ಗುವಾಹಟಿ: ಸೀನಿಯರ್ ಆಟಗಾರರ ಆಗಮನದಿಂದ ಬಲ ತುಂಬಿಕೊಂಡಿರುವ ಟೀಂ ಇಂಡಿಯಾ ಇಂದು ಲಂಕಾ ವಿರುದ್ಧದ ಏಕದಿನ ಸರಣಿಗೆ ಅಣಿಯಾಗಿದೆ. ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದೆ.
2023ರ ಏಕದಿನ ವಿಶ್ವಕಪ್ ಗೆ ಈ ಸರಣಿಯಿಂದ ಭಾರತ ತಂಡದ ತಯಾರಿ ನಡೆಸುತ್ತಿದೆ. ಟಿ20 ಸರಣಿಗೆ ವಿಶ್ರಾಂತಿ ಪಡೆದಿದ್ದ ನಾಯಕ ರೋಹಿತ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಇದೀಗ ಮತ್ತೆ ತಂಡಕ್ಕೆ ಬಂದಿದ್ದಾರೆ. ಇದು ತಂಡಕ್ಕೆ ಹೆಚ್ಚಿನ ಬಲ ನೀಡಿದೆ.
ಕಳೆದ ಬಾಂಗ್ಲಾ ಸರಣಿಯಲ್ಲಿ ದ್ವಿಶತಕ ಸಿಡಿಸಿದ್ದ ಇಶಾನ್ ಕಿಶನ್ ಇಂದು ಆಡುವ ಬಳಗದಲ್ಲಿ ಸ್ಥಾನ ಪಡೆದಿಲ್ಲ. ಗಿಲ್ ಜೊತೆ ಕಣಕ್ಕಿಳಿಯುವ ಬಗ್ಗೆ ನಾಯಕ ರೋಹಿತ್ ಸೋಮವಾರವೇ ತಿಳಿಸಿದ್ದರು. ಹೀಗಾಗಿ ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಜೊತೆ ವಿಕೆಟ್ ಕೀಪಿಂಗ್ ಕೂಡಾ ಮಾಡಲಿದ್ದಾರೆ.
ಟಿ20 ಸರಣಿಯಲ್ಲಿ ಉತ್ತಮ ಫೈಟ್ ನೀಡಿದ್ದ ಲಂಕಾ ಏಕದಿನ ಸ್ಪೆಷಲಿಸ್ಟ್ ಗಳನ್ನು ಕಟ್ಟಿಕೊಂಡು ಬಂದಿದೆ. ಭಾರತದಂತೆ ಅಗ್ರ ಕ್ರಮಾಂಕದ ಬ್ಯಾಟರ್ ಗಳ ಫಾರ್ಮ್ ಚಿಂತೆ ಅವರಿಗಿಲ್ಲ. ಕೆಳ ಕ್ರಮಾಂಕದ ತನಕ ಮುನ್ನುಗ್ಗಿ ಬೀಸಬಲ್ಲವರೇ ತುಂಬಿಕೊಂಡಿದ್ದಾರೆ. ಕಳೆದ ವರ್ಷದ ಟಾಪ್ ಸ್ಕೋರರ್ ನಿಸ್ಸಂಕ (11 ಪಂದ್ಯ, 491 ರನ್), ಬಿಗ್ ಹಿಟ್ಟಿಂಗ್ ಆಲ್ರೌಂಡರ್ ಶಣಕ, 53.25ರಷ್ಟು ಸರಾಸರಿ ಹೊಂದಿರುವ ಅಸಲಂಕ, 2022ರಲ್ಲಿ ಅತ್ಯಧಿಕ 14 ವಿಕೆಟ್ ಉರುಳಿಸಿರುವ ಲೆಗ್ಸ್ಪಿನ್ನರ್ ಜೆಫ್ರಿ ವಾಂಡರ್ಸೆ, ಹಸರಂಗ, ಕರುಣಾರತ್ನೆ, ಧನಂಜಯ ಡಿ ಸಿಲ್ವ ಅವರನ್ನೊಳಗೊಂಡ ಶ್ರೀಲಂಕಾ ಹೆಚ್ಚು ಬಲಿಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇವರೂ ಅಷ್ಟೇ, ನಿಂತು ಆಡಬೇಕಾದುದು ಅಗತ್ಯ!
ತಂಡಗಳು
ಭಾರತ:ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್.
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿ.ಕೀ), ಅವಿಷ್ಕ ಫೆರ್ನಾಂಡೋ, ಧನಂಜಯ ಡಿ ಸಿಲ್ವ, ಚರಿತ್ ಅಸಲಂಕ, ದಸುನ್ ಶನಕ (ನಾ), ವನಿಂದು ಹಸರಂಗ, ಚಾಮಿಕ ಕರುಣಾರತ್ನ, ದುನಿತ್ ವೆಲ್ಲಲಾಗೆ, ಕಸುನ್ ರಜಿತ, ದಿಲ್ಶಾನ್ ಮಧುಶನಕ.