Advertisement

ಬದಲಾಗುತ್ತಿರುವ ಹಬ್ಬಗಳ ಸಂಭ್ರಮದ ಶೈಲಿ

11:33 AM Jul 10, 2021 | Team Udayavani |

ಅದೇನೋ ಗೊತ್ತಿಲ್ಲ ಹಿಂದೂಗಳಿಗೆ ಹಬ್ಬಗಳೆಂದರೆ ಮುಖದಲ್ಲಿ ಮಂದಹಾಸ ಮೂಡಿಸುತ್ತದೆ. ಅವರವರ ಸಂಪ್ರದಾಯಗಳಿಗೆ ತಕ್ಕಂತೆ ಹಬ್ಬವನ್ನೂ ಆಚರಿಸುತ್ತಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಒಂದು ರೀತಿಯಾಗಿ ಆಚರಿಸಿದರೆ, ನಗರ ಪ್ರದೇಶಗಳಲ್ಲಿ ಮತ್ತೂಂದು ರೀತಿಯಲ್ಲೇ ಇರುತ್ತದೆ. ಭಾರತದಲ್ಲಿ ವಿವಿಧತೆಯಲ್ಲಿ ಏಕತೆಯಿದೆ. ವಿವಿಧ ರೀತಿಯ ಜಾತಿಧರ್ಮದವರು ಇದ್ದರೂ ಕೆಲವೊಂದು ಹಬ್ಬಗಳನ್ನು ಒಗ್ಗಟ್ಟಾಗಿ ಆಚರಿಸುತ್ತಾರೆ. ಅದೇ ಹಬ್ಬಗಳನ್ನು ಹಿಂದೆಲ್ಲಾ ಮನೆಮಂದಿಯೆಲ್ಲ ಸೇರಿ ಆಚರಿಸುತ್ತಿದ್ದರು. ಹಬ್ಬಕ್ಕೆ ವಾರಕ್ಕಿಂತ ಮುನ್ನವೇ ಸಿದ್ಧತೆ ಆರಂಭವಾಗುತ್ತಿತ್ತು. ಮನೆಯ ಸಂಬಂಧಿಕರು ದೂರದಲ್ಲಿದ್ದರೆ ಕರೆ ಮಾಡಿ ಕರೆಸಿಕೊಳ್ಳಲಾಗುತ್ತಿತ್ತು. ಹಬ್ಬದ ಆಚರಣೆ ಆರಂಭವಾಗುವ  ಮನೆಯ ಮುಂದಿನ ಅಂಗಳವನ್ನು ಸೆಗಣಿಯಿಂದ ಸಾರಿಸಿ. ಚಪ್ಪರ ಹಾಕಿ ಬಾಳೆಕಂದು ತಂದು ಮನೆಯ ಮುಂದೆ ಕಟ್ಟಿ, ಮಾವಿನ ಎಲೆಯ ತೋರಣ ಮಾಡಿಕಟ್ಟಿ, ಮನೆಯ ಸುತ್ತಮುತ್ತ ಇರುವ ಎಲ್ಲ ದೇವರುಗಳ ಪಟ್ಟಿ ಮಾಡಿ ಆದಿನ ಉಪವಾಸ ವಿದ್ದು ಹೂವು, ಹಣ್ಣು ಕೊಡುವ ನಮ್ಮ ಭಕ್ತಿಗೆ ಸ್ವರ್ಗ ದಿಂದ ದೇವರೇ ನಿಬ್ಬೆರಗಾಗಿ ನೋಡುತ್ತಿರುತ್ತಾನೆ. ಇದರ ಜತೆ ಹಬ್ಬಕ್ಕೆ ಹೊಸ ಉಡುಗೆಗಳನ್ನು ಕೊಂಡು ತಂದು ಅದನ್ನು ಚಿಕ್ಕ ಮಕ್ಕಳು ಧರಿಸಿಕೊಂಡು ಮನೆ ತುಂಬಾ ನಡೆದಾಡುವ ಅದರ ಸಂಭ್ರಮವೇ ಬೇರೆ. ರಾತ್ರಿಯಿಡೀ ಹೆಂಗಸರೆಲ್ಲಾ ಅಡುಗೆ ಮನೆಯಲ್ಲಿ ಸಿಹಿ ತಿಂಡಿ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿ ಅನಂತರ ಕಾದು ಕುಳಿತ ನಮಗೆ ಪ್ರಸಾದ ಸಿಗುತ್ತಿತ್ತು.

