Advertisement

ಸಮೀಪಿಸುತ್ತಿದೆ ಏಕದಿನ ವಿಶ್ವಕಪ್‌ ಕ್ರಿಕೆಟ್‌

12:30 AM Mar 18, 2019 | Team Udayavani |

ಮಣಿಪಾಲ: ಆಸ್ಟ್ರೇಲಿಯ ವಿರುದ್ಧ ಟಿ20 ಮತ್ತು ಏಕದಿನ ಸರಣಿ ಮುಗಿದಿದೆ. ಎರಡರಲ್ಲೂ ಭಾರತ ಸೋತು ಹೋಗಿದೆ. ಕಾಂಗರೂ ನಾಡಿನಲ್ಲಿ ಮೇಲುಗೈ ಸಾಧಿಸಿ ಇತಿಹಾಸ ಬರೆದು ಬಂದಿದ್ದ ಟೀಮ್‌ ಇಂಡಿಯಾ ತವರಿನಲ್ಲಿ ಎಡವಿದ್ದು ಆಘಾತಾಕರಿ ಸಂಗತಿ. ಅದರಲ್ಲೂ ಏಕದಿನ ಸರಣಿಯ ಹ್ಯಾಟ್ರಿಕ್‌ ಸೋಲು ಕೊಹ್ಲಿ ಪಡೆಯ ವಿಶ್ವಕಪ್‌ ಯೋಜನೆಗೆ ಮಾರಕವಾಗಿ ಪರಿಣಮಿಸಿದ್ದು ಸುಳ್ಳಲ್ಲ. 

Advertisement

5 ಪಂದ್ಯಗಳ ಏಕದಿನ ಸರಣಿಯನ್ನು ಭಾರತ ವಿಶ್ವಕಪ್‌ ಅಭ್ಯಾಸವನ್ನಾಗಿ ಪರಿಗಣಿಸಿತ್ತು. ಪ್ರತಿಷ್ಠಿತ ವಿಶ್ವಕಪ್‌ ಕೂಟಕ್ಕೆ ತಂಡ ಆಯ್ಕೆ ಮಾಡಲು ಇದೊಂದು ವೇದಿಕೆಯಾಗಿತ್ತು. ಇಲ್ಲಿ ಆಯ್ಕೆಯ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿರೀಕ್ಷೆ ಹೊಂದಿತ್ತು. ಆದರೆ ಸರಣಿ ಮುಗಿದಿದ್ದೇ ತಡ, ಉತ್ತರದ ಬದಲು ಏಕಾಏಕಿ ಹಲವು ಪ್ರಶ್ನೆಗಳು ಮೇಲೆದ್ದು ನಿಂತಿವೆ!

