Advertisement

ಕಿರಿಯರ ಪರಾಕ್ರಮ, ಭಾರತೀಯ ಕ್ರಿಕೆಟ್‌ಗಿದೆ ಉಜ್ವಲ ಭವಿಷ್ಯ

08:55 AM Feb 05, 2018 | Team Udayavani |

ಭಾರತದ ಎಳೆಯರು ಅಂಡರ್‌ 19 ವಿಶ್ವಕಪ್‌ ಟ್ರೋಫಿಯನ್ನು ದಾಖಲೆಯ ನಾಲ್ಕನೇ ಬಾರಿ ಗೆದ್ದ ಮೇಲೆ ತಂಡದ ಅಜೇಯ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಯುವ ಪ್ರತಿಭೆಗಳು ರಾಷ್ಟ್ರೀಯ ತಂಡದ ಕದ ತಟ್ಟುತ್ತಿದ್ದು, ದೇಶದ ಕ್ರಿಕೆಟಿಗೆ ಉಜ್ವಲ ಭವಿಷ್ಯ ಗೋಚರಿಸುತ್ತಿದೆ.

Advertisement

ಈ ಬಾರಿಯ ಐಪಿಎಲ್‌ನಲ್ಲಿ ಈ ಎಳೆಯರು ಖಂಡಿತವಾಗಿ ದೊಡ್ಡ ಸದ್ದು ಮಾಡುತ್ತಾರೆ ಎಂಬ ಅರಿವಿದ್ದೇ ತರಬೇತುದಾರ ರಾಹುಲ್‌ ದ್ರಾವಿಡ್‌, “ಐಪಿಎಲ್‌ ಹರಾಜು ಪ್ರತಿವರ್ಷ ಇರುತ್ತೆ. ಆದರೆ, ವಿಶ್ವಕಪ್‌ ಗೆಲ್ಲುವಂಥ ಉಜ್ವಲ ಅವಕಾಶ ಸಿಗುವುದು ವಿರಳ’ ಎಂದು ಕಿವಿಮಾತು ಹೇಳಿದರು. ಎಲ್ಲ ಆಟಗಾರರೂ ತಮ್ಮ ಮೊಬೈಲ್‌ಗ‌ಳನ್ನು ಸ್ವಿಚ್‌ ಆಫ್ ಮಾಡಿ, ಆಟದ ಮೇಲೆ ಗಮನ ಕೇಂದ್ರೀಕರಿಸುವಂತೆ ಮಾಡಿದ್ದರು. ಅದರ ಫ‌ಲ ಈಗ ಕಣ್ಣ ಮುಂದಿದೆ.

ಈ ಸಲದ ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯವನ್ನು ಭರ್ತಿ 100 ರನ್ನುಗಳಿಂದ ಬಗ್ಗುಬಡಿದು ಆತ್ಮವಿಶ್ವಾಸ ವೃದ್ಧಿಸಿಕೊಂಡ ಪೃಥ್ವಿ ಶಾ ಬಳಗ ಎಲ್ಲ ಪಂದ್ಯಗಳನ್ನು ಗೆಲ್ಲುತ್ತಲೇ ಮುನ್ನಡೆಯಿತು. ಪಪುವಾ ನ್ಯೂಗಿನಿ ಹಾಗೂ ಜಿಂಬಾಬ್ವೆ ವಿರುದ್ಧದ ಪಂದ್ಯಗಳನ್ನು ಏಕಪಕ್ಷೀಯವಾಗಿ 10 ವಿಕೆಟ್‌ಗಳಿಂದ ಗೆದ್ದರೆ, ಕ್ವಾರ್ಟರ್‌ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 131 ರನ್ನು ಗಳಿಂದ ಮಣಿಸಿತು. ಸೆಮಿಫೈನಲ್‌ನಲ್ಲಿ ಮುಖಾಮುಖೀಯಾದ ಸಾಂಪ್ರ ದಾಯಿಕ ಎದುರಾಳಿ ಪಾಕಿಸ್ಥಾನವನ್ನು 203 ರನ್ನುಗಳ ಭಾರೀ ಅಂತರದಿಂದ ಬಗ್ಗುಬಡಿದ ಪರಿ ಅದ್ಭುತ. ಫೈನಲ್‌ನಲ್ಲಿ ಮತ್ತೆ ಕಾಂಗರೂ ವಿರುದ್ಧ 8 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಂಪಾದಿಸಿ ಟ್ರೋಫಿಗೆ ಮುತ್ತಿಕ್ಕಿತು.

