Advertisement

ಯೋಗ ಜಗತ್ತಿಗೆ ಭಾರತದ ಅಮೂಲ್ಯ ಕೊಡುಗೆ

07:12 PM Jun 22, 2021 | Team Udayavani |

ಕಲಬುರಗಿ: ವಿಶ್ವ ಯೋಗ ದಿನವನ್ನು ಸೋಮವಾರ ಜಿಲ್ಲೆಯಲ್ಲಿ ಸರ್ಕಾರ ಮಾರ್ಗಸೂಚಿಯಂತೆ ಸಾರ್ವಜನಿಕವಾಗಿ ಗುಂಪು ಸೇರಿದ ಮನೆಗಳು ಮತ್ತು ಆನ್‌ಲೈನ್‌ ಮೂಲಕ ಆಚರಿಸಲಾಯಿತು. ಕೆಲವೆಡೆ ಮಾತ್ರ ಸಾಂಕೇತಿಕವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಯೋಗ ದಿನ ನಡೆಸಲಾಯಿತು.

Advertisement

ನಗರದ ಚಂದ್ರಶೇಖರ ಪಾಟೀಲ್‌ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಆಯುಷ್‌ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹಿಂಗುಲಾಂಬಿಕಾ ಆಯುರ್ವೇದ ಮಹಾವಿದ್ಯಾಲಯ ಸಹಯೋಗದಲ್ಲಿ 7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆನ್‌ಲೈನ್‌ ತರಬೇತಿ ನೀಡುವ ಮೂಲಕ
ಆಚರಿಸಲಾಯಿತು. ಯೋಗಪಟು ಸುದೀಪ್‌ ಬಿ.ಮಾಳಗಿ ಹಾಗೂ ಹಿಂಗುಲಾಂಬಿಕಾ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರವೀಣಕುಮಾರ ಚೌಧರಿ ವಿಶೇಷ ತರಬೇತಿ ನೀಡಿದರು. ಜೂಮ್‌ ಆ್ಯಪ್‌  ಮೂಲಕ ಕಾರ್ಯಕ್ರಮದ ನೇರ ಪ್ರಸಾರ ಮತ್ತು ಆನ್‌ ಲೈನ್‌ ಮೂಲಕ ಯುವ ವಿದ್ಯಾರ್ಥಿಗಳಿಗೆ ತರಬೇತಿ
ನೀಡಲಾಯಿತು. ಜಿಲ್ಲೆಯ ಸುಮಾರು 200ಕ್ಕೂ ಅಧಿಕ ಯುವಜನತೆ, ಅಧಿಕಾರಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದರು.

ಹಿಂಗುಲಾಬಿಕಾ ಆಯುರ್ವೇದಿಕ್‌ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಸ್ಮಿತಾ ಕಣ್ಮಸೆ ಅವರು ಯೋಗದ ವಿವಿಧ ಭಂಗಿಗಳ ಬಗ್ಗೆ ತಿಳಿಸಿದರು. ಅಲ್ಲದೇ, ಯೋಗಾಸನಗಳ ಉಪಯೋಗದ ಬಗ್ಗೆ ವಿವರಿಸಿದರು. ಜಿಲ್ಲಾ ಆಯುಷ್‌ ಅಧಿ ಕಾರಿ ಡಾ.ಗಿರಿಜಾ ಎಸ್‌.ಯು. ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್‌ ನಾಯ್ಕ ಉಪಸ್ಥಿತರಿದ್ದರು.

ರೋಗದಿಂದ ಆರೋಗ್ಯ ರಕ್ಷಣೆ: ಯೋಗವು ಜಗತ್ತಿಗೆ ಭಾರತ ನೀಡಿದ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪ್ರಪಂಚದ ಆರೋಗ್ಯ ರಕ್ಷಣೆಗೆ ಇದು ಮುನ್ನುಡಿ ಬರೆದಿದೆ ಎಂದು ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಉಪಸಭಾಪತಿ ಅರುಣಕುಮಾರ ಲೋಯ ಹೇಳಿದರು.

ನಗರದ ಕುಸನೂರ ರಸ್ತೆಯಲ್ಲಿರುವ ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಯುವ ರೆಡ್‌ಕ್ರಾಸ್‌ ಮತ್ತು ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆಯ ಸಹಯೋಗದಲ್ಲಿ ಯೋಗ ದಿನಾಚರಣೆ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಬಸವರಾಜ ಗಾದಗೆ ಮಾತನಾಡಿ, ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಯೋಗ ಪ್ರತಿಯೊಬ್ಬರಿಗೂ ಅವಶ್ಯ ಸಾಧನವಾಗಿದೆ ಎಂದರು.

