Advertisement

ಬಹುತ್ವದ ಭಾರತಕ್ಕೆ ಆಕ್ರಮಕಾರಿ ಸಂಸ್ಕೃತಿ ಆವರಿಸಿಕೊಂಡಿದೆ

09:06 PM Dec 14, 2019 | Lakshmi GovindaRaj |

ಮೈಸೂರು: ಬಹುತ್ವದ ಭಾರತಕ್ಕೆ ಆಕ್ರಮಕಾರಿ ಸಂಸ್ಕೃತಿ ಆವರಿಸಿಕೊಂಡು ಜಾನಪದ ಸೊಗಡನ್ನು ನಾಶದತ್ತ ಕೊಂಡೊಯ್ಯುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

Advertisement

ಭೂಮಿ ಬಳಗ ಹಾಗೂ ಎಸ್‌ಬಿಆರ್‌ಆರ್‌ ಮಹಾಜನ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರಗೌಡ ಅವರ ಭೂಮಿ ಮತ್ತು ಬೀಜ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಭೂಮಿ ಪ್ರಕೃತಿ-ಬೀಜ ಸಂಸ್ಕೃತಿ ಇದ್ದಂತೆ. ನಾವು ಬಿತ್ತಿದಂತೆ ಬೀಜ ಬೆಳೆಯುತ್ತದೆ. ನಿಸರ್ಗಕ್ಕೆ ಪೂರಕವಾಗುವ ರೀತಿಯಲ್ಲಿ ಕಲ್ಪಿಸಿಕೊಡುವ ಬಿತ್ತನೆಯ ಬೀಜವೇ ಸಂಸ್ಕೃತಿ ಎಂದರು.

ಲೇಖನಗಳು ನಿರ್ದಿಷ್ಟವಾದ ಕಾಲಕ್ಕೆ ಸೀಮಿತವಾಗಿಲ್ಲ: ಡಾ.ಹಿ.ಶಿ.ರಾಮಚಂದ್ರಗೌಡ ಅವರು ಜಾಗತಿಕ ವಿದ್ಯಮಾನಗಳ ನೆಲೆಯಲ್ಲಿ ತಮ್ಮ ಕೃತಿಯಲ್ಲಿ ಇಂದಿನ ಯುವ ಪೀಳಿಗೆಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಒಟ್ಟು 26 ಲೇಖನಗಳನ್ನು ಒಳಗೊಂಡಿರುವ ಈ ಕೃತಿಯ ಎಲ್ಲಾ ಲೇಖನಗಳು ಜಾನಪದ ಬದುಕನ್ನು ಪರಿಭಾವಿಸಿ, ನಿಸರ್ಗಕ್ಕೆ ಹತ್ತಿರವಾಗುವಂತೆ ಇದೆ. ಇಂದು ಯುವ ಪೀಳಿಕೆಯ ಮನದಲ್ಲಿ ಆವರಿಸುತ್ತಿರುವ ಅಕ್ರಮ ಸಂಸ್ಕೃತಿಯ ಬಗ್ಗೆ ಈ ಕೃತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಇಲ್ಲಿನ ಲೇಖನಗಳು ಯಾವುದೇ ನಿರ್ದಿಷ್ಟವಾದ ಕಾಲಕ್ಕೆ ಸೀಮಿತವಾಗಿಲ್ಲ. ಬದಲಿಗೆ ಎಲ್ಲ ಕಾಲಕ್ಕೂ ಅನ್ವಯವಾಗುತ್ತವೆ ಎಂದು ಹೇಳಿದರು.

ಇದೊಂದು ಮಹತ್ವದ ಕೃತಿ: ಜನಪದ ಒಂದು ಜೀವಂತ ಬದುಕು. ಜೀವ ಪರ ಸಂಸ್ಕೃತಿಯು ಈ ಪುಸ್ತಕದ ಧಾತುದ್ರವ್ಯವಾಗಿದೆ. ಜಾನಪದ ಚಿಂತನೆಗೆ ಕಾಲದ ಮಿತಿಇಲ್ಲ. ಜನಪದಕ್ಕೆ ಸಿದ್ಧ ಹಾಗೂ ಪಠ್ಯವಸ್ತುಗಳಿಲ್ಲ. ಇಲ್ಲಿ ಯಾವುದೇ ಹೇಳಿಕೆಗಳಿಲ್ಲ. ಹೇಳಿಕೆ ಎಂಬುದು ಗರ್ವದಿಂದ ಬಂದ ಅಭಿಪ್ರಾಯಗಳಾಗುತ್ತವೆ. ಆದರೆ ತಿಳುವಳಿಕೆ ಮತ್ತು ವಿಶ್ಲೇಷಣೆಗಳು ಅನ್ವೇಷಣೆಗೆ ನಾಂದಿಯಾಗುತ್ತವೆ.

