Advertisement

ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ : ತೆರಿಗೆ ಸಂಗ್ರಹಿಸುವಲ್ಲಿ ಮುಂದೆ; ಅಭಿವೃದ್ಧಿಯಲ್ಲಿ ಹಿಂದೆ

03:30 PM Oct 20, 2022 | Team Udayavani |

ಉಡುಪಿ: ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯಿಂದ ಕೈಗಾರಿಕೆ ಪ್ರದೇಶ ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ (ಕೆಎಸ್‌ಎಸ್‌ಐಡಿಸಿ) ಯಿಂದ ಕೈಗಾರಿಕೆ ಎಸ್ಟೇಟ್‌ಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಲಾಗುತ್ತದೆ. ಕೈಗಾರಿಕೆ ಪ್ರದೇಶ ಅಥವಾ ಕೈಗಾರಿಕೆ ಎಸ್ಟೇಟ್‌ ಅಭಿವೃದ್ಧಿ ಪಡಿಸಿ ಹಂಚಿಕೆ ಮಾಡಿದ ಆರಂಭದಲ್ಲಿ ಪ್ರದೇಶ ಅಥವಾ ಎಸ್ಟೇಟ್‌ನ ಮೂಲಸೌಕರ್ಯ ಅಭಿವೃದ್ಧಿ ಆಯಾ ಮಂಡಳಿಯ ಹೊಣೆ.

Advertisement

ಕೈಗಾರಿಕೆ ಪ್ರದೇಶದಲ್ಲಿ ನಿವೇಶನ ಪಡೆದ ಕೈಗಾರಿಕೋದ್ಯಮಿಗಳು ಮತ್ತು ಸಂಬಂಧಪಟ್ಟ ಮಂಡಳಿಯ ನಡುವೆ ಲೀಸ್‌ ಕಮ್‌ ಸೇಲ್‌ ಒಪ್ಪಂದ ಇರುತ್ತದೆ. 10 ವರ್ಷಗಳ ಬಳಿಕ ಇದು ಸಂಪೂರ್ಣವಾಗಿ ಮಾಲಕನ/ಉದ್ಯಮಿಯ ಸ್ವಾಧೀನಕ್ಕೆ ಬರುತ್ತದೆ. ಆಗ ಪ್ರದೇಶದ ಅಭಿವೃದ್ಧಿಯನ್ನು ಸ್ಥಳೀಯ ಸಂಸ್ಥೆ ಅಥವಾ ನಗರ ಸ್ಥಳೀಯ ಸಂಸ್ಥೆ ನಿರ್ವಹಿಸಬೇಕು ಎನ್ನುತ್ತಾರೆ ಕೈಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು.

ಮಂಡಳಿ ಮತ್ತು ಕೈಗಾರಿಕೆ ಮಾಲಕರ ನಡುವೆ ಸುಮಾರು 10 ಅಥವಾ 15 ವರ್ಷಗಳ ಲೀಸ್‌ ಕಮ್‌ ಸೇಲ್‌ ಒಪ್ಪಂದ ಇರುತ್ತದೆ. ಆರಂಭದಲ್ಲಿ ಕೈಗಾರಿಕೆಗಳಿಂದ ತೆರಿಗೆಯನ್ನು ಸಂಬಂಧಪಟ್ಟ ಮಂಡಳಿಗಳು ಸಂಗ್ರಹಿಸಿ ಪ್ರದೇಶಾಭಿವೃದ್ಧಿಗೆ ಬಳಸುತ್ತವೆ. ಒಮ್ಮೆ ಮಂಡಳಿಯಿಂದ ಕೈಗಾರಿಕ ಪ್ರದೇಶವನ್ನು ಸ್ಥಳೀಯ ಸಂಸ್ಥೆ ಅಥವಾ ನಗರ ಸ್ಥಳೀಯ ಸಂಸ್ಥೆಗೆ ವರ್ಗಾಯಿಸಿದಲ್ಲಿ ಪೂರ್ಣ ಉಸ್ತುವಾರಿ ಗ್ರಾ.ಪಂ., ನಗರಸಭೆ, ಪ.ಪಂ. ಅಥವಾ ಪುರಸಭೆ ಸಹಿತ ಯಾವ ವ್ಯಾಪ್ತಿಯಲ್ಲಿ ಕೈಗಾರಿಕೆ ಪ್ರದೇಶ ಬರಲಿದೆಯೋ ಅವರದ್ದು. ತೆರಿಗೆ ಸಂಗ್ರಹವೂ ಸ್ಥಳೀಯಾಡಳಿತಕ್ಕೆ ಸೇರುತ್ತದೆ.

