆ?

01:28 AM Jan 25, 2024 | Team Udayavani |

ಹೊನ್ನಾವರ: “ನಾನು ಕೆತ್ತಿದ ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಅಯೋಧ್ಯೆಯಲ್ಲಿ ಅವಕಾಶ ಸಿಗದಿದ್ದರೂ ಈ ಭರತ ಭೂಮಿಯಲ್ಲಿ ಎಲ್ಲಾದರೂ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠೆ ಗೊಂಡು ಬಹುಜನರನ್ನು ಕರುಣಿಸುವಂತಾಗಬೇಕು… ಅದು ಕರ್ನಾಟಕದಲ್ಲೇ ಆದರೆ ಬಹಳ ಸಂತೋಷ…’
– ಇದು ಅಯೋಧ್ಯೆಯ ಶ್ರೀರಾಮಮಂದಿರಕ್ಕಾಗಿ ಬಾಲ ರಾಮನ ಕೆತ್ತಿದ್ದ ಮತ್ತೂಬ್ಬ ಕನ್ನಡಿಗ ಖ್ಯಾತ ಶಿಲ್ಪಿ ಉತ್ತರಕನ್ನಡ ಜಿಲ್ಲೆ ಇಡಗುಂಜಿಯ ಗಣೇಶ್‌ ಲಕ್ಷೀನಾರಾಯಣ ಭಟ್‌ ಅವರ ಆಶಯ.

Advertisement

“ಉದಯವಾಣಿ” ಜತೆ ಮಾತನಾಡಿದ ಗಣೇಶ್‌ ಭಟ್‌ಹೇಳಿದ್ದಿಷ್ಟು…

ಪ್ರಾಣ ಪ್ರತಿಷ್ಠೆ ಆಗದಿದ್ದರೂ ಭಗವತ್‌ ಚೈತನ್ಯ ತುಂಬುವಂತೆ ಶಾಸ್ತ್ರೋಕ್ತವಾಗಿ ಪೂಜಾರ್ಹವಾಗಿ ವಿಗ್ರಹ ರಚಿಸಿದ ಕಾರಣ ಅದನ್ನು ಎಲ್ಲೋ ಇಡುವುದರಿಂದ ಒಳಿತಾಗದು. ಈಗ ಅದು ಅಯೋಧ್ಯೆಯ ರಾಮ ಜನ್ಮಭೂಮಿ ಟ್ರಸ್ಟ್‌ನ ಸೊತ್ತು. ಅವರು ಉದಾರ ಮನಸ್ಸಿನಿಂದ ಒಪ್ಪಿದರೆ ದೇಶದ ಎಲ್ಲೇ ಆದರೂ ಅದರಲ್ಲೂ ನಮ್ಮ ಕರುನಾಡಿನಲ್ಲಿ ನಾನು ಕೆತ್ತಿದ ಶ್ರೀರಾಮಚಂದ್ರ ಪ್ರತಿಷ್ಠೆಗೊಂಡರೆ ಸಂತೋಷವಾಗುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಒಳಿತಾಗಬೇಕು ಎಂದು ಬಯಸಿದಂತೆ ಭಾವನಾತ್ಮಕವಾಗಿ ನನ್ನ ಜೀವಿತದ ಸಾಧನೆ ಎಂದು ತಿಳಿದಿರುವ ಶ್ರೀರಾಮ ಸೂಕ್ತ ಗರ್ಭಗೃಹ ಸೇರಿ ಪ್ರಾಣ ಪ್ರತಿಷ್ಠೆಗೊಳ್ಳಬೇಕು ಎಂಬುದು ನನ್ನ ಬಯಕೆ.