ಟೂರ್ನಿಯುದ್ದಕ್ಕೂ ಅತ್ಯುದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದ ಶುಭಮನ್‌ ಗಿಲ್‌ ಒಂದು ಶತಕ, ನಾಲ್ಕು ಅರ್ಧ ಶತಕಗಳೊಂದಿಗೆ 372 ರನ್‌ ಸಂಪಾದಿ ಸಿದರು. ವಯಸ್ಸಿನ ದಾಖಲೆಯ ಪರೀಕ್ಷೆಯಲ್ಲಿ ಗೆದ್ದು ಆಡಿದ ಮನ್‌ಜೋತ್‌ ಕಾಲಾÅ ಫೈನಲ್‌ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದರು. ನಾಯಕನ ಆಟವಾಡಿ ಟೂರ್ನಿಯಲ್ಲಿ 261 ರನ್‌ ಸಂಪಾದಿಸಿದ ಪೃಥ್ವಿ 
ಶಾ, ಆರು ಪಂದ್ಯಗಳಿಂದ 16 ವಿಕೆಟ್‌ ಬೇಟೆಯಾಡಿದ ಅನುಕೂಲ್‌ ರಾಯ್‌, 145 ಕಿ.ಮೀ. ವೇಗದಲ್ಲಿ ಬೆಂಕಿ ಚೆಂಡುಗಳನ್ನೆಸೆದ ಕಮಲೇಶ್‌ ನಾಗರಕೋಟಿ ಹಾಗೂ ಶಿವಂ ಮಾವಿ – ಇಶಾನ್‌ ಪೋರೆಲ್‌ ಸ್ಪಿನ್‌ ಮೋಡಿಗೆ ಜಗತ್ತೇ ನಿಬ್ಬೆರಗಾಯಿತು. ವಿದೇಶಿ ಪಿಚ್‌ಗಳಲ್ಲಿ ಆಡುವುದು ಭಾರತೀಯರಿಗೆ ತುಸು ಕಷ್ಟವೇ. ಇಂಥ‌ ಸನ್ನಿವೇಶದಲ್ಲಿ ಎರಡು ವಾರ ಮೊದಲೇ ನ್ಯೂಜಿಲ್ಯಾಂಡ್‌ಗೆ ತೆರಳಿ, ಮೂರು ಅಭ್ಯಾಸ ಪಂದ್ಯಗಳನ್ನಾಡಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಜತೆಗೆ ಸತತ ಪರಿಶ್ರಮದಿಂದ ದ್ರಾವಿಡ್‌ ಪಡೆ ಮಾಡಿದ ಸಾಧನೆ ಉಲ್ಲೇಖನೀಯ.

ಭಾರತದ ಗೆಲುವಿನ ಬಹುಪಾಲು ಶ್ರೇಯ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗೆ ಸಲ್ಲುತ್ತದೆ. ಅದಕ್ಕಾಗಿಯೇ ಬಹುಮಾನ ಮೊತ್ತದ ಸಿಂಹ ಪಾಲು ಅವರಿಗೆ ಅರ್ಹವಾಗಿಯೇ ಸಂದಿದೆ. ಫೀಲ್ಡಿಂಗ್‌ ಕೋಚ್‌ ಅಭಯ ಶರ್ಮಾ ಹಾಗೂ ಬೌಲಿಂಗ್‌ ಕೋಚ್‌ ಪರಾಸ್‌ ಮ್ಹಾಂಬ್ರೆ ಕೊಡುಗೆಯೂ ದೊಡ್ಡದೇ. ಈ ಗೆಲುವನ್ನು ‘ಗೋಡೆ’ ಬಣ್ಣಿಸಿದ್ದು ಹೀಗೆ: “ಇದು ಕ್ರಿಕೆಟಿಗರ ಕೊನೆಯ ಸಾಧನೆ ಅಲ್ಲ. ಸುದೀರ್ಘ‌ ಕಾಲ ನೆನಪಲ್ಲಿ ಉಳಿಯುವ ಸ್ಮರಣೀಯ ಸಾಧನೆ. ಈ ತಂಡ ಪ್ರತಿಭಾನ್ವಿತರ ಗೊಂಚಲು. ಭವಿಷ್ಯದಲ್ಲಿ ಇದಕ್ಕಿಂತ ಮಿಗಿಲಾದ ಸಾಧನೆಗಳನ್ನು ಅವರು ಮಾಡಲಿದ್ದಾರೆ. ಭಾರತದ ವಿಶ್ವಕಪ್‌ ಗೆಲುವಿನಲ್ಲಿ ಕ್ರಿಕೆಟಿಗರ ಸಾಂ ಕ ಪರಿಶ್ರಮ ಎದ್ದು ಕಾಣುತ್ತದೆ. ಯಶಸ್ಸಿಗಾಗಿ ಸಹಾಯಕ ಸಿಬಂದಿಯೂ ಶಕ್ತಿಮೀರಿ ಶ್ರಮಿಸಿದ್ದಾರೆ.’

