Advertisement

ಸರಕಾರಿ ಆಸ್ಪತ್ರೆ ಸಿಬಂದಿ ಅಸಡ್ಡೆ ವರ್ತನೆ

09:21 AM May 27, 2022 | Team Udayavani |

ಬೆಳ್ತಂಗಡಿ: ಸರಕಾರಿ ಆಸ್ಪತ್ರೆಗೆ ಹೆಚ್ಚಾಗಿ ಗ್ರಾಮೀಣ ಭಾಗದಿಂದ ಬಡ ರೋಗಿಗಳೇ ಆಗಮಿಸುತ್ತಾರೆ, ಅವರಿಗೆ ಆಸ್ಪತ್ರೆಯ ವಿಚಾರದಲ್ಲಿ ಅಷ್ಟೊಂದು ತಿಳುವಳಿಕೆ ಇರುವುದಿಲ್ಲ, ಆ ಕ್ಷಣದಲ್ಲಿ ಆಸ್ಪತ್ರೆ ಸಿಬಂದಿ ಸೂಕ್ತ ಮಾರ್ಗದರ್ಶನ ನೀಡದೆ ಅಸಡ್ಡೆ ತೋರುತ್ತಿದ್ದಾರೆ ಎಂದು ಪ.ಪಂ. ಅಧ್ಯಕ್ಷೆ ತಮ್ಮ ಅನುಭವವನ್ನು ಸಭೆಯಲ್ಲಿ ಪ್ರಸ್ತಾವಿಸಿದ ಘಟನೆ ನಡೆಯಿತು.

Advertisement

ಬೆಳ್ತಂಗಡಿ ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ರಜನಿ ಕುಡ್ವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಂಭೀರ ಆರೋಪ ಕೇಳಿಬಂತು.

ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣದ ಹೆಚ್ಚುತ್ತಿದೆ, ಮನೆಮುಂದೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬ ವಿಚಾರವಾಗಿ ಆರೋಗ್ಯ ನಿರೀಕ್ಷಕ ಗಿರೀಶ್‌ ಸಭೆಗೆ ಮಾಹಿತಿ ನೀಡಿದ ಬಳಿಕ ಅಧ್ಯಕ್ಷರು ವಿಚಾರ ಪ್ರಸ್ತಾವಿಸಿದರು. ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕೈಗೆ ಗಾಯವಾಗಿ ಚಿಕಿತ್ಸೆಗೆ ನಾನು ಕರೆತಂದಾಗ ಸಿಬಂದಿ, ವೈದ್ಯರು ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದರು. ರೋಗಿಗಳನ್ನು ಕೊಠಡಿ ಸಂಖ್ಯೆ ಹೇಳಿ ಹೋಗಿ ಎನ್ನುತ್ತಾರೆ. ಅವರಿಗೆ ಯಾವ ಕೊಠಡಿ ಎಲ್ಲಿದೆ ಎಂದು ತಿಳಿದಿರುವುದಿಲ್ಲ. ಅಂತಹಾ ತುರ್ತು ಸಂದರ್ಭದಲ್ಲಿ ಸಿಬಂದಿ ನೆರವು ಅಗತ್ಯ. ಏರು ಧ್ವನಿಯಲ್ಲಿ ಮಾತಾಡುವುದು ಸರಿಯಲ್ಲ, ಈ ಕುರಿತು ತಿಳುವಳಿಕೆ ಹೇಳಿ ಎಂದರು. ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಗಿರೀಶ್‌ ತಿಳಿಸಿದರು.

ಜಿಲ್ಲಾಧಿಕಾರಿ ಭೇಟಿ ಸದಸ್ಯರಿಗೆ ಮಾಹಿತಿಯಿಲ್ಲ

ಪಟ್ಟಣ ಪಂಚಾಯತ್‌ನ ಬಹುತೇಕ ಅನುದಾನಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅನುಮೋದನೆ ಪಡೆಯಬೇಕಾಗಿದೆ. ಆದರೆ ಮೇ 25ರಂದು ನಗರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡುವುದರ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಮಾಹಿತಿ ಇದ್ದರೆ ಜಿಲ್ಲಾಧಿಕಾರಿಗಳಲ್ಲಿ ವಿವಿಧ ವಿಷಯಗಳನ್ನು ಗಮನಕ್ಕೆ ತರಬಹುದಿತ್ತು ಎಂದು ಸದಸ್ಯ ಜಗದೀಶ್‌ ಡಿ. ಹೇಳಿದರು. ಇದಕ್ಕೆ ಮುಖ್ಯಾಧಿಕಾರಿ ಮುಂದೆ ಈ ರೀತಿಯ ಭೇಟಿ ಕಾರ್ಯಕ್ರಮ ಇದ್ದರೆ ತಿಳಿಸಲಾಗುವುದು ಎಂದರು.

