Advertisement

Indian Army Day 2024: ರಾಷ್ಟ್ರೀಯ ಭದ್ರತೆಗಾಗಿ ತಂತ್ರಜ್ಞಾನಗಳ ಸ್ವೀಕಾರ

12:23 AM Jan 15, 2024 | Team Udayavani |

ಜನವರಿ 15ರಂದು ಪ್ರತಿ ವರ್ಷವೂ ಆಚರಿಸಲ್ಪಡುವ ಭಾರತೀಯ ಸೇನಾ ದಿನಾಚರಣೆ, 1949ರ ಈ ದಿನದಂದು ಕೊಡಂದೆರ ಎಂ ಕಾರ್ಯಪ್ಪ ಅವರು ಜನರಲ್‌ ಫ್ರಾನ್ಸಿಸ್‌ ಬುರ್ಚ ಅವರಿಂದ ಭಾರತದ ಪ್ರಥಮ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಸುದಿನವನ್ನು ಸ್ಮರಿಸುತ್ತದೆ. 2024ರ ಭಾರತೀಯ ಸೇನಾ ದಿನಾಚರಣೆಯನ್ನು “ರಾಷ್ಟ್ರದ ಸೇವೆಯಲ್ಲಿ’ ಎಂಬ ಧ್ಯೇಯವಾಕ್ಯದಡಿ ಆಚರಿಸಲಾಗುತ್ತಿದ್ದು, ವೃತ್ತಿಪರತೆ ಮತ್ತು ದೇಶದ ಮೌಲ್ಯಗಳೆಡೆಗೆ ಭಾರತೀಯ ಸೇನೆಯ ಬದ್ಧತೆಯನ್ನು ಪ್ರದರ್ಶಿಸುತ್ತದೆ.

Advertisement

ಭಾರತೀಯ ಸೇನೆಯ ಧ್ಯೇಯವಾಕ್ಯವಾದ “ಸೇವಾ ಪರಮೋ ಧರ್ಮ’ ಎಂಬುದಕ್ಕೆ ಈ ವರ್ಷದ ಘೋಷವಾಕ್ಯವೂ ಪೂರಕವಾಗಿದ್ದು, ಭಾರತೀಯ ಸೇನೆ ರಾಷ್ಟ್ರ ಸೇವೆ ಮತ್ತು ನಾಗರಿಕರ ಹಿತಾಸಕ್ತಿಗೆ ಪ್ರಥಮ ಆದ್ಯತೆ ನೀಡುವುದನ್ನು ಸೂಚಿಸುತ್ತದೆ. ಇದು ಭಾರತದ ಸಾರ್ವಭೌಮತ್ವ, ಪ್ರಾದೇಶಿಕ ಏಕತೆಯನ್ನು ರಕ್ಷಿಸುವಲ್ಲಿ ಭಾರತದ ಪಾತ್ರ ಮತ್ತು ಸೇನಾ ಸಿಬ್ಬಂದಿಯ ತ್ಯಾಗ, ಸಮರ್ಪಣಾ ಭಾವಗಳನ್ನು ಪ್ರದರ್ಶಿಸುತ್ತದೆ.

