Advertisement

ಮೋದಿ ಆಡಳಿತದಲ್ಲಿ ಹಿಂದೆಂದೂ ಕಂಡಿರದ ಅಭಿವೃದ್ಧಿ : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಭಿಮತ

07:51 PM May 30, 2021 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಭದ್ರತೆ, ಸಾರ್ವಜನಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಈ ಹಿಂದೆಂದೂ ಕಂಡಿರದಂಥ ಗಣನೀಯ ಸಾಧನೆ ಮಾಡಿದ್ದು, ಸರಿಸಾಟಿಯಿಲ್ಲದ ಸುಧಾರಣೆಗಳನ್ನು ಸಾಧಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿಗೆ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿರುವ ಅವರು, ಸರ್ಕಾರದ ಸಾಧನೆಗಳ ಬಗ್ಗೆ ಸರಣಿ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ಮೋದಿಯವರು ತಮ್ಮ ಅಪರಿಮಿತ ಸಮರ್ಪಣಾ ಭಾವದಿಂದ, ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಾ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಿಂದ, ಬಡವರಿಗೆ, ರೈತರಿಗೆ ಹಾಗೂ ಸಮಾಜದ ದಮನಿತ ಸಮುದಾಯಗಳಿಗೆ ಆಸರೆಯಾಗಿ ಅವರನ್ನು ಮುಖ್ಯವಾಹಿನಿಗೆ ಕರೆತಂದಿವೆ. ಅದರಿಂದ ಭಾರತವು ಇಂದು ಸಮರ್ಥ ನಾಯಕತ್ವವುಳ್ಳ ಶಕ್ತಿಶಾಲಿ ರಾಷ್ಟ್ರವಾಗಿ ಮಾರ್ಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ :ಕೇರಳ ಮೂಲದ ವಿದ್ಯಾರ್ಥಿಗೆ ಯುಎಇ ಗೋಲ್ಡನ್‌ ವೀಸಾ

ವಿಪಕ್ಷಗಳು ಕ್ವಾರಂಟೈನ್‌ನಲ್ಲಿ: ನಡ್ಡಾ
“”ಕೊರೊನಾ ಕಾಲಘಟ್ಟದಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು, ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ, ವಿಪಕ್ಷಗಳ ಯಾವುದೇ ನಾಯಕ ಹಾಗೂ ಕಾರ್ಯಕರ್ತ ಇಂಥ ಸೇವೆಯಲ್ಲಿ ತೊಡಗಿದ್ದನ್ನು ನಾವು ನೋಡಿಲ್ಲ. ಬಹುಶಃ ಅವರೆಲ್ಲರೂ ಕ್ವಾರಂಟೈನ್‌ಗೆ ಒಳಗಾಗಿರಬಹುದು” ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಟೀಕೆ ಮಾಡಿದ್ದಾರೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏಳು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ವರ್ಚುವಲ್‌ ಸಭೆ ನಡೆಸಿದ ಅವರು, “”ಬಿಜೆಪಿ ನಾಯಕರು, ಕಾರ್ಯಕರ್ತರು, ಇಂಥ ಸಂಕಷ್ಟದ ಸಂದರ್ಭದಲ್ಲಿ ಜನರ ಜೊತೆಗೆ ನಿಂತಿದ್ದಾರೆ. ಸದ್ಯದಲ್ಲೇ, ಕೇಂದ್ರದ ಒಬ್ಬೊಬ್ಬ ಸಚಿವರೂ ತಲಾ ಎರಡು ಹಳ್ಳಿಗಳಲ್ಲಿ ಕೊರೊನಾ ಸೇವೆ ಕೈಗೊಳ್ಳಲಿದ್ದಾರೆ. ಬಿಜೆಪಿಯು ಇಂಥ ಸೇವೆ ನೀಡುತ್ತಿದ್ದರೆ, ವಿಪಕ್ಷಗಳ ನಾಯಕರು ಕೇವಲ ಟಿವಿಯಲ್ಲಿ ಮಾತ್ರ ಜನರಿಗೆ ದರುಶನ ನೀಡುತ್ತಿದ್ದಾರೆ” ಎಂದು ಹೇಳಿದ್ದಾರೆ. ಈ ಸಂಕಷ್ಟದ ಕಾಲದಲ್ಲೂ ಪ್ರತಿಪಕ್ಷಗಳು ದೇಶವನ್ನು ಧೃತಿಗೆಡಿಸುವ ಕೆಲಸ ಮಾಡುತ್ತಿವೆ. ತಮ್ಮ ಹೊಣೆಗಾರಿಕೆಯನ್ನು ಮರೆತಿರುವ ಇಂಥವರು ಮಾಡುತ್ತಿರುವ ಅಡೆ ತಡೆಗಳಿಗೆ ಜಗ್ಗದೇ ನೀವು ಕೆಲಸ ಮಾಡಿ ಎಂದೂ ಕಾರ್ಯಕರ್ತರಿಗೆ ನಡ್ಡಾ ಕರೆ ನೀಡಿದ್ದಾರೆ.

Advertisement

ಕಾಂಗ್ರೆಸ್‌ ನಿಂದ “ಬ್ಲಿಂಡರ್‌ ಗಳ ಚಾರ್ಜ್‌ಶೀಟ್‌’ ಬಿಡುಗಡೆ
ಕೇಂದ್ರದ ಮೋದಿ ಸರ್ಕಾರಕ್ಕೆ 7 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಭಾನುವಾರ “ಸರ್ಕಾರ ಮಾಡಿರುವ ಬ್ಲಿಂಡರ್‌ ಗಳ 7 ಅಂಶಗಳ ಆರೋಪಪಟ್ಟಿ’ಯನ್ನು ಬಿಡುಗಡೆ ಮಾಡಿದೆ. ಆರ್ಥಿಕತೆ ಕುಸಿತ, ನಿರುದ್ಯೋಗ ಹೆಚ್ಚಳ, ಹಣದುಬ್ಬರ, ಕೊರೊನಾ ನಿರ್ವಹಣೆಯ ವೈಫ‌ಲ್ಯ ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಮೋದಿ ಆಡಳಿತವು ದೇಶಕ್ಕೆ ಅಪಾಯಕಾರಿಯಾಗಿದ್ದು, ಸರ್ಕಾರ ಪ್ರತಿ ಹಂತದಲ್ಲೂ ಜನರ ನಂಬಿಕೆಗೆ ದ್ರೋಹ ಮಾಡಿದೆ. ಅಳತೆಗೆ ಸಿಗದ ನೋವು, ಮೀರಿಸಲಸಾಧ್ಯವಾದ ನಾಶ, ಗ್ರಹಿಕೆಗೆ ಸಿಗದ ವೇದನೆಯನ್ನು ಜನರಿಗೆ ನೀಡಿರುವುದೇ ಈ 7 ವರ್ಷಗಳ ವಾಸ್ತವ ಎಂದೂ ಕಾಂಗ್ರೆಸ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next