Advertisement

ಕೋವಿಡ್‌ ನಂತರ ಹೆಚ್ಚಿದ ಶುಭವಿವಾಹ

05:47 PM Nov 18, 2021 | Team Udayavani |

ಹುಬ್ಬಳ್ಳಿ: ಕೋವಿಡ್‌ ಮೂರನೇ ಅಲೆಯ ಆತಂಕ ಹಾಗೂ ಎರಡನೇ ಅಲೆಯ ಲಾಕ್‌ಡೌನ್‌ನಿಂದಾಗಿ ಮುಂದೂಡಿದ ಪರಿಣಾಮ ಕಾರ್ತಿಕ ಮಾಸದಲ್ಲಿ ವಿವಾಹಗಳ ಪ್ರಮಾಣ ಗಣನೀಯ ಏರಿಕೆಯಾಗಿದೆ. ಮೂರು ಸೀಸನ್‌ಗಳಿಂದ ನಷ್ಟ ಅನುಭವಿಸುತ್ತಿದ್ದ ಮದುವೆ ಆಮಂತ್ರಣ ಪತ್ರಿಕೆ ಮಾರಾಟ ಹಾಗೂ ಮುದ್ರಣ ಕಾರ್ಯಕ್ಕೆ ಶುಕ್ರದೆಸೆ ಒಲಿದು ಬಂದಿದೆ.

Advertisement

ನಗರಕ್ಕಿಂತ ಗ್ರಾಮೀಣ ಭಾಗದ ಜನರೇ ಹೆಚ್ಚಿನ ಒಲವು ತೋರಿದ್ದಾರೆ. ಕೋವಿಡ್‌ ವಿವಾಹ ವ್ಯವಸ್ಥೆಯನ್ನೇ ಬುಡಮೇಲು ಮಾಡಿತು. ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯಬೇಕಾದ ಮದುವೆಗಳು ಮನೆ ಮುಂದೆ ಸರಳವಾಗಿ ನಡೆದವು. ಆದರೆ ಎರಡನೇ ಅಲೆ ನಂತರ ಒಂದಿಷ್ಟು ಚೇತರಿಕೆ ಕಂಡು ಬಂದಿದೆ. ಲಾಕ್‌ ಡೌನ್‌, ಸರಕಾರದ ಮಾರ್ಗಸೂಚಿಗಳಿಂದ ಮದುವೆ ಮುಂದೂಡಿದವರು ಕಾರ್ತಿಕ ಹಾಗೂ ಮಾರ್ಗಶಿರ ಮಾಸದಲ್ಲಿನ ಮುಹೂರ್ತಗಳಿಗೆ ಮನಸ್ಸು ಮಾಡಿದ್ದು, ಹಿಂದೆಂದೂ ಆಗದಷ್ಟು ಮದುವೆಗಳು ಈ ಬಾರಿ ನಡೆಯುತ್ತಿವೆ.

ಮೂರನೇ ಅಲೆ ಆತಂಕ: ಈಗಾಗಲೇ ಎರಡನೇ ಲಾಕ್‌ ಡೌನ್‌ ಸಮಯದಲ್ಲಿ ವಿವಾಹಗಳ ಮುಂದೂಡಿಕೆ, ಮುಂದಿನ ಮದುವೆ ಸೀಸನ್‌ನಲ್ಲಿ ಮದುವೆಗೆ ಮನಸ್ಸು ಮಾಡಿದವರಿಗೆ ಮೂರನೇ ಅಲೆ ಆತಂಕವಿದೆ. ಎರಡನೇ ಅಲೆಯ ಲಾಕ್‌ಡೌನ್‌ ಯಾರೂ ನಿರೀಕ್ಷಿಸಿರಲಿಲ್ಲ. ಅಲ್ಲದೆ ಮೂರನೇ ಅಲೆ ಬಗ್ಗೆ ಒಂದಿಷ್ಟು ಚರ್ಚೆಗಳು ಶುರುವಾಗಿದ್ದು, ಒಂದು ವೇಳೆ ಮೂರನೇ ಅಲೆಯಿಂದ ಲಾಕ್‌ಡೌನ್‌ ಮಾಡಿದರೆ ತಾವು ಅಂದುಕೊಂಡಂತೆ ಮದುವೆ ಮಾಡಲು ಆಗಲ್ಲ. ಸರಕಾರದ ನೀತಿ ನಿಯಮಗಳನ್ನು ಪಾಲಿಸುವುದರಲ್ಲಿ ಸುಸ್ತಾಗಬೇಕಾಗುತ್ತದೆ ಎನ್ನುವ ಕಾರಣಕ್ಕೆ ಮುಂದೂಡಿದ್ದ ಹಾಗೂ ಮುಂದೆ ಮಾಡಬೇಕಾದ ಮದುವೆಗಳನ್ನು ಕಾರ್ತಿಕ ಮಾಸಕ್ಕೆ ನಿಗದಿಪಡಿಸುತ್ತಿರುವುದು ವಿವಾಹಗಳು ಹೆಚ್ಚಾಗಲು ಕಾರಣವಾಗಿದೆ.

