Advertisement

Indonesia Open Badminton: ಸಾತ್ವಿಕ್‌- ಚಿರಾಗ್‌ ಶೆಟ್ಟಿ , ಪ್ರಣಯ್‌ ಸೆಮಿ ಪ್ರವೇಶ

10:58 PM Jun 16, 2023 | Team Udayavani |

ಜಕಾರ್ತಾ: ಇಂಡೋ ನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಎಚ್‌.ಎಸ್‌. ಪ್ರಣಯ್‌, ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಭಾರತದ ಭರವಸೆಯಾಗಿ ಉಳಿದಿದ್ದಾರೆ. ಇವರೆಲ್ಲರೂ ಸೆಮಿಫೈನಲ್‌ ಪ್ರವೇಶಿ ಸಿದ್ದಾರೆ. ಆದರೆ ಕೆ. ಶ್ರೀಕಾಂತ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದರು.

Advertisement

ಭಾರತದ ಶುಕ್ರವಾರದ ಆಟ ಸೋಲಿನೊಂದಿಗೆ ಆರಂಭಗೊಂಡಿತು. ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಕೆ. ಶ್ರೀಕಾಂತ್‌ ಚೀನದ ಲೀ ಶಿ ಫೆಂಗ್‌ ವಿರುದ್ಧ ಉತ್ತಮ ಹೋರಾಟ ಪ್ರದರ್ಶಿಸಿಯೂ 14-21, 21-14, 12-21 ಅಂತರದಿಂದ ಪರಾಭವಗೊಂಡರು. ವಿಶ್ವದ 10ನೇ ರ್‍ಯಾಂಕಿಂಗ್‌ ಆಟಗಾರ ಫೆಂಗ್‌ ಎದುರು ಶ್ರೀಕಾಂತ್‌ ಒಂದು ಗಂಟೆ, 9 ನಿಮಿಷಗಳ ತನಕ ಹೋರಾಡಿದರು.

ಅನಂತರದ ಕ್ವಾರ್ಟರ್‌ ಫೈನಲ್‌ನಲ್ಲಿ 7ನೇ ಶ್ರೇಯಾಂಕದ ಎಚ್‌.ಎಸ್‌. ಪ್ರಣಯ್‌ ಗೆಲುವಿನ ಫ‌ಲಿತಾಂಶ ದಾಖಲಿಸಿದರು. ತೃತೀಯ ಶ್ರೇಯಾಂಕದ ಜಪಾನ್‌ ಆಟಗಾರ ಕೊಡೈ ನರವೋಕ ಅವರನ್ನು 21-18, 21-6 ಅಂತರದಿಂದ ಹಿಮ್ಮೆಟ್ಟಿಸಿದರು. ವಿಕ್ಟರ್‌ ಅಕ್ಸೆಲ್ಸೆನ್‌ (ಡೆನ್ಮಾರ್ಕ್‌)-ಟೀನ್‌ ಚೆನ್‌ ಚೌ (ಚೈನೀಸ್‌ ತೈಪೆ) ನಡುವಿನ ವಿಜೇತರನ್ನು ಪ್ರಣಯ್‌ ಎದುರಿಸಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ 7ನೇ ಶ್ರೇಯಾಂಕದ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಅಗ್ರ ಶ್ರೇಯಾಂಕದ ಫ‌ಜರ್‌ ಅಲ್ಫಿಯಾನ್‌-ಮುಹಮ್ಮದ್‌ ರಿಯಾನ್‌ ಅರ್ದಿ ಯಾಂಟೊ ವಿರುದ್ಧ ಅಮೋಘ ಪ್ರದರ್ಶನ ನೀಡಿದರು. ಕೇವಲ 41 ನಿಮಿಷಗಳಲ್ಲಿ, ಎರಡೇ ಗೇಮ್‌ಗಳಲ್ಲಿ ಇಂಡೋನೇಷ್ಯನ್‌ ಜೋಡಿಯ ಆಟ ಮುಗಿಸಿದರು. ಅಂತರ 21-13, 21-13. ಕೊರಿಯಾದ ಮಿನ್‌ ಹ್ಯುಕ್‌ ಕಾಂಗ್‌-ಸೆಯಂಗ್‌ ಜೇ ಸೆವೊ-ಇಂಡೋನೇಷ್ಯಾದ ಲಿಯೋ ರಾಲಿ ಕರ್ನಾಂಡೊ-ಡೇನಿಯಲ್‌ ಮಾರ್ಟಿನ್‌ ನಡುವಿನ ವಿಜೇತರ ವಿರುದ್ಧ ಸೆಮಿಫೈನಲ್‌ ಪಂದ್ಯ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next