ಶಿಖರ್‌ ಧವನ್‌ ಅಸ್ಥಿರ ಆಟ
ಶಿಖರ್‌ ಧವನ್‌ ಅಸ್ಥಿರ ಆಟ ಮುಂದುವರಿದಿದೆ. ಸರಣಿಯಲ್ಲಿ ಅವರು ಒಂದು ಶತಕ ಬಾರಿಸಿದ್ದು ಬಿಟ್ಟರೆ, ಉಳಿದಂತೆ ಧವನ್‌ ಕೊಡುಗೆ ಶೂನ್ಯ. ರೋಹಿತ್‌ ಶರ್ಮ ಕೂಡ ಕೊನೆಯೆರಡು ಪಂದ್ಯ ಹೊರತುಪಡಿಸಿದರೆ ಉಳಿದಂತೆ ವೈಫ‌ಲ್ಯ ಕಂಡರು. ಸ್ಥಿರತೆ ಕಾಯ್ದುಕೊಂಡವರೆಂದರೆ ನಾಯಕ ಕೊಹ್ಲಿ ಮಾತ್ರ.
ವಿಶ್ವಕಪ್‌ ತಂಡದಲ್ಲಿ ರೋಹಿತ್‌-ಧವನ್‌ ಆರಂಭಿಕರೆಂದು ಖಚಿತವಾಗಿದೆ. ಈ ಪೈಕಿ ಧವನ್‌ ಕತೆಯೇನು ಎಂಬುದು ಸದ್ಯದ ಪ್ರಶ್ನೆ. ಅಸ್ಥಿರ ಬ್ಯಾಟಿಂಗ್‌ ಮುಂದುವರಿದಿರುವುದರಿಂದ, ಅವರ ಜಾಗದಲ್ಲಿ ಇನ್ನೊಬ್ಬರನ್ನು ಆಡಿಸಬೇಕೇ ಎಂಬುದು ಸದ್ಯದ ಪ್ರಶ್ನೆ. ರಾಹುಲ್‌ಗೆ ಅವಕಾಶವೇ ಸಿಗಲಿಲ್ಲ ಕೆ.ಎಲ್‌. ರಾಹುಲ್‌ ಟಿ20ಯಲ್ಲಿ ಉತ್ತಮವಾಗಿ ಆಡಿ 3ನೇ ಆರಂಭಿಕನಾಗಿ ಇಂಗ್ಲೆಂಡಿಗೆ ಹೋಗುವರೇ ಎಂಬುದೊಂದು ಪ್ರಶ್ನೆ. ಆದರೆ ಅವರಿಗೆ ಏಕದಿನ ಸರಣಿಯಲ್ಲಿ ಸಿಕ್ಕಿದ್ದು ಒಂದೇ ಒಂದು ಅವಕಾಶ. ಅಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಲಾಗಲಿಲ್ಲ. ಒಂದು ವೇಳೆ ರಾಹುಲ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡರೆ ಅವರಿಗೆ ಯಾವ ಕ್ರಮಾಂಕ ನೀಡುವುದು ಎಂಬ ಪ್ರಶ್ನೆಯೂ ಇದೆ.

ಪಂತ್‌ ಕಳಪೆ ವಿಕೆಟ್‌ ಕೀಪಿಂಗ್‌
ಧೋನಿ ಸ್ಥಾನ ತುಂಬಬಲ್ಲ ಆಟಗಾರ ಎಂಬ ಖ್ಯಾತಿ ವಿಕೆಟ್‌ಕೀಪರ್‌/ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಅವರಿಗಿತ್ತು. ಆದರೆ ಅವರು ಕೀಪಿಂಗ್‌ನಲ್ಲಿ ವಿಫ‌ಲವಾಗಿರುವುದು ಚಿಂತೆ ಮೂಡಿಸಿದೆ. ಧೋನಿಗೆ ಗಾಯವಾದರೆ ಅವರು ಜವಾಬ್ದಾರಿ ನಿರ್ವಹಿಸಬಲ್ಲರೇ ಎಂಬ ಅನುಮಾನ ಶುರುವಾಗಿದೆ.

ಆಲ್‌ರೌಂಡರ್‌ ಯಾರು?
ಭಾರತ ತಂಡಕ್ಕೆ ವೇಗದ ಬೌಲಿಂಗ್‌ ಆಲ್‌ರೌಂಡರ್‌ ಬೇಕೆಂಬ ಬಹಳ ವರ್ಷ ಗಳ ಬೇಡಿಕೆಗೆ ಹಾರ್ದಿಕ್‌ ಪಾಂಡ್ಯ ಉತ್ತರವಾಗಿದ್ದರು. ಆದರೆ ಅವರು ಗಾಯಾಳಾಗಿ, ವಿಶ್ವಕಪ್‌ಗೆ ಪೂರ್ವಭಾವಿ ಯಾಗಿ ನಡೆಸಬೇಕಾದ ಅಭ್ಯಾಸವನ್ನೇ ತಪ್ಪಿಸಿಕೊಂಡರು. ಈಗ ಪಾಂಡ್ಯ ಅವರನ್ನು ಆಯ್ಕೆ ಮಾಡುವುದೋ, ವಿಜಯ್‌ ಶಂಕರ್‌ ಅವರನ್ನು ಪರಿಗಣಿಸುವುದೋ ಎಂಬ ಉಭಯ ಸಂಕಟ ಎದುರಾಗಿದೆ. ವಿಜಯ್‌ ಶಂಕರ್‌ ಬ್ಯಾಟಿಂಗ್‌ನಲ್ಲಿ ಪರಾÌಗಿಲ್ಲ ಎನಿಸಿಕೊಂಡರೂ, ಬೌಲಿಂಗ್‌ನಲ್ಲಿ ನಿರೀಕ್ಷೆಯ ಮಟ್ಟ ತಲುಪಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಐಪಿಎಲ್‌ನಲ್ಲಿ ಉತ್ತರ ಲಭಿಸೀತಾದರೂ, ವಿಶ್ವಕಪ್‌ನಂಥ ಪ್ರತಿಷ್ಠಿತ ಪಂದ್ಯಾವಳಿಗೆ ಐಪಿಎಲ್‌ ಸಾಧನೆ ಮಾನದಂಡವಾಗದು. ಚೆಂಡು ಈಗ ಆಯ್ಕೆ ಮಂಡಳಿಯ ಅಂಗಳದಲ್ಲಿದೆ. ಕಾದು ನೋಡೋಣ!

