Advertisement

ಇಂದ್ರನ ಮೋಸ ; ಆಕಾಶದಲ್ಲಿ ವಿಖ್ಯಾತರಾದ ಏಳು ವಾತಸ್ಕಂಧರ ಜನನ!

07:10 AM Feb 12, 2019 | |

ಸಮುದ್ರ ಮಂಥನದ ನಂತರ ನಡೆದ ದೇವಾಸುರ ಸಂಗ್ರಾಮದಲ್ಲಿ ಅದಿತಿಯ ಪುತ್ರರಾದ ದೇವತೆಗಳಿಂದ ದಿತಿಯ ಪುತ್ರರಾದ ದಾನವರೆಲ್ಲರೂ ಮೃತರಾಗುತ್ತಾರೆ. ಯುದ್ಧದಲ್ಲಿ ಹತರಾದ ತನ್ನ ಪುತ್ರರನ್ನು ನೋಡಿ ದುಃಖಿತಳಾದ ದಿತಿಯು ಬಹಳ ಕೋಪೋದ್ರೇಕದಿಂದ ತನ್ನ ಪತಿ ಮರೀಚಿ ನಂದನ ಕಶ್ಯಪರ ಬಳಿಗೆ ಹೋಗಿ ” ಸ್ವಾಮಿ ! ನಿಮ್ಮ ಮಹಾಬಲ ಪುತ್ರರಾದ ದೇವತೆಗಳು ನನ್ನ ಪುತ್ರರನ್ನು ಕೊಂದು ಹಾಕಿದರು. ಆದ್ದರಿಂದ ನನ್ನ ಗರ್ಭದಲ್ಲಿ  ಸರ್ವಕಾರ್ಯ ನಿಪುಣನೂ, ಸಮರ್ಥನೂ ಹಾಗೂ ಇಂದ್ರನನ್ನು ವಧಿಸುವಂತಹ ಪುತ್ರನನ್ನು ಕರುಣಿಸಿರಿ. ಅದಕ್ಕಾಗಿ ನಾನು ಧೀರ್ಘಕಾಲ ತಪಸ್ಸು ಮಾಡುವೆನು. ಇಂದ್ರನನ್ನು ಸಂಹರಿಸಲು ಸಮರ್ಥನಾದ ಪುತ್ರನನ್ನು ಬಯಸುತ್ತಿರುವೆನು. ನೀವು ನನಗೆ ಅಪ್ಪಣೆ ಕೊಡಿ” ಎಂದು ಕೇಳಿದಳು .

Advertisement

                     ಆಕೆಯ ಮಾತನ್ನು ಕೇಳಿ ಬಹಳ ದುಃಖಿತರಾದ ಕಶ್ಯಪರು ” ನಿನ್ನ ಇಚ್ಛೆಯಿದ್ದಂತೆ ಆಗಲಿ ಆದರೆ, ನೀನು ಒಂದು ಸಾವಿರ ವರ್ಷ ಕಾಯೇನ- ವಾಚಾ- ಮನಸ  ಶುಚಿತ್ವವನ್ನು ಕಾಪಾಡಿಕೊಂಡು ಪವಿತ್ರತೆಯಿಂದ ಇದ್ದರೆ ನೀನು ನನ್ನಿಂದ ತ್ರೈಲೋಕ್ಯನಾಥ ಇಂದ್ರನನ್ನು ವಧೆಮಾಡಲು ಸಮರ್ಥನಾದ ಪುತ್ರನನ್ನು ಪಡೆಯುವೆ ನಿನಗೆ ಮಂಗಳವಾಗಲಿ ”  ಹೀಗೆ ಹೇಳಿ ಮಹಾತೇಜಸ್ವಿ ಕಶ್ಯಪರು ದಿತಿಯನ್ನು ಸ್ಪರ್ಶಿಸಿ ತಪಸ್ಸಿಗಾಗಿ ಹೊರಟು ಹೋದರು. ದಿತಿಯು ಅತ್ಯಂತ ಹರ್ಷಿತಳಾಗಿ, ಕುಶಪ್ಲವ ಎಂಬ ತಪೋವನಕ್ಕೆ ಬಂದು ಅತ್ಯಂತ ಕಠೋರ ತಪಸ್ಸು ಮಾಡತೊಡಗಿದಳು.

