Advertisement

ಸೆಲೆಬ್ರೆಟಿಗಳನ್ನು ದೇವರೆಂದು ಪೂಜಿಸುವುದನ್ನು ಇಲ್ಲಿಗೆ ನಿಲ್ಲಿಸಿ!

04:41 PM Sep 08, 2020 | Karthik A |

ದೇಶದಲ್ಲಿ ಇಂದು ಡ್ರಗ್ಸ್‌ ವಿರುದ್ಧ ಕಾನೂನಿನ ಸಮರ ನಡೆಯುತ್ತಿದೆ. ಬಾಲಿವುಡ್‌ನ‌ಲ್ಲಿ ಹುಟ್ಟಿಕೊಂಡ ಈ ಬೆಂಕಿ ಹೊಗೆಯಾಡುತ್ತಾ ಇದೀಗ ಸ್ಯಾಂಡಲ್‌ವುಡ್‌ಗೂ ವ್ಯಾಪಿಸಿದೆ. ಇದರಲ್ಲಿ ಖ್ಯಾತ ನಟ-ನಟಿಯರು ಭಾಗಿಯಾಗಿರುವ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗಾಂಜಾ ವ್ಯಸನಿಗಳ ಮತ್ತು ಪೆಡ್ಲರ್‌ಗಳ ಹೆಸರಿನ ಪಟ್ಟಿ ಬೆಳೆಯುತ್ತಲಿದ್ದು, ಒಂದಷ್ಟು ಹೊಸ ಹೆಸರುಗಳು ಸೇರ್ಪಡೆಗೊಳ್ಳುವ ಸಾಧ್ಯತೆಯೂ ಇದೆ.

Advertisement

ಸಿನೆಮಾ ಕ್ಷೇತ್ರದ ಖ್ಯಾತನಾಮರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಯಾಗಿದ್ದು, ವಿಚಾರಣೆ ನಡೆಯುತ್ತಿದೆ. ಭಾರತದಲ್ಲಿ ಸಿನೆಮಾ ನಟ-ನಟಿಯರನ್ನು ಅನುಕರಿಸುವ ಮತ್ತು ಅನುಸರಿಸುವ ಯುವ ಜನರ ಸಂಖ್ಯೆ ತುಂಬಾ ದೊಡ್ಡದಿದೆ. ಯುವಕರು ಸಿನೆಮಾ ತಾರೆಯರ ಡ್ರಗ್‌ ಮಾಫಿಯಾ ಕುರಿತು ಏನು ಹೇಳಿದ್ದಾರೆ ಇಲ್ಲಿದೆ ಓದಿ.

ಸಾಮಾನ್ಯರನ್ನಾಗಿ ಮಾಡುವುದೇ ಉತ್ತಮ
ಸಮಾಜದ ಎಲ್ಲ ವರ್ಗಗಳ ಮೇಲೆ ಪ್ರಭಾವ ಬೀರುವ ಕ್ಷೇತ್ರಗಳಲ್ಲಿ ಸಿನೆಮಾ ರಂಗವೂ ಒಂದು. ಯುವಜನತೆಯನ್ನು ಇದು ಹೆಚ್ಚು ಪ್ರಭಾವಿಸಿದೆ. ಕೇಳಿ ಬರುತ್ತಿರುವ ಡ್ರಗ್ಸ್‌ ದಂಧೆಗೆ ಸಂಬಂಧಿಸಿದ ವಿಚಾರಗಳು ಇಂದು ನಿನ್ನೆಯದಲ್ಲ. ಅನೇಕರು ಈ ನಶೆಯ ಲೋಕಕ್ಕೆ ಈ ಮೊದಲೇ ತಮ್ಮನ್ನು ತಾವು ಅರ್ಪಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಸಿನೆಮಾ ರಂಗದಲ್ಲೂ ನಡೆಯುತ್ತಿದೆ ಎಂಬ ವಿಚಾರ ಬಯಲಿಗೆ ಬಂದಾಗ ಬಹುತೇಕರಿಗೆ ಆಘಾತವಾಗಿದೆ.