ನೆಲಕಚ್ಚಿದ್ದ ಉದ್ಯಮ: ಮದುವೆ ಆಹ್ವಾನ ಪತ್ರಿಕೆ ಮಾರಾಟ, ಮುದ್ರಣ ವರ್ಷದಲ್ಲಿ ಎರಡು ಸೀಸನ್‌ಗಳು ಮಾತ್ರ. ಆದರೆ 2020 ಮಾರ್ಚ್‌, ಮೇ, ಏಪ್ರಿಲ್‌, ನವೆಂಬರ್‌, ಡಿಸೆಂಬರ್‌ ಹಾಗೂ 2021 ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ಲಾಕ್‌ಡೌನ್‌ ಆದ ಪರಿಣಾಮ ಮಾರಾಟ ಹಾಗೂ ಮುದ್ರಣ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿತ್ತು. ಸಾವಿರಾರು ಮದುವೆ ಆಹ್ವಾನ ಪತ್ರಿಕೆ ಹಂಚುತ್ತಿದ್ದವರು ಕೋವಿಡ್‌ ಹಿನ್ನೆಲೆಯಲ್ಲಿ ಮದುವೆ ಅನುಮತಿ, ಪೂಜೆ ಪುನಸ್ಕಾರಕ್ಕಾಗಿ 25,
50 ಕಾರ್ಡುಗಳನ್ನು ಮಾತ್ರ ಮುದ್ರಿಸುತ್ತಿದ್ದರು. ಇದರಿಂದ ಮೂರು ಸೀಸನ್‌ಗಳು ಸಂಪೂರ್ಣ ನೆಲಕಚ್ಚಿತ್ತು.ಮದುವೆ ಸೀಸನ್‌ ನಂಬಿ ಹೂಡಿಕೆ ಮಾಡಿದ ಲಕ್ಷಾಂತರ ರೂಪಾಯಿ ಎರಡು ವರ್ಷಗಟ್ಟಲೇ ನಿಂತ ನೀರಾಗಿತ್ತು.

ಚೇತರಿಕೆಯ ಹಾದಿ: ಕೋವಿಡ್‌ ಪೂರ್ವದ ಕಾರ್ತಿಕ ಹಾಗೂ ಮಾರ್ಗಶಿರ ಮಾಸದಲ್ಲಿ ನಡೆಯುತ್ತಿದ್ದ ಮದುವೆಗಳಿಗೆ ಹೋಲಿಸಿದರೆ ಈ ಬಾರಿ ಶೇ.40-50 ಹೆಚ್ಚಾಗಿವೆ. ಹೀಗಾಗಿ ಮದುವೆ ಆಮಂತ್ರಣ ಪತ್ರಿಕೆ ಮಾರಾಟ ಹಾಗೂ ಮುದ್ರಣದ ಕಾರ್ಯ ಒಂದಿಷ್ಟು ಚೇರಿಕೆ ಕಂಡಿದೆ. ಎರಡು ವರ್ಷಗಳ ಹಿಂದೆ ದಾಸ್ತಾನು ಮಾಡಿದ ಕಾರ್ಡುಗಳು ಭರ್ಜರಿ ಮಾರಾಟವಾಗುತ್ತಿದ್ದು, ಶೇ.5ರಿಂದ 10 ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಿದೆ. ಕೋವಿಡ್‌ ಸಂದರ್ಭದಲ್ಲಿ ಮೂರ್‍ನಾಲ್ಕು ದಿನಕ್ಕೆ ಒಂದೆರಡು ಮದುಗಳಿಗೆ ಸಂಬಂಧಿಸಿದ 50, 100 ಕಾರ್ಡುಗಳನ್ನು ಮುದ್ರಣ ಮಾಡುತ್ತಿದ್ದವರು ಇದೀಗ ದಿನಕ್ಕೆ 10-12 ಮದುವೆಗಳ ಆಮಂತ್ರಣ ಪತ್ರಿಕೆ ಮುದ್ರಣ ಮಾಡುತ್ತಿದ್ದು, ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ಎರಡೂ ಉದ್ಯಮಕ್ಕೂ ಶುಕ್ರದೆಸೆ ಮೂಡಿದೆ.

