Advertisement

ತ್ರಿವರ್ಣ ಧ್ವಜ ರೂಪು ತಳೆದದ್ದು ಹೇಗೆ, ಇತಿಹಾಸದ ಪುಟ ಸೇರಿದ ತಿರಂಗಾ ವಿನ್ಯಾಸಕ!

12:33 PM Aug 15, 2020 | Nagendra Trasi |

ಇಂದು ನಾವು ದೇಶಾದ್ಯಂತ 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಇನ್ನೇನು ಇನ್ನೂ ಒಂದು ವರ್ಷ ಕಳೆದುಬಿಟ್ಟರೆ ಭಾರತಾಂಬೆಯ ಸ್ವಾತಂತ್ರ್ಯೋತ್ಸವಕ್ಕೆ 75 ವರ್ಷದ ಸಂಭ್ರಮ. ಸ್ವಾತಂತ್ರ್ಯೋತ್ಸವ ಆಚರಣೆ ನಡುವೆ ನಾವು ಸ್ವಾತಂತ್ರ್ಯ ಹೋರಾಟ ನೆನಪಿಸಿಕೊಳ್ಳುತ್ತೇವೆ. ಅದೇ ರೀತಿ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯೂ ಅಷ್ಟೇ ಮುಖ್ಯವಾದದ್ದು.

Advertisement

ಈ ವರ್ಷವೂ ದೇಶಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ಕೋವಿಡ್ ಆತಂಕದ ನಡುವೆಯೂ ಸರಳವಾಗಿ ಆಚರಿಸಲಾಯ್ತು. ಕೆಂಪುಕೋಟೆ ಸೇರಿದಂತೆ ಶಾಲಾ, ಕಾಲೇಜು, ಸಂಘ, ಸಂಸ್ಥೆಗಳು, ಜನರು ಭಾರತದ ರಾಷ್ಟ್ರಧ್ವಜ ಹಾರಿಸಿ, ದೇಶಭಕ್ತಿಗೀತೆ ಹಾಡಿ, ರಾಷ್ಟ್ರಗೀತೆ ನುಡಿಸಿ ಗೌರವ ಸಲ್ಲಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯಂದು ನಾವು ಹಾರಿಸಿ ಗೌರವ ಸಲ್ಲಿಸುತ್ತಿರುವ ಬಾವುಟ ಒಂದು ಸ್ಪಷ್ಟ ರೂಪ ತಳೆಯಲು ಹಲವಾರು ಬೆಳವಣಿಗೆ ಮತ್ತು ಬದಲಾವಣೆ ಕಂಡಿತ್ತು. ಭಾರತದ ಸ್ವಾತಂತ್ರ್ಯಸಂಗ್ರಾಮದಲ್ಲಿ ತ್ರಿವರ್ಣ ಧ್ವಜಕ್ಕೆ ಶ್ರೀಮಂತವಾದ ಇತಿಹಾಸವಿದೆ. ಅದೇ ರೀತಿ ರಾಷ್ಟ್ರಗೀತೆ ಜನಗಣಮನವೂ ಕೂಡಾ ತನ್ನದೇ ಇತಿಹಾಸ ಹೊಂದಿದೆ. ಈ ಗೀತೆ ರಚಿಸಿದವರು ರಬೀಂದ್ರನಾಥ್ ಟ್ಯಾಗೋರ್.

