Advertisement

ಹಿರಿಯ ನಾಗರಿಕರ ರಕ್ಷಕರಿಗೆ ಅಭದ್ರತೆ 

12:50 AM Jan 22, 2019 | Harsha Rao |

ಉಡುಪಿ: ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಶಕ್ತೀಕರಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ “ಹಿರಿಯ ನಾಗರಿಕರ ಸಹಾಯವಾಣಿ’ಗೆ ಆರು ತಿಂಗಳುಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ಹಾಗಾಗಿ ಅದರ ಅಧಿಕಾರಿ, ಸಿಬಂದಿಗೆ ವೇತನವೂ (ಗೌರವಧನ) ಸಿಗುತ್ತಿಲ್ಲ.

Advertisement

ಉಡುಪಿಯ ಹಿರಿಯ ನಾಗರಿಕರ ಸಹಾಯವಾಣಿ ಜಿಲ್ಲಾ ವ್ಯಾಪ್ತಿಯನ್ನು ಹೊಂದಿದೆ. ಇದನ್ನು ಉಡುಪಿ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ ನಿರ್ವಹಿಸುತ್ತಿದೆ. ಮೂವರು ಅಪ್ತಸಮಾಲೋಚಕರು, ಸೂಪರ್‌ವೈಸರ್‌ ಮತ್ತು ಕೋ-ಆರ್ಡಿನೇಟರ್‌ ಇಲ್ಲಿದ್ದಾರೆ. ದಿನನಿತ್ಯ ಹತ್ತಾರು ಪ್ರಕರಣಗಳನ್ನು ನಿಭಾಯಿಸಲಾಗುತ್ತದೆ.

ನಿರಂತರ ಕೆಲಸ 
ಅಸಹಾಯಕ, ಅನಾಥ ಹಿರಿಯ ನಾಗರಿಕರನ್ನು ಪತ್ತೆಹಚ್ಚಿ ಆಪ್ತಸಮಾಲೋಚನೆ ನಡೆಸುವ, ಚಿಕಿತ್ಸೆ ಕೊಡಿಸುವ, ಮನೆಯವರ ಪತ್ತೆಯಾದರೆ ಕರೆಯಿಸಿ ಕೌನ್ಸೆಲಿಂಗ್‌ ನಡೆಸುವ, ಅಗತ್ಯ ಬಿದ್ದರೆ ವೃದ್ಧಾಶ್ರಮಕ್ಕೆ ಸೇರ್ಪಡೆಗೊಳಿಸುವ ಕೆಲಸವನ್ನು ಕೂಡ ಸಹಾಯವಾಣಿ ಸಿಬಂದಿ ಮಾಡುತ್ತಾರೆ. ಸಾರ್ವಜನಿಕರಿಗೆ ಮಾಹಿತಿ, ಜಾಗೃತಿ ಶಿಬಿರಗಳ ಮೂಲಕ ಕಾಳಜಿ ಮೂಡಿಸುವ ಕೆಲಸಗಳು ಕೂಡ ನಡೆಯುತ್ತಿವೆ. ನಾನಾ ಕಾರಣಗಳಿಂದ ಬೀದಿಗೆ ಬೀಳುವ ಹಿರಿಯ ನಾಗರಿಕರ ಪಾಲಿಗೆ ಆಪದ್ಭಾಂಧವನಂತೆ ಇದು ಕಾರ್ಯನಿರ್ವಹಿಸುತ್ತ ಬಂದಿದೆ. ಆದರೆ ಈಗ ಗೌರವಧನ ಸಿಗದೆ ಸಹಾಯವಾಣಿ ಸಿಬಂದಿಯೇ ಅತಂತ್ರರಾಗಿದ್ದಾರೆ. 