Advertisement

ಉದಾಹರಣೆಗೆ ರಾಮಾಯಣದಲ್ಲಿ ರಾಮ ಮತ್ತು ಲಕ್ಷ್ಮಣ ಲಂಕೆಯ ಮೇಲೆ ಯುದ್ಧ ಮಾಡಿ ರಾವಣನನ್ನು ಸೋಲಿಸಿ ಸೀತೆಯನ್ನು ಮರಳಿ ಕರೆದುಕೊಂಡು ಬಂದ ದಿನವನ್ನು ದೀಪಾವಳಿಯಾಗಿ ಆಚರಿಸಲಾಗುತ್ತದೆ. ಅಂದಿನಿಂದ ಆರಂಭವಾದ ದೀಪಾವಳಿ ಅದೆಷ್ಟೋ ಬಾಂಧವ್ಯಗಳ ಬಂಧವಾಗಿ, ಬಿಂದುವಾಗಿ ಪಟಾಕಿಯ ಶಬ್ದದಷ್ಟೇ ಶಬ್ದ ಮಾಡುತ್ತಿದೆ. ಆದರೆ ಅಂದಿನ ದೀಪಾವಳಿ ಹಬ್ಬದ ಆಚರಣೆಗೂ ಇಂದು ನಾವು ಆಚರಿಸುತ್ತಿರುವ ದೀಪಾವಳಿ ಹಬ್ಬದ ಆಚರಣೆಗೂ ಅದೆಷ್ಟೋ ವ್ಯತ್ಯಾಸ ಇದೆ.

ಹಿಂದೆಲ್ಲ ದೀಪಾವಳಿ ಹಬ್ಬಕ್ಕಿಂತ  ಮುಂಚೆ ಪಟಾಕಿಗಾಗಿ ಆರಂಭವಾಗುವ ನಮ್ಮ ಯೋಜನೆ, ಕೊನೆಯಾಗುವರೆಗೂ  ಮುಗಿಯುತ್ತಿರಲಿಲ್ಲ. ಅದರಲ್ಲೂ ನಮ್ಮ ಹಳ್ಳಿ ಮನೆಗಳಲ್ಲಿ ದೀಪಾವಳಿ ಹಬ್ಬವನ್ನು ಐದಾರು ದಿನಗಳ ಕಾಲ ಆಚರಿಸಲಾಗುತ್ತದೆ. ಹಬ್ಬ ಮುಗಿಯುವವರೆಗೂ ಮನೆಯ ಸುತ್ತ ದೀಪವನ್ನು ಹಚ್ಚಲಾಗುತ್ತದೆ. ಪಾಡ್ಯ, ಬೂರೇ, ನೋನಿ, ಗೋಪೂಜೆ, ಲಕ್ಷ್ಮೀ ಪೂಜೆ, ರಾತ್ರಿ ಗುಂಪು ಕಟ್ಟಿಕೊಂಡು ಬರುವ ಅಂಟಿಗೆ ಪಿಂಟಿಗೆ ಹಾಡಿನ ತಂಡ. ಅಂತಿಮವಾಗಿ ವಸೊªàಡುಕದೊಂದಿಗೆ ಮುಕ್ತಾಯವಾಗುವ ದೀಪಾವಳಿ ಹಬ್ಬ ನಗರದ ಜನರ ಆಧುನಿಕ ಶೈಲಿಯಂತೆ ಮಾರ್ಪಾಡಾಗುತ್ತಿದೆ.