Advertisement

ತ್ಯಾಜ್ಯ ಸಂಸ್ಕರಣ ಘಟಕಕ್ಕೆ ರಸ್ತೆ ಹಾಳು

10 ಕೋ.ರೂ. ವೆಚ್ಚದಲ್ಲಿ ರೆಂಕೆದಗುತ್ತು ಸಮೀಪ ನಿರ್ಮಾಣವಾಗುತ್ತಿರುವ ತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿಗಳು ನಡೆಯುತ್ತಿದ್ದು ಇದರಲ್ಲಿ ಕಾಂಕ್ರೀಟ್‌ ರಸ್ತೆಯನ್ನೇ ಅಗೆದು ಹಾಳು ಮಾಡಲಾಗಿದೆ ಎಂದು ಜಗದೀಶ್‌ ಹೇಳಿದರು. ಅಂಬೆಡ್ಕರ್‌ ಭವನದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿತ್ತು. ಯುಜಿಡಿ ಎಂದರೆ ರಸ್ತೆ ಮಧ್ಯಭಾಗವೇ ಪೈಪ್‌ಲೈನ್‌ ಹಾಕಲಾಗುತ್ತದೆ. ಆದರೂ ಈ ಬಗ್ಗೆ ಮುಂದಿನ ದಿನಗಳಲ್ಲಿ ಎಂಜಿನಿಯರ್‌ ಮತ್ತು ಗುತ್ತಿಗೆದಾರರ ಮೂಲಕ ಮಾಹಿತಿ ನೀಡಲಾಗುವುದು ಎಂದು ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್‌ ಹೇಳಿದರು.

ಕಾಂಕ್ರೀಟ್‌ ರಸ್ತೆ ನಿರ್ಮಿಸಿ

ನಗರದ ತ್ಯಾಜ್ಯ ಘಟಕದಲ್ಲಿ ಇಂಟರ್‌ ಲಾಕ್‌ ಬೇಡ ಕಾಂಕ್ರಿಟ್‌ ರಸ್ತೆ ನಿರ್ಮಿಸಿ ಎಂದು ಜಗದೀಶ್‌ ಹೇಳಿದಾಗ ನಿಮ್ಮ ಸಲಹೆಯನ್ನು ಗೌರವಿಸುತ್ತೇವೆ ಎಂದು ಅಧ್ಯಕ್ಷೆ ತಿಳಿಸಿದರು. ಪ.ಜಾತಿ, ಪಂಗಡಕ್ಕೆ 75ಯುನಿಟ್‌ ಉಚಿತ ವಿದ್ಯುತ್‌ ನೀಡುವ ಬಗ್ಗೆ ಸರಕಾರ ಘೋಷಣೆ ಮಾಡಿದ್ದು ಇದು ನಗರಕ್ಕೆ ಅನುಷ್ಠಾನವಾಗಿದೆಯೇ ಎಂದು ಜಗದೀಶ್‌ ಪ್ರಶ್ನಿಸಿದರು. ಇದಕ್ಕೆ ಆದೇಶ ಬರಲಿಲ್ಲ ಎಂದು ಮೆಸ್ಕಾಂ ಅಧಿಕಾರಿ ಹೇಳಿದರು. ಬೆಳಕು ಯೋಜನೆಯಡಿ 13 ಅರ್ಜಿಗಳು ಪಟ್ಟಣ ವ್ಯಾಪ್ತಿಯಲ್ಲಿ ಬಂದಿವೆ. ಶನಿವಾರದೊಳಗೆ ಕಾಮಗಾರಿ ಆರಂಭಿಸಲಾಗುವುದು ಎಂದರು.

