Advertisement

ಛಲವಿದ್ದರೆ ಗೆಲುವು ಕಷ್ಟವಲ್ಲ, ಆದರೆ…

12:00 PM Jan 17, 2018 | |

ಸೆಂಚುರಿಯನ್‌: ಮೊದಲನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಗೆಲ್ಲುವ ಅಪೂರ್ವ ಅವಕಾಶವಿತ್ತಾದರೂ ಬ್ಯಾಟ್ಸ್‌ಮನ್‌ಗಳು ಅದನ್ನು ಕೈಚೆಲ್ಲಿದ್ದರು. 2ನೇ ಟೆಸ್ಟ್‌ನಲ್ಲೂ ಬರೀ 287 ರನ್‌ ಗಳನ್ನು ಬೆನ್ನತ್ತಬೇಕಾದ ಗುರಿಯಿದ್ದರೂ ಭಾರತೀಯರು ಸೋಲುವ ಸಂಭಾವ್ಯತೆಯೇ ಹೆಚ್ಚಾಗಿದೆ. ಗೆಲ್ಲುವ ಆಸೆಯೇ ಇಲ್ಲದಿರುವವರಂತೆ ವಿಕೆಟ್‌ ಕೈಚೆಲ್ಲಿರುವ ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್‌ಗೆ ತೆರಳಿದ್ದಾರೆ.

Advertisement

ಪರಿಸ್ಥಿತಿ 5ನೇ ದಿನವೂ ಹೀಗೆಯೇ ಮುಂದುವರಿದರೆ ಭಾರತೀಯರು ಸೋಲುತ್ತಾರೆಂದು ಹೇಳಲು ಯಾವುದೇ ದಿವ್ಯದೃಷ್ಟಿ ಇರುವ ವ್ಯಕ್ತಿ ಬೇಕಾಗುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಭಾರತ ಮೂವರು ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಮುರಳಿ ವಿಜಯ್‌, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ ವಾಪಸ್‌ ತೆರಳಿದ್ದಾರೆ. ಇವರ ಪತನ ಪ್ರವಾಸಿ ತಂಡಕ್ಕೆ ಭಾರೀ ಒತ್ತಡ ಸೃಷ್ಟಿಸಿರುವುದು ಸುಳ್ಳಲ್ಲ.

ಇನ್ನುಳಿದಿರುವ ಬ್ಯಾಟ್ಸ್‌ಮನ್‌ಗಳು ಅದನ್ನು ನಿಭಾಯಿಸುತ್ತಾರಾ ಎನ್ನುವುದಷ್ಟೇ ಇಲ್ಲಿನ ಕುತೂಹಲ. 3ನೇ ದಿನ 90 ರನ್‌ಗೆ 2 ವಿಕೆಟ್‌ ಕಳೆದುಕೊಂಡಿದ್ದ ಆಫ್ರಿಕಾ 4ನೇ ದಿನದ ಮುಕ್ಕಾಲು ಭಾಗ ಕಳೆಯುವ ವೇಳೆಗೆ 258 ರನ್‌ಗೆ ಆಲೌಟಾಯಿತು. ಮೊದಲ ಇನಿಂಗ್ಸ್‌ ಮುನ್ನಡೆಯೂ ಸೇರಿದರೆ ಕೇವಲ 287 ರನ್‌ ಗುರಿಯನ್ನು ಭಾರತಕ್ಕೆ  ನೀಡಿತು. ಇದು ಮೇಲ್ನೋಟಕ್ಕೆ ಸುಲಭದ ಸವಾಲಿನಂತೆ ಕಂಡು ಬಂದಿದ್ದರೂ ಪರಿಸ್ಥಿತಿಯ ನೈಜತೆ ಅರ್ಥವಾಗಿದ್ದು ಭಾರತ ಬ್ಯಾಟಿಂಗ್‌ ಶುರು ಮಾಡಿದಾಗಲೇ. ತಂಡದ ಮೊತ್ತ 11 ರನ್‌ಗಳಾಗಿದ್ದಾಗ ಮುರಳಿ ವಿಜಯ್‌ ಕ್ಯಾಗಿಸೊ ರಬಾಡ ಬೌಲಿಂಗ್‌ನಲ್ಲಿ ಬೌಲ್ಡ್‌ ಆಗಿ ಹೊರ ನಡೆದರು. ಆಗ ಅವರ ಗಳಿಕೆ 9. ಮುಂದೆ ಚೇತೇಶ್ವರ್‌ ಪೂಜಾರ ಅವರು ಕೆ.ಎಲ್‌. ರಾಹುಲ್‌ರನ್ನು ಕೂಡಿಕೊಂಡರು. ಈ ಇನಿಂಗ್ಸ್‌ನಲ್ಲಾದರೂ ರಾಹುಲ್‌ ಮಿಂಚಿ ಸ್ಥಾನ ಭದ್ರ ಮಾಡಿಕೊಳ್ಳಬಹುದು ಎಂಬ ನಿರೀಕ್ಷೆ ಹುಸಿಯಾಯಿತು. ಅವರು ಎನ್‌ಗಿಡಿ ಬೌಲಿಂಗ್‌ ನಲ್ಲಿ ಕೇಶವ ಮಹಾರಾಜ್‌ಗೆ ಕ್ಯಾಚ್‌ ನೀಡಿ ಹೊರಹೋದರು. ಆಗ ಅವರ ಮುಖದಲ್ಲಿ ಬೇಸರ ಎದ್ದೆದ್ದು ಕುಣಿಯುತ್ತಿತ್ತು. ಅಷ್ಟರಲ್ಲಿ ಪರಿಸ್ಥಿತಿ ಕೈಮೀರಿತ್ತು.