                 ಈ ವಿಷಯ ತಿಳಿದ ದೇವೇಂದ್ರನು ದಿತಿಯ ಗರ್ಭದಲ್ಲಿನ ಶಿಶುವು ಹೊರಬರುವ ಮೊದಲೇ ಸಂಹಾರಮಾಡಲು ಯೋಚಿಸಿ, ಆಕೆಯು ಅಶುಚಿಯಾಗುವ ಸಮಯಕ್ಕಾಗಿ ಕಾಯುತ್ತಾ  ದಿತಿಯು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಬಂದು ವಿನಯಾದಿ ಉತ್ತಮ ಗುಣಗಳಿಂದ ಕೂಡಿಕೊಂಡು ಆಕೆಯ ಸೇವೆಮಾಡ ತೊಡಗಿದನು. ಸಹಸ್ರಲೋಚನನಾದ ಇಂದ್ರನು ತನ್ನ ಚಿಕ್ಕಮ್ಮ ದಿತಿಗಾಗಿ ಅಗ್ನಿ, ಕುಶ, ಕಾಷ್ಠ ,ಜಲ , ಫಲ -ಮೂಲ ಹಾಗೂ ಇತರ ಅಗತ್ಯ ವಸ್ತುಗಳನ್ನು ತಂದು ಕೊಡುತ್ತಿದ್ದನು.  ಇಂದ್ರನು ಚಿಕ್ಕಮ್ಮನ ಕಾಲುಗಳನ್ನೊತ್ತಿ ಶಾರೀರಿಕ ಸೇವೆಮಾಡುತ್ತಾ ಆಕೆಯ ಬಳಲಿಕೆಯನ್ನು ದೂರಗೊಳಿಸುತ್ತಿದ್ದನು. ಹೀಗೆಯೇ ಬೇರೆ ಅವಶ್ಯಕ ಸೇವೆಗಳಿಂದ ಎಲ್ಲ ಹೊತ್ತಿನಲ್ಲಿ ದಿತಿಯ ಪರಿಚರ್ಯೆಯನ್ನು ಮಾಡುತ್ತಿದ್ದನು. ಹೀಗೆ ಅವರಿಬ್ಬರಲ್ಲಿದ್ದ ದ್ವೇಷ- ಆತಂಕಗಳು ದೂರಾಗಿ ಹೋಗಿದ್ದವು.

              ಸಾವಿರ ವರ್ಷಗಳು ಪೂರ್ಣವಾಗಲು ಇನ್ನು ಹತ್ತು ವರ್ಷ ಬಾಕಿ ಉಳಿದಾಗ ಒಂದು ದಿನ ದಿತಿಯು ಅತ್ಯಂತ ಹರ್ಷಗೊಂಡು ಇಂದ್ರನಲ್ಲಿ ಹೇಳಿದಳು. “ಈಗ ನನ್ನ ತಪಸ್ಸಿನ ಕೇವಲ ಹತ್ತು ವರ್ಷ ಉಳಿದಿವೆ. ಹತ್ತು ವರ್ಷಗಳ ಬಳಿಕ ಹುಟ್ಟಲಿರುವ ನಿನ್ನ ತಮ್ಮನನ್ನು ನೀನು ನೋಡಲಿರುವೆ. ನಾನು ನಿನ್ನ ವಿನಾಶಕ್ಕಾಗಿ ಯಾವ ಪುತ್ರನನ್ನು ಬಯಸಿದ್ದೇನೋ , ಅವನು ನಿನ್ನನ್ನು ಗೆಲ್ಲಲ್ಲು ಉತ್ಸುಕನಾದಾಗ ನಾನು ಅವನನ್ನು ಶಾಂತಗೊಳಿಸುವೆನು. ಅವನನ್ನು ನಿನ್ನ ಕುರಿತು ವೈಭವ ರಹಿತ, ಭ್ರಾತೃ ಸ್ನೇಹಯುಕ್ತನನ್ನಾಗಿಸಿಬಿಡುವೆನು. ಮತ್ತೆ ನೀನು ಅವನೊಂದಿಗೆ ಇದ್ದು ಅವನ ಮೂಲಕ ಗಳಿಸಿದ ತ್ರಿಭುವನ ವಿಜಯದ ಸುಖವನ್ನು ನಿಶ್ಚಿಂತನಾಗಿ ಭೋಗಿಸು” ಎಂದಳು.