ತೆರಿಗೆ ಸಮರ್ಪಕ ವಿನಿಯೋಗ ಆಗಬೇಕು
ಮಂಡಳಿಯಿಂದ ಕೈಗಾರಿಕೆ ಪ್ರದೇಶವು ಸ್ಥಳೀಯಾಡಳಿತ ಗಳಿಗೆ ಹಸ್ತಾಂತರ ಆಗುವ ಮೊದಲು ತೆರಿಗೆ ಸಂಗ್ರಹ ಬಾಕಿಯಿದ್ದಲ್ಲಿ ಅದನ್ನು ಮಂಡಳಿಯೇ ಸಂಗ್ರಹಿಸಿ ಸ್ಥಳೀಯಾಡಳಿತಕ್ಕೆ ತುಂಬುತ್ತದೆ. ಸ್ಥಳೀಯಾಡಳಿತದ ಸುಪರ್ದಿಗೆ ಬಂದ ಅನಂತರದಲ್ಲಿ ಮಂಡಳಿಯು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರಸ್ತುತ ಎಲ್ಲ ಕೈಗಾರಿಕೆ ಪ್ರದೇಶ ಹಾಗೂ ಕೈಗಾರಿಕೆ ಎಸ್ಟೇಟ್‌ಗಳಿಂದ ಸಂಬಂಧಟ್ಟ ಸ್ಥಳೀಯಾಡಳಿತಗಳು ತೆರಿಗೆ ಸಂಗ್ರಹಿಸುತ್ತವೆ. ಆದರೆ ಕೈಗಾರಿಕೆ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸುವ ಪ್ರಮಾಣ ತೀರ ಕಡಿಮೆಯಿದೆ. ಇದೇ ಕಾರಣಕ್ಕೆ ಕೈಗಾರಿಕೆ ಪ್ರದೇಶಗಳ ಸ್ಥಿತಿ ಹದಗೆಟ್ಟಿದೆ. ಹೀಗಾಗಿಯೇ ಕೈಗಾರಿಕೆಗಳಿಂದ ಸಂಗ್ರಹಿಸಿದ ತೆರಿಗೆಯಲ್ಲಿ ಶೇ. 50ರಿಂದ ಶೇ. 60 ರಷ್ಟು ಕೈಗಾರಿಕೆ ಪ್ರದೇಶದ ಅಭಿವೃದ್ಧಿಗೆ ಕಡ್ಡಾಯವಾಗಿ ಬಳಸುವಂತಾಗಬೇಕು ಎಂಬುದು ಕೈಗಾರಿಕೋದ್ಯಮಿಗಳ ಆಗ್ರಹ. ಈ ಸಂಬಂಧ ಸರಕಾರದ ಹಂತದಲ್ಲೂ ಚರ್ಚೆ ನಡೆದಿದ್ದು, ಅನುಷ್ಠಾನಗೊಳ್ಳುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಅಧಿಕಾರಿಗಳು.

ದೂರು ಸಲ್ಲಿಕೆ, ಪರಿಶೀಲನೆ
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಕೈಗಾರಿಕೆಗಳ ಕುಂದುಕೊರತೆ ಆಲಿಸಲು ಹಾಗೂ ಮೂಲಸೌಕರ್ಯ ಒದಗಿಸಲು ಕೆಲವು ಮಾರ್ಗದರ್ಶನ ಮಾಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಒಂದು ಸಮಿತಿ ರಚನೆಯಾಗಿರುತ್ತದೆ. ಕೈಗಾರಿಕೆ ಪ್ರದೇಶ ಅಥವಾ ಎಸ್ಟೇಟ್‌ನಲ್ಲಿ ಯಾವುದೇ ಸಮಸ್ಯೆ ಅಥವಾ ದೂರುಗಳಿದ್ದರೂ ಜಿಲ್ಲಾ ಕೈಗಾರಿಕೆ ಕೇಂದ್ರಕ್ಕೆ ನೀಡಬಹುದು. ಕೈಗಾರಿಕೆ ಕೇಂದ್ರದಿಂದ ಅದನ್ನು ಸಮಿತಿಗೆ ಸಲ್ಲಿಸಲಾಗುತ್ತದೆ. ಕೈಗಾರಿಕೆಗಳ ಮಾಲಕರು ದೂರುಗಳನ್ನು ನೇರವಾಗಿಯೂ ಸಮಿತಿಗೆ ಸಲ್ಲಿಸಬಹುದು. ಈ ಸಮಿತಿಯು ಕನಿಷ್ಠ ಎರಡೂ ಅಥವಾ ಮೂರು ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಸಭೆ ಸೇರಿ ಮೂಲಸೌಕರ್ಯ ಕಲ್ಪಿಸುವುದು ಸಹಿತವಾಗಿ ಹಲವು ವಿಷಯಗಳ ಬಗ್ಗೆ ಚರ್ಚಿಸಿ ನಿರ್ದಿಷ್ಟ ಕ್ರಮ ತೆಗೆದುಕೊಳ್ಳಲಿದೆ.

