Advertisement

ವಿಶ್ವಕಲ್ಯಾಣ ಬಯಸುವ ಭಾರತದ ಸಂಸ್ಕೃತಿ

02:38 AM Mar 15, 2022 | Team Udayavani |

ಕಾರ್ಕಳ: ವಿಶ್ವಬಂಧುತ್ವ, ವಿಶ್ವಶಾಂತಿ, ಸಮಾನತೆ, ಸರ್ವಧರ್ಮ ಸಮನ್ವಯ, ವಿಶ್ವಕುಟುಂಬ ಕಲ್ಪನೆಯ ಭಾರತೀಯ ಸಂಸ್ಕೃತಿಯು ವಿಶ್ವಕಲ್ಯಾಣಕ್ಕೆ ಪ್ರೇರಣೆ ನೀಡುತ್ತದೆ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ಹೇಳಿದರು.

Advertisement

ಸೋಮವಾರ ಕಾರ್ಕಳ ಉತ್ಸವದಲ್ಲಿ ಭಾಗವಹಿಸಿದ ಅವರು ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆದಾಗಲೆಲ್ಲ ಸಂಸ್ಕೃತಿ ಮತ್ತಷ್ಟು ಬಲಗೊಂಡಿದೆ. ಸಾಮಾಜಿಕ ಸಾಮರಸ್ಯವೇ ವಿಶ್ವದ ಎಲ್ಲ ಧರ್ಮಗಳ ಮೂಲ ಉದ್ದೇಶ. ಭಗವಾನ್‌ ಮಹಾವೀರರ ಅಹಿಂಸಾ ಸಂದೇಶ ಇಂದು ವಿಶ್ವಕ್ಕೆ ಹೆಚ್ಚು ಅಗತ್ಯವಾಗಿದೆ. ಧರ್ಮ ಸಮಾಜವನ್ನು ಒಗ್ಗೂಡಿಸುತ್ತದೆ ಎಂದರು.

ಶಿಲ್ಪಕಲೆ: ಕಾರ್ಕಳ ವಿಶ್ವಮಾನ್ಯ ಧರ್ಮ, ಸಂಸ್ಕೃತಿ, ಕಲೆ ಭಾಷೆಗಳ ಉನ್ನತಿಗಾಗಿ ಇಂತಹ ಭವ್ಯ ಉತ್ಸವ ರಾಜ್ಯವ್ಯಾಪಿ ನಡೆಯಬೇಕು. ಕಾರ್ಕಳವು ಶಿಲ್ಪಕಲೆಯ ಮೂಲಕ ವಿಶ್ವಮಾನ್ಯತೆ ಪಡೆದಿದೆ. ಇಲ್ಲಿನ ಬಾಹುಬಲಿ ಮೂರ್ತಿ ಸತ್ಯ, ಅಹಿಂಸೆ, ತ್ಯಾಗದ ಸಂದೇಶ ಸಾರುತ್ತಿದೆ. ಕವಿ ಮುದ್ದಣ, ಶಿಲ್ಪಿ ರೆಂಜಾಳ ಗೋಪಾಲಕೃಷ್ಣ ಶೆಣೈ, ನ್ಯಾಯಾಧೀಶ ಜಸ್ಟಿಸ್‌ ಕೆ.ಎಸ್‌. ಹೆಗ್ಡೆ, ಕರ್ನಾಟಕ ಏಕೀಕರಣದ ಜಿನರಾಜ ಹೆಗ್ಡೆ ಈ ನಾಡಿನ ಗೌರವವನ್ನು ಹೆಚ್ಚಿಸಿದ್ದಾರೆ. ಇಲ್ಲಿನ ಪಡುತಿರುಪತಿ ವೆಂಕಟರಮಣ, ಅತ್ತೂರಿನ ಬಸಿಲಿಕಾ, ಚತುರ್ಮುಖ ಬಸದಿ ಇವೆಲ್ಲ ಪ್ರೇಕ್ಷಣೀಯ ಸ್ಥಳಗಳಾಗಿವೆ ಎಂದು ರಾಜ್ಯಪಾಲರು ಕೊಂಡಾಡಿದರು.