ಇನ್ನೆರಡೂ ಪೂಜಾರ್ಹ
ಭಾರತೀಯ ಶಿಲ್ಪ ಶಾಸ್ತ್ರದಲ್ಲಿ ಹೇಳಿದಂತೆ ಗರ್ಭಸ್ಥ ಶಿಲೆಯನ್ನು ಪೂಜೆ ಮಾಡಿ, ಕಂಕಣ ಕಟ್ಟಿಕೊಂಡು ನಂದಾದೀಪ ಉರಿಸಿ ಮಡಿಯೊಂದಿಗೆ ದೇವರ ಪೂಜೆ ಮಾಡಿದಂತೆ ಶ್ರೀರಾಮನ ಮೂರ್ತಿಯನ್ನು ಮೂವರು ಶಿಲ್ಪಿಗಳು ನಿರ್ಮಿಸಿದ್ದೇವೆ. ಒಂದು ಗರ್ಭ ಗುಡಿಯಲ್ಲಿ ಪೂಜೆಗೊಳ್ಳುತ್ತಿದೆ. ಶಿಲಾ ಗರ್ಭಸ್ಥ ಮೂವರು ಬಾಲಶ್ರೀರಾಮರು ಭೂಮಿಗೆ ಬಂದಿರುವುದರಿಂದ ಉಳಿದ ಎರಡು

ಶಿಲ್ಪಗಳೂ ಸಹ ಪೂಜಾರ್ಹವಾದವು. ಪೂಜಾರ್ಹ ಬೇರೆ ಸ್ಥಳದಲ್ಲಿಯೇ ಪ್ರತಿಷ್ಠಾಪಿಸಿ ಪೂಜಿಸಬೇಕು. ಸಮಿತಿ ಏನು ನಿರ್ಣಯಿಸಲಿದೆ ಎಂಬುದನ್ನು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುವೆ.
ಭಾರತೀಯ ಶಿಲ್ಪ ಶಾಸ್ತ್ರದ ಪರಂಪರೆ ಮತ್ತು ಪಠ್ಯದಲ್ಲಿ ಏಕ ಶಿಲಾಮೂರ್ತಿಯನ್ನು ಹೇಗೆ ಕೆತ್ತಬೇಕು ಎಂದು ಹೇಳಲಾಗಿದೆ. ಗರ್ಭಗುಡಿಯಲ್ಲಿ ಪ್ರಾಣದ ಸಂಕೇತವಾಗಿ ಜ್ಯೋತಿ
ಯೊಂದು ಉರಿಯಬೇಕು ಎಂದಿದೆ. ನಾನು ಅದನ್ನು ಪಾಲಿಸಿದ್ದೇನೆ. ಸಂಪೂರ್ಣವಾದ ಅಖಂಡ ಶಿಲೆಯಲ್ಲಿ ಮೂರ್ತಿ ನಿರ್ಮಾಣವಾಗಿದೆ. ಇದು ಶುದ್ಧ ಭಾರತೀಯ ಪರಂಪರೆ. ಕಾಲಕ್ರಮೇಣ ಭಕ್ತರು ಹೊಸ ರೂಪದಲ್ಲಿ ದೇವರನ್ನು ಕಾಣ ಬಯಸಿದ ಕಾರಣ ದೇವರ ಎದುರು ನೈವೇದ್ಯ, ಆರತಿಯ ಹೊರತಾಗಿ ಧೂಪ, ಕರ್ಪೂರಗಳು ಬಂದವು. ಹೀಗಾಗಿ ಶಿಲ್ಪದಲ್ಲೇ ಬಿಲ್ಲುಬಾಣ, ಆಭರಣ, ಕಿರೀಟ ಎಲ್ಲವನ್ನೂ ರೂಪಿಸಲಾಗಿದೆ.

Advertisement

ದೇಶದ ಬೇರೆ ಬೇರೆ ಪ್ರದೇಶದಲ್ಲಿ ಅರ್ಚಕರ ಉಡುಗೆ-ತೊಡುಗೆ, ಪೂಜಾ ವಿಧಾನ, ಮಂತ್ರೋಚ್ಚಾರಣೆಯವರೆಗೆ ಪ್ರಭೇದಗಳಿವೆ. ಇನ್ನು ಯಾವುದು ಸರಿ? ಎಂದು ನೋಡುವುದಾದರೆ ಎಲ್ಲವೂ ಅವರ ಮಟ್ಟಿಗೆ ಸರಿ. ವಿಶ್ವವ್ಯಾಪಿ ಪರಮಾತ್ಮನನ್ನು ಮೂರ್ತಿರೂಪದಲ್ಲಿ ನಿಲ್ಲಿಸಿ ಆತ್ಮ, ಪರಮಾತ್ಮನೊಂದಿಗೆ ಅನುಸಂಧಾನ ಮಾಡಿಕೊಳ್ಳಲು ಮಾಡಿದ ವ್ಯವಸ್ಥೆ ದೇವಾಲಯ. ಬದಲಾದ ಕಾಲ, ಬೇರೆ, ಬೇರೆ ಧರ್ಮದವರ, ಮನೋಧರ್ಮದವರ ಆಳ್ವಿಕೆಯ ಪರಿಣಾಮ ದೇವರು-ಧರ್ಮಗಳ ಮೇಲೂ ಆಗಿದೆ.

