Advertisement

ಇನ್‌ಸ್ಪೈರ್‌ ಸ್ಪರ್ಧೆ: ಓವೈಸ್‌ ದೇಶಕ್ಕೆ ದ್ವಿತೀಯ

05:15 PM Sep 12, 2021 | Team Udayavani |

ಬೀದರ: ಶಾಲಾ ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಸುವ ಉದ್ದೇಶದಿಂದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಎನ್‌ಐಎಫ್‌ ನಡೆಸುವ ರಾಷ್ಟ್ರಮಟ್ಟದ “ಇನ್‌ಸ್ಪೈರ್‌ ಸ್ಪರ್ಧೆ’ಯಲ್ಲಿ ಬೀದರನ ಗ್ರಾಮೀಣ ಪ್ರತಿಭೆ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಮೊದಲ ಮೂರು ಸ್ಥಾನದಲ್ಲಿ ಆಯ್ಕೆಯಾದ ಮೊದಲ ಕನ್ನಡಿಗನೆಂಬ ಖ್ಯಾತಿ ಮುಡಿಗೇರಿಸಿಕೊಂಡಿದ್ದಾನೆ.

Advertisement

ಭಾಲ್ಕಿ ತಾಲೂಕಿನ ಭಾತಂಬ್ರಾ ಸರ್ಕಾರಿ ಪ್ರೌಢಶಾಲೆಯ ಓವೈಸ್‌ ಅಹ್ಮದ್‌ ಸಾಧಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ. 2019-20ನೇ ಸಾಲಿನ ಇನ್‌ಸ್ಪೈರ್‌ ರಾಷ್ಟ್ರಮಟ್ಟದ ಆನ್‌ಲೈನ್‌ ಸ್ಪರ್ಧೆಯಲ್ಲಿ ರಾಜ್ಯದ ಐವರು ಮಕ್ಕಳು ಪ್ರಶಸ್ತಿಗೆ ಭಾಜನರಾಗಿದ್ದು, ಇದರಲ್ಲಿ ಓವೈಸ್‌ ಒಬ್ಬರಾಗಿದ್ದಲ್ಲದೇ ರಾಷ್ಟ್ರಕ್ಕೆ ದ್ವಿತೀಯ ಸ್ಥಾನ ಪಡೆದಿರುವುದು ವಿಶೇಷ. ಸ್ಪರ್ಧೆಯಲ್ಲಿ ಓವೈಸ್‌ ತಯಾರಿಸಿದ್ದ “ಸ್ಕ್ವೇ ಹಾರಿಝಂಟಲ್‌ ಸ್ಟ್ರೆಚರ್‌’ (ಸುರಕ್ಷತಾ ಸಮತಲ ಸ್ಟ್ರೆಚರ್‌) ಮಾದರಿಗೆ ಪ್ರಶಸ್ತಿ ಒಲಿದಿದೆ. ದೇಶದ 3.92 ಲಕ್ಷ ಮಕ್ಕಳಿಂದ ಹೊಸ ಆವಿಷ್ಕಾರದ ಮಾದರಿಗಳು ಪ್ರದರ್ಶನಗೊಂಡಿದ್ದವು. ಮಧ್ಯಪ್ರದೇಶದ ನವಶ್ರೀ ಸಿದ್ಧಪಡಿಸಿದ “ಬಹು ಉಪಯುಕ್ತ ಅಡುಗೆ ಮನೆ’ ಪ್ರಥಮ ಬಹುಮಾನ ಪಡೆದಿದೆ.