Advertisement

4ನೇ ಕ್ರಮಾಂಕಕ್ಕೆ ಪೂಜಾರ!
ಭಾ
ರತ‌  ತಂಡದ ಸದ್ಯದ ದೊಡ್ಡ ಸಮಸ್ಯೆಯೆಂದರೆ 4ನೇ ಕ್ರಮಾಂಕದ್ದು. ಅಂಬಾಟಿ ರಾಯುಡು ವಿಫ‌ಲರಾದ್ದರಿಂದ ಈ ಸ್ಥಾನದ ಆಯ್ಕೆಯೀಗ ಮುಕ್ತವಾಗಿದೆ. ಇದಕ್ಕೆ “ಟೆಸ್ಟ್‌ ಸ್ಪೆಷಲಿಸ್ಟ್‌’ ಖ್ಯಾತಿಯ ಚೇತೇಶ್ವರ್‌ ಪೂಜಾರ ಸೂಕ್ತ ಆಯ್ಕೆ ಎಂಬುದಾಗಿ ಮಾಜಿ ನಾಯಕ ಸೌರವ್‌ ಗಂಗೂಲಿ ಹೇಳಿದ್ದಾರೆ.  “ನನ್ನ ಈ ಹೇಳಿಕೆ ಕೇಳಿ ಎಲ್ಲರೂ ನಗುವುದರಲ್ಲಿ ಅನುಮಾನವಿಲ್ಲ. ಇನ್ನು ಕೆಲವರಿಗೆ ಆಘಾತವಾಗಲೂಬಹುದು. ಆದರೆ ನನ್ನ ಪ್ರಕಾರ ಪೂಜಾರ 4ನೇ ಕ್ರಮಾಂಕಕ್ಕೆ ಅತ್ಯಂತ ಸೂಕ್ತ ಆಟಗಾರ. ಅವರ ಫೀಲ್ಡಿಂಗ್‌ನಲ್ಲಿ ಮಾತ್ರ ಸುಧಾರಣೆ ಆಗಬೇಕಿದೆ’ ಎಂದರು.
“ಪೂಜಾರ ಅವರನ್ನು ದ್ರಾವಿಡ್‌ಗೆ ಹೋಲಿಸಲಾಗುತ್ತಿದೆ. ಏಕದಿನದಲ್ಲಿ ದ್ರಾವಿಡ್‌ ನಿರ್ವಹಿಸಿದ ಪಾತ್ರವನ್ನೇ ಪೂಜಾರ ಕೂಡ ನಿರ್ವಹಿಸಬಲ್ಲರು’ ಎಂದು 2003ರ ವಿಶ್ವಕಪ್‌ನಲ್ಲಿ ಭಾರತವನ್ನು ಫೈನಲ್‌ಗೆ ಕೊಂಡೊಯ್ದ ಕಪ್ತಾನ ಗಂಗೂಲಿ ಹೇಳಿದರು. ಪೂಜಾರ ಇತ್ತೀಚೆಗೆ ಟಿ20 ಕ್ರಿಕೆಟ್‌ನಲ್ಲಿ ಸೆಂಚುರಿ ಬಾರಿಸಿದ್ದನ್ನೂ ಗಂಗೂಲಿ ಪ್ರಸ್ತಾವಿಸಿದರು.