Advertisement

ಕಿರಿಯರ ಸಾಧನೆಗೆ ಸ್ಫೂರ್ತಿಯಾದ ದ್ರಾವಿಡ್‌ ಹಿರಿಯರ ತಂಡದ ತರಬೇತುದಾರ ಆಗಬೇಕೆಂಬ ಆಗ್ರಹ ಈಗ ವ್ಯಕ್ತವಾಗುತ್ತಿದೆ. ಆದರೆ, ಕಠಿನ ಪರಿಶ್ರಮ ಒಲ್ಲದ, ವಿದೇಶಿ ಟೂರ್ನಿಗಳೆಂದರೆ ಪತ್ನಿ- ಪ್ರೇಯಸಿಯೊಂದಿಗೆ ಸುತ್ತಾಡುತ್ತ ಶಾಪಿಂಗ್‌ ಮಾಡುವ ಅವಕಾಶಗಳೆಂದು ನಂಬಿರುವ ಹಾಗೂ ತಾವು ಕಲಿಯುವುದೇನೂ ಉಳಿದಿಲ್ಲ ಎಂಬ ಭ್ರಮೆಯಲ್ಲಿರುವ ಸ್ಟಾರ್‌ ಆಟಗಾರರು ತಾಳ್ಮೆಯ ಮೂರ್ತಿಯೇ ಆಗಿರುವ ದ್ರಾವಿಡ್‌ ಮಾತು ಕೇಳುವರೇ? ಆಟಗಾರರ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆನ್ನುವ ಕಾರಣಕ್ಕೇ ಅಲ್ಲವೇ ರವಿಶಾಸಿŒಗೆ ಮಣೆ ಹಾಕಿದ್ದು?

ಐಪಿಎಲ್‌ನ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿದ್ದ ರಹಾನೆ, ಜಡೇಜಾ ಮೊದಲಾದವರೀಗ ರಾಷ್ಟ್ರೀಯ ತಂಡದಲ್ಲಿ ಮಿಂಚುತ್ತಿದ್ದಾರೆ. ಕಿರಿಯರ ತಂಡಕ್ಕೆ ತರಬೇತಿ ನೀಡುವುದು ದ್ರಾವಿಡ್‌ ಆಯ್ಕೆ. ಪ್ರತಿಭೆಗಳನ್ನು ಗುರುತಿಸಿ, ಅವಕಾಶ ನೀಡಿ, ಶುದ್ಧ ಹಾಗೂ ಶಿಸ್ತುಬದ್ಧ ಕ್ರಿಕೆಟ್‌ ಆಡುವಂತೆ ಪ್ರೇರೇಪಿಸುವ ಅವರು, ಸೋತಾಗ ಸಿಡಿಮಿಡಿಗೊಳ್ಳದೆ ಯಶಸ್ಸಿನ ಪಾಠ ಹೇಳಿಕೊಡು ತ್ತಾರೆ. ಪ್ರಶಂಸೆಯ ಸುರಿಮಳೆಯೇ ಆಗುತ್ತಿದ್ದರೂ ಅವುಗಳನ್ನೂ ಸಮಚಿತ್ತ ದಿಂದಲೇ ಸ್ವೀಕರಿಸುವ ದ್ರಾವಿಡ್‌ ಯುವ ಕ್ರಿಕೆಟಿಗರಿಗೆ ಪರಮಗುರು. ಅವರ ಗರಡಿಯಲ್ಲಿ ವಿಶ್ವ ದರ್ಜೆಯ ಕ್ರಿಕೆಟಿಗರು ಮೂಡಿ ಬರುತ್ತಾರೆಂದು ವಿಶ್ವಾಸದಿಂದ ಹೇಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next