ದುಬೈ: ಅನಿವಾಸಿ ಭಾರತೀಯ ಕುಟುಂಬವೊಂದರ ಬದುಕು ದುಬೈನಲ್ಲಿ ಅಕ್ಷರಶಃ ಜೈಲುವಾಸದಂತಾಗಿದೆ. ಶಾರ್ಜಾದಲ್ಲಿ ನೆಲೆಸಿರುವ 7 ಮಂದಿ ಸದಸ್ಯರ ಕುಟುಂಬ ಇದೀಗ ತಮ್ಮ ಸಂಕಷ್ಟವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. “ನಾವಿಲ್ಲಿ ಜೈಲಿನಲ್ಲಿರುವ ಕೈದಿಗಳಂತೆ ಬದುಕುತ್ತಿದ್ದೇವೆ’ ಎಂದಿದ್ದಾರೆ. ಅಷ್ಟೇ ಅಲ್ಲ, ದುಬೈನಲ್ಲಿಯೇ ಬದುಕಲು ಅವಕಾಶ ಕಲ್ಪಿಸಿಕೊಡಬೇಕೆಂದೂ, ತಮ್ಮ ವಾಸವನ್ನು ಕಾನೂನು ಬದ್ಧಗೊಳಿಸ ಬೇಕೆಂದೂ ಸರ್ಕಾರದ ಮೊರೆ ಹೋಗಿದ್ದಾರೆ.
ಕೇರಳ ಮೂಲದ ಮಧುಸೂಧನ್(60) ಹಾಗೂ ಶ್ರೀಲಂಕಾ ಮೂಲದ ಪತ್ನಿ ರೋಹಿಣಿ ಈ ಸಂದಿಗ್ಧತೆಯಲ್ಲಿ ಸಿಲುಕಿದವರು. ಏಳು ಸದಸ್ಯರ ಪೈಕಿ ಮೂವರು ಪಾಸ್ಪೋರ್ಟ್, ವೀಸಾ ಹೊಂದಿಲ್ಲದೇ ಇರುವುದೂ ಆತಂಕಕ್ಕೆ ಕಾರಣ. ಬಂಧನ ಅಥವಾ ಗಡಿಪಾರು ಭೀತಿ ಇವರನ್ನು ಆವರಿಸಿದೆ. ಮಧು ಸೂಧನ್ ಕೆಲಸ ಕಳಕೊಂಡ ಹಿನ್ನೆಲೆಯಲ್ಲಿ ವೀಸಾ ಅವಧಿ ಮುಗಿದು, ಅವರ ದುಬೈ ವಾಸ ಅಕ್ರಮ ಎಂಬಂತಾಗಿದೆ. ಆದರೆ ಸದ್ಯಕ್ಕೆ ಏಕಾಏಕಿಯಾಗಿ ಅಲ್ಲಿಂದ ವಾಪಸ್ ಬರಲೂ ಆಗದು. ಏಕೆಂದರೆ, ಪತ್ನಿ ಶ್ರೀಲಂಕಾ ಪ್ರಜೆ ಆಗಿರುವುದರಿಂದ, ಅವರಲ್ಲಿ ಭಾರತದ ಪಾಸ್ಪೋರ್ಟ್ ಕೂಡ ಇಲ್ಲ. ಅಲ್ಲದೆ, ಮಕ್ಕಳೂ ಶಿಕ್ಷಣದಿಂದ ವಂಚಿತರಾಗಿದ್ದಾರೆ.
30 ವರ್ಷಗಳಿಂದಲೂ ದುಬೈನಲ್ಲಿರುವ ದಂಪತಿಗೆ ಅಶ್ವಥಿ(29), ಸಂಗೀತಾ(25), ಶಾಂತಿ(23), ಗೌರಿ(22) ಹಾಗೂ ಮಿಥುನ್ (21) ಎಂಬ ಮಕ್ಕಳಿ ದ್ದಾರೆ. ಎಲ್ಲರೂ ನಿರುದ್ಯೋಗಿಗಳಾಗಿ ದ್ದಾರೆ. ಮನೆ ಯಲ್ಲೇ ತಾಯಿಯು ಮಕ್ಕಳಿಗೆ ಓದಲು, ಬರೆಯಲು ಕಲಿಸಿದ್ದಾರೆ. ಮನೆಯಿಂದ ಹೊರ ಹೋದರೆ ಎಲ್ಲಿ ಸಿಕ್ಕಿಬೀಳುತ್ತೇವೋ ಎಂಬ ಭಯದಿಂದ ಹೊರಗೂ ಹೋಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ .
30 ವರ್ಷಗಳಿಂದಲೂ ಶಾರ್ಜಾದಲ್ಲಿರುವ ಕೇರಳದ ಮಧುಸೂದನ್
ಐವರು ಮಕ್ಕಳೂ ನಿರುದ್ಯೋಗಿಗಳು
ಭಾರತಕ್ಕೆ ವಾಪಸಾಗೋಣವೆಂದರೆ ಪತ್ನಿಯ ಪಾಸ್ಪೋರ್ಟ್ ಸಮಸ್ಯೆ
ವಾಸವನ್ನು ಕಾನೂನುಬದ್ಧಗೊಳಿಸಲು ಯುಎಇ ಸರ್ಕಾರದ ಮೊರೆಹೋದ ದಂಪತಿ
ಐವರು ಮಕ್ಕಳು ಅಕ್ರಮವಾಗಿ ನೆಲೆಸಿದ್ದಾರೆನ್ನುವ ಕಾರಣದಿಂದಾಗಿ ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದಾರೆ. ಅವರಲ್ಲಿ ಪಾಸ್ಪೋರ್ಟ್ ಕೂಡ ಇಲ್ಲ. ಹೀಗಾಗಿ ಬೇರೆಡೆ ಹೋಗಲೂ ಸಾಧ್ಯವಾಗುತ್ತಿಲ್ಲ. ಮನೆಯಿಂದ ಆಚೆ ಹೋಗುವುದೇ ಕಷ್ಟ ಎಂಬ ಸ್ಥಿತಿ ಇದೆ. ಸಭ್ಯ ಬದುಕೇ ನಮ್ಮ ಆಶಯ.
ಮಧುಸೂಧನ್