ಚಲನಚಿತ್ರ ರಂಗದಲ್ಲಿ ಕೆಲವರು ಇಂತಹ ಮಾಯಾಜಾಲದಲ್ಲಿ ತೊಡಗಿಕೊಂಡಿರುವುದು ಬೇಸರದ ಸಂಗತಿ. ಜನರ ಅಭಿಮಾನವನ್ನು ಸಂಪಾದಿಸಿ ಪ್ರೀತಿಗಳಿಸಿರುವ ಅವರುಗಳಿಗೆ ತಮ್ಮ ಪ್ರತಿಭೆಯ ಮೂಲಕ ಸಮಾಜದಲ್ಲಿ ಅದೆಂತಹ ಉತ್ತಮ ಪರಿಣಾಮವನ್ನು, ಬದಲಾವಣೆಯನ್ನು ತರುವ ಸಾಧ್ಯತೆಯಿದೆ. ಆದರೆ ಈ ರೀತಿ ಮಾಡಿ ಜನರನ್ನು ಪ್ರಭಾವಿಸುವುದು ವಿಷಾದನೀಯ. ಜನರಿಂದಲೇ ಸೆಲೆಬ್ರಿಟಿಗಳು ಎಂಬ ಪಟ್ಟ ಧರಿಸಿರುವ ಇಂಥವರನ್ನು ಜನರೇ ಸಾಮಾನ್ಯರಂತೆ ನೋಡುವುದು, ಸತ್ಕರಿಸುವುದು ಉತ್ತಮವಲ್ಲವೇ? ಕಲೆಯನ್ನು ಆರಾಧಿಸುವ ನಾವುಗಳೂ ಕಲೆಯ ಭಕ್ತರಲ್ಲವೇ? ಡ್ರಗ್ಸ್‌, ಗಾಂಜಾದಂತಹ ಮಾದಕ ವಸ್ತುಗಳಿಗೆ ವ್ಯಸನಿಗಳಾಗಿ ಹೆಸರು ಹಾಳು ಮಾಡಿಕೊಳ್ಳುವುದಕ್ಕಿಂತಲೂ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದರಿಂದ ಜನರ ಮೇಲಾಗುವ ಕೆಟ್ಟ ಪರಿಣಾಮದ ಕುರಿತು ಒಂದು ಅದ್ಭುತ ಸಿನಿಮಾ ನಿರ್ಮಾಣ ಮಾಡಲಿ. ಆ ಮೂಲಕ ವ್ಯಸನ ಮುಕ್ತ ದೇಶ ಕಟ್ಟುವಲ್ಲಿ ಸಹಕರಿಸಲಿ. ನೈತಿಕ ಮೌಲ್ಯ ಸಾರುವ ಅದ್ಭುತ ಚಿತ್ರ ಜನರ ನೆನಪಲ್ಲಿ ಅಜರಾಮರವಾಗಿ ಉಳಿಯಲಿ.


 ಅರ್ಪಿತಾ ಕುಂದರ್‌,  ವಿವೇಕಾನಂದ ಕಾಲೇಜು ಪುತ್ತೂರು (ಎಂ.ಸಿ.ಜೆ.)

ಕಲಾವಿದರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾಗಿದೆ
ಸಿನೆಮಾರಂಗದಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವುದು ಡ್ರಗ್ಸ್‌ ಮಾಫಿಯಾ ದಿನಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಅನೇಕ ನಟ-ನಟಿಯರು ಈ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ. ಸರಿಯಾದ ತನಿಖೆಯ ಮೂಲಕ ಇದರ ಬೇರನ್ನು ಕಿತ್ತು ಅಪರಾಧಿಗಳನ್ನು ಬಂಧಿಸಬೇಕು. ಈ ಡ್ರಗ್ಸ್‌ ಮಾಫಿಯದಲ್ಲಿ ಸಿಲುಕಿದ ನಟ-ನಟಿಯರನ್ನು ಕೂಡಲೆ ಸಿನಿಮಾರಂಗದಿಂದ ಬ್ಯಾನ್‌ ಮಾಡಬೇಕು. ಅಂತವರ ಸಿನೆಮಾ ನಮ್ಮ ಸಮಾಜಕ್ಕೆ ಅಗತ್ಯವಿಲ್ಲ. ಸಮಾಜಕ್ಕೆ ಕೆಟ್ಟ ಸಂದೇಶ ನೀಡುವ ಮೂಲಕ ಯುವ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ. ಈ ದಂಧೆ ಕೇವಲ ಸ್ಯಾಂಡಲ್‌ವುಡ್‌ಗೆ ಸಂಬಂಧಪಟ್ಟಿಲ್ಲ. ಅನೇಕ ಚಿತ್ರರಂಗದಲ್ಲಿ ಈ ಡ್ರಗ್ಸ್‌ ದಂಧೆಯನ್ನು ಕಾಣಬಹುದು. ಇಂತಹ ಕೆಟ್ಟ ಹುಳುಗಳಿಂದ ಸಿನೆಮಾ ರಂಗಕ್ಕೆ ಕೆಟ್ಟ ಹೆಸರು. ನಾವೆಲ್ಲರೂ ಒಂದಾಗಿ ಈ ಸಾಮಾಜಿಕ ಪಿಡುಗಿನ ವಿರುದ್ದ ಹೋರಾಡಲೇ ಬೇಕಾಗಿದೆ.