ಭಾರತೀಯ ರಾಷ್ಟ್ರಧ್ವಜದ ಹಿಂದಿನ ಕುತೂಹಲಕಾರಿ ಸಂಗತಿ ಇಲ್ಲಿದೆ…

Advertisement

ಭಾರತದ ರಾಷ್ಟ್ರಧ್ವಜವನ್ನು ತ್ರಿವರ್ಣ ಅಥವಾ ತಿರಂಗಾ ಎಂದು ಕರೆಯುತ್ತೇವೆ. ಇದು ಮೂರು ಬಣ್ಣಗಳನ್ನು ಒಳಗೊಂಡಿದೆ. ಮೇಲೆ ಕೇಸರಿ, ಮಧ್ಯೆ ಬಿಳಿ ಹಾಗೂ ಕೆಳಗೆ ಹಸಿರು ಬಣ್ಣವನ್ನು ಹೊಂದಿದೆ.  ತ್ರಿವರ್ಣ ಧ್ವಜದ ಮಧ್ಯದಲ್ಲಿ ಅಶೋಕ ಚಕ್ರ (ಧರ್ಮ ಚಕ್ರ)ವಿದೆ. ಭಾರತದ ಈ ರಾಷ್ಟ್ರಧ್ವಜವನ್ನು 1947ರ ಜುಲೈ 22ರಂದು ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಗಿತ್ತು. ಧ್ವಜದಲ್ಲಿ ಇಪ್ಪತ್ತನಾಲ್ಕು ರೇಖೆಗಳುಳ್ಳ ನೀಲಿ ಬಣ್ಣದ ಅಶೋಕ ಚಕ್ರವಿದೆ. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ ದೇಶದ ಏಕತೆ ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರಧ್ವಜ. ಸ್ವತಂತ್ರ ದೇಶದ ಸಂಕೇತವಾಗಿರುವ ರಾಷ್ಟ್ರಧ್ವಜದ ಅವಹೇಳನ ರಾಷ್ಟ್ರದ್ರೋಹವಾಗಿರುತ್ತದೆ.

ಕೇಸರಿ, ಬಿಳಿ, ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿ ಇದ್ದು ನೀಲಿಚಕ್ರವು ಹೆಚ್ಚುಕಡಿಮೆ ಬಿಳಿ ಬಣ್ಣದ ಅಡ್ಡ ಗೆರೆಗಳಷ್ಟಿದ್ದು, ಅದರಲ್ಲಿ ಇಪ್ಪತ್ತ ನಾಲ್ಕು ರೇಖೆಗಳಿವೆ. ಧ್ವಜದ ಉದ್ದ ಮತ್ತು ಅಗಲ 3:2 ರ ಪ್ರಮಾಣದಲ್ಲಿರಬೇಕು ಎಂಬುದು ನಿಯಮವಾಗಿದೆ.

ರಾಜ್ಯದ ಧಾರವಾಡ ಜಿಲ್ಲೆಯ ಗರಗ ಗ್ರಾಮಕ್ಕೆ ರಾಷ್ಟ್ರಧ್ವಜ ತಯಾರಿಸುವ ಹಕ್ಕು ನೀಡಲಾಗಿದೆ. ಉತ್ತರ ಕರ್ನಾಟಕದಾದ್ಯಂತ ಒಟ್ಟು 52 ಇಂತಹ ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿದೆ. ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಮತ್ತು ಭಾರತೀಯ ಸ್ಟ್ಯಾಂಡರ್ಡ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜ ಉತ್ಪಾದಿಸಬೇಕು. ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನ(ರಾಷ್ಟ್ರಧ್ವಜ) ತಿರಸ್ಕೃತವಾಗುತ್ತದೆ.

ಎನ್ ಡಿಟಿವಿ ವರದಿ ಪ್ರಕಾರ, ಭಾರತದ ಮೊದಲ ರಾಷ್ಟ್ರಧ್ವಜ ಹಸಿರು, ಹಳದಿ ಮತ್ತು ಕೆಂಪು ಪಟ್ಟಿಯನ್ನು ಹೊಂದಿತ್ತು. ಈ ಧ್ವಜವನ್ನು 1906ರ ಆಗಸ್ಟ್ 7ರಂದು ಹಾರಿಸಲಾಗಿತ್ತು. ಇದೊಂದು ಧಾರ್ಮಿಕ ಸಂಕೇತದ ಧ್ವಜವಾಗಿದ್ದು, ಇದರಲ್ಲಿ ಎಂಟು ಹೂಗಳು ಮತ್ತು ಅದರ ಮೇಲೆ ವಂದೇ ಮಾತರಂ ಅನ್ನು ಬರೆಯಲಾಗಿತ್ತು. ಹೆಮ್ಮೆಯ ವಿಚಾರ ಏನೆಂದರೆ ಇದೇ ಮೊದಲ ಬಾರಿಗೆ ನ್ಯೂಯಾರ್ಕ್ ಟೈಮ್ಸ್ ಸ್ಕ್ವಾರ್ ನಲ್ಲಿ (ಆಗಸ್ಟ್ 15, 2020) ಭಾರತೀಯ ತ್ರಿವರ್ಣ ಧ್ವಜ ಹಾರಿಸಲಾಗಿದೆ.