ಏನಿದು ಇನ್‌ಸ್ಪೈರ್‌ ಸ್ಪರ್ಧೆ?: ಮಕ್ಕಳಲ್ಲಿನ ವಿಜ್ಞಾನ ಪ್ರತಿಭೆ ಹೊರ ತರುವುದರ ಜತೆಗೆ ಅವರಲ್ಲಿ ಬಾಲ ವಿಜ್ಞಾನಿ ಆಗಬೇಕೆಂಬ ಕನಸಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ 10 ವರ್ಷಗಳಿಂದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಎನ್‌ಐಎಫ್‌ ಸಹಯೋಗದಲ್ಲಿ ಇನ್‌ಸ್ಪೈರ್‌ ಸ್ಪರ್ಧೆ ನಡೆಸಲಾಗುತ್ತಿದೆ. ಸ್ವಚ್ಛ ಭಾರತ, ಸ್ವಸ್ಥ ಭಾರತ, ಡಿಜಿಟಲ್‌ ಇಂಟಿಯಾ ಮತ್ತು ಮೆಕ್‌ ಇನ್‌ ಇಂಡಿಯಾ ನಾಲ್ಕು ವಿಭಾಗಳಲ್ಲಿ ಮಕ್ಕಳು ಆವಿಷ್ಕರಿಸುವ ವಿಜ್ಞಾನದ ಮಾದರಿಗಳ ಪ್ರದರ್ಶಿಸಬಹುದು. ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಸ್ಪರ್ಧೆಗಳನ್ನು ಆಯೋಜಿಸುವ ವಿಜ್ಞಾನ ಇಲಾಖೆ, ಮಕ್ಕಳ ಆವಿಷ್ಕರಿಸಿದ ಮಾದರಿಗಳನ್ನು ವಶಕ್ಕೆ ತೆಗೆದುಕೊಂಡು ರಾಷ್ಟ್ರಮಟ್ಟದಲ್ಲಿ ವಿಜೇತರಿಗೆ 25 ಸಾವಿರ ರೂ. ಬಹುಮಾನ, ಪ್ರಶಸ್ತಿ ಫಲಕ ಜತೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಕೋವಿಡ್‌ ಹಿನ್ನೆಲೆಯಲ್ಲಿ 2019-20ನೇ ಸಾಲಿನ ಸ್ಪರ್ಧೆ ವಿಳಂಬ, ಆನ್‌ಲೈನ್‌ ಮೂಲಕ ನಡೆಸಲಾಗಿದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದ 70 ಜನ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಅದರಲ್ಲಿ ಬೀದರನ ಓವೈಸ್‌ ಅಹ್ಮದ್‌ನ ಪ್ರಾಜೆಕ್ಟ್ ದೇಶಕ್ಕೆ 2ನೇ ಸ್ಥಾನ, ಹರಪನಹಳ್ಳಿಯ ವಿದ್ಯಾರ್ಥಿ ಸಮರ್ಥನ 20ನೇ, ಕನಕಪುರದ ಕಲ್ಲನಕುಪ್ಪೆಯ ದೇವೇಗೌಡ 23ನೇ, ವಿಜಯಪುರದ ನಾದ್‌ ಕೆಡಿಯ ದೇವೀಂದ್ರ ಬಿರಾದಾರ 28ನೇ ಹಾಗೂ ಬೆಂಗಳೂರು ಜಾಲಹಳ್ಳಿಯ ಆಯುಷ್‌ನ ಮಾದರಿಗೆ 55ನೇ ಸ್ಥಾನ ದೊರೆತಿದೆ.

ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ: ಜಪಾನ್‌ ಅಥವಾ ಜರ್ಮನಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ಶೀಘ್ರದಲ್ಲೇ ಜರುಗಲಿದ್ದು, ಇದರಲ್ಲಿ ಬೀದರನ ಓವೈಸ್‌ ಸೇರಿ ರಾಷ್ಟ್ರಕ್ಕೆ ಮೊದಲ ಮೂರು ಸ್ಥಾನ ಗಳಿಸಿರುವ ಮಕ್ಕಳು ಅರ್ಹತೆ ಪಡೆಯಲಿದ್ದಾರೆ. ಮುಖ್ಯವಾಗಿ ಈ ವಿದ್ಯಾರ್ಥಿಗಳು ಆವಿಷ್ಕರಿಸಿದ ವಿಜ್ಞಾನ ಮಾದರಿಗೆ “ಪೆಟೆಂಟ್‌’ ಸಹ ಸಿಗಲಿದೆ. ಗ್ರಾಮೀಣ ಭಾಗದ ಭಾತಂಬ್ರಾ ಸರ್ಕಾರಿ ಶಾಲೆಯಲ್ಲಿ ಓದಿರುವ ಓವೈಸ್‌ ಸದ್ಯ ದ್ವಿತೀಯ ಪಿಯುಸಿಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ತನ್ನ ಪ್ರತಿಭೆ ಮೂಲಕ ಪ್ರಶಸ್ತಿ ಬಾಚಿಕೊಂಡಿರುವ ಓವೈಸ್‌ಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌, ಜಿಲ್ಲೆಯ ಸಂಘ ಸಂಸ್ಥೆಗಳು ಅಭಿನಂದಿಸಿದ್ದಾರೆ.