ಈ ವರ್ಷದ ಭಾರತೀಯ ಸೇನಾ ದಿನಾಚರಣೆ ಉತ್ತರ ಪ್ರದೇಶದ ಲಕ್ನೋ ನಗರದಲ್ಲಿ ಆಯೋಜಿಸ  ಲಾಗುತ್ತದೆ. ಸ್ವಾತಂತ್ಯ ಬಂದ ಬಳಿಕ, ಭಾರತೀಯ ಸೇನಾ ದಿನಾಚರಣೆ ಕೇವಲ ಎರಡನೇ ಬಾರಿಗೆ ರಾಜಧಾನಿ ನವದೆಹಲಿಯ ಹೊರಗಡೆ ನಡೆಯುತ್ತಿದೆ. 76ನೇ ಭಾರ ತೀಯ ಸೇನಾ ದಿನಾಚರಣೆಯ ಅಂಗವಾಗಿ, ಲಕ್ನೋದಲ್ಲಿ ಮೂರು ದಿನಗಳ ಕಾಲ “ನಿಮ್ಮ ಸೇನೆಯ ಕುರಿತು ತಿಳಿದು ಕೊಳ್ಳಿ’ ಎಂಬ ಕಾರ್ಯಕ್ರಮವನ್ನೂ ಆಯೋಜಿಸಲಾಗುತ್ತಿದೆ. ಇದರಲ್ಲಿ ಭಾರತೀಯ ಸೇನೆಯ ವಿವಿಧ ಆಧುನಿಕ ಉಪಕರಣಗಳಾದ ಟ್ಯಾಂಕರ್‌ಗಳು, ಆರ್ಟಿಲರಿ ಗನ್‌ಗಳು, ಮತ್ತು ರೇಡಾರ್‌ಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ವಸ್ತು ಪ್ರದರ್ಶನ ಎಲ್ಲರಿಗೂ ಮುಕ್ತವಾಗಿದ್ದು, ಉಚಿತ ಪ್ರವೇಶ ಹೊಂದಿದೆ. ಲಕ್ನೋದ ಸೂರ್ಯ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ ನಲ್ಲಿ ಆಯೋಜನೆಗೊಂಡಿರುವ ಈ ಸಮಾರಂಭವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ.

ಭಾರತೀಯ ಸೇನೆ ತನ್ನ ಶೌರ್ಯ ಮತ್ತು ಶಿಸ್ತಿಗೆ ಹೆಸ ರಾಗಿದ್ದು, ತನ್ನ ಮೊಟ್ಟಮೊದಲ ಪ್ರಾಶಸ್ತ್ಯ ದೇಶದ ರಕ್ಷಣೆ ಮತ್ತು ಗೌರವಕ್ಕೆ ನೀಡುತ್ತದೆ. ನಂತರದ ಪ್ರಾಶಸ್ತ್ಯ ಸೈನಿಕ ರಿಗೆ ನೀಡುತ್ತದೆ. ಈ ಮೌಲ್ಯಗಳ ಕಾರಣದಿಂದಲೇ ಭಾರತೀಯ ಸೇನಾಪಡೆ ಗ್ಲೋಬಲ್‌ ಫೈರ್‌ ಪವರ್‌ ಇಂಡೆಕ್ಸಿನ ಪಟ್ಟಿಯಲ್ಲಿ, ಒಟ್ಟು 145 ರಾಷ್ಟ್ರಗಳ ಪೈಕಿ ಅಮೆರಿಕ, ರಷ್ಯಾ ಮತ್ತು ಚೀನಾದ ಬಳಿಕ ನಾಲ್ಕನೇ ಅತ್ಯಂತ ಪ್ರಬಲ ಸೇನೆಯಾಗಿ ಹೊರಹೊಮ್ಮಿದೆ. ಈ ಗೌರವ ಜಾಗತಿಕ ಮಟ್ಟದಲ್ಲಿ ಭಾರತೀಯ ಸೇನೆಯ ಶಕ್ತಿ ಮತ್ತು ಸಾಮರ್ಥ್ಯಗಳನ್ನು ತೋರಿಸುತ್ತದೆ.

