Advertisement

ಅನ್ಯಾಯ ಖಂಡಿಸಿ ಡಿಸಿ ಅಣುಕು ಶವಯಾತ್ರೆ

03:26 PM Oct 05, 2018 | Team Udayavani |

ದಾವಣಗೆರೆ: ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಬಗರ್‌ ಹುಕುಂ ಸಾಗುವಳಿ ಭೂಮಿಯನ್ನು ಗಣಿಗಾರಿಕೆಗೆ ನೀಡಿರುವುದನ್ನು ವಿರೋಧಿಸಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಆಂಬೇಡ್ಕರ್‌ ವಾದಿ)
ಕಾರ್ಯಕರ್ತರು ಜಿಲ್ಲಾಧಿಕಾರಿ ಹಾಗೂ ಹರಪನಹಳ್ಳಿ ಹಿಂದಿನ ತಹಶೀಲ್ದಾರ್‌ ಅಣುಕು ಶವಯಾತ್ರೆ, ಅಂತ್ಯಕ್ರಿಯೆ ನಡೆಸಿ, ಪ್ರತಿಭಟಿಸಿದ್ದಾರೆ.

Advertisement

ಪಿ.ಬಿ. ರಸ್ತೆಯ ಪಂಚಮಹಾ ದೇವಸ್ಥಾನದ ಬಳಿಯಿಂದ ಜಿಲ್ಲಾಧಿಕಾರಿ ಹಾಗೂ ಈ ಹಿಂದಿನ ಹರಪನಹಳ್ಳಿ ತಹಶೀಲ್ದಾರ್‌ ಅವರ ಅಣುಕು ಶವಯಾತ್ರೆ ಆರಂಭಿಸಿದ ದಸಂಸ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಬಳಿ ಮುಂಭಾಗದ ಅಣುಕು ಶವವಿಟ್ಟು ಪ್ರತಿಭಟಿಸಿದರು.

ಉಚ್ಚಂಗಿದುರ್ಗ ಗ್ರಾಮದ ರಿ.ಸ.ನಂ. 441/2ರ 19.42 ಎಕರೆ ಸರ್ಕಾರಿ ಭೂಮಿಯಲ್ಲಿ ಅದೇ ಗ್ರಾಮದ ರೈತ ದುಗ್ಗತ್ತಿ ಉಚ್ಚೆಂಗಪ್ಪ ಹಲವಾರು ವರ್ಷಗಳಿಂದ ಬಗರ್‌ ಹುಕುಂ ಸಾಗುವಳಿ ಮಾಡಿಕೊಂಡಿದ್ದು, ಭೂ ಮಾಲಿಕತ್ವಕ್ಕಾಗಿ ಅರ್ಜಿ ಕೂಡ ಸಲ್ಲಿಸಿದ್ದರು. ಈ ಮಧ್ಯೆ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ವೇಳೆ ಸಿಡಿಮದ್ದು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 2000ನೇ ಇಸವಿ ಜ.18ರಲ್ಲಿ ಜಿಲ್ಲಾ ಸೇಷನ್‌ ಜಡ್ಜ್ ನ್ಯಾಯಾಲಯವು ಉಚ್ಚೆಂಗಪ್ಪಗೆ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಶಿಕ್ಷೆ ಅನುಭವಿಸಿ ಬಂದ ರೈತ ಉಚ್ಚೆಂಗಪ್ಪನಿಗೆ ಬಗರ್‌ ಹುಕುಂ ಸಾಗುವಳಿ ಮಾಡುವಂತಿಲ್ಲ ಎಂಬುದಾಗಿ ಬಗರ್‌ಹುಕುಂ ಸಕ್ರಮೀಕರಣ ಸಾಗುವಳಿ ಸಮಿತಿ ಆತ ಸಲ್ಲಿಸಿದ್ದ ಫಾರಂ ನಂ.53ರ ಅರ್ಜಿ ವಜಾಗೊಳಿಸಿದೆ.

ಆ ನಂತರ ಜಿಲ್ಲಾಧಿಕಾರಿ ಹಾಗೂ ಹಿಂದಿನ ಹರಪನಹಳ್ಳಿ ತಹಶೀಲ್ದಾರ್‌ ಗುರುಬಸವರಾಜ್‌ ಅವರಿಗೆ ಸಂಕಷ್ಟದಲ್ಲಿದ್ದ ಉಚ್ಚಂಗಪ್ಪಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಇದುವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರು ಆಕ್ರೋಶ ವ್ಯಕ್ತಪಡಿಸಿದರು. 

ಉಚ್ಚೆಂಗಪ್ಪನ ಸ್ವಾಧಿಧೀನದಲ್ಲಿದ್ದ 7.20 ಎಕರೆ ಭೂಮಿಯನ್ನು ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಎಲ್ಲಾ ಸಾಕ್ಷಿ ಆಧಾರ ನೀಡಿದರೂ ಸಹ ಅಧಿಕಾರಿಗಳು ಮೌನ ವಹಿಸಿದ್ದಾರೆ. ಹರಪನಹಳ್ಳಿ ಹಿಂದಿನ ತಹಶೀಲ್ದಾರ್‌ ಗುರುಬಸವರಾಜ್‌ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯದ ತೀರ್ಪು ಉಲ್ಲಂಘಿಸಿ ಅಕ್ರಮ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದ್ದ ಆದೇಶ ಹಿಂಪಡೆದು, ಉಚ್ಚೆಂಗಪ್ಪಗೆ ಪರ್ಯಾಯ ಭೂ ಮಂಜೂರು ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಆಂಬೇಡ್ಕರ್‌ ವಾದಿ)ಹಾಗೂ ಸಾಮಾಜಿಕ ಸಂಘರ್ಷ ಸಮಿತಿ ನೇತೃತ್ವದಲ್ಲಿ 340 ದಿನಗಳ ಕಾಲ ಪ್ರತಿಭಟಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಅ. 10ರಂದು ಜಿಲ್ಲಾಧಿಕಾರಿ ಮನೆ ಮುಂದೆ ಪ್ರತಿಭಟಿಸಲಾಗುವುದು ಎಂದು ಪ್ರತಿಭಟನಾಕಾರರು ಗಡುವು ನೀಡಿ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪಗೆ ಅವರಿಗೆ ಮನವಿ ಸಲ್ಲಿಸಿದರು.

ಸಾಮಾಜಿಕ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಪ್ರೊ| ಸಿ.ಕೆ. ಮಹೇಶ್ವರಯ್ಯ, ದಸಂಸ ರಾಜ್ಯ ಸಂಚಾಲಕ ಎಚ್‌.ಮಲ್ಲೇಶ್‌, ಜಿಲ್ಲಾ ಸಂಚಾಲಕ ಡಿ. ಹನುಮಂತಪ್ಪ, ಬಿ.ಎನ್‌. ನಾಗೇಶ್‌, ಪಿ. ತಿಪ್ಪೇರುದ್ರಪ್ಪ, ಎಚ್‌.ಸಿ. ಮಲ್ಲಪ್ಪ, ಜಿ.ಎಸ್‌. ಲೋಕೇಶ್‌, ಅಂಜಿನಪ್ಪ ನೀಲಗುಂದ, ಎಂ. ಚಂದ್ರಪ್ಪ, ಎಚ್‌. ನಾಗರಾಜ್‌, ನಾರಾಯಣಪ್ಪ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next