Advertisement

ಏಕದಿನ ಸರಣಿಯೂ ನಮ್ಮದಾಗುವ ಹೊತ್ತು…

08:30 PM Mar 25, 2021 | Team Udayavani |

ಪುಣೆ: ವಿಶ್ವ ಚಾಂಪಿಯನ್ನರು  ಎಂಬ ಇಂಗ್ಲೆಂಡಿನ  ಖ್ಯಾತಿಗೆ ಭಾರತ ಈಗಾಗಲೇ ಧಕ್ಕೆ ತಂದಿದೆ. ಪ್ರಸಕ್ತ ಪ್ರವಾಸದಲ್ಲಿ ಸರಣಿಯ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡುತ್ತಿದ್ದ ಆಂಗ್ಲರಿಗೆ ಏಕದಿನದಲ್ಲಿ ಹಿನ್ನಡೆಯಾಗಿದೆ. ಮೊದಲ ಮುಖಾ ಮುಖೀಯಲ್ಲಿ ಕೊಹ್ಲಿ ಪಡೆ ಭರ್ಜರಿ ಜಯ ಸಾಧಿಸಿ ಓಟ ಬೆಳೆಸಿದೆ. ಸರಣಿಯಲ್ಲಿ ಮೂರೇ ಪಂದ್ಯಗಳಿರುವುದರಿಂದ ಶುಕ್ರವಾರದ ಸ್ಪರ್ಧೆಯೇ ನಿರ್ಣಾಯಕವಾಗಲಿದೆ. ಇಂಗ್ಲೆಂಡ್‌ ಸಹಜವಾಗಿಯೇ ಒತ್ತಡಕ್ಕೆ ಸಿಲುಕಿದೆ.

Advertisement

ಇತ್ತ ಭಾರತದ ಸ್ಥಿತಿ ಮಜಬೂತಾಗಿದೆ ಎಂದೇ ಹೇಳಬೇಕು. ಟೆಸ್ಟ್‌ ಹಾಗೂ ಟಿ20 ಸರಣಿಗಳೆರಡನ್ನೂ ವಶಪಡಿಸಿಕೊಂಡ ಕೊಹ್ಲಿ ಬಳಗಕ್ಕೀಗ ಏಕದಿನ ಸರಣಿ ಕೂಡ ಎಟಕುವ ರೀತಿಯಲ್ಲಿದೆ. ಶುಕ್ರವಾರವೇ ಗೆದ್ದುಬಿಟ್ಟರೆ ಅಲ್ಲಿಗೆ ಸರಣಿಯೇ ಇತ್ಯರ್ಥವಾಗಲಿದೆ.

ಸಿಡಿಯುತ್ತಿವೆ ಯಂಗ್‌ ಗನ್ಸ್‌ :

ಅವಕಾಶ ಪಡೆದ ಕಿರಿಯ ಕ್ರಿಕೆಟಿಗರೆಲ್ಲ ಯಶಸ್ಸು ಬಾಚುತ್ತಿರುವುದು ಟೀಮ್‌ ಇಂಡಿಯಾದ ಇತ್ತೀಚಿನ ದಿನಗಳ ವೈಶಿಷ್ಟ್ಯವೆನಿಸಿದೆ. ಇದಕ್ಕೆ ಮೊದಲ ಏಕದಿನ ಪಂದ್ಯ ತಾಜಾ ನಿದರ್ಶನ ಒದಗಿಸಿತು. ಚೊಚ್ಚಲ ಪಂದ್ಯಾವಡಿದ ಪ್ರಸಿದ್ಧ್ ಕೃಷ್ಣ, ಕೃಣಾಲ್‌ ಪಾಂಡ್ಯ ಇಬ್ಬರೂ ಗೆಲುವಿನ ಹೀರೋಗಳಾಗಿ ಮೆರೆದಾಡಿದರು. ಇಬ್ಬರಿಂದಲೂ ಪದಾರ್ಪಣ ಪಂದ್ಯದಲ್ಲೇ ದಾಖಲೆಗಳು ನಿರ್ಮಾಣಗೊಂಡವು. ಹೊಸಬರ ಅಬ್ಬರಕ್ಕೆ ಆಂಗ್ಲರ ಪಡೆ ಬೆಚ್ಚಿಬಿತ್ತು!