Advertisement

             ಹೀಗೆ ಹೇಳಿ ದಿತಿಯು ನಿದ್ದೆಹೋದಳು. ಸದಾ ಎಚ್ಚರದಿಂದ ಇರುವ ಇಂದ್ರನು , ದಿತಿಯ ಮಾತಿನಿಂದ ಮತ್ತಷ್ಟು ಜಾಗರೂಕನಾದನು. ಅದೇ ಸಮಯಕ್ಕೆ ಸೂರ್ಯನು ನೆತ್ತಿಯ ಮೇಲೆ ಇದ್ದ ಮಧ್ಯಾಹ್ನದ ಸಮಯವಾಗಿತ್ತು. ದಿತಿದೇವಿಯು ಕುಳಿತಲ್ಲೇ ನಿದ್ದೆಮಾಡತೊಡಗಿದಳು. ತಲೆಬಾಗಿ ಕೂದಲು ಪಾದಗಳನ್ನು ಸ್ಪರ್ಶಿಸಿದವು. ತಲೆಗೆ ಆಧಾರವಾಗಿ ಎರಡು ಕಾಲುಗಳನ್ನೇ ಬಳಸಿದ್ದಳು. ಇದನ್ನು ನೋಡಿ ದಿತಿಯು ಅಪವಿತ್ರಳಾದಳೆಂದು ಅರಿತ ಇಂದ್ರನು ತನ್ನ ನಾಶಕ್ಕಾಗಿ ಬರಲಿರುವ ಸಂಹಾರಕನ ನಾಶಕ್ಕೆ ಇದೆ ಸಮಯವೆಂದು ಅರಿತು ಸಂತೋಷಗೊಂಡನು.

ಇಂದ್ರನು ದಿತಿಯ ಗರ್ಭವನ್ನು ಪ್ರವೇಶಿಸಿ, ಅಲ್ಲಿದ್ದ ಗರ್ಭಸ್ಥ ಶಿಶುವನ್ನು ಏಳು ತುಂಡುಗಳಾಗಿ ಕತ್ತರಿಸಿದನು. ನೂರು ಅಲಗುಗಳುಳ್ಳ ವಜ್ರಾಯುಧದಿಂದ ಕತ್ತರಿಸುವಾಗ ಆ ಗರ್ಭಸ್ಥ ಶಿಶುವು ಜೋರಾಗಿ ಅಳತೊಡಗಿತು. ಇದರಿಂದ ದಿತಿಯು ನಿದ್ದೆಯಿಂದ ಎಚ್ಚರಗೊಂಡಳು. ಆಗ ಇಂದ್ರನು ಅಳುತ್ತಿರುವ ಗರ್ಭಕ್ಕೆ ‘ತಮ್ಮ,ಅಳಬೇಡ, ಅಳಬೇಡ’  ಎಂದು ಹೇಳುತ್ತಾ ಮಹಾತೇಜಸ್ವೀ ಇಂದ್ರನು ಅಳುತ್ತಿದ್ದರೂ ಆ ಗರ್ಭವನ್ನು ತುಂಡುಗಳನ್ನಾಗಿ ಮಾಡಿದನು.

              ಆಗ ದಿತಿಯು , ಇಂದ್ರನೇ ! ಮಗುವನ್ನು ಕೊಲ್ಲಬೇಡ, ಬಿಟ್ಟುಬಿಡು ಎಂದು ಹೇಳಿದಳು. ತಾಯಿಯ (ಚಿಕ್ಕಮ್ಮ) ಮಾತಿಗೆ ಗೌರವಕೊಟ್ಟು ಇಂದ್ರನು ಕೂಡಲೇ ಉದರದಿಂದ ಹೊರಗೆಬಂದನು. ವಜ್ರಾಯುಧಸಹಿತ ಇಂದ್ರನು ಕೈಜೋಡಿಸಿಕೊಂಡು ದಿತಿಯಲ್ಲಿ “ ಅಮ್ಮ! ನಿನ್ನ ತಲೆಕೂದಲು ಕಾಲುಗಳನ್ನು ಮುಟ್ಟಿದ್ದವು. ಹೀಗೆ ನೀನು ಅಪವಿತ್ರ ಸ್ಥತಿಯಲ್ಲಿ ಮಲಗಿದ್ದೆ. ಇದೇ ಸಂದರ್ಭವನ್ನು ಬಳಸಿಕೊಂಡು ನಾನು ಇಂದ್ರಹಂತಕನಾದ ಬಾಲಕನನ್ನು ಏಳು ತುಂಡುಗಳಾಗಿಸಿದೆ. ಅದಕ್ಕಾಗಿ ತಾಯೆ! ನೀನು ನನ್ನ ಅಪರಾಧವನ್ನು ಕ್ಷಮಿಸು” ಎಂದು ಹೇಳಿದನು.  