Advertisement

ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಸಾಲಿಮಠ ಆನ್‌ಲೈನ್‌ ಮೂಲಕ ಯೋಗಾಭ್ಯಾಸ ಮಾಡಿಸಿದರು. ಆನ್‌ಲೈನ್‌ನಲ್ಲಿ 500ಕ್ಕೂ ಅಧಿಕ ಜನರು ಯೋಗಾಚರಣೆಯಲ್ಲಿ ಪಾಲ್ಗೊಂಡರು. ಪ್ರಮುಖರಾದ ಜಿ.ಎಸ್‌.ಪದ್ಮಾಜಿ, ಶಿವರಾಜ ಅಂಗಡಿ, ಡಾ.ಶಂಭುಲಿಂಗಪ್ಪ, ಡಾ.ಶರಣಗೌಡ ಬಿರಾದಾರ,
ಡಾ.ಶುಭಾಂಗಿ ಪಾಟೀಲ ಉಪಸ್ಥಿತರಿದ್ದರು.

ದೈನಂದಿನ ಜೀವನದಲ್ಲಿ ಯೋಗ: ಕರ್ನಾಟಕ ಪೀಪಲ್ಸ್‌ ಏಜ್ಯುಕೇಷನ್‌ ಸಂಸ್ಥೆಯ ಡಾ.ಅಂಬೇಡ್ಕರ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲೂ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ
ಪ್ರಧಾನ ಕಾರ್ಯಾದಶಿ ಡಾ.ಮಾರುತಿರಾವ ಡಿ.ಮಾಲೆ ಮಾತನಾಡಿ, ಈಗ ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ದೈನಂದಿನ ಜೀವನಕ್ಕೆ ಯೋಗ ಅಗತ್ಯವಾಗಿದೆ ಎಂದರು.

ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯತ್ಮಿಕ ಆರೋಗ್ಯಕ್ಕೆ ಯೋಗ ಮಹತ್ವ ಪಡೆದಿದೆ. ಅದರಲ್ಲೂ, ಪ್ರಸ್ತುತ ಕೊರೊನಾ ಸೋಂಕಿನಿನ ಬಿಕ್ಕಟ್ಟಿನಲ್ಲಿ ಯೋಗ ಅತ್ಯಂತ ಪ್ರಭಾವವಾಗಿದೆ. ಇದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ಯೋಗ ಮಾಡಬಹುದು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿದ್ದ ವಿಜಯಲಕ್ಷ್ಮೀ ಬಿರಾದಾರ ಅವರು ವಿವಿಧ ಯೋಗಾಸನಗಳನ್ನು ಹೇಳಿ ಕೊಟ್ಟರು. ಕಾಲೇಜಿನ ಪ್ರಾಚಾರ್ಯ ಪ್ರೊ. ಗಿರೀಶ ಮೀಶೆ, ಡಾ.ಚಂದ್ರಶೇಖರ ಶೀಲವಂತ, ಪ್ರೊ.ಸಿದ್ದಪ್ಪ ಎಂ. ಕಾಂತಾ, ಡಾ.ನಿರ್ಮಲಾ ಸಿರಗಾಪುರ, ನರೇಂದ್ರ ಪಾಟೀಲ, ದೇವೇಂದ್ರಪ್ಪ ತೇಲ್ಕರ, ಡಾ.ವಸಂತ ನಾಸಿ ಭಾಗವಹಿಸಿದ್ದರು.

ಪ್ರೊಫೆಸರ್‌ಗಳ ಯೋಗಾ-ಯೋಗ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕುಲಪತಿ ಪ್ರೊ.ದಯಾನಂದ ಅಗಸರ ನೇತೃತ್ವದಲ್ಲಿ ಹಿರಿಯ ಪ್ರಾಧ್ಯಾಪಕರು ಯೋಗಾಭ್ಯಾಸ ನಡೆಸಿದರು. ದೈಹಿಕ ಶಿಕ್ಷಣ ವಿಭಾಗದ ಒಳಾಂಗಣದ ಮುಂಭಾಗದ ಆವರಣದಲ್ಲಿ ಪ್ರೊ.ದಯಾನಂದ ಅಗಸರ, ಕುಲಸಚಿವ ಶರಣಬಸಪ್ಪ ಕೋಟ್ಯಪ್ಪಗೋಳ್‌, ಮೌಲ್ಯಮಾಪನ ಕುಲಸಚಿವ ಪ್ರೊ. ಸೋನಾರ ನಂದಪ್ಪ, ವಿತ್ತಾಧಿ ಕಾರಿ ಪ್ರೊ.ಬಿ.ವಿಜಯ, ಯೋಗಾ ಸಂಚಾಲಕ ಚಂದ್ರಕಾಂತ ಬಿರಾದಾರ, ವಿದ್ಯಾ ವಿಷಯಕ ಪರಿಷತ ಸದಸ್ಯ ರಾಜು ಕಗ್ಗನಮಡಿ, ದೈಹಿಕ ಶಿಕ್ಷಣ ವಿಭಾಗದ ಡಾ.ಎಂ.ಎಸ್‌.ಪಾಸೋಡಿ, ಡಾ.ಎನ್‌.ಜಿ.ಕಣ್ಣೂರ, ಡಾ.ಹನಮಂತ ಜಂಗೆ, ದೇವೇಂದ್ರಪ್ಪ ತೇಲ್ಕರ, ಜಯಪ್ರಕಾಶ ಕರಜಗಿ ವಿವಿಧ ಆಸನ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next