ರಾಷ್ಟ್ರಧ್ವಜ ವಿನ್ಯಾಸ ಮಾಡಿದವರು ಯಾರು?

ದೇಶಾದ್ಯಂತ ಇಂದು ರಾರಾಜಿಸುತ್ತಿರುವ ದೇಶದ ರಾಷ್ಟ್ರದ ಧ್ವಜದ ವಿನ್ಯಾಸ ಮಾಡಿದವರು ಸ್ವಾತಂತ್ರ್ಯ ಹೋರಾಟಗಾರ “ಪಿಂಗಾಳಿ ವೆಂಕಯ್ಯ”. 1876ರ ಆಗಸ್ಟ್ 2ರಂದು ಆಂಧ್ರಪ್ರದೇಶದ(ಈಗಿನ) ಮಚಿಲಿಪಟ್ಟಣಂ ಸಮೀದಪ ಭಟ್ಲಾಪೆನುಮರ್ರು ಎಂಬಲ್ಲಿ ಪಿಂಗಾಳಿ ಜನಿಸಿದ್ದರು.

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವ ಘೋಷಿತ ನೂರಾರು ರಾಷ್ಟ್ರಧ್ವಜಗಳನ್ನು ಬಳಸಲಾಗಿತ್ತು. ಕೊನೆಗೆ ಸ್ಪಷ್ಟ ಹಾಗೂ ಅಧಿಕೃತ ವಿನ್ಯಾಸದ ಧ್ವಜ 1947ರಲ್ಲಿ ರೂಪತಳೆದಿತ್ತು. ಪಿಂಗಾಳಿ ವೆಂಕಯ್ಯ ಅವರ ವಿನ್ಯಾಸದಲ್ಲೇ ಸ್ವಲ್ಪ ಬದಲಾವಣೆ ಮಾಡಿ 1947ರಲ್ಲಿ ಅಂಗೀಕರಿಸಲಾಗಿತ್ತು. ಹಿಂದೂ ಪತ್ರಿಕೆಯಲ್ಲಿ ಅಂದು ಪ್ರಕಟವಾದ ವರದಿ ಪ್ರಕಾರ, ಪಿಂಗಾಳಿ ವೆಂಕಯ್ಯ ಅವರೊಬ್ಬ ಭೂ ತಜ್ಞರಾಗಿದ್ದರು, ಕೃಷಿಕ ಹಾಗೂ ಶಿಕ್ಷಣ ಪ್ರೇಮಿಯಾಗಿದ್ದರು. ಆದರೆ 1963ರಲ್ಲಿ ಪಿಂಗಾಳಿ ಬಡತನದಲ್ಲಿಯೇ ಇಹಲೋಕ ತ್ಯಜಿಸಿದ್ದರು. ಅಷ್ಟೇ ಅಲ್ಲ ಇಡೀ ಸಮಾಜವೇ ಅವರನ್ನು ಮರೆತುಬಿಟ್ಟಿತ್ತು. 2009ರಲ್ಲಿ ಕೇಂದ್ರ ಸರ್ಕಾರ ಗೌರವಾರ್ಥವಾಗಿ ಅಂಚೆಚೀಟಿ ಬಿಡುಗಡೆಗೊಳಿಸಿತ್ತು! 2011ರಲ್ಲಿ ಪಿಂಗಾಳೆ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಬೇಕೆಂದು ಪ್ರಸ್ತಾಪ ಸಲ್ಲಿಸಲಾಗಿತ್ತು. ಆದರೆ ಅದು ಈವರೆಗೂ ಈಡೇರಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next