Advertisement

ಸಾಲಮನ್ನಾದ ಭಾರಕ್ಕೆ ಬಳಲುತ್ತಿದೆ ಭಾರತ

12:55 AM Jan 15, 2020 | mahesh |

ರೈತರ ಸಾಲಮನ್ನಾ ನಮ್ಮ ಅರ್ಥವ್ಯವಸ್ಥೆಯ ಮೇಲೆ ಯಾವ ಪ್ರಮಾಣದಲ್ಲಿ ಒತ್ತಡ ಹೇರುತ್ತಿದೆ ಎನ್ನುವುದಕ್ಕೆ ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಮಾಡಲಾದ ಮನ್ನಾದ ಪ್ರಮಾಣವೇ ಸಾಕ್ಷಿಯಾಗಿ ನಿಲ್ಲುತ್ತಿದೆ. ಒಂದು ದಶಕದಲ್ಲಿ ದೇಶಾದ್ಯಂತ 4.7 ಲಕ್ಷ ಕೋಟಿ ರೂಪಾಯಿ ರೈತರ ಸಾಲಮನ್ನಾ ಮಾಡಲಾಗಿದೆ. ಇದರಲ್ಲಿ ಎರಡು ಲಕ್ಷ ಕೋಟಿ ರೂಪಾಯಿಯಷ್ಟು ಸಾಲಮನ್ನಾವನ್ನು ಕಳೆದ ಎರಡು ವರ್ಷಗಳಲ್ಲಿ ಮಾಡಲಾಗಿದೆ. ರೈತರ ಸಾಲಮನ್ನಾದ ವಿಚಾರವಾಗಿ ಎಸ್‌ಬಿಐ ರಿಸರ್ಚ್‌ನ ವರದಿಯು ಈ ಅಂಕಿ ಅಂಶಗಳನ್ನು ಎದುರಿಟ್ಟಿದೆ. ಒಂದೆಡೆ ನಾವು ರೈತರ ಸಾಲ ಮನ್ನಾ ಮಾಡುತ್ತಲೇ ಹೊರಟಿದ್ದರೂ, ಅವರ ಪರಿಸ್ಥಿತಿಯಲ್ಲಿ ಮಾತ್ರ ಸುಧಾರಣೆಯೇ ಆಗುತ್ತಿಲ್ಲ ಎನ್ನುವುದು ನಿಜಕ್ಕೂ ಕಳವಳದ ವಿಚಾರವಾಗಬೇಕಿದೆ.

Advertisement

ಕಳೆದ ಒಂದು ದಶಕದಲ್ಲಿ ದೇಶದಲ್ಲಾದ ರೈತರ ಸಾಲ ಮನ್ನಾ ಪ್ರಮಾಣವು, ಉದ್ಯೋಗ ಜಗತ್ತಿನಲ್ಲಿ ಸಿಲುಕಿರುವ ಎನ್‌ಪಿಎದ 22 ಪ್ರತಿಶತದಷ್ಟಿದೆ ಎಂದೂ ಈ ವರದಿ ಹೇಳುತ್ತದೆ. ರೈತರ ಸಾಲಮನ್ನಾದ ವಿಚಾರದಲ್ಲಿ ಮೊದಲಿನಿಂದಲೂ ಪ್ರಶ್ನೆಗಳೇಳುತ್ತಲೇ ಬಂದಿವೆ. ರೈತರ ಸ್ಥಿತಿಯನ್ನು ಸುಧಾರಿಸಲು ಸಾಲಮನ್ನಾ ಎಂದಿಗೂ ಶಾಶ್ವತ/ದೀರ್ಘಾವಧಿ ಪರಿಹಾರವಾಗಲಾರದು ಎಂದೇ ಪರಿಣತರೆಲ್ಲ ಹೇಳುತ್ತಾ ಬಂದಿದ್ದಾರೆ. ಇದರಿಂದಾಗಿ ಕೃಷಿ ಕ್ಷೇತ್ರದ ಸಮಸ್ಯೆಗಳಂತೂ ದೂರವಾಗುತ್ತಿಲ್ಲ, ಬದಲಾಗಿ ಸರ್ಕಾರಿ ಖಜಾನೆಯ ಮೇಲೆ ಭಾರ ಬೀಳುತ್ತಾ ಸಾಗಿದೆ. ಸಾಲ ಮನ್ನಾ ಮಾಡುವುದನ್ನು ಪಕ್ಷಗಳು ರೈತರನ್ನು ಸೆಳೆಯುವ ಓಟ್‌ಬ್ಯಾಂಕ್‌ ತಂತ್ರವಾಗಿಸಿಕೊಂಡಿವೆ. ಆದರೆ ಕೃಷಿಕರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಸಮಾಧಾನದ ವಿಷಯದಲ್ಲಿ ನಿಜಕ್ಕೂ ಯಾರಿಂದಲೂ ಪ್ರಾಮಾಣಿಕ ಪ್ರಯತ್ನಗಳು ಆಗುತ್ತಲೇ ಇಲ್ಲ. ಈ ಕಾರಣಕ್ಕಾಗಿಯೇ, ಭಾರತದ ರೈತರು, ಅದರಲ್ಲೂ ಮುಖ್ಯವಾಗಿ ಚಿಕ್ಕ ಕೃಷಿಕರ ಸ್ಥಿತಿ ದಶಕಗಳ ಹಿಂದೆ ಹೇಗಿತ್ತೋ, ಈಗಲೂ ಹಾಗೆಯೇ ಇದೆ.