ಇಲ್ಲಿನ ಲೇಖನಗಳು ಕಾಲೋಚಿತ ಪ್ರಜ್ಞೆಯನ್ನು ಬಿಂಬಿಸುತ್ತವೆ. ಇಂದಿನ ಜಾಗತಿಕರಣದ ವೇಗ ಮತ್ತು ಒತ್ತಡವನ್ನು ಮನಗಂಡು ನಿಖರವಾಗಿ ಯುವಜನತೆಗೆ ಹೇಳಬೇಕಾದ ಗುಣಗಳಾದ ಭಯ, ಆತಂಕ, ಸಂಕಟ,ನೋವು, ರೈತ ಚಳವಳಿ ಮಾರ್ಗ, ಸಂಬಂಧಾತ್ಮಕ ಮೌಲ್ಯಗಳನ್ನು ಈ ಪುಸ್ತಕದಲ್ಲಿ ನಾವು ಕಾಣಬಹುದಾಗಿದ್ದು, ಇದೊಂದು ಮಹತ್ವದ ಕೃತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

Advertisement

ಅವಕಾಶಗಳು ಹೆಚ್ಚಿದೆ: ಕೃತಿಯ ಲೇಖಕ ಡಾ.ಹಿ.ಶಿ.ರಾಮಚಂದ್ರಗೌಡ ಮಾತನಾಡಿ, ಇಂದಿನ ಜಾಗತೀಕರಣ ಯುಗದಲ್ಲಿ ಸೌಲಭ್ಯಗಳು ಹಾಗೂ ಅವಕಾಶಗಳು ಹೆಚ್ಚಿದೆ. ಬಡತನ ಕಡಿಮೆಯಾಗುತ್ತಿದೆ. ಸಿಗುವ ಅನುಕೂಲಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ನೈಪುಣ್ಯತೆಯ ಜ್ಞಾನಕ್ಕೆ ಪ್ರಾಮುಖ್ಯತೆ: ಭೂಮಿ, ಸ್ತ್ರೀ ಮತ್ತು ನಮ್ಮತನವನ್ನು ಬಿಟ್ಟುಕೊಡಬೇಡಿ. ವಿದ್ಯಾರ್ಥಿಗಳು ಪಠ್ಯವನ್ನಷ್ಟೇ ಓದದೆ, ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಕೌಶಲ್ಯ ಮತ್ತು ನೈಪುಣ್ಯತೆಯ ಜ್ಞಾನಕ್ಕೆ ಪ್ರಾಮುಖ್ಯತೆ ನೀಡಿ, ಇದು ನಿಮ್ಮ ಮುಂದಿನ ಬೆಳವಣಿಗೆಗೆ ನಾಂದಿಯಾಗುತ್ತದೆ ಎಂದರು.

ಚಿಂತಕಿ ಡಾ.ಧರಣಿದೇವಿ ಮಾಲಗತ್ತಿ ಮಾತನಾಡಿ, ನಮ್ಮ ಇಂದಿನ ಯುವ ಪೀಳಿಗೆಗೆ ಐಕ್ಯತೆ ಬೇಕು. ಏಕಾಧಿಪತ್ಯ ಬೇಡ. ಬಹುತ್ವ ಬೇಕು. ಬೇದ ಬೇಡ, ಜಾತಿವಾದ ಸಲ್ಲದು ಎಂದರು. ವಾದಿ, ವಿಚಾರವಾದಿ, ಸಂಪ್ರದಾಯವಾದಿ, ಸ್ತ್ರೀವಾದಿ ಯಾರಿಗೂ ಇಷ್ಟವಾಗುವುದಿಲ್ಲ.

ಈ ನಿಟ್ಟಿನಲ್ಲಿ ಈ ಕೃತಿಯ ಲೇಖನಗಳು ಎಲ್ಲರ ಮನಸ್ಸನ್ನೂ ಗೆಲ್ಲುತ್ತವೆ ಹಾಗೂ ಸಂಶೋಧನಾ ಪ್ರಬಂಧಕ್ಕೆ ಅನುಕೂಲವಾಗಿದೆ ಎಂದು ಹೇಳಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಬಿ.ಆರ್‌.ಜಯಕುಮಾರಿ ಮಾತನಾಡಿದರು. ಮಹಾಜನ ಕಾಲೇಜಿನ ಸಿಇಒ ಡಾ.ಎಸ್‌.ಆರ್‌.ರಮೇಶ್‌, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್‌.ಆರ್‌.ತಿಮ್ಮೇಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next