             ಇಂದ್ರನು ತನ್ನ ಗರ್ಭವನ್ನು ಏಳು ತುಂಡುಗಳಾಗಿಸಿದಾಗ ದಿತಿದೇವಿಗೆ ಅತೀವ ದುಃಖವಾಯಿತು. ಆಕೆಯು ಸಹಸ್ರಾಕ್ಷ ಇಂದ್ರನಲ್ಲಿ ” ಪುತ್ರ ! ಇದರಲ್ಲಿ ನಿನ್ನ ಯಾವ ದೋಷವು ಇಲ್ಲ. ನನ್ನ ಅಪರಾಧದಿಂದಲೇ ಈ ಗರ್ಭವು ಏಳು ತುಂಡುಗಳಾದವು. ಇದರ ಪರಿಣಾಮದಿಂದ ನಿನಗೂ-ನನಗೂ ಪ್ರಿಯವಾಗುವಂತೆ, ಸುಖಕರವಾದ ಉಪಾಯವನ್ನು ಮಾಡಲು ನಾನು ಬಯಸುತ್ತಿರುವೆನು. ನನ್ನ ಗರ್ಭದ ಏಳು ತುಂಡುಗಳೂ ಏಳು ವ್ಯಕ್ತಿಗಳಾಗಿ ಏಳು ಮರುದ್ಗಣಗಳ ಸ್ಥಾನಗಳನ್ನು ಪಾಲಿಸುವವರಾಗಲಿ.  ದಿವ್ಯ ರೂಪಧಾರಿ ನನ್ನ ಪುತ್ರರು ‘ಮರುತ್’ ಎಂಬ ಹೆಸರಿನಿಂದ ಪ್ರಸಿದ್ಧರಾಗಿ ಆಕಾಶದಲ್ಲಿ ವಿಖ್ಯಾತವಾದ ಏಳು(ಆವಾಹ, ಪ್ರವಹ, ಸಂವಹ, ಉದ್ವಹ, ವಿವಹ, ಪರಿವಹ ಮತ್ತು ಪರಾವಹ) ವಾತಸ್ಕಂಧಗಳಾಗಲಿ” .

               ಪ್ರಥಮ ಗಣವು ಬ್ರಹ್ಮಲೋಕದಲ್ಲಿಯೂ , ಎರಡನೆಯ ಗಣವು ಇಂದ್ರಲೋಕದಲ್ಲಿಯೂ ಸಂಚರಿಸಲಿ. ಮತ್ತು ಮೂರನೆಯದು ಮಹಾಯಶಸ್ವಿ ಮರುದ್ಗಣರು ದಿವ್ಯವಾಯುವೆಂದು ವಿಖ್ಯಾತವಾಗಿ ಅಂತರಿಕ್ಷದಲ್ಲಿ ವಿಹರಿಸಲಿ. ಹಾಗೆ ಉಳಿದ ನಾಲ್ವರು ನನ್ನ ಪುತ್ರರು ನಿನ್ನ ಆಜ್ಞೆಯಂತೆ ಎಲ್ಲ ದಿಕ್ಕುಗಳಲ್ಲಿ ಸಂಚರಿಸಲಿ. ನೀನು ಇಟ್ಟ ಹೆಸರಿಂದಲೇ(‘ಮಾ ರುದಃ’ ಅಳಬೇಡ) ಅವರು ಮಾರುತರೆಂದು ವಿಖ್ಯಾತರಾಗಲಿ.

       ದಿತಿಯ ಮಾತನ್ನು ಕೇಳಿ ಬಲಿಷ್ಠನಾದ ಇಂದ್ರನು ತಾಯಿಯ ಎದಿರು ವಿನಯದಿಂದ ಮಂಡಿಯೂರಿ ಕೈಮುಗಿದುಕೊಂಡು “ತಾಯೇ! ನೀವು ಹೇಳಿದಂತೆಯೇ ಎಲ್ಲವು ಆಗುವುದು; ಇದರಲ್ಲಿ ಯಾವ ಸಂದೇಹವೇ ಇಲ್ಲ. ನಿನ್ನ ಈ ಪುತ್ರರು ದೇವರೂಪರಾಗುತ್ತಾರೆ” ಎಂದು ಹೇಳಿದನು. ಅವರಿಬ್ಬರೂ ಮುಂದಿನ ಕೆಲಸಕ್ಕಾಗಿ ಶೀಘ್ರವಾಗಿ ಸ್ವರ್ಗಲೋಕಕ್ಕೆ ತೆರಳಿದನು.

,,ಪಲ್ಲವಿ

Advertisement

Udayavani is now on Telegram. Click here to join our channel and stay updated with the latest news.

Next