ಕಳೆದ ಎರಡು ವರ್ಷಗಳಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಉತ್ತರಪ್ರದೇಶ, ಕರ್ನಾಟಕ, ಪಂಜಾಬ್‌, ಛತ್ತೀಸ್‌ಗಢ ಮತ್ತು ರಾಜಸ್ಥಾನದ ರೈತರ ಸಾಲ ಮನ್ನಾ ಆಗುತ್ತಾ ಬಂದಿದೆ. ಆದರೆ ಈಗಲೂ ಈ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗುತ್ತಿಲ್ಲ ಎನ್ನುವುದು ಗಮನಿಸಬೇಕು. ಅಂಕಿ ಸಂಖ್ಯೆಯನ್ನು ನೋಡಿದರೆ, 2018-2019ರಲ್ಲಿ ಕೃಷಿ ಸಾಲದ ಎನ್‌ಪಿಎ 1 ಲಕ್ಷ ಕೋಟಿ ರೂಪಾಯಿಯನ್ನು ದಾಟಿಬಿಟ್ಟಿದೆ. ಈ ಪ್ರಮಾಣವು ಈ ಸಮಯದಲ್ಲಿ ದೇಶದ ಎಲ್ಲಾ ವಿತ್ತೀಯ ಸಂಸ್ಥೆಗಳ ಒಟ್ಟು ಎನ್‌ಪಿಎದ(8.79 ಲಕ್ಷ ಕೋಟಿ) 12 ಪ್ರತಿಶತಕ್ಕೆ ಸಮನಾಗಿದೆ. ರೈತರಿಗಾಗಿ ಹಣವನ್ನಂತೂ ಹರಿಸಲಾಗುತ್ತಿದೆ, ಆದರೆ ಅದರಿಂದ ಪ್ರಯೋಜನವಾಗುತ್ತಿಲ್ಲ ಎಂಬುದೇ ಇದರರ್ಥ.

ಎರಡು ವರ್ಷಗಳ ಹಿಂದೆ ನೀತಿ ಆಯೋಗ ಮತ್ತು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ
ರೈತರ ಸಾಲಮನ್ನಾ ಮಾಡುವ ವಿಚಾರದಲ್ಲಿ ಅಸಮ್ಮತಿ ವ್ಯಕ್ತಪಡಿಸಿದ್ದವು. ನೀತಿ ಆಯೋಗವಂತೂ ಸ್ಪಷ್ಟವಾಗಿ, “”ಸಾಲ ಮನ್ನಾದ ಪ್ರಯೋಜನ 10-15 ಪ್ರತಿಶತದಷ್ಟಿರುವ ಸೀಮಿತ ವರ್ಗಕ್ಕಷ್ಟೇ ತಲುಪುತ್ತಿದೆ. ಈ ಕಾರಣಕ್ಕಾಗಿಯೇ ಈ ಪ್ರಕ್ರಿಯೆಯನ್ನು ರೈತರ ಸಮಸ್ಯೆಗಳಿಗೆ ಪರಿಹಾರವೆಂಬಂತೆ
ನೋಡುವುದು ವ್ಯಾವಹಾರಿಕವಲ್ಲ” ಎಂದಿತ್ತು. ಅತ್ತ ರಿಸರ್ವ್‌ ಬ್ಯಾಂಕ್‌ ಕೂಡ ಸಾಲಮನ್ನಾದ
ಪರ ಇಲ್ಲ. ಏಕೆಂದರೆ, ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಖಜಾನೆಯ ಮೇಲೆ ಒತ್ತಡ ಬೀಳುತ್ತದೆ. ರೈತರಿಗೆ ಸಾಲಮನ್ನಾದ ಬದಲಾಗಿ, ಕೃಷಿ ಸಂಬಂಧಿ ಸಮಸ್ಯೆಗಳ ವಿಚಾರದಲ್ಲಿ ಪರಿಹಾರ ಒದಗಿಸುವ ಕೆಲಸವನ್ನು ಎಲ್ಲಾ ಸರ್ಕಾರಗಳೂ ಮಾಡಬೇಕಿದೆ. ರೈತರನ್ನು ಸ್ವಾವಲಂಬಿಯಾಗಿಸುವ ದೂರಗಾಮಿ ಯೋಜನೆಯ ಅಗತ್ಯ ಹಿಂದೆಂದಿಗಿಂತಲೂ ಅಧಿಕವಿದೆ.

Advertisement

Udayavani is now on Telegram. Click here to join our channel and stay updated with the latest news.

Next