ಆದರೂ ನಾಯಕ ಕೊಹ್ಲಿ ಕ್ರೀಸ್‌ನಲ್ಲಿದ್ದರಿಂದ ಪರಸ್ಥಿತಿ ಭಾರತದ ಪರವಾಗಿಯೇ ಇತ್ತು. ಮೊದಲ ಇನಿಂಗ್ಸ್‌ನಲ್ಲಿ ಕೊಹ್ಲಿ ಹೋರಾಟಕಾರಿ 153 ರನ್‌ ಗಳಿಸಿದ್ದನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವೇ? ಆದರೆ ಕೊಹ್ಲಿ ಅದನ್ನು ಅಷ್ಟೇ ಬೇಗ ಹುಸಿಗೊಳಿಸಿದರು. ಎನ್‌ಗಿಡಿಯವರ ಅತ್ಯಂತ ನಿಖರವಾದ ಎಸೆತವನ್ನು ಎದುರಿಸುವಾಗ ಅವರು ಸ್ವಲ್ಪ ಎಡವಿದರು. ಅದು ನೇರವಾಗಿ ಪ್ಯಾಡ್‌ಗೆ
ಬಡಿದು ಎಲ್ಬಿ ಆಗದಿರಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣ ನಿರ್ಮಿಸಿತು. ಅದು ಹೌದೆಂದು ರಿಪ್ಲೇಯಲ್ಲೂ ಸಾಬೀತಾಯಿತು. 5 ರನ್‌ಗೆ ಕೊಹ್ಲಿ ತಲೆ ಮೇಲೆ ಬ್ಯಾಟ್‌ ಇಟ್ಟುಕೊಂಡು ಹಿಮ್ಮರಳಿದರು.

ಮುಂದೆ ಒಟ್ಟಾದ ಚೇತೇಶ್ವರ್‌ ಪೂಜಾರ ಮತ್ತು ಪಾರ್ಥಿವ್‌ ಪಟೇಲ್‌ 4ನೇ ದಿನ ಅಂತ್ಯವಾಗುವರೆಗೆ ಉಳಿದುಕೊಂಡು ಹೆಚ್ಚಿನ ಹಾನಿಯಾಗದಂತೆ ನೋಡಿಕೊಂಡಿದ್ದಾರೆ. 5ನೇ ದಿನ ಅವರ ಬ್ಯಾಟಿಂಗ್‌ ಹೇಗಿರುತ್ತದೆ, ಇಡೀ ದಿನವನ್ನು ನಿಭಾಯಿಸುತ್ತಾರಾ,
ಪಂದ್ಯವನ್ನು ಗೆಲ್ಲುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಸದ್ಯದ ಮಟ್ಟಿಗೆ ನೋಡಿದರೆ ಭಾರತಕ್ಕೆ ಪಂದ್ಯವನ್ನು ಗೆಲ್ಲುವುದು, ಇಲ್ಲವೇ ಸೋಲುವುದು ಇವೆರಡರಲ್ಲಿ ಒಂದು ಮಾತ್ರ ಸಾಧ್ಯ. ಡ್ರಾ ಸಾಧ್ಯತೆ ಮಳೆಯ ಬೀಳದ ಹೊರತು ಕಡಿಮೆಯೇ ಇದೆ. ಆಫ್ರಿಕಾದ
ವೇಗದ ಪಿಚ್‌ನಲ್ಲಿ ದಿನವಿಡೀ ನಿಂತರೆ ಭಾರತ ಗೆಲ್ಲುವುದು ಕಷ್ಟವಲ್ಲ. ಎದುರಿರುವ ಗುರಿ ಸಣ್ಣದಾಗಿರುವುದರಿಂದ ದಿನವಿಡೀ ಆಡಿದರೆ ಗೆಲುವು ಸಹಜವಾಗಿಯೇ ಒಲಿಯುತ್ತದೆ. ಇಲ್ಲಿ ಡ್ರಾ ಪ್ರಮೇಯವೇ ಬರುವುದಿಲ್ಲ. ಪ್ರಶ್ನೆಯಿರುವುದು ಅಂಕಣಕ್ಕೆ ಕಚ್ಚಿಕೊಳ್ಳುವುದರಲ್ಲಿ, ಇದು ಮಾತ್ರ ಬಹಳ ಕಷ್ಟದ ಕೆಲಸ! 