Advertisement

ದಂಡ ವಸೂಲಿ
ಕೈಗಾರಿಕೆ ಪ್ರದೇಶದಲ್ಲಿ ಕೈಗಾರಿಕೆಗಳಿಂದ ಹೊರಬಿಡುವ ತ್ಯಾಜ್ಯ ನೀರು ಅಥವಾ ಇತರೆ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿಗೆ ಮೂಲದಲ್ಲೇ ಕ್ರಮ ವಹಿಸಬೇಕು ಎಂಬ ನಿಯಮವಿದೆ. ಕೈಗಾರಿಕೆ ಪ್ರದೇಶ ಅಭಿವೃದ್ಧಿಯ ಸಂದರ್ಭದಲ್ಲೇ ಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ, ಮೂಲ ಸೌಕರ್ಯ ಅಭಿವೃದ್ಧಿ ಇತ್ಯಾದಿಗಳನ್ನು ಕಲ್ಪಿಸಬೇಕೆಂದೂ ಸ್ಪಷ್ಟವಿದೆ. ಆದರೆ ಬಹುತೇಕ ಕೈಗಾರಿಕೆ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ನಿರ್ವಹಣೆಯಂತೂ ಹೇಳಿಕೊಳ್ಳಲು ಸಾಧ್ಯವಾಗದಷ್ಟು ಕಳಪೆಯಿದೆ. ಕೈಗಾರಿಕೆಗಳಿಂದ ಸರಿಯಾಗಿ ತೆರಿಗೆ ಸಂಗ್ರಹಿಸುತ್ತಾರೆ. ತೆರಿಗೆ ನೀಡುವುದು ವಿಳಂಬವಾದರೂ ದಂಡ ವಿಧಿಸುತ್ತಾರೆ. ಸಣ್ಣಪುಟ್ಟ ಲೋಪದೋಷಗಳಾದಾಗಲೂ ದಂಡ ವಿಧಿಸುತ್ತಾರೆ. ಆದರೆ ಕೈಗಾರಿಕೆ ಪ್ರದೇಶದ ರಸ್ತೆ ಸಹಿತ ಮೂಲಸೌಕರ್ಯದ ಅಭಿವೃದ್ಧಿಗೆ ಅದನ್ನು ವಿನಿಯೋಗಿಸುವುದಿಲ್ಲ. ಹೀಗಾಗಿ ಕೈಗಾರಿಕೆ ಪ್ರದೇಶಗಳು ಅಭಿವೃದ್ಧಿಯೇ ಆಗುತ್ತಿಲ್ಲ ಎಂಬುದು ಕೈಗಾರಿಕೆಗಳ ಮಾಲಕರ ಆಕ್ರೋಶದ ನುಡಿಗಳು.

ಕೈಗಾರಿಕೆ ಪ್ರದೇಶಗಳನ್ನು ನಿರ್ದಿಷ್ಟ ಮಂಡಳಿಯಿಂದ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಿದ ಅನಂತರದಲ್ಲಿ ಸ್ಥಳೀಯ ಸಂಸ್ಥೆಗಳೇ ಅದರ ತೆರಿಗೆ ಸಂಗ್ರಹ ಮತ್ತು ಅಭಿವೃದ್ಧಿ ನೋಡಿಕೊಳ್ಳಬೇಕು. ಕೈಗಾರಿಕೆಗಳ ಮಾಲಕರು ಯಾವುದೇ ದೂರುಗಳಿದ್ದಲ್ಲಿ ನೇರವಾಗಿ ಜಿಲ್ಲಾ ಕೈಗಾರಿಕೆ ಕೇಂದ್ರಕ್ಕೆ ಸಲ್ಲಿಸಬಹುದು. ಅದನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯ ಮುಂದಿಡಲಿದ್ದೇವೆ. ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗುತ್ತಿದೆ.
– ನಾಗರಾಜ ವಿ. ನಾಯಕ್‌, ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ, ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next