Advertisement

ದರ ಹೆಚ್ಚಳದ ಆತಂಕ: ಉದ್ಯಮಿಗಳಲ್ಲಿಯೂ ಮೂರನೇ ಅಲೆ ಆತಂಕವಿದ್ದು, ಮುಂದಿನ ಸೀಸನ್‌ಗಾಗಿ ದಾಸ್ತಾನು ಮಾಡುವ ಧೈರ್ಯ ಮಾಡುತ್ತಿಲ್ಲ. ಕಚ್ಚಾ ಸಾಮಾಗ್ರಿಯಲ್ಲಿ ಕೊರತೆಯಿದೆ. ಒಂದು ವೇಳೆ ಹೊಸದಾಗಿ ಮಾರುಕಟ್ಟೆಗೆ ಸಾಮಗ್ರಿ ಬಂದರೆ ಶೇ.30 ದರ ಏರಿಕೆಯಾಗಲಿದೆ ಎನ್ನುವ ಲೆಕ್ಕಾಚಾರವಿದೆ. 2021 ಅಕ್ಟೋಬರ್‌ ಮೊದಲು ಆಮಂತ್ರಣ ಪತ್ರಿಕೆ ಹಾಗೂ ಕವರ್‌ಗೆ ಶೇ.12ರಷ್ಟಿದ್ದ ಜಿಎಸ್‌ಟಿ ಇದೀಗ ಶೇ.18ಕ್ಕೆ ಹೆಚ್ಚಿಸಿರುವುದು ಮತ್ತಷ್ಟು
ದರ ಹೆಚ್ಚಳಕ್ಕೂ ಕಾರಣವಾಗಿದೆ. ಇರುವ ದಾಸ್ತಾನು ಮಾರಾಟ ಮಾಡಿದರೆ ಸಾಕು ಎನ್ನುವ ನಿರ್ಧಾರಕ್ಕೆ ವ್ಯಾಪರಸ್ಥರು ಬಂದಿದ್ದಾರೆ.

ಕೈ ಹಿಡಿದ ಹಳ್ಳಿಗರು: ನಗರ ಪ್ರದೇಶದ ಜನರು ಸರಳ ವಿವಾಹವನ್ನು ಕೊಂಚ ಹೆಚ್ಚಾಗಿಯೇ ಅಳವಡಿಸಿಕೊಂಡಿದ್ದಾರೆ. ವಾಟ್ಸ್‌ಆ್ಯಪ್‌ ಮೂಲಕ ಇ-ಕಾರ್ಡುಗಳನ್ನು ಕಳಹಿಸುವ ಟ್ರೆಂಡ್‌ ಹೆಚ್ಚಾಗಿದೆ. ಆದರೆ ಸಂಬಂಧ, ಅಂತಸ್ತು, ಗೌರವ, ಸ್ಥಿತಿವಂತಿಕೆ ಪ್ರಶ್ನೆಯಿಂದಾಗಿ ಗ್ರಾಮೀಣ ಭಾಗದ ಜನರು ಆಮಂತ್ರಣ ಪತ್ರ ಹಾಗೂ ಮುದ್ರಣದ ಒಲವು ಹೊಂದಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಈ ಎರಡೂ ಉದ್ಯಮವನ್ನು ಗ್ರಾಮೀಣ ಭಾಗದ ಜನರೇ ಹೆಚ್ಚಿನ ಪ್ರಮಾಣದಕ್ಕೆ ಕೈಹಿಡಿದಿದ್ದಾರೆ.