Advertisement

ಆಫ್ರಿಕಾ ಆಲೌಟ್‌: 3ನೇ ದಿನ ಸಂಜೆ ಪಟಪಟನೆ 2 ವಿಕೆಟ್‌ ಕಳೆದುಕೊಂಡಿದ್ದ ಆಫ್ರಿಕಾ 4ನೇ ದಿನ ಬೇಗ ಉರುಳುತ್ತೆ ಎಂಬ ಭಾರತೀಯರ ನಿರೀಕ್ಷೆ ಹುಸಿಯಾಯಿತು. ಆದರೂ ಅವರ ಇನಿಂಗ್ಸ್‌ 258ರವರೆಗೆ ಮಾತ್ರ ಬೆಳೆಯಿತು. ಮೂವರು ವೇಗಿಗಳಾದ ಇಶಾಂತ್‌ ಶರ್ಮ, ಮೊಹಮ್ಮದ್‌ ಶಮಿ, ಜಸಿøàತ್‌ ಬುಮ್ರಾ ಎದುರಾಳಿಗಳನ್ನು ಕಟ್ಟಿ ಹಾಕಿದರು. ಆಗಾಗ ವಿಕೆಟ್‌ ಉದುರಿಸುತ್ತಾ
ಸಾಗಿದರು. ಪರಿಣಾಮ ಆಫ್ರಿಕನ್ನರು ನಿರೀಕ್ಷೆಗಿಂತ ಮುಂಚೆಯೇ ತಮ್ಮ ಬ್ಯಾಟಿಂಗ್‌ ಮುಗಿಸಿದರು. ವೇಗ ಮೊಹಮ್ಮದ್‌ ಶಮಿ ಈ ಇನಿಂಗ್ಸ್‌ನಲ್ಲಿ ಬಹಳ ಯಶಸ್ವಿ ಬೌಲರ್‌. ಅವರಿಗೆ 4 ವಿಕೆಟ್‌ ಲಭಿಸಿತು. ನೀಡಿದ ರನ್‌ ಕೇವಲ 49. ಇಶಾಂತ್‌ ಶರ್ಮ 40 ರನ್‌ಗೆ 2 ವಿಕೆಟ್‌ ಕಿತ್ತರು. ಬುಮ್ರಾ 70 ರನ್‌ ನೀಡಿ 3 ವಿಕೆಟ್‌ ಕಿತ್ತರು. ಈ ಮೂವರ ನಿಖರ ದಾಳಿಗೆ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳಲ್ಲಿ ಉತ್ತರ
ಇರಲೇ ಇಲ್ಲ. ದುರ್ದೈವವೆಂದರೆ ಭಾರತದ ಬ್ಯಾಟ್ಸ್‌ಮನ್‌ಗಳಿಗೂ 4ನೇ ದಿನದಂತ್ಯಕ್ಕೆ ಇಂತಹದ್ದೇ ಸ್ಥಿತಿಯೊದಗಿದ್ದು!