ಕೊಹ್ಲಿ  ಕ್ಲಿಕ್‌ ಆದರೆ ಭಾರತವೇ ಚಾಂಪಿಯನ್‌: ಪಾಂಟಿಂಗ್‌
“ವಿರಾಟ್‌ ಕೊಹ್ಲಿ ಅವರನ್ನು ನಾನು ಸಚಿನ್‌ ತೆಂಡುಲ್ಕರ್‌ ಜತೆ ಹೋಲಿಸಲು ಬಯಸುವುದಿಲ್ಲ. ಆದರೆ ಭಾರತ ಈ ಬಾರಿ ವಿಶ್ವಕಪ್‌ ಗೆಲ್ಲುವಲ್ಲಿ ಕೊಹ್ಲಿ ಪಾತ್ರ ನಿರ್ಣಾಯಕವಾಗಲಿದೆ. ಅವರು ಚೆನ್ನಾಗಿ ಆಡಿದರೆ ಭಾರತವೇ ಚಾಂಪಿಯನ್‌’ ಎಂಬುದಾಗಿ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್‌ ಹೇಳಿದ್ದಾರೆ. “ಸಚಿನ್‌ ತೆಂಡುಲ್ಕರ್‌ ಓರ್ವ ಲೆಜೆಂಡ್‌. ವಿರಾಟ್‌ ಈಗ ರನ್‌ ರಾಶಿ ಪೇರಿಸುತ್ತ ಇದ್ದಾರೆ. ಅವರ ಟೆಸ್ಟ್‌ ಸರಾಸರಿ 50ರ ಗಡಿ ದಾಟಿದೆ. ಏಕದಿನ ದಾಖಲೆಯಂತೂ ಅಮೋಘ. ಕೊಹ್ಲಿ ಇದೇ ಫಾರ್ಮನ್ನು ಇಂಗ್ಲೆಂಡಿನಲ್ಲೂ ಮುಂದುವರಿಸಿದರೆ ಭಾರತ ವಿಶ್ವ ಚಾಂಪಿಯನ್‌ ಆಗುವುದು ಖಂಡಿತ. ಭಾರತ ಒಂದು ಅಪಾಯಕಾರಿ ತಂಡ…’ ಎಂದು ಪಾಂಟಿಂಗ್‌ ಸಂದರ್ಶನವೊಂದರಲ್ಲಿ ಹೇಳಿದರು.
“ವಿರಾಟ್‌ ಕೊಹ್ಲಿ ಅವರ ದಾಖಲೆಗಳೇ ಎಲ್ಲವನ್ನೂ ಸಾರುತ್ತವೆ. ಅವರ ವಯಸ್ಸಾದರೂ ಎಷ್ಟು? 30 ಆಗಿರಬಹುದು. ಇನ್ನೂ 200 ಪಂದ್ಯಗಳನ್ನು ಆಡುವ ಸಾಮರ್ಥ್ಯ ಅವರಲ್ಲಿದೆ’ ಎಂದು ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಕೋಚಿಂಗ್‌ ನೀಡಲಿರುವ ಪಾಂಟಿಂಗ್‌ ಹೇಳಿದರು.
4ನೇ ಕ್ರಮಾಂಕಕ್ಕೆ ಅಯ್ಯರ್‌ ಭಾರತದ 4ನೇ ಕ್ರಮಾಂಕದ ಬ್ಯಾಟಿಂಗಿಗೆ ಶ್ರೇಯಸ್‌ ಅಯ್ಯರ್‌ ಸೂಕ್ತ ಎಂದೂ ಪಾಂಟಿಂಗ್‌ ಅಭಿಪ್ರಾಯಪಟ್ಟರು. “ಭಾರತ ಇತ್ತೀಚಿನ ದಿನಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ರಾಯುಡು, ಪಂತ್‌, ಶಂಕರ್‌ ಅವರನ್ನು ಆಡಿಸಿ ನೋಡಿದೆ. ಶ್ರೇಯಸ್‌ ಅಯ್ಯರ್‌ ಅವರಿಗೂ ಅವಕಾಶ ನೀಡಿದೆ. ಅಯ್ಯರ್‌ ಅತ್ಯುತ್ತಮ ಬ್ಯಾಟ್ಸ್‌ಮನ್‌. ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ನಿರ್ವಹಣೆ ತೋರಿದ್ದಾರೆ. ಈ ಜಾಗದಲ್ಲಿ ಕೆ.ಎಲ್‌. ರಾಹುಲ್‌ ಅವರನ್ನೂ ಪ್ರಯೋಗಿಸಬಹುದು’ ಎಂದರು. ಧೋನಿ ಉತ್ತರಾಧಿಕಾರಿಯಾಗಲು ರಿಷಭ್‌ ಪಂತ್‌ ಅವರೇ ಸಮರ್ಥ ಎಂಬುದಾಗಿಯೂ ಪಾಂಟಿಂಗ್‌ ಈ ಸಂದರ್ಭದಲ್ಲಿ ಹೇಳಿದರು.