ಎರಡು ವರ್ಷಗಳಿಂದ ಮದುವೆ ಆಮಂತ್ರಣ ಪತ್ರಿಕೆ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿತ್ತು. 1000 ಕಾರ್ಡು ಖರೀದಿಸುವವರು 25, 50 ಕಾರ್ಡುಗಳಿಗೆ ಬೇಡಿಕೆಯಿಟ್ಟ ಉದಾಹರಣೆಗಳಿವೆ. ಹೊಸದಾಗಿ ಸಾಮಾಗ್ರಿಗಳು ಮಾರುಕಟ್ಟೆಗೆ ಬರುತ್ತಿಲ್ಲ. ಹಿಂದಿನ ದಾಸ್ತಾನನ್ನೇ ಕರಗಿಸುತ್ತಿದ್ದೇವೆ. ಈ ಬಾರಿ ಉತ್ತಮ ವ್ಯವಾಪಾರವಿದೆ. ಈ ಬೆಳವಣಿಗೆ ನೋಡಿದರೆ ಹೊಸ ಸಾಮಗ್ರಿ ಶೇ.30 ದರ ಹೆಚ್ಚಾಗುವ ಸಾಧ್ಯತೆಯಿದೆ. ಜಿಎಸ್‌ಟಿ ತೆರಿಗೆ ಕೂಡ ಹೆಚ್ಚಾಗಿದೆ.
ಸುರೇಶ ಜೈನ್‌, 
ಪಕ್ಷಾಲ್‌ ಕಾರ್ಡ್ಸ್‌ ಆ್ಯಂಡ್‌ ಪೇಪರ್

ಕಳೆದ ಎರಡು ವರ್ಷಗಳಿಂದ ಕಳೆದುಕೊಂಡಿದ್ದ ಕೆಲಸವನ್ನು ಈ ಬಾರಿ ಪಡೆದಿದ್ದೇವೆ. ಕೋವಿಡ್‌ ಪೂರ್ವ ಈ ಸಮಯದಲ್ಲಿ ನಿತ್ಯ 5-6 ಮದುವೆಗಳ ಕಾರ್ಡುಗಳ ಮುದ್ರಣವಾಗುತ್ತಿತ್ತು. ಈ ಬಾರಿ ನಿತ್ಯ 10-12 ಮದುವೆಗಳ ಕಾರ್ಡುಗಳ ಮುದ್ರಣವಾಗುತ್ತಿವೆ. ಎರಡನೇ ಅಲೆ ಸಂದರ್ಭದಲ್ಲಿ ಮುಂದೂಡಿದ ಮದುವೆಗಳನ್ನು ಈಗ ಹಾಕಿಕೊಂಡಿದ್ದು, ಹಳೇ ಪತ್ರಿಕೆಗಳಿಗೆ ಬದಲಾದ ದಿನಾಂಕ, ಮುಹೂರ್ತ ಸಮಯದ ಸ್ಟಿಕರ್‌ಗಳನ್ನು ಮುದ್ರಿಸಿಕೊಂಡು ಹೋಗುತ್ತಿದ್ದಾರೆ.
ಮೃತ್ಯುಂಜಯ ಶಾಂತಪುರಮಠ,
ಭೂಮಿಕಾ ಪ್ರಿಂಟರ್

ಮದುವೆ ಆಮಂತ್ರಣ ಪತ್ರಿಕೆ ವಿತರಣೆ ಅದ್ಧೂರಿತನವಲ್ಲ. ಮನೆಯಲ್ಲಿನ ಶುಭ ಕಾರ್ಯಕ್ಕೆ ಆಹ್ವಾನಿಸುವ ಸಂಬಂಧದ ಸೂಚಕವಾಗಿದೆ. ಸಂಬಂಧಿಗಳು, ಪರಿಚಯಸ್ಥರ ಮನೆಗಳಿಗೆ ತೆರಳಿ ವಿವಾಹ ಕರೆಯೋಲೆ ನೀಡಿ ಆಹ್ವಾನಿಸುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ನಮ್ಮ ಮನೆಯ ಮದುವೆಯಲ್ಲಿ ಈ ಸಂಸ್ಕೃತಿ ಇರಬೇಕು ಎನ್ನುವ ಕಾರಣದಿಂದ ಖರೀದಿಸುತ್ತಿದ್ದೇವೆ.
ಸೋಮನಗೌಡ ಪಾಟೀಲ, ಕುಂದಗೋಳ

*ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next