3ನೇ ಟೆಸ್ಟ್‌ಗೆ ಸಹಾ ಇಲ್ಲ: ಕಾರ್ತಿಕ್‌ಗೆ ಕರೆ
ಮಂಡಿ ಸ್ನಾಯು ಸೆಳೆತದಿಂದ ಬಳಲುತ್ತಿರುವ ವಿಕೆಟ್‌ಕೀಪರ್‌ ವೃದ್ಧಿಮಾನ್‌ ಸಹಾ ಅವರು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ
ಮೂರನೇ ಮತ್ತು ಅಂತಿಮ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ದಿನೇಶ್‌ ಕಾರ್ತಿಕ್‌ ಅವರನ್ನು ತಂಡಕ್ಕೆ
ಸೇರಿಸಿಕೊಳ್ಳಲಾಗಿದೆ. ಸದ್ಯ ಸಾಗುತ್ತಿರುವ ದ್ವಿತೀಯ ಟೆಸ್ಟ್‌ನಲ್ಲೂ ಸಹಾ ಆಡುತ್ತಿಲ್ಲ. ಜ.11ರಂದು ಅಭ್ಯಾಸ ನಡೆಸುವಾಗ ಸಹಾ
ಅವರಿಗೆ ಗಾಯವಾಗಿತ್ತು. ಮೂನರೇ ಟೆಸ್ಟ್‌ ಜೊಹಾನ್ಸ್‌ಬರ್ಗ್‌ನಲ್ಲಿ ಜ.24ರಿಂದ ಆರಂಭವಾಗಲಿದೆ. 32ರ ಹರೆಯದ ಕಾರ್ತಿಕ್‌
ಭಾರತ ಪರ 23 ಟೆಸ್ಟ್‌ಗಳಲ್ಲಿ ಆಡಿದ್ದಾರೆ. ಆದರೆ 2010ರಲ್ಲಿ ಅವರು ಈ ಹಿಂದೆ ಟೆಸ್ಟ್‌ನಲ್ಲಿ ಆಡಿದ್ದರು. ಟೆಸ್ಟ್‌ನಲ್ಲಿ ಅವರು 51 ಕ್ಯಾಚ್‌ ಮತ್ತು 5 ಸ್ಟಂಪಿಂಗ್‌ ಮಾಡಿದ್ದಾರೆ.

ಪದೇ ಪದೇ ಅಂಪೈರ್‌ಗೆ ದೂರು: ಕೊಹ್ಲಿಗೆ ದಂಡ
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ದ್ವಿತೀಯ ಟೆಸ್ಟ್‌ನ ಮೂರನೇ ದಿನದ ಆಟದ ವೇಳೆ ಅಂಪೈರ್‌ಗೆ ಪದೇ ಪದೇ ದೂರು ನೀಡಿದ್ದಕ್ಕಾಗಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಗೆ ಪಂದ್ಯ ಸಂಭಾವನೆಯ ಶೇ.25ರಷ್ಟು ದಂಡ ವಿಧಿಸಲಾಗಿದೆ. ದಕ್ಷಿಣ ಆಫ್ರಿಕಾದ ಎರಡನೇ
ಇನಿಂಗ್ಸ್‌ನ 25ನೇ ಓವರ್‌ ವೇಳೆ ಈ ಘಟನೆ ನಡೆದಿದೆ. ಮಳೆ ಸುರಿದ ಕಾರಣ ಮೈದಾನ ಒದ್ದೆಯಾಗಿ ಸಮಸ್ಯೆಯಾಗುತ್ತಿರುವ ಬಗ್ಗೆ ಕೊಹ್ಲಿ ಅವರು ಅಂಪೈರ್‌ ಮೈಕಲ್‌ ಗೋಗ್‌ ಅವರಲ್ಲಿ ಪದೇ ಪದೇ ದೂರಿತ್ತರು. ಈ ಸಂದರ್ಭ ಕೊಹ್ಲಿ ಚೆಂಡನ್ನು ಸಿಟ್ಟಿನಿಂದ ಮೈದಾನದತ್ತ ಎಸೆಯುವ ಮೂಲಕ ಅಸಹನೆಯನ್ನು ತೋರಿಕೊಂಡಿದ್ದರು. ಇದು ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆ
ಎಂದು ಭಾವಿಸಿದ ಐಸಿಸಿ ಕೊಹ್ಲಿ ಅವರಿಗೆ ದಂಡ ವಿಧಿಸಲು ತೀರ್ಮಾನಿಸಿತು.