ಐಪಿಎಲ್‌ ಯಶಸ್ಸು ವಿಶ್ವಕಪ್‌ ಬಾಗಿಲು ತೆರೆದೀತು: ರಹಾನೆ
ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆಗೆ ಸೂಕ್ತ ಪರಿಹಾರವಿನ್ನೂ ಸಿಕ್ಕಿಲ್ಲ. ಹಾಗೆಯೇ ಈ ಯಾದಿಯಲ್ಲಿ ಅಜಿಂಕ್ಯ ರಹಾನೆ ಹೆಸರಿಲ್ಲ ಎಂಬುದು ಕೂಡ ಸತ್ಯ. ಆದರೆ ರಹಾನೆ ಮಾತ್ರ ಇಂಗ್ಲೆಂಡಿಗೆ ಪ್ರಯಾಣಿಸುವ ಆಸೆಯನ್ನು ಕೈಬಿಟ್ಟಿಲ್ಲ. 
“ವಿಶ್ವಕಪ್‌ನಲ್ಲಿ ಆಡಬೇಕೆಂಬ ಆಸೆ ನನ್ನಲ್ಲೂ ಇದೆ. ಆದರೆ ಆಯ್ಕೆಗಾಗಿ ರನ್‌ ಗಳಿಸುವುದು ಮುಖ್ಯ. ಇದಕ್ಕಿರುವ ಏಕೈಕ ಮಾರ್ಗವೆಂದರೆ ಐಪಿಎಲ್‌. ಇಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದರೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ತನ್ನಿಂತಾನಾಗಿ ಲಭಿಸೀತೆಂಬ ನಂಬಿಕೆ ನನ್ನದು’ ಎಂದಿದ್ದಾರೆ ಅಜಿಂಕ್ಯ ರಹಾನೆ. “ಸದ್ಯ ನನ್ನ ಗಮನವೆಲ್ಲ ಮುಂದಿನ ವಾರ ಆರಂಭ ವಾಗಲಿರುವ ಐಪಿಎಲ್‌ ಮೇಲಿದೆ. ಇದರ ಹೊರತಾಗಿ ನಾನು ಬೇರೇನನ್ನೂ ಯೋಚಿಸಿ ಒತ್ತಡ ಹೇರಿಕೊಳ್ಳಲು ಬಯ ಸುವುದಿಲ್ಲ’ ಎಂದು ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮುನ್ನಡೆಸಲಿರುವ ರಹಾನೆ ಹೇಳಿದರು.