ಮುಡಾ ಗುಮ್ಮ ಎಂಬ ಚಿಂತನೆ ಸಲ್ಲ

ಮುಡಾ ನಿಯಮ ಸಡಿಲಗೊಳಿಸಿ ಸರಕಾರ ಆದೇಶ ಮಾಡಿದ್ದು ಈ ಬಗ್ಗೆ ಮುಡಾ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಮುಡಾ ಅಧಿಕಾರಿ ಮೋಕ್ಷ ಉತ್ತರಿಸಿ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಕೋರ್ಟ್‌ ತಡೆಯಾಜ್ಞೆ ಇದ್ದು ಅದು ತೆರವಾದ ಬಳಿಕ ಅವಕಾಶ ಸಿಗಬಹುದು ಎಂದಾಗ ತಡೆಯಾಜ್ಞೆ ಪ್ರತಿಯನ್ನು ನೀಡಿ ಎಂದರು. ಇದು ಸರಕಾರದ ಮಟ್ಟದಲ್ಲಿ ನಡೆಯುವಂತಹ ಪ್ರಕ್ರಿಯೆಗಳು ನಮಗೆ ಈ ಬಗ್ಗೆ ಮಾಹಿತಿ ಬರುವುದಿಲ್ಲ ಮುಂದಿನ ದಿನದಲ್ಲಿ ಇದರ ಪ್ರತಿ ಪಡೆಯುವ ಬಗ್ಗೆ ಪ್ರಯತ್ನಿಸಿ ನೀಡಲಾಗುವುದು ಎಂದರು. ಮುಖ್ಯಾಧಿಕಾರಿ ಸುಧಾಕರ್‌ ಪ್ರತಿಕ್ರಿಯಿಸಿ, ಮುಡಾ ಕಾಯ್ದೆಯನ್ನು ಗುಮ್ಮನಂತೆ ಬಿಂಬಿಸುವುದು ಬೇಡ ಎಂದರು.

ಪಾಲನ ಪುಸ್ತಕ ರವಾನೆ

ಕಾಮಗಾರಿ ವರದಿ ಪಾಲನಾ ಪುಸ್ತಕದಲ್ಲಿ ಕಾಮಗಾರಿಯನ್ನು ವೀಕ್ಷಣೆ ಮಾಡದೆ ಮೇಲಧಿಕಾರಿಗಳು ಸಹಿ ಹಾಕುತ್ತಿದ್ದು ಗಮನಕ್ಕೆ ಬಂದಿದ್ದು ಇದು ಸರಕಾರದ ನಿಯಮವನ್ನು ಉಲ್ಲಂಘಿಸಿದಂತಾಗುತ್ತದೆ ಮುಂದಿನ ದಿನಗಳಲ್ಲಿ ಅಧ್ಯಕ್ಷರು, ಮುಖ್ಯಾಧಿಕಾರಿಗಳು, ಸ್ಥಾಯೀ ಸಮಿತಿ ಅಧ್ಯಕ್ಷರ ಸಮಕ್ಷಮದಲ್ಲಿ ಮೇಲಧಿಕಾರಿಗಳು ಸಹಿ ಹಾಕಬೇಕು ಎಂದು ಜಗದೀಶ್‌ ಒತ್ತಾಯಿಸಿದರು. ಇದಕ್ಕೆ ಎಂಜಿನಿಯರ್‌ ಉತ್ತರಿಸಿ ಮೇಲ ಧಿಕಾರಿಗಳು ವೀಕ್ಷಿಸಿಯೇ ಸಹಿ ಹಾಕಲಾಗುತ್ತಿದ್ದು ಇದುವರೆಗೆ ಕಾನೂನು ಬದ್ಧವಾಗಿಯೇ ನಡೆಯುತ್ತಿದೆ ಎಂದರು.

ಕಳೆ ತೆರವು ಮಾಡಿ

ಸಮುದಾಯ ಆಸ್ಪತ್ರೆಯ ಆವರಣದಲ್ಲಿರುವ ಗಿಡ ಗಂಟಿ ಗಳನ್ನು ವಾರ್ಡ್‌ ಜಂಗಲ್‌ ಕಟ್ಟಿಂಗ್‌ಗೆ ಮೀಸಲಿಟ್ಟ ಅನುದಾನದಲ್ಲಿ ತೆರವುಗೊಳಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next