Advertisement

ಓವೈಸ್‌ನ ಪ್ರೊಜೆಕ್ಟ್ ನಲ್ಲಿ ಏನಿದೆ?
ಸಾಮಾನ್ಯವಾಗಿ ಸ್ಟ್ರೆಚರ್‌ಗಳನ್ನು ಇಳಿಜಾರುಗಳಲ್ಲಿ ಸಾಗಿಸುವಾಗ, ರಕ್ತದ ಕೆಳಮುಖ ಬದಲಾವಣೆಯಿಂದ ರೋಗಿಯ ಸ್ಥಿತಿ ಉಲ್ಬಣಗೊಳ್ಳಬಹುದು. ಆದರೆ, ಓವೈಸ್‌ ಆವಿಷ್ಕರಿಸಿರುವ ಸ್ಟ್ರೆಚರ್‌ ಭಿನ್ನವಾಗಿದ್ದು, ಇಳಿಜಾರು, ಅಥವಾ ಅಸಮ ಮೇಲ್ಮೈಗಳಲ್ಲಿ ಚಲಿಸುವಾಗ ಇದು ಕೇಂದ್ರ ಚಕ್ರಗಳಲ್ಲಿ ಸಮತೋಲನಗೊಳ್ಳುತ್ತದೆ. ಸ್ಟ್ರೆಚರ್‌ನಲ್ಲಿರುವ ಮುಂಭಾಗದ ಚಕ್ರಗಳು ಅವುಗಳ ಆಕ್ಸಲ್‌ಗ‌ಳಲ್ಲಿ 90 ಡಿಗ್ರಿಗಳನ್ನು ತಿರುಗಿಸಬಹುದು. ಪ್ರತಿ ಆಕ್ಸಲ್‌ನೊಳಗಿನ ಸ್ಪ್ರಿಂಗ್‌ ಶಾಕ್‌ ಅಬಾÕರ್ಬರ್‌ ಆಗಿ ಕಾರ್ಯ ನಿರ್ವಹಿಸುತ್ತದೆ. ಕಳೆದ ವರ್ಷ ಆಸ್ಪತ್ರೆಯಲ್ಲಿ ರಾಂಪ್‌ ಮೂಲಕ ಸ್ಟ್ರೆಚರ್‌ ಮೇಲೆ ಕರೆದೊಯ್ಯುವಾಗ ರಕ್ತದ ಹರಿವಿನ ಕೆಳಮುಖ ಬದಲಾವಣೆಯಿಂದ ಓವೈಸ್‌ ನ ಅಜ್ಜಿ ಮೃತಪಟ್ಟಿದ್ದರು. ಇದು ಆತನಿಗೆ ಶಾಕ್‌ ಅಬಾÕರ್ಬರ್‌ಗಳೊಂದಿಗೆ ಅಂತರ್ಗತವಾದ ಸ್ಟ್ರೆಚರ್‌ ಅನ್ನು ಅಭಿವೃದ್ಧಿ ಪಡಿಸುವ ಆಲೋಚನೆಗೆ ಕಾರಣವಾಯಿತು.

ಕೇಂದ್ರ ಇನ್‌ಸ್ಪೈರ್‌ ಸ್ಪರ್ಧೆಯಲ್ಲಿ ನನ್ನ ಆವಿಷ್ಕಾರದ ಮಾದರಿ ದೇಶಕ್ಕೆ ದ್ವಿತೀಯ ಸ್ಥಾನ ಬಂದಿರುವುದು ಖುಷಿ ತಂದಿದೆ. ನಾವೀನ್ಯತೆ ಸ್ಪರ್ಧೆಗಳಿಂದ ಮಕ್ಕಳಲ್ಲಿ ಬಾಲ್ಯದಲ್ಲಿಯೇ ವಿಜ್ಞಾನಿಯಾಗಬೇಕೆಂಬ ಕನಸಿಗೆ ರೆಕ್ಕೆ ಕಟ್ಟಿದಂತಾಗುತ್ತದೆ. ಪ್ರೊಜೆಕ್ಟ್ ಗೆ ಶಿಕ್ಷಕರಾಗಿರುವ ನನ್ನ ತಂದೆಯೇ ಮಾರ್ಗದರ್ಶಕರಾಗಿದ್ದರು.
ಓವೈಸ್‌ ಅಹ್ಮದ್‌, ಪ್ರಶಸ್ತಿ ವಿಜೇತ

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next