ಅಂದು ಕರೆ ಮಾಡಿದ ತಕ್ಷಣ ಮಾತನಾಡುತ್ತಿದ್ದ ಸಂಬಂಧಿಕರು ಇಂದು ಕರೆಗೆ ಸ್ಪಂದಿಸುವುದು ಕಷ್ಟ. ಹಬ್ಬಕ್ಕೆ ಬರುವುದು ಕಷ್ಟ. ನಗರದಲ್ಲಿಯೇ ಚಿಕ್ಕ ಕುಟುಂಬದೊಂದಿಗೆ ಚೊಕ್ಕದಾಗಿ ಆಚರಿಸುತ್ತಾರೆ. ತಂದೆ ತಾಯಿ ಒಂದು ಕಡೆ, ಮಕ್ಕಳು ಮತ್ತೂಂದೆಡೆ ಈ ರೀತಿ. ಕೆಲಸದ ಒತ್ತಡದಲ್ಲಿ ಇರುವುದರಿಂದ ಊರಿನಲ್ಲಿರುವ ಮನೆಯವರಿಗೆ ಕರೆಯಲ್ಲಿಯೇ ಶುಭಾಶಯ ಕೋರಿ, ಪಟ್ಟಣದ ಬೇಕರಿಯಿಂದ ಸಿಹಿತಿಂಡಿ ತಂದು ಒಂದು ಗಂಟೆಯಲ್ಲಿಯೇ ಹಬ್ಬದ ಆಚರಣೆ ಮುಗಿಸುತ್ತಾರೆ. ನಮ್ಮ ನಗರದ ಮಕ್ಕಳಿಗೆ ಈಗಿನ ದೀಪಾವಳಿ ಹಬ್ಬ ಕೇವಲ ಪಟಾಕಿ ಹಚ್ಚಿ ಸಂತೋಷ ಪಡುವುದರಲ್ಲಿಯೇ ಮುಗಿದು ಬಿಡುತ್ತದೆ.   ಆದರೆ ಅಂದು ಇದ್ದ ಹಬ್ಬದ ಆಚರಣೆಯ ಶೈಲಿ ಇಂದು ಮರೆಮಾಚಿದೆ. ಅಂದು ಹಬ್ಬದ ನೆಪಕ್ಕಾದರೂ ಒಂದಾಗಿ ಸಂಬಂಧಗಳ ಪರಿಚಯ ಮಾಡಿಕೊಳ್ಳುತ್ತಿದ್ದ ನಾವು ಇಂದು ಆ ಪರಿಚಯದ ಅರಿವು ಮಕ್ಕಳಿಗೆ ತಿಳಿಯದಂತಾಗಿದೆ. ಅಜ್ಜ ಅಜ್ಜಿಯರಿಗೆ ಮೊಮ್ಮಕ್ಕಳನ್ನೂ ನೋಡುವ ಹಂಬಲದ ಭಾಗ್ಯವು ಇರುವುದಿಲ್ಲ. ಇನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ಫೋಟೋಗಳನ್ನು ಅಪ್‌ಲೋಡ್‌ ಮಾಡುವ ಮೂಲಕ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಹೀಗೆ ಮುಂದುವರಿದರೆ ಮುಂದಿನ ಪೀಳಿಗೆಯ ಮಕ್ಕಳಿಗೆ ಹಬ್ಬದ ಪ್ರಾಮುಖ್ಯ ತಿಳಿಯುವುದಿಲ್ಲ. ಆಗ ಮಕ್ಕಳಿಗೆ ಫೋಟೋಗಳನ್ನು ತೋರಿಸಿ ವಿವರಿಸಬೇಕಾಗುತ್ತದೆ. ಎಲ್ಲ ಹಬ್ಬಗಳು ದಿನದಿಂದ ದಿನಕ್ಕೆ ಈ ರೀತಿ ತನ್ನ ಮೌಲ್ಯವನ್ನು ಕಳೆದುಕೊಂಡು ಹೋಗುತ್ತಿವೆ. ನಮ್ಮ ಭಾರತೀಯ ಸಂಸ್ಕೃತಿಯ ಅದೆಷ್ಟು ಹಬ್ಬಗಳ ಆಚರಣೆ, ಅದರ ಮೌಲ್ಯ, ಸಂಸ್ಕೃತಿಯನ್ನು ವಿದೇಶಿಯರು ಪ್ರೀತಿಯಿಂದ ಒಪ್ಪಿಕೊಂಡು, ಅಪ್ಪಿಕೊಂಡು ಸ್ವೀಕರಿಸುತ್ತಿದ್ದಾರೆ, ಆದರೆ ನಾವು  ನಾಜೂಕಾಗಿ ದೂರ ಸರಿಸುತ್ತಿದ್ದೇವೆ. ಆದರ ಅರಿವು ನಮಗಾಗಬೇಕು.ನಮ್ಮ ಮೌಲ್ಯವನ್ನು ಬೇರೊಬ್ಬರು ಬಂದು ಕದ್ದೊಯ್ಯುವ ಮುನ್ನ ಎಚ್ಚೆತ್ತುಕೊಂಡು ಅದನ್ನು ಅನುಸರಿಸಲು ಸಮಯ ಮಾಡಿಕೊಳ್ಳಬೇಕು. ಯಾವುದೇ ಹಬ್ಬವನ್ನಾದರೂ ಅರ್ಥಪೂರ್ಣವಾಗಿ ಕುಟುಂಬದೊಂದಿಗೆ ಆಚರಿಸಲು ಸಮಯಮಾಡಿಕೊಳ್ಳುವುದು ಇಂದಿನ ಅಗತ್ಯ.

Advertisement

 

-ಭಾಗ್ಯಶ್ರೀ

ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next