ಶುಕ್ರವಾರವೂ ಭಾರತ ಇದೇ ಲಯವನ್ನು ಕಾಯ್ದುಕೊಳ್ಳುವ ಎಲ್ಲ ಸಾಧ್ಯತೆ ಇದೆ. ಆದರೆ ಗಾಯಾಳಾಗಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಸೇವೆ ಲಭಿಸುತ್ತಿಲ್ಲ. ಈ ಗಾಯದ ಸಮಸ್ಯೆ ವೈಯಕ್ತಿಕ ವಾಗಿ ಅಯ್ಯರ್‌ಗೆ ಚಿಂತೆ ತಂದರೂ ತಂಡಕ್ಕೇನೂ ಆತಂಕ ಮೂಡಿಸಿಲ್ಲ. ಕಾರಣ, ಈ ಸ್ಥಾನಕ್ಕೆ ಲಗ್ಗೆ ಇಡಲು ಸಮರ್ಥ ಆಟಗಾರರು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ “ಭಾರತದ 360 ಡಿಗ್ರಿ ಬ್ಯಾಟ್ಸ್‌ಮನ್‌’ ಎಂಬ ಹೊಗಳಿಕೆಗೆ ಪಾತ್ರರಾಗಿರುವ ಸೂರ್ಯಕುಮಾರ್‌ ಯಾದವ್‌ ಈ ಸ್ಥಾನ ತುಂಬುವುದರಲ್ಲಿ ಅನುಮಾನವಿಲ್ಲ.

Advertisement

ಇಲ್ಲಿ ರಿಷಭ್‌ ಪಂತ್‌ ಹೆಸರು ಕೂಡ ಕೇಳಿಬರುತ್ತಿದೆ. ಆದರೆ ಕೆ.ಎಲ್‌. ರಾಹುಲ್‌ ಕೀಪಿಂಗ್‌ ನಡೆಸುವುದರಿಂದ ಹಾಗೂ ಬ್ಯಾಟಿಂಗ್‌ ಲಯಕ್ಕೆ ಮರಳಿರುವುದರಿಂದ ಪಂತ್‌ ಅವಕಾಶ ಪಡೆಯುವುದು ಅನುಮಾನ.

ರೋಹಿತ್‌ ಶರ್ಮ ಚೇತರಿಕೆ :

ಆರಂಭಕಾರ ರೋಹಿತ್‌ ಶರ್ಮ ಮಣಿ ಗಂಟಿನ ನೋವಿಗೆ ಸಿಲುಕಿದ್ದರೂ  ಪಂದ್ಯದ ಹೊತ್ತಿಗೆ ಚೇತರಿಸಿ ಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಅಕಸ್ಮಾತ್‌ ಅವರು ಆಡದೇ ಹೊರಗುಳಿದರೆ ಆಗ ಶುಭಮನ್‌ ಗಿಲ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ರಾಹುಲ್‌ ಅವರಂತೆ ಶಿಖರ್‌ ಧವನ್‌ ಕೂಡ ಫಾರ್ಮ್ಗೆ ಮರಳಿದ್ದರಿಂದ ಭಾರತದ ಓಪನಿಂಗ್‌ ಸಮಸ್ಯೆಗೊಂದು ಪರಿಹಾರ ಸಿಕ್ಕಿದೆ ಎನ್ನಲಡ್ಡಿಯಿಲ್ಲ.

ಕುಲದೀಪ್‌ ಬದಲು ಚಹಲ್? :

ಭಾರತದ ಬೌಲಿಂಗ್‌ನಲ್ಲಿ ಭಾರೀ ಸ್ಪರ್ಧೆ ಇದೆ. ಸದ್ಯ ವೇಗದ ಬೌಲಿಂಗ್‌ ವಿಭಾಗ ಯಥಾವತ್‌ ಮುಂದುವರಿದೀತು. ಇಲ್ಲವೇ ಸತತವಾಗಿ ಆಡುತ್ತಲೇ ಇರುವ ಶಾರ್ದೂಲ್‌ ಠಾಕೂರ್‌ ಅವರಿಗೆ ವಿಶ್ರಾಂತಿ ಕೊಟ್ಟು ನಟರಾಜನ್‌ ಅಥವಾ ಸಿರಾಜ್‌ ಅವರನ್ನು ಆಡಿಸುವ ಸಾಧ್ಯತೆ ಇದೆ. ಚೈನಾಮನ್‌ ಕುಲದೀಪ್‌ ಯಾದವ್‌ 68 ರನ್‌ ಬಿಟ್ಟುಕೊಟ್ಟ ಕಾರಣ ಈ ಸ್ಥಾನ ಚಹಲ್‌ ಪಾಲಾಗಲೂಬಹುದು.

