Advertisement

ಕೊಡಗಿನಲ್ಲಿ ಭೂಕಂಪ ದಾಖಲಿಸುವ ಸಿಸ್ಮೋಮೀಟರ್‌ ಮಾಪಕ ಅಳವಡಿಕೆ

06:00 AM Aug 30, 2018 | |

ಮಡಿಕೇರಿ: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳ ಅಧ್ಯಯನ ನಡೆಸಲು ಮಡಿಕೇರಿಗೆ ಆಗಮಿಸಿರುವ ಹಿರಿಯ ಭೂ ವಿಜ್ಞಾನಿಗಳ ತಂಡ, ಗಾಳಿಬೀಡು ನವೋದಯ ಕೇಂದ್ರೀಯ ವಿದ್ಯಾಲಯದಲ್ಲಿ ಭೂಕಂಪನವನ್ನು ದಾಖಲಿಸುವ ಸಿಸ್ಮೋಮೀಟರ್‌ ಮಾಪಕವನ್ನು ಅಳವಡಿಸಿದೆ.

Advertisement

ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಭೂಗರ್ಭಶಾಸ್ತ್ರ ಅಧ್ಯಯನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ|ರಾಘವನ್‌ ಮತ್ತು ಅಧಿಕಾರಿಗಳು ಭೂಕುಸಿತಕ್ಕೊಳಗಾದ ಸ್ಥಳಗಳ ಪರಿಶೀಲನೆ ನಡೆಸಿದ್ದು, ಕೆಲವು ಭಾಗಗಳಲ್ಲಿ ಬೆಟ್ಟ ಕುಸಿದಿರುವ ಮಣ್ಣನ್ನು ಪರೀಕ್ಷೆಗೆ ಒಳಪಡಿಸಲು ಹೈದರಾಬಾದ್‌ಗೆ ಕೊಂಡೊಯ್ದಿದ್ದಾರೆ. ವಿದ್ಯಾಲಯದ ಕೊಠಡಿಯಲ್ಲಿ 3 ಅಡಿ ಆಳದಲ್ಲಿ ಗುಂಡಿ ತೋಡಿ, ಸಿಸ್ಮೋಮೀಟರ್‌ ಮಾಪಕ ಅಳವಡಿಸಲಾಗಿದೆ. ಈ ಮಾಪಕಕ್ಕೆ ದಿನವಿಡೀ ಕಾರ್ಯ ನಿರ್ವಹಿಸಲು ಸಾಧ್ಯವಾಗುವಂತೆ ಸೋಲಾರ್‌, ಬ್ಯಾಟರಿ ಮತ್ತು ವಿದ್ಯುತ್‌ ಪೂರೈಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಮಾಪಕ ದಾಖಲಿಸುವ ಕಂಪನಗಳನ್ನು ಹೈದರಾಬಾದ್‌ನಲ್ಲಿರುವ ಭೂಗರ್ಭಶಾಸ್ತ್ರ ಅಧ್ಯಯನ ಸಂಸ್ಥೆಗೆ ಸಂಪರ್ಕಿಸಲು ವಿಶೇಷವಾದ ಅಂತರ್ಜಾಲ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದ್ದು, ಪ್ರತಿ ಕ್ಷಣದ ನಿಖರ ಮಾಹಿತಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಈ ಯಂತ್ರವನ್ನು ಅಮೆರಿಕದಿಂದ ಖರೀದಿಸಿ ತರಲಾಗಿದ್ದು, ಇದರ ಬೆಲೆ 6 ಲಕ್ಷ ರೂ. ಇದು ರಾಜ್ಯದಲ್ಲಿ ಅಳವಡಿಸಲಾಗಿರುವ 2ನೇ ಮಾಪಕವಾಗಿದ್ದು, ಮೊದಲ ಮಾಪಕ ಧಾರವಾಡದಲ್ಲಿದೆ. ಈ ಮಾಪಕ ಭೂ ಪದರದ ಕಂಪನವನ್ನು ದಾಖಲಿಸಿ, ಹೈದರಾಬಾದ್‌ನ ರಿಸೀವ್‌ ಸೆಂಟರ್‌ಗೆ ದತ್ತಾಂಶ ಸಹಿತ ವರದಿ ಮಾಡುತ್ತದೆ. ಜಗತ್ತಿನ ಯಾವುದೇ ಭಾಗದಲ್ಲಿ 5 ಮತ್ತು ಮೇಲ್ಪಟ್ಟ ತೀವ್ರತೆಯ ಪ್ರಮಾಣದಲ್ಲಿ ಭೂಮಿ ಕಂಪಿಸಿದರೆ ಇದರಲ್ಲಿ ವಿವರ ದಾಖಲಾಗುತ್ತದೆ. 3 ರಿಂದ 5ರಷ್ಟು ಪ್ರಮಾಣದ ಕಂಪನ ಭಾರತದ ಯಾವುದೇ ಭಾಗದಲ್ಲಿ ಸಂಭವಿಸಿದರೂ ಅದನ್ನು ದಾಖಲಿಸಿ ಹೈದರಾಬಾದ್‌ನಲ್ಲಿರುವ ತರಂಗಾಂತರ ಸ್ವೀಕೃತಿ ಕೇಂದ್ರಕ್ಕೆ ರವಾನಿಸುತ್ತದೆ.

ಈ ಮಧ್ಯೆ, ಎರಡು ದಿನಗಳಿಂದ ಕಾಲೂರು, ಗಾಳಿಬೀಡು, ಮೊಣ್ಣಂಗೇರಿ ಹಾಗೂ ಸಂಪಾಜೆ ಭೂ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಕಂಪನವಾಗಿರುವುದು ಕಂಡು ಬಂದಿದೆ. ಆದರೆ, ಯಾವುದೇ ಅಪಾಯವಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next