ಈಗ ಮೂರು ಶಿಲ್ಪಗಳು ಲೋಕಾಂತರವಾಗಿವೆ. ಯಾರು ಹೆಚ್ಚು? ಯಾರೂ ಕಡಿಮೆಯಲ್ಲ. ಕೋಟ್ಯಂತರ ಭಕ್ತರು ಮೂರೂ ಶ್ರೀರಾಮನನ್ನು ನೋಡಲಿದ್ದಾರೆ. ಅವರವರ ಭಕ್ತಿಗೆ, ಅವರವರ ಭಾವಕ್ಕೆ ತಕ್ಕಂತೆ ಶ್ರೀರಾಮ ಕಾಣಲಿದ್ದಾನೆ. ನಾನು ಕೆತ್ತಿದ ವಿಗ್ರಹವನ್ನು ಶ್ರೀರಾಘವೇಶ್ವರ ಶ್ರೀಗಳು ಕಂಡು ಅಲ್ಲೂ-ಇಲ್ಲೂ ಶ್ರೀರಾಮನನ್ನು ಕಂಡೆ ಎಂದು ಉದ್ಗರಿಸಿದ್ದಾರೆ.

ಚಿತ್ರವನ್ನು ನಾನು ವೈರಲ್‌ ಮಾಡಿಲ್ಲ
“ನಾನು ಕೆತ್ತಿದ ವಿಗ್ರಹದ ಫೋಟೋ ವೈರಲ್‌ ಆಗಿದೆ. ಅದನ್ನು ನಾನಾಗಲಿ ಅಥವಾ ರಾಮಜನ್ಮಭೂಮಿ ಟ್ರಸ್ಟ್‌ ಆಗಲಿ ಬಿಡುಗಡೆ ಮಾಡಿಲ್ಲ. ಇನ್ನೊಬ್ಬ ಶಿಲ್ಪಿಯ ಅಮೃತ ಶಿಲಾಮೂರ್ತಿ ಮೊನ್ನೆ ಹೀಗೆಯೇ ವೈರಲ್‌ ಆಗಿತ್ತು. ಇಂದಲ್ಲಾ ನಾಳೆ ಆಗಬೇಕಾದದ್ದೇ ಎನ್ನುತ್ತಾರೆ’ ಗಣೇಶ್‌ ಭಟ್‌.

ಕರ್ನಾಟಕದಲ್ಲೇ ಆದರೆ ಸಂತೋಷ
ಶಾಸ್ತ್ರೋಕ್ತವಾಗಿ ಕೆತ್ತಿ ಪೂಜಾರ್ಹವಾಗಿ ರಚಿಸಿದ ವಿಗ್ರಹವನ್ನು ಎಲ್ಲೋ ಇಟ್ಟರೆ ಒಳಿತಾಗದು. ಆದರೆ ನನ್ನ ವಿಗ್ರಹ ಅಯೋಧ್ಯೆ ಟ್ರಸ್ಟ್‌ನ ಸೊತ್ತು. ಅವರು ಉದಾರ ಮನಸ್ಸಿನಿಂದ ಒಪ್ಪಿ ದೇಶದ ಯಾವುದಾದರೂ, ಅದರಲ್ಲೂ ಕರ್ನಾಟಕದ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಗೊಂಡರೆ ನನಗೆ ಸಂತೋಷ.
– ಗಣೇಶ್‌ ಭಟ್‌, ಖ್ಯಾತ ಶಿಲ್ಪಿ

  ಜೀಯು ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next