Advertisement

94,636 ಜನರ ತಪಾಸಣೆ

07:39 PM Apr 28, 2020 | Suhan S |

ಕೊಪ್ಪಳ: ಕೋವಿಡ್ 19 ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇಲ್ಲಿವರೆಗೂ 94,636 ಜನರ ಸ್ಕ್ರೀನಿಂಗ್‌ ಮಾಡಿದೆ. ಚೆಕ್‌ಪೋಸ್ಟ್‌, ರೈಲ್ವೇ ನಿಲ್ದಾಣ, ಬಸ್‌ ನಿಲ್ದಾಣ ಸೇರಿದಂತೆ ಗುಳೆಹೋಗಿ ವಾಪಸ್ಸಾದ ಜನರ ಮೇಲೂ ನಿಗಾ ಇರಿಸಿದೆ. ಹೀಗಾಗಿ ಜಿಲ್ಲೆಯು ಈಗಲೂ ಗ್ರೀನ್‌ ಜೋನ್‌ನಲ್ಲಿದ್ದು ಜನತೆ ನೆಮ್ಮದಿಯಿಂದ ಇರುವಂತೆ ಮಾಡಿದೆ.

Advertisement

ಹೌದು. ಜಿಲ್ಲಾಡಳಿತ ಕೋವಿಡ್ 19 ಮಹಾಮಾರಿಯನ್ನು ನಿಯಂತ್ರಣ ಮಾಡಲು ಹಲವು ಆಯಾಮಗಳಲ್ಲಿ ತನ್ನ ಕಾರ್ಯವನ್ನು ಆರಂಭಿಸಿದೆ. ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸುವ ಪ್ರತಿಯೊಬ್ಬರ ಮೇಲೂ ನೇರ ಕಣ್ಣಿಟ್ಟು, ಅವರನ್ನು ತಪಾಸಣೆಗೆ ಒಳಪಡಿಸುವ ಕಾಯಕ ಮೊದಲಿನಿಂದಲೂ ಆರಂಭಿಸಿ ಜಿಲ್ಲೆಯ ಜನರ ಗಮನ ಸೆಳೆಯುವಂತೆ ಮಾಡಿತು.

ಜಿಲ್ಲೆಯಲ್ಲಿ ಲಾಕ್‌ಡೌನ್‌ ಘೋಷಣೆಯಾದಾಗಿನಿಂದಲೂ ಸೋಂಕಿನ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಹೊರ ಜಿಲ್ಲೆ ಹಾಗೂ ವಿದೇಶದಿಂದ ಬಂದಿರುವ ಜನರ ಮೇಲೆ ಕಾಳಜಿ ವಹಿಸಿ ಎಲ್ಲರನ್ನೂ ಗೃಹಬಂಧನದಲ್ಲಿ ಇರುವಂತೆ ಸೂಚಿಸಿತು. ಇನ್ನು ಅಂತಹ ಕುಟುಂಬ ಸದಸ್ಯರ ಆರೋಗ್ಯ ತಪಾಸಣೆಯನ್ನೂ ಮಾಡಿದೆ. ಅವರ ಸಂಪರ್ಕಕ್ಕೆ ಇರುವಂತಹ ಜನರ ಬಗ್ಗೆಯೂ ನಿಗಾ ಇರಿಸಿದೆ.

785 ಜನರ ವರದಿ ನೆಗಟಿವ್‌: ವಿದೇಶದಿಂದ ಬಂದವರ, ಪ್ರಾಥಮಿಕ ಸಂಪರ್ಕದಲ್ಲಿರುವ ವ್ಯಕ್ತಿಗಳ ಹಾಗೂ ಹೈರಿಸ್ಕ್ ಏರಿಯಾದಲ್ಲಿ ಪ್ರವಾಸ ಹಾಗೂ ಪ್ರಯಾಣ ಮಾಡಿದ, ತಬ್ಲಿಘಿಯ ಪ್ರಾರ್ಥನೆಯಲ್ಲಿ ಪಾಲ್ಗೊಂಡವರು ಸೇರಿದಂತೆ ಜಿಲ್ಲೆಯಲ್ಲಿ ಈ ವರೆಗೂ 799 ಜನರ ಗಂಟಲು ದ್ರವ ಪಡೆದು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಇವರಲ್ಲಿ 785 ಜನರ ವರದಿ ನೆಗೆಟಿವ್‌ ಬಂದಿದೆ. ಇನ್ನೂ 14 ಜನರ ವರದಿ ಬರುವುದು ಬಾಕಿಯಿದೆ.

ಊರಿಗೆ ತೆರಳಲು ಅವಕಾಶ: ಬೇರೆ ಜಿಲ್ಲೆ, ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕೃಷಿ ಮತ್ತು ಕಟ್ಟಡ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ತೆರಳಲು ಮತ್ತು ಕರೆಯಿಸಿಕೊಳ್ಳಲು ಕೆಲವು ನಿಬಂಧನೆಗಳೊಂದಿಗೆ ಸರ್ಕಾರವು ಅನುಮತಿ ನೀಡಿದೆ. ಜಿಲ್ಲೆಯ ರೈತರು ತಮ್ಮ ತೋಟಗಾರಿಕೆ ಉತ್ಪನ್ನಗಳಾದ ತರಕಾರಿ, ಹಣ್ಣು, ಹೂವು ಮತ್ತು ತರಕಾರಿಗಳನ್ನು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಸಹಯೋಗದೊಂದಿಗೆ ಕೆಎಂಎಫ್‌ ಮಳಿಗೆಗಳಲ್ಲಿ ನೇರವಾಗಿ ಮಾರಾಟ ಮಾಡಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು, ಮೊ. ಸಂ-9448999237, ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಮೊ.ಸಂ -9741057047ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next