2024ರಲ್ಲಿ, ಭಾರತೀಯ ಸೇನೆ ಹೆಚ್ಚು ಆಧುನಿಕ ಸೇನೆಯಾಗುವ ಗುರಿ ಹೊಂದಿದ್ದು, ಈ ವರ್ಷವನ್ನು “ತಂತ್ರಜ್ಞಾನದ ವರ್ಷ’ ಎಂದು ಕರೆದಿದೆ. ಭಾರತೀಯ ಸೇನೆ ಈ ವರ್ಷ ಪದಾತಿ ದಳ, ಆರ್ಟಿಲರಿ ಮತ್ತು ಶಸ್ತ್ರಸಜ್ಜಿತ ದಳಗಳಲ್ಲಿ ಡ್ರೋನ್‌ ಮತ್ತು ಆ್ಯಂಟಿ ಡ್ರೋನ್‌ ವ್ಯವಸ್ಥೆಗಳನ್ನು ಬಳಸಲು ಹೊಸ ಕಾರ್ಯತಂತ್ರವನ್ನು ಪರಿಚಯಿಸುವ ಗುರಿ ಹೊಂದಿದೆ. ಅದರೊಡನೆ, ಭಾರತೀಯ ಸೇನೆ ಕಮಾಂಡ್‌ ಸೈಬರ್‌ ಆಪರೇಶನ್ಸ್‌ ಆ್ಯಂಡ್‌ ಸಪೋರ್ಟ್‌ ವಿಂಗ್ಸ್‌ (ಸಿಸಿಒಎಸ್‌ಡಬ್ಲ್ಯು) ಅನ್ನು ಸ್ಥಾಪಿಸಲಿದ್ದು, ಪ್ರಸ್ತುತ ಹಿಂದುಳಿದಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಮರ್ಥ್ಯ ವೃದ್ಧಿಸಲು ಕಾರ್ಯಾಚರಿಸಲಿದೆ.

Advertisement

2023ನೇ ವರ್ಷವನ್ನು “ಬದಲಾವಣೆಯ ವರ್ಷ’ ಎಂದು ಘೋಷಿಸಿದ ಬಳಿಕ ಭಾರತೀಯ ಸೇನೆ ತನ್ನ ವಿಧಾನವನ್ನು ಸಾಕಷ್ಟು ಬದಲಾಯಿಸಿಕೊಂಡಿದೆ. ಈ ಬದಲಾವಣೆಗಳಲ್ಲಿ ಆರ್ಟಿಲರಿ ಅಭಿವೃದ್ಧಿ, ಅಗ್ನಿವೀರ್‌ ಯೋಜನೆಯಡಿ ಹೊಸ ಯೋಧರ ನೇಮಕ, ಕೆಲವು ವಿಭಾಗಗಳ ಗಾತ್ರವನ್ನು ಕಡಿಮೆಗೊಳಿಸುವುದು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸುವುದು ಸೇರಿವೆ. ಜನವರಿ 15ರ ಸೇನಾ ದಿನಾಚರಣೆಗೆ ಪೂರ್ವಭಾವಿಯಾಗಿ ಮಾತನಾಡಿದ ಭಾರತೀಯ ಸೇನಾ ಮುಖ್ಯಸ್ಥರಾದ ಜನರಲ್‌ ಮನೋಜ್‌ ಪಾಂಡೆಯವರು ಸೇನೆ ಹೊಸ ಆಲೋಚನೆಗಳು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ, ಅಭಿವೃದ್ಧಿ ಹೊಂದುವ ಗುರಿ ಇಟ್ಟುಕೊಂಡಿದೆ ಎಂದಿದ್ದಾರೆ. ಅವರು ಭಾರತೀಯ ಸೇನೆಯನ್ನು ಹೆಚ್ಚು ಆಧುನಿಕ ಮತ್ತು ಕ್ಷಿಪ್ರವಾಗಿ ಪ್ರತಿಕ್ರಿಯಿಸುವ ಪಡೆಯನ್ನಾಗಿಸುವ ಮತ್ತು ದೇಶೀಯವಾಗಿ ನಿರ್ಮಿಸಿರುವ ಆಯುಧಗಳು ಮತ್ತು ತಂತ್ರಜ್ಞಾನಗಳನ್ನು ಬಳಸುವ ಗುರಿ ಹೊಂದಿರುವುದಾಗಿ ಘೋಷಿಸಿದ್ದಾರೆ.