ಎಸ್‌ಪಿ ಕಚೇರಿಯಲ್ಲಿ ಜಾಗವಿಲ್ಲ 
ಹಿರಿಯ ನಾಗರಿಕರ ಸಹಾಯವಾಣಿ ಎಸ್‌ಪಿ ಕಚೇರಿ ಅಥವಾ ಯಾವುದಾದರೊಂದು ಪೊಲೀಸ್‌ ಠಾಣೆ ಕಚೇರಿಯ ಜತೆಜತೆಗೆ ಕಾರ್ಯನಿರ್ವಹಿಸಬೇಕೆಂಬ ನಿಯಮವಿದೆ. ಆದರೆ ಉಡುಪಿಯಲ್ಲಿ ಇದು ಪ್ರಸ್ತುತ ರೆಡ್‌ಕ್ರಾಸ್‌ ಭವನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸಹಾಯವಾಣಿಯನ್ನು ಸರಕಾರ, ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಎಸ್‌ಪಿ ಕಚೇರಿಯಲ್ಲಿಯೇ ಅವಕಾಶ ನೀಡುವಂತೆ ಕೋರಲಾಗಿತ್ತಾದರೂ ನೀಡಿಲ್ಲ. ಓಡಾಟಕ್ಕೆ ವಾಹನ ಕೇಳಲಾಗಿತ್ತು, ಅದೂ ಸಿಕ್ಕಿಲ್ಲ. ಈಗ ಅನುದಾನ ಕೂಡ ಬಿಡುಗಡೆ ಮಾಡಿಲ್ಲ ಎಂಬ ಅಸಹಾಯಕತೆ ಸಹಾಯವಾಣಿ ನಿರ್ವಹಿಸುತ್ತಿರುವ ಮಹಿಳಾ ಮಂಡಳಿಗಳ ಒಕ್ಕೂಟದ ಪದಾಧಿಕಾರಿಗಳದ್ದು. 

Advertisement

ಬೇರೆ ಜಿಲ್ಲೆಗಳಲ್ಲಿ ಇಂತಹ ಸಮಸ್ಯೆಗಳಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಯತ್ನಪಟ್ಟರೆ ಅನುದಾನ ದೊರೆಯಬಹುದು. ಉಡುಪಿಯ ಹಿರಿಯ ನಾಗರಿಕರ ಸಹಾಯವಾಣಿಗೆ ರಾಜ್ಯದಲ್ಲಿಯೇ ಉತ್ತಮ ಹೆಸರಿದೆ. ಆದರೆ ಈಗ ಇದನ್ನು ಮುಂದುವರಿಸುವುದು ಹೇಗೆಂಬ ಚಿಂತೆ ಕಾಡುತ್ತಿದೆ ಎಂದು ಸಿಬಂದಿ ಅಸಮಾಧಾನ ತೋಡಿಕೊಂಡಿದ್ದಾರೆ.

ಹಿರಿಯ ನಾಗರಿಕರ ರಕ್ಷಣೆಯ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬರುತ್ತಿರುವ ಸಹಾಯವಾಣಿಯವರಿಗೆ ಗೌರವಧನ ದೊರೆಯದಿರುವುದನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇವೆ. ಸದ್ಯ ಅನುದಾನ ಬಾರದಿದ್ದರೂ ಇತರ ಅಗತ್ಯ ಖರ್ಚನ್ನು ಹೊಂದಿಸಿಕೊಂಡು ಹೋಗುತ್ತಿದ್ದೇವೆ. ಆದರೆ ಗೌರವಧನ ಪಾವತಿ ಸಾಧ್ಯವಾಗುತ್ತಿಲ್ಲ. 
– ವಸಂತಿ ರಾವ್‌ ಕೊರಡ್ಕಲ್‌
ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ 

ಸರಕಾರಿ ಮಟ್ಟದಲ್ಲೇ ಆಗಬೇಕು
 ಇದು ಇಡೀ ರಾಜ್ಯದಲ್ಲಿರುವ ಸಮಸ್ಯೆ. ಇಲಾಖೆಯ ನಿರ್ದೇಶಕರಿಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಅನುದಾನ ಬರುವ ವರೆಗೆ ಒಕ್ಕೂಟದವರೇ ನಿರ್ವಹಿಸಬೇಕಾಗುತ್ತದೆ. ಕೆಲವೇ ದಿನಗಳಲ್ಲಿ ಅನುದಾನ ಬಿಡುಗಡೆಯಾಗುವ ಭರವಸೆ ದೊರೆತಿದೆ.
– ನಿರಂಜನ್‌,  ಹಿರಿಯ ನಾಗರಿಕರು ಮತ್ತು ವಿಕಲಚೇತನರ ಕಲ್ಯಾಣಾಧಿಕಾರಿ

– ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next