ಸಚಿವರಿಗೆ ಶಹಬ್ಟಾಸ್‌ಗಿರಿ
ಕಾರ್ಕಳ ಉತ್ಸವದ ಮೂಲಕ ಸಂಸ್ಕೃತಿಯನ್ನು ಇನ್ನಷ್ಟು ಸದೃಢಗೊಳಿಸುವ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಸರಕಾರ ಹಾಗೂ ಸಚಿವ ಸುನಿಲ್‌ ಅವರನ್ನು ಅಭಿನಂದಿಸುತ್ತೇನೆ ಎಂದು ರಾಜ್ಯಪಾಲರು ಹೇಳಿದರು. ಕಾರ್ಕಳ ಉತ್ಸವದ ಶೀರ್ಷಿಕೆ ಗೀತೆಗೆ ಸಂಗೀತ ಸಂಯೋಜಿಸಿದ ಸುನಾದ್‌ ಗೌತಮ್‌ ಮತ್ತು ಕಾರ್ಕಳ ಗೀತೆ ಬರೆದ ರಾಜೇಂದ್ರ ಭಟ್‌ ಅವರನ್ನು ಸಮ್ಮಾನಿಸಿದರು.

Advertisement

ಸ್ವರ್ಣ ಕಲ್ಪನೆಗೆ ಉತ್ಸವ ಮುನ್ನುಡಿ
ಸಚಿವ ಸುನಿಲ್‌ ಮಾತನಾಡಿ, ಸ್ವರ್ಣ ಕಾರ್ಕಳ ಕಲ್ಪನೆಯ ಮುನ್ನುಡಿಯಾಗಿ ಕಾರ್ಕಳ ಉತ್ಸವವನ್ನು ಆಯೋಜಿಸ ಲಾಗಿದೆ. ಪೂರಕವೆಂಬಂತೆ ಅಭಿವೃದ್ಧಿ ಕಾರ್ಯಗಳು, ಕಾರ್ಲ ಕಜೆ ಅಕ್ಕಿ, ಕಾರ್ಕಳ ಬಿಳಿ ಬೆಂಡೆ ಬ್ರ್ಯಾಂಡ್‌ಗಳು ರೈತರ ಅಭಿಮಾನದ ಪ್ರತೀಕಗಳಾಗಿ ನಾಡಿನಾದ್ಯಂತ ಪ್ರಸಿದ್ಧವಾ ಗಿವೆ ಎಂದರು.

ಹಿರಿಯ ಸಾಹಿತಿ ಡಾ| ನಾ. ಮೊಗಸಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ| ಎನ್‌. ಮಂಜಳಾ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌  ಕುಮಾರ್‌ ಮಿಶ್ರಾ, ವಕೀಲರ ಸಂಘದ ಅಧ್ಯಕ್ಷ ಸುನಿಲ್‌ ಕುಮಾರ್‌ ಶೆಟ್ಟಿ ವೇದಿಕೆಯ ಲ್ಲಿದ್ದರು. ಜಿಲ್ಲಾಧಿಕಾರಿ ಎಂ. ಕೂರ್ಮಾ ರಾವ್‌ ಸ್ವಾಗತಿಸಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ವಂದಿಸಿದರು. ಸಂಗೀತಾ ನಿರೂಪಿಸಿದರು.

ರಾಜ್ಯಪಾಲರ ತುಳು, ಕನ್ನಡ ಮಾತು
ರಾಜ್ಯಪಾಲರು “ತುಳು ಬಾಂಧವರೆಗ್‌ ಸೊಲ್ಮೆಲು, ನಮಸ್ಕಾರ ತಮಗೆಲ್ಲರಿಗೂ, ಹಾರ್ದಿಕ ಅಭಿನಂದನೆಗಳು’ ಎಂದು ತುಳು, ಕನ್ನಡದಲ್ಲಿ ಮಾತು ಆರಂಭಿಸಿ ಹಿಂದಿಯಲ್ಲಿ ಮುಂದುವರಿಸಿದರು. ಕಾರ್ಕಳ ಉತ್ಸವದ ರೂವಾರಿ ವಿ. ಸುನಿಲ್‌ ಕುಮಾರ್‌ ಅವರು ರಾಜ್ಯಪಾಲರಿಗೆ ಶಂಕರಪುರ ಮಲ್ಲಿಗೆ ಹಾರ ತೊಡಿಸಿ, ಕಾರ್ಲ ಕಜೆ ಅಕ್ಕಿ, ಶ್ರೀಕೃಷ್ಣನ ವಿಗ್ರಹ ನೀಡಿ ಸಮ್ಮಾನಿಸಿದರು.

ರಾಜ್ಯಪಾಲರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಕೊಂಬು, ವಾದ್ಯ, ವಿವಿಧ ವೇಷಭೂಷಣ,ಕಲಾತಂಡಗಳು, ಪೊಲೀಸ್‌ ಬ್ಯಾಂಡ್‌, ರಾಷ್ಟ್ರಗೀತೆಯ ಗೌರವ ನೀಡಲಾಯಿತು. ರಾಜ್ಯಪಾಲರು ಸ್ವಲ್ಪ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next