ಜನರಲ್‌ ಮನೋಜ್‌ ಪಾಂಡೆಯವರು ಮಹತ್ವದ ಬದಲಾವಣೆಗಳನ್ನು ತರುವಲ್ಲಿ ತಂತ್ರಜ್ಞಾನದ ಪಾತ್ರವನ್ನು ವಿವರಿಸಿದ್ದಾರೆ. ಅವರು ಆಧುನಿಕ ತಂತ್ರಜ್ಞಾನವನ್ನು ಬಳಸುವ ಕುರಿತು ಭಾರತೀಯ ಸೇನೆಯ ನಿರ್ಧಾರ ಹಲವು ಬದಲಾವಣೆಗಳನ್ನು ಸಾಧಿಸಲು ಮಹತ್ವದ ಅಂಶವಾಗಿದ್ದು, ಕಾರ್ಯಾಚರಣಾ ಮತ್ತು ಸಾಗಾಣಿಕಾ ಅಗತ್ಯಗಳಿಗೆ ಬೇಕಾದ ಪ್ರಾವೀಣ್ಯತೆ ಒದಗಿಸುತ್ತದೆ ಎಂದಿದ್ದಾರೆ. ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು, ಭಾರತೀಯ ಸೇನೆ ಭಾರತದ ರಕ್ಷಣಾ ಉದ್ಯಮದೊಡನೆ ಜೊತೆಯಾಗಿ ಕಾರ್ಯಾಚರಿಸಲಿದೆ ಎಂದಿದ್ದಾರೆ.

ಜನರಲ್‌ ಮನೋಜ್‌ ಪಾಂಡೆಯವರು ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಮಿಲಿಟರಿ ಸಾಮರ್ಥ್ಯ ನಿರ್ವಹಿಸುವ ಪ್ರಮುಖ ಪಾತ್ರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಅವರು ಭಾರತೀಯ ಸೇನಾಪಡೆಗಳು ದೇಶದಲ್ಲಿ ಸ್ಥಿರವಾದ, ಸುರಕ್ಷಿತವಾದ ವಾತಾವರಣ ರೂಪಿಸಲು ಬದ್ಧವಾಗಿವೆ ಎಂದಿದ್ದಾರೆ.

ಭಾರತೀಯ ಸೇನಾಪಡೆಯ ತಂತ್ರಜ್ಞಾನದ ಪ್ರಯತ್ನಗಳಲ್ಲಿ ಸೈಬರ್‌ ಸಾಮರ್ಥ್ಯಕ್ಕೆ ಸಂಬಂಧಿಸಿದ ಯೋಜನೆಗಳು ಮಹತ್ವದ್ದಾಗಿವೆ. ಜನರಲ್‌ ಮನೋಜ್‌ ಪಾಂಡೆಯವರು ಸೇನಾ ಸಿಬ್ಬಂದಿಗಳಿಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲು ಮತ್ತು ಸೈಬರ್‌ ಸ್ಪೇಸ್‌ ಅನ್ನು ಸಮರ್ಪಕವಾಗಿ ಉಪಯೋಗಿಸಲು ತರಬೇತಿ ನೀಡಲಾಗುತ್ತಿದೆ ಎಂದಿದ್ದಾರೆ. ಇದಕ್ಕಾಗಿ ವಿವಿಧ ಪ್ರಕ್ರಿಯೆಗಳು, ನಿಯಮಗಳು ಮತ್ತು ತಾಂತ್ರಿಕ ವಿಧಾನಗಳನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯಲ್ಲಿ ಪ್ರಾಜೆಕ್ಟ್ ಸಂಭವ್‌ ಮಹತ್ವದ್ದಾಗಿದ್ದು, ಅತ್ಯಾಧುನಿಕ 5ಜಿ ತಂತ್ರಜ್ಞಾನದಡಿ ಕಾರ್ಯಾಚರಿಸುವ ಅತ್ಯಂತ ಸುರಕ್ಷಿತ ಮೊಬೈಲ್‌ ವಾತಾವರಣವನ್ನು ಒದಗಿಸುತ್ತದೆ.

ಗಿರೀಶ್‌ ಲಿಂಗಣ್ಣ
ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Advertisement

Udayavani is now on Telegram. Click here to join our channel and stay updated with the latest news.

Next