 ತೌಫೀಕ್‌ ಸಾಣೂರು, ಎಂ.ಪಿ.ಎಂ. ಕಾಲೇಜು, ಕಾರ್ಕಳ 

Advertisement

ನಶೆಯ ಲೋಕ ನಮಗೆ ಬೇಕಾ?
ರಾಶಿಯ ಲೋಕದಲ್ಲಿ ತೆಲಾಡುವ ಸಿನೆಮಾರಂಗದ ಕೆಲವು ಕಲಾವಿದರಿಂದಾಗಿ ಯುವ ಮನಸ್ಸುಗಳು ಹಾದಿ ತಪ್ಪುವ ಸಾಧ್ಯತೆ ಹೆಚ್ಚಿದೆ. ಹೀಗೆ ಈ ಅನಾಚಾರ ನಡೆಯದಂತೆ ಮಾಡಲು ಯುವ ಮನಸ್ಸುಗಳಲ್ಲಿ ಮಾದಕ ವ್ಯಸನದ ತೊಡಕಿನ ಆಳದ ಕುರಿತು ಅರಿವನ್ನು ಮೂಡಿಸಬೇಕು. ಸಮಾಜದಲ್ಲಿನ ಗಣ್ಯವ್ಯಕ್ತಿಗಳು ಮತ್ತು ಸರಕಾರವು ಜಂಟಿಯಾಗಿ ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತಂತಹ ಕಾರ್ಯಕ್ರಮವನ್ನು ಆಯೋಜಿಸಬೇಕು. ಕೆಟ್ಟ ಮತ್ತು ಒಳ್ಳೆಯ ವಿಚಾರ ಕುರಿತು ನಾವೇ ಸರಿಯಾಗಿ ಅರ್ಥೈಸಿಕೊಂಡು ಅದರಿಂದ ದೂರವಿರಬೇಕು. ನಾವು ಮೊದಲು ಬದಲಾದರೆ ಸಮಾಜವು ಬದಲಾಗುತ್ತದೆ.