ಇಂಗ್ಲೆಂಡಿಗೆ ಮಿಡ್ಲ್ ಆರ್ಡರ್‌ ಸಮಸ್ಯೆ :

ವರ್ಲ್ಡ್ ಚಾಂಪಿಯನ್‌ ಇಂಗ್ಲೆಂಡ್‌ ಅತ್ಯಂತ ಬಲಾಡ್ಯ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡ ಎಂಬುದಲ್ಲಿ ಎರಡು ಮಾತಿಲ್ಲ. ಆದರೆ ಅವರ ಬ್ಯಾಟಿಂಗ್‌ ಅಬ್ಬರವೆಲ್ಲ ಓಪನಿಂಗಿಗಷ್ಟೇ ಸೀಮಿತಗೊಂಡಿರುವುದು ವಿಪರ್ಯಾಸ. ಬೇರ್‌ಸ್ಟೊ-ರಾಯ್‌ ಅಬ್ಬರದ ಆರಂಭ ಒದಗಿಸಿ ಬೇರ್ಪಟ್ಟ ಬಳಿಕ ಮಧ್ಯಮ ಕ್ರಮಾಂಕ ಬಡಬಡನೆ ಉದುರುತ್ತಿದೆ. ಮೊದಲ ಪಂದ್ಯದಲ್ಲಿ ನೋಲಾಸ್‌ 135ರಲ್ಲಿದ್ದ ತಂಡ 251ಕ್ಕೆ ಕುಸಿದದ್ದೇ ಇದಕ್ಕೆ ಸಾಕ್ಷಿ. ಅಲ್ಲಿ ಸ್ಟೋಕ್ಸ್‌ ಅವರನ್ನು ವನ್‌ಡೌನ್‌ನಲ್ಲಿ ಕಳಿಸಿದ್ದು ಕೂಡ ಬ್ಲಿಂಡರ್‌ ಎನಿಸಿತು.

ಮಾರ್ಗನ್‌, ಬಟ್ಲರ್‌, ಬಿಲ್ಲಿಂಗ್ಸ್‌, ಅಲಿ, ಕರನ್‌ ಅವರ ಬ್ಯಾಟಿಂಗ್‌ ಚಾಂಪಿಯನ್ಸ್‌ ಮಟ್ಟದಲ್ಲಿಲ್ಲ. ಅದರಲ್ಲೂ ನಾಯಕ ಮಾರ್ಗನ್‌ ಕೈಬೆರಳಿಗೆ 4 ಹೊಲಿಗೆ ಹಾಕಿಸಿಕೊಂಡು ನಿರ್ಣಾಯಕ ಪಂದ್ಯದಿಂದ ಹೊರಗುಳಿಯುವ ಸಂಕಟಕ್ಕೆ ಸಿಲುಕಿದ್ದಾರೆ. ಇಂಗ್ಲೆಂಡಿಗೆ ಗಾಯದ ಮೇಲೆ ಬರೆ ಬಿದ್ದಿದೆ!

ಸಂಭಾವ್ಯ ತಂಡಗಳು :

ಭಾರತ: ರೋಹಿತ್‌ ಶರ್ಮ/ಶುಭಮನ್‌ ಗಿಲ್‌, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಕೆ.ಎಲ್‌. ರಾಹುಲ್‌, ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ಕೃಣಾಲ್‌ ಪಾಂಡ್ಯ, ಶಾರ್ದೂಲ್‌ ಠಾಕೂರ್‌, ಭುವನೇಶ್ವರ್‌ ಕುಮಾರ್‌, ಪ್ರಸಿದ್ಧ್ ಕೃಷ್ಣ, ಕುಲದೀಪ್‌ ಯಾದವ್‌/ಯಜುವೇಂದ್ರ ಚಹಲ್‌.

ಇಂಗ್ಲೆಂಡ್‌: ಜಾಸನ್‌ ರಾಯ್‌, ಜಾನಿ ಬೇರ್‌ಸ್ಟೊ, ಡೇವಿಡ್‌ ಮಲಾನ್‌, ಜಾಸ್‌ ಬಟ್ಲರ್‌ (ನಾಯಕ), ಬೆನ್‌ ಸ್ಟೋಕ್ಸ್‌, ಲಿಯಮ್‌ ಲಿವಿಂಗ್‌ಸ್ಟೋನ್‌, ಮೊಯಿನ್‌ ಅಲಿ, ಸ್ಯಾಮ್‌ ಕರನ್‌, ಟಾಮ್‌ ಕರನ್‌, ಆದಿಲ್‌ ರಶೀದ್‌, ಮಾರ್ಕ್‌ ವುಡ್‌.

 

ಆರಂಭ: 1.30  ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next