ಕುಂಬ್ಳೆ ವಿಶ್ವಕಪ್‌ ತಂಡದಲಿ ಪಂತ್‌, ಖಲೀಲ್‌ ಅಹ್ಮದ್‌
ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಮುಂಬರುವ ವಿಶ್ವಕಪ್‌ ಪಂದ್ಯಾವಳಿಗೆ ಭಾರತ ತಂಡವನ್ನು ಪ್ರಕಟಿಸಿದ್ದಾರೆ. ಖಲೀಲ್‌ ಅಹ್ಮದ್‌ ಈ ತಂಡದ ಅಚ್ಚರಿಯ ಹೆಸರಾಗಿದೆ. ಇಂಗ್ಲೆಂಡ್‌ ಪಿಚ್‌ಗಳು ಸೀಮ್‌ ಹಾಗೂ ಮಧ್ಯಮ ವೇಗಿಗಳಿಗೆ ನೆರವಾಗಲಿವೆ ಎಂಬ ಕಾರಣಕ್ಕಾಗಿ ಅವರು ಖಲೀಲ್‌ ಅಹ್ಮದ್‌ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ. ಹಾಗೆಯೇ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ರವೀಂದ್ರ ಜಡೇಜ ಬದಲು ವಿಜಯ್‌ ಶಂಕರ್‌ಗೆ ಅವಕಾಶ ನೀಡಿದ್ದಾರೆ.
“ಈ ಕೂಟಕ್ಕಾಗಿ 11 ಮಂದಿಯ ಆಯ್ಕೆ ಸುಲಭ. ಇವರು ತನ್ನಿಂತಾನಾಗಿ ಆಯ್ಕೆಯಾಗುತ್ತಾರೆ. ಇವರೆಂದರೆ ರೋಹಿತ್‌, ಧವನ್‌, ಕೊಹ್ಲಿ, ಧೋನಿ, ಜಾಧವ್‌, ಪಾಂಡ್ಯ, ಭುವಿ, ಚಾಹಲ್‌, ಕುಲದೀಪ್‌, ಬುಮ್ರಾ ಮತ್ತು ಶಮಿ. ಆದರೆ ಇಲ್ಲಿಂದಾಚೆಯ ಆಯ್ಕೆ ನಿಜಕ್ಕೂ ದೊಡ್ಡ ಸವಾಲು. ಅದರಲ್ಲೂ ಜಡೇಜ-ವಿಜಯ್‌ ಶಂಕರ್‌ ನಡುವೆ ಯಾರನ್ನು ಆರಿಸುವುದು ಎಂಬುದು ಜಟಿಲ ಪ್ರಶ್ನೆ. ಶಂಕರ್‌ ಬ್ಯಾಟ್ಸ್‌ಮನ್‌ ಆಗಿ ಓಕೆ. ಆದರೆ ಬೌಲಿಂಗಿನಲ್ಲಿ ಅವರಿಗಿನ್ನೂ ಪೂರ್ತಿ ಅವಕಾಶ ಸಿಕ್ಕಿಲ್ಲ. ಅವರಿಗೆ 10 ಓವರ್‌ ಕೋಟಾ ನೀಡಬಹುದು ಎಂಬ ನಂಬಿಕೆ ನಿಮಗಿರಬೇಕು. ಹೀಗಾಗಿ ನಾನು ವಿಜಯ್‌ ಶಂಕರ್‌ ಪರ…’ ಎಂಬುದಾಗಿ ಕುಂಬ್ಳೆ ಹೇಳಿದ್ದಾರೆ. ಕುಂಬ್ಳೆ ತಂಡದಲ್ಲಿ ಇಬ್ಬರೇ ಸ್ಪಿನ್ನರ್‌ಗಳಿದ್ದಾರೆ-ಕುಲದೀಪ್‌ ಮತ್ತು ಚಾಹಲ್‌. 

ಕುಂಬ್ಳೆ ವಿಶ್ವಕಪ್‌ ತಂಡ
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಶಿಖರ್‌ ಧವನ್‌, ಅಂಬಾಟಿ ರಾಯುಡು, ಮಹೇಂದ್ರ ಸಿಂಗ್‌ ಧೋನಿ, ಕೇದಾರ್‌ ಜಾಧವ್‌, ರಿಷಭ್‌ ಪಂತ್‌, ವಿಜಯ್‌ ಶಂಕರ್‌, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ಖಲೀಲ್‌ ಅಹ್ಮದ್‌.

Advertisement

Udayavani is now on Telegram. Click here to join our channel and stay updated with the latest news.

Next