 ಗಿರೀಶ್‌ ಪಿ.ಎಂ., ವಿ.ವಿ. ಕಾಲೇಜು ಮಂಗಳೂರು 

ಸಮಾಜ ಬಹಿಷ್ಕರಿಸಲಿ
ಕಲಾವಿದರಲ್ಲಿ ಎಲ್ಲರೂ ದೇವರ ಆಗುವುದಿಲ್ಲ. ಒಬ್ಬ ಕಲಾವಿದನ ಗುಣನಡತೆ ಜೀವನವೇ ಆತನನ್ನು ಜನರ ದೃಷ್ಟಿಯಲ್ಲಿ ದೇವರನ್ನಾಗಿ ಮಾಡುತ್ತದೆ. ಇಂದಿನ ದಿನಗಳಲ್ಲಿ ಸಿನೆಮಾ ಕಲಾವಿದರನ್ನು ಮಾದರಿ ವ್ಯಕ್ತಿತ್ವಗಳು ಎಂದು ಕರೆಯುವವರು ಗಂಭೀರವಾಗಿ ಆಲೋಚಿಸಬೇಕಾಗಿದೆ. ನಾವು ಅನುಕರಿಸುವ ನಟ ನಟಿಯರು ಡ್ರಗ್ಸ್‌ ಜಾಲಗಳ ಹಿಂದೆ ಬಿದ್ದಿದ್ದಾರೆ. ಡ್ರಗ್ಸ್‌ ಎಂಬುದು ಮನುಷ್ಯನ ದೇಹದ ಮೇಲೆ ದುಷ್ಟ ಪರಿಣಾಮ ಬೀರುತ್ತದೆಯೇ ಎಂಬುದು ಹೊಸ ವಿಚಾರವೇನಲ್ಲ. ಆದರೆ ದುರಾದೃಷ್ಟವಶಾತ್‌ ಚಿತ್ರರಂಗದ ಕೆಲವರು ಇದರಲ್ಲಿ ಭಾಗಿಯಾಗಿದ್ದು, ಸಿನೆಮಾ ಕ್ಷೇತ್ರ ತನ್ನ ಗಂಭೀರತೆಯನ್ನು ಕಳೆದುಕೊಂಡ ಭಾವ ಕಾಡುತ್ತಿದೆ. ಸಿನೆಮಾದಲ್ಲಿ ಹೀರೋ, ಹಿರೋಯಿನ್‌ ಆಗಿ ಸಮಾಜಕ್ಕೆ ವಿಲನ್‌ ಆದರೆ ಪ್ರಯೋಜನ ಏನು? ಈ ಕೃತ್ಯದಲ್ಲಿ ತೊಡಗಿರುವವರನ್ನು ಸಿನೆಮಾರಂಗದದಿಂದ ಬಹಿಷ್ಕರಿಸಬೇಕು. ಮಾತ್ರವಲ್ಲದೇ ಕಠಿನ ಶಿಕ್ಷೆಯನ್ನು ವಿಧಿಸಬೇಕು. ಅದು ಇತರರಿಗೆ ಎಚ್ಚರಿಕೆಯಾಗುವಂತಿರಬೇಕು.


 ಶಬರೀಶ್‌ ಎಂಪಿಎಂ ಕಾಲೇಜ್‌ ಕಾರ್ಕಳ 

ಬುಡ ಸಮೇತ ಕಿತ್ತುಹಾಕಬೇಕು
ಸಿನೆಮಾ ರಂಗವು ಯುವ ಜನತೆಯ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುವ ಮಾಧ್ಯಮವಾಗಿದೇ. ಹೀಗಿರುವಾಗ ಅಲ್ಲಿಯ ಕೆಲವು ಜನ ದುಡ್ಡಿನ ಮದದಿಂದ ಡ್ರಗ್ಸ್ಅನ್ನು ಬಳಸುತ್ತಾರೆ. ಇದನ್ನು ನೋಡಿ ಹಲವು ಯುವ ಜನತೆ ದಾರಿ ತಪ್ಪುವ ಅಪಾಯ ಇದೆ. ಇದನ್ನು ನಾವು ತಡೆಯುವ ಜವಾಬ್ದಾರಿ ಇಂದು ಯುವ ಜನರ ಮೇಲಿದೆ. ಹಾಗಾಗಿ ಡ್ರಗ್ಸ್ ಜಾಲವನ್ನು ಬುಡ ಸಮೇತ ಕಿತ್ತುಹಾಕಬೇಕು. ಡ್ರಗ್ಸ್ ಜಾಲಕ್ಕೆ ಒಳಪಟ್ಟ ನಟ ನಟಿಯರಿಗೇ ಎಂದಿಗೂ ಸಿನೆಮಾದಲ್ಲಿ ನಟಿಸುವ ಅವಕಾಶ ಕೂಡಬಾರದು.  ಭಯೋತ್ಪಾದನೆಯಷ್ಟೇ ಅಪಾಯಕಾರಿಯಾಗಿರುವ ಈ ಜಾಲವನ್ನು ದೇಶದಿಂದ ಕಿತ್ತು ಎಸೆಯಾಬೇಕು.


 ಮನೀಷಾ ಕೆ.ಯು. ಶಿವಮೊಗ್ಗ ಕಾಲೇಜು 

 

 

Advertisement

Udayavani is now on Telegram. Click here to join our channel and stay updated with the latest news.

Next