ಸ್ಕೋರ್‌ಪಟ್ಟಿ 
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್‌    335
ಭಾರತ ಪ್ರಥಮ ಇನ್ನಿಂಗ್ಸ್‌    307

ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್‌
ಐಡನ್‌ ಮಾರ್ಕ್‌ರಮ್‌    ಎಲ್‌ಬಿಡಬ್ಲ್ಯು ಬಿ ಬುಮ್ರಾ    1
ಡೀನ್‌ ಎಲ್ಗರ್‌    ಸಿ ರಾಹುಲ್‌ ಬಿ ಶಮಿ    61
ಹಾಶಿಮ್‌ ಆಮ್ಲ ಎಲ್‌ಬಿಡಬ್ಲ್ಯು ಬಿ ಬುಮ್ರಾ    1
ಎಬಿ ಡಿ’ವಿಲಿಯರ್ ಸಿ ಪಟೇಲ್‌ ಬಿ ಶಮಿ    80 
 ಫಾ ಡು ಪ್ಲೆಸಿಸ್‌    ಸಿ ಮತ್ತು ಬಿ ಬುಮ್ರಾ    48
ಕ್ವಿಂಟನ್‌ ಡಿ ಕಾಕ್‌    ಸಿ ಪಟೇಲ್‌ ಬಿ ಶಮಿ    12
ವೆರ್ನನ್‌ ಫಿಲಾಂಡರ್‌    ಸಿ ವಿಜಯ್‌ ಬಿ ಇಶಾಂತ್‌    26
ಕೇಶವ್‌ ಮಹಾರಾಜ್‌    ಸಿ ಪಟೇಲ್‌ ಬಿ ಇಶಾಂತ್‌    6
ಕಾಗಿಸೊ ರಬಾಡ    ಸಿ ಕೊಹ್ಲಿ ಬಿ ಶಮಿ    4
ಮಾರ್ನೆ ಮಾರ್ಕೆಲ್‌    ಔಟಾಗದೆ    10
ಲುಂಗಿಸಾನಿ ಎನ್‌ಗಿಡಿ    ಸಿ ವಿಜಯ್‌ ಬಿ ಅಶ್ವಿ‌ನ್‌    1

ಇತರ         8
ಒಟ್ಟು  (ಆಲೌಟ್‌)        258
ವಿಕೆಟ್‌ ಪತನ:
1-1, 2-3, 3-144, 4-151, 5-163, 6-209, 7-215, 8-245, 9-245

ಬೌಲಿಂಗ್‌: 
ಆರ್‌. ಅಶ್ವಿ‌ನ್‌        29.3-6-78-1
ಜಸ್‌ಪ್ರೀತ್‌ ಬುಮ್ರಾ        20-3-73-3 
ಇಶಾಂತ್‌ ಶರ್ಮ        17-3-40-2
ಮೊಹಮ್ಮದ್‌ ಶಮಿ        16-3-49-4    ಹಾರ್ದಿಕ್‌ ಪಾಂಡ್ಯ        9-1-14-0

ಭಾರತ ದ್ವಿತೀಯ ಇನ್ನಿಂಗ್ಸ್‌ 
ಮುರಳಿ ವಿಜಯ್‌    ಬಿ ರಬಾಡ    9 
ಕೆ.ಎಲ್‌. ರಾಹುಲ್‌    ಸಿ ಮಹಾರಾಜ್‌ ಬಿ ಎನ್‌ಗಿಡಿ    4
ಚೇತೇಶ್ವರ್‌ ಪೂಜಾರ    ಬ್ಯಾಟಿಂಗ್‌    11    ವಿರಾಟ್‌ ಕೊಹ್ಲಿ    ಎಲ್‌ಬಿಡಬ್ಲ್ಯು ಬಿ ಎನ್‌ಗಿಡಿ    5
ಪಾರ್ಥಿವ್‌ ಪಟೇಲ್‌    ಬ್ಯಾಟಿಂಗ್‌    5

ಇತರ        1
ಒಟ್ಟು  ( ಮೂರು ವಿಕೆಟಿಗೆ)    35
ವಿಕೆಟ್‌ ಪತನ: 1-11, 2-16, 3-26

ಬೌಲಿಂಗ್‌: 
ವೆರ್ನನ್‌ ಫಿಲಾಂಡರ್‌        6-3-6-0
ಕಾಗಿಸೊ ರಬಾಡ        5-2-9-1
ಲುಂಗಿಸಾನಿ ಎನ್‌ಗಿಡಿ        6-2-14-2
ಮಾರ್ನೆ ಮಾರ್ಕೆಲ್‌        5-3-4-0
ಕೇಶವ್‌ ಮಹಾರಾಜ್‌        1-0-1-0

Advertisement

Udayavani is now on Telegram. Click here